ಪುಣಚ: ಪ್ಲಾಸ್ಟಿಕ್ ಹೊದಿಕೆಯ ಮಾಡು, ಶಿಥಿಲಗೊಂಡ ಕಂಬಗಳು.. ಈಗಲೋ ಆಗಲೋ ಗಾಳಿಗೆ ಬೀಳುವ ಸೂರು.. ಇದು ಕಂಡು ಬಂದಿರುವುದು ಪುಣಚ ಗ್ರಾಮದ ದೇವಿನಗರದಲ್ಲಿ.
ಗೋಪಾಲಕೃಷ್ಣ ಮತ್ತು ಅವರ ಪತ್ನಿ, ತಮ್ಮ ಮೂರು ಮಕ್ಕಳೊಂದಿಗೆ ಈ ಮನೆಯಲ್ಲಿ ಜೀವನ ಸಾಗಿಸುತ್ತಿದ್ದಾರೆ. ಸ್ಥಳೀಯ ಸಂಘ ಸಂಸ್ಥೆಯವರು ನೀಡಿದ ಟರ್ಪಾಲ್ ಮಾತ್ರ ಈಗ ಮಳೆಯಿಂದ ರಕ್ಷಣೆ ನೀಡುತ್ತಿದೆ. ಉಳಿದಂತೆ ಮರದ ಕಂಬಗಳು ಶಿಥಿಲಗೊಂಡು ಜೋರು ಗಾಳಿ ಮಳೆಗೆ ಬೀಳುವ ಪರಿಸ್ಥಿತಿಯಲ್ಲಿದೆ. ಸರಕಾರದ ಯೋಜನೆಯಲ್ಲಿ ಮನೆ ಕಟ್ಟೋಣ ಅಂದರೆ ಇವರ ಜಮೀನಿನ ದಾಖಲೆಯ ಸಮಸ್ಯೆ ತಲೆದೋರಿದೆ. ಗೋಪಾಲಕೃಷ್ಣರ ಅಜ್ಜಿಯ ಹೆಸರಿನಲ್ಲಿರುವ ಜಮೀನು ಅವರ ಮರಣ ಪ್ರಮಾಣ ಪತ್ರ ಸೇರಿದಂತೆ ದಾಖಲೆಯ ಕೊರತೆಯಿಂದಾಗಿ ಅವರ ಮಕ್ಕಳ ಹೆಸರಿಗೆ ಇನ್ನೂ ಆಗಿಲ್ಲ. ಹಾಗಾಗಿ ಗೋಪಾಲರವರ ಸಂಸಾರಕ್ಕೆ ಸರಕಾರದ ಸೂರು ಕಲ್ಪಿಸಲು ಅಡೆತಡೆ ಉಂಟಾಗಿದೆ. ಕೂಲಿ ಕೆಲಸ ಮಾಡುತ್ತಿರುವ ಗೋಪಾಲರು ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದಾರೆ. ದುಡಿದ ಕೆಲದಿನಗಳ ಹಣ ಒಪ್ಪತ್ತಿನ ಅನ್ನಕ್ಕೆ ಸರಿಯಾಗುತ್ತಿದೆ. ಇನ್ನು ಹೊಸ ಮನೆ ಕಟ್ಟುವ ಯೋಚನೆಯನ್ನೂ ಗೋಪಾಲರು ಮಾಡಲಾರದ ಪರಿಸ್ಥಿತಿಯಲ್ಲಿದ್ದಾರೆ. ದಾಖಲೆ ಇಲ್ಲದಿರುವುದರಿಂದ ಇರುವ ಮನೆಗೆ ವಿದ್ಯುತ್ ಸಂಪರ್ಕವೂ ಆಗಿಲ್ಲ. ಶಾಲೆಗೆ ಹೋಗುತ್ತಿರುವ ಮಕ್ಕಳು ಓದಲು ಬರೆಯಲು ಕತ್ತಲಲ್ಲಿ ಪರದಾಡುವಂತಾಗಿದೆ.
ಈ ಎಲ್ಲಾ ಸಮಸ್ಯೆಗಳಿಂದ ಜೀವನದೂಡುತ್ತಿರುವ ಈ ಬಡ ಕುಟುಂಬಕ್ಕೆ ಆಸರೆಯಾಗಿ ನಿಂತು ಮಾನವೀಯತೆ ಮೆರೆಯಬೇಕಾಗಿದೆ. ಜನಪ್ರತಿನಿಧಿಗಳು, ಜನನಾಯಕರು ಸಂಘ ಸಂಸ್ಥೆಯವರು ಇತ್ತ ಗಮನಹರಿಸಿ ಮಳೆಗಾಲಕ್ಕೆ ಮುಂಚಿತವಾಗಿ ಇವರ ಆಸರೆಯ ಮನೆಯನ್ನು ಸರಿಪಡಿಸಿಕೊಟ್ಟಲ್ಲಿ ಮೂವರು ಮಕ್ಕಳಿಗೆ ಒಂದು ಭವಿಷ್ಯ ಕೊಟ್ಟಂತಾಗಲಿದೆ.
ನೆರವು ನೀಡುವವರು ಗೋಪಾಲಕೃಷ್ಣ ರ ಮೊಬೈಲ್ ನಂ. 9482345865 ಸಂಪರ್ಕಿಸಬಹುದಾಗಿದೆ.