ನೆಲ್ಯಾಡಿ: ರಾ.ಹೆ.ಕಾಮಗಾರಿಯಿಂದ ಸಮಸ್ಯೆ-ಸಂಘ ಸಂಸ್ಥೆಗಳ ಸಭೆ- ಸಂಸದರ ಭೇಟಿ ಮಾಡಿ ಮನವಿಗೆ ನಿರ್ಧಾರ

0

ನೆಲ್ಯಾಡಿ: ಬಿ.ಸಿ.ರೋಡ್‌ನಿಂದ ಅಡ್ಡಹೊಳೆ ಮಧ್ಯೆ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ನಡೆಯುತ್ತಿದ್ದು, ನೆಲ್ಯಾಡಿ ಪೇಟೆಯಲ್ಲಿ ಸಮರ್ಪಕವಾಗಿ ಕಾಮಗಾರಿ ನಡೆಯದೇ ಇರುವುದರಿಂದ ಸಾರ್ವಜನಿಕರಿಗೆ, ವರ್ತಕರಿಗೆ ಆಗಿರುವ ಸಮಸ್ಯೆ ಕುರಿತಂತೆ ಸಂಸದ ನಳಿನ್‌ಕುಮಾರ್ ಕಟೀಲ್ ಅವರ ಗಮನಕ್ಕೆ ತಂದು ಬಗೆಹರಿಸಿಕೊಳ್ಳಲು ಜೂ.10ರಂದು ನೆಲ್ಯಾಡಿ ಡಿಯೋನ್ ಸ್ಕ್ವೇರ್‌ನಲ್ಲಿ ನಡೆದ ವರ್ತಕರ, ಕಟ್ಟಡ ಮಾಲಕರ ಹಾಗೂ ವಿವಿಧ ಸಂಘ ಸಂಸ್ಥೆಗಳ ಪ್ರಮುಖರ ಸಭೆಯಲ್ಲಿ ನಿರ್ಧರಿಸಲಾಗಿದೆ.


ಸಭೆಯ ಅಧ್ಯಕ್ಷತೆ ವಹಿಸಿದ್ದ ನೆಲ್ಯಾಡಿ ಕೌಕ್ರಾಡಿ ಕಟ್ಟಡ ಮಾಲಕರ ಸಂಘದ ಅಧ್ಯಕ್ಷ ಎ.ಕೆ.ವರ್ಗೀಸ್ ಅವರು ಮಾತನಾಡಿ, ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ನಡೆಯುತ್ತಿದ್ದು, ನೆಲ್ಯಾಡಿಯಲ್ಲಿ ಅಂಡರ್‌ಪಾಸ್ ಮಾಡಲಾಗುತ್ತಿದೆ. ಎರಡೂ ಕಡೆಯೂ ಸರ್ವೀಸ್ ರಸ್ತೆ ಮಾಡಲಾಗಿದ್ದರೂ ಸಮಸ್ಯೆ ಬಗೆಹರಿದಿಲ್ಲ. ಚರಂಡಿಯೂ ಸಮರ್ಪಕವಾಗಿ ನಿರ್ವಹಣೆ ಮಾಡಿಲ್ಲ. ಈ ಬಗ್ಗೆ ಗುತ್ತಿಗೆದಾರರಿಗೆ ಮನವಿ ಮಾಡಿದ್ದರೂ ಸೂಕ್ತ ಕ್ರಮ ಕೈಗೊಂಡಿಲ್ಲ. ಈ ಬಗ್ಗೆ ಮುಂದಿನ ಹೋರಾಟದ ಕುರಿತಂತೆ ಚರ್ಚಿಸಲು ನೆಲ್ಯಾಡಿ, ಕೌಕ್ರಾಡಿ, ಗೋಳಿತ್ತೊಟ್ಟು ಗ್ರಾ.ಪಂ.ವ್ಯಾಪ್ತಿಯ ಸುಮಾರು 17 ಸಂಘ ಸಂಸ್ಥೆಯವರನ್ನು ಸಭೆಗೆ ಆಹ್ವಾನಿಸಲಾಗಿದೆ. ಸಭೆಯಲ್ಲಿ ಬಂದಿರುವ ಅಭಿಪ್ರಾಯದಂತೆ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು. ಕಟ್ಟಡ ಮಾಲಕರ ಸಂಘದ ನಿಕಟ ಪೂರ್ವಾಧ್ಯಕ್ಷ ಒ.ಜಿ.ನೈನಾನ್‌ರವರು ಈ ಹಿಂದೆ ನಡೆದ ಕಾಮಗಾರಿಯ ಸಂದರ್ಭದಲ್ಲಿ ಆಗಿರುವ ಬೆಳವಣಿಗೆಗಳ ಕುರಿತು ತಿಳಿಸಿದರು.

