ವಿಧಾನ ಮಂಡಲದ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರ ಭಾಷಣ-

0

ಭ್ರಷ್ಟಾಚಾರ ನಿರ್ಮೂಲನೆ,ಹಸಿವು ಮುಕ್ತ ಕರ್ನಾಟಕ ಸರ್ಕಾರದ ಆದ್ಯತೆ

*ಆಡಳಿತ ವ್ಯವಸ್ಥೆಯಲ್ಲಿ ಬೇರೂರಿರುವ ಭ್ರಷ್ಟಾಚಾರ ನಿರ್ಮೂಲನೆ ಬಹುದೊಡ್ಡ ಸವಾಲು
*ಉಭಯ ಸದನದ ಸದಸ್ಯರ ಸಹಕಾರ ಕೋರಿದ ಗೆಹ್ಲೋಟ್
*ರಾಜ್ಯ ಸರಕಾರದಿಂದ ಆಡಳಿತಾತ್ಮಕ, ಶಾಸಕಾಂಗ ಕ್ರಮದ ಭರವಸೆ

ಬೆಂಗಳೂರು:ಭ್ರಷ್ಟಾಚಾರ ನಿರ್ಮೂಲನೆ ಮತ್ತು ಹಸಿವು ಮುಕ್ತ ಕರ್ನಾಟಕ ರಾಜ್ಯ ಸರಕಾರದ ಆದ್ಯತೆಯಾಗಿದೆ ಎಂದು ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಹೇಳಿದ್ದಾರೆ.
ರಾಜ್ಯದಲ್ಲಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಮೊದಲ ಬಾರಿ ವಿಧಾನ ಮಂಡಲದ ಜಂಟಿ ಅಧಿವೇಶನವನ್ನುದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡಿದರು.


ಭ್ರಷ್ಟಾಚಾರವೆಂಬ ಪಿಡುಗು ನಮ್ಮ ವ್ಯವಸ್ಥೆಯೊಳಗೆ ಎಷ್ಟರ ಮಟ್ಟಿಗೆ ಬೇರೂರಿದೆ ಎಂದರೆ ಬಹುತೇಕ ಸಾಂಸ್ಥೀಕರಣಗೊಂಡಿದೆ.ಭ್ರಷ್ಟಾಚಾರದ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸಿ ನಿರ್ಮೂಲನೆ ಮಾಡಲು ರಾಜ್ಯ ಸರ್ಕಾರ ಆಡಳಿತಾತ್ಮಕ ಮತ್ತು ಶಾಸಕಾಂಗ ಕ್ರಮಗಳನ್ನು ಕೈಗೊಂಡಿದೆ. ಮುಂದಿನ ಐದು ವರ್ಷಗಳಲ್ಲಿ ರಾಜ್ಯ ಸರ್ಕಾರವು ಜನಕೇಂದ್ರಿತ ಆರ್ಥಿಕತೆಗೆ ಒತ್ತು ನೀಡಲಿದೆ ಎಂದು ಹೇಳಿದ ರಾಜ್ಯಪಾಲರು, ನಮ್ಮ ಆಡಳಿತ ವ್ಯವಸ್ಥೆಯಲ್ಲಿ ಬೇರೂರಿ ಹೋಗಿರುವ ಭ್ರಷ್ಟಾಚಾರ ನಿರ್ಮೂಲನೆ ಮಾಡುವುದು ದೊಡ್ಡ ಸವಾಲಾಗಿದೆ. ಈ ಸವಾಲನ್ನು ಎದುರಿಸಲು ಮತ್ತು ಭ್ರಷ್ಟಾಚಾರವನ್ನು ಬೇರುಸಹಿತ ಕಿತ್ತೊಗೆಯಲು ನಿಮ್ಮೆಲ್ಲರ ಸಹಕಾರ ಅಗತ್ಯ ಎಂದು ಉಭಯ ಸದನಗಳ ಸದಸ್ಯರನ್ನು ಮನವಿ ಮಾಡಿಕೊಂಡರು. ವಿಧಾನಸೌಧಕ್ಕೆ ಆಗಮಿಸಿದ ರಾಜ್ಯಪಾಲರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವಾಗತಿಸಿದರು. ಬಸವಣ್ಣನ ತತ್ವದಡಿ ರಾಜ್