ನೆಲ್ಯಾಡಿ ಸಂತ ಜಾರ್ಜ್ ವಿದ್ಯಾಸಂಸ್ಥೆಯ ಸಂಚಾಲಕ ಅಬ್ರಹಾಂ ವರ್ಗೀಸ್, ನೆಲ್ಯಾಡಿ ವರ್ತಕರ ಸಂಘದ ಅಧ್ಯಕ್ಷ ರಫೀಕ್ ಸೀಗಲ್, ಕಟ್ಟಡ ಮಾಲಕರ ಸಂಘದ ಉಪಾಧ್ಯಕ್ಷ ಗಣೇಶ್ ಕೆ.ರಶ್ಮಿ ವೇದಿಕೆಯಲ್ಲಿ ಉಪಸ್ಥಿತರಿದ್ದು, ಸಮಸ್ಯೆ ಹಾಗೂ ಬೇಡಿಕೆ ಕುರಿತಂತೆ ಮಾಹಿತಿ ನೀಡಿದರು. ಸರ್ವೀಸ್ ರಸ್ತೆ ಏಳೂವರೇ ಮೀಟರ್‌ಗೆ ವಿಸ್ತರಣೆ, ರಿಕ್ಷಾ, ಜೀಪು ಪಾರ್ಕಿಂಗ್ ವ್ಯವಸ್ಥೆ, ಅಂಡರ್‌ಪಾಸ್‌ನಲ್ಲಿ ವಾಹನ ನಿಲುಗಡೆ ಹಾಗೂ ವ್ಯಾಪಾರಕ್ಕೆ ಅವಕಾಶ ನೀಡಬಾರದು, ಚರಂಡಿಯೊಳಗಿನ ತ್ಯಾಜ್ಯ ಹಾಗೂ ಇತರೇ ಕಸಕಡ್ಡಿಗಳ ತೆರವು, ಚರಂಡಿಗೆ ಮುಚ್ಚಳ ಅಳವಡಿಕೆ ಸೇರಿದಂತೆ ಇತರೇ ಸಮಸ್ಯೆಗಳ ಕುರಿತು ಸದಸ್ಯರು ಸಭೆಯ ಗಮನ ಸೆಳೆದರು.
ನೆಲ್ಯಾಡಿ ಅಶ್ವಿನಿ ಆಸ್ಪತ್ರೆಯ ವೈದ್ಯ ಡಾ.ಮುರಳೀಧರ, ನ್ಯಾಯವಾದಿ ಇಸ್ಮಾಯಿಲ್ ನೆಲ್ಯಾಡಿ, ತಾ.ಪಂ.ಮಾಜಿ ಸದಸ್ಯೆ ಉಷಾ ಅಂಚನ್, ನೆಲ್ಯಾಡಿ ಗ್ರಾ.ಪಂ.ಸದಸ್ಯರಾದ ರವಿಪ್ರಸಾದ್ ಶೆಟ್ಟಿ, ಮಹಮ್ಮದ್ ಇಕ್ಬಾಲ್, ಸಲಾಂ ಪಡುಬೆಟ್ಟು, ಕೌಕ್ರಾಡಿ ಗ್ರಾ.ಪಂ.ಸದಸ್ಯರಾದ ಲೋಕೇಶ್ ಬಾಣಜಾಲು, ಉದಯಕುಮಾರ್ ದೋಂತಿಲ, ವರ್ತಕರಾದ ಮಹಮ್ಮದ್ ಪುತ್ತು, ಕೆ.ಪಿ.ತೋಮಸ್, ಶಿವಣ್ಣ ಪಿ.ಹೆಗ್ಡೆ, ಮಿಥುನ್ ಶಿವಕೃಪಾ, ರಾಮಣ್ಣ ಗೌಡ ನೆಲ್ಯಾಡಿ, ಗಣೇಶ್ ಪೊಸೊಳಿಕೆ, ಜಯಕುಮಾರ್ ಶಾರದಾ ಫ್ಯಾನ್ಸಿ, ರವಿಪ್ರಸಾದ್ ಗುತ್ತಿನ ಮನೆ, ಜೋಸ್ ಕೆ.ಜೆ.ಮತ್ತಿತರರು ಉಪಸ್ಥಿತರಿದ್ದು ಸಲಹೆ ಸೂಚನೆ ನೀಡಿದರು. ಕಟ್ಟಡ ಮಾಲಕರ ಸಂಘದ ಕಾರ್ಯದರ್ಶಿ ರವಿಚಂದ್ರ ಹೊಸವಕ್ಲು ಸ್ವಾಗತಿಸಿ, ನಿರೂಪಿಸಿದರು.

ನಳಿನ್ ಭೇಟಿಗೆ ನಿರ್ಧಾರ: ಅಸಮರ್ಪಕ ಕಾಮಗಾರಿ ವಿರುದ್ಧ ಪ್ರತಿಭಟನೆ ನಡೆಸುವ ಬದಲು ಸಮಸ್ಯೆಗಳ ಬಗ್ಗೆ ಸಂಸದ ನಳಿನ್‌ ಕುಮಾರ್ ಕಟೀಲ್ ಅವರ ಗಮನಕ್ಕೆ ತರುವಂತೆ ಸಭೆಯಲ್ಲಿ ಅಭಿಪ್ರಾಯ ಬಂತು. ಈ ಹಿನ್ನೆಲೆಯಲ್ಲಿ ಸಂಸದ ನಳಿನ್‌ಕುಮಾರ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸುವುದು. ಸಂಸದರು ಹಾಗೂ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಖುದ್ದು ನೆಲ್ಯಾಡಿಗೆ ಬಂದು ಇಲ್ಲಿನ ಸಮಸ್ಯೆ ಬಗ್ಗೆ ಗಮನಹರಿಸಿ ಸೂಕ್ತ ಪರಿಹಾರ ಒದಗಿಸಿಕೊಡುವಂತೆ ಕೇಳಿಕೊಳ್ಳಲು ಸಭೆಯಲ್ಲಿ ನಿರ್ಧರಿಸಲಾಯಿತು.

LEAVE A REPLY

Please enter your comment!
Please enter your name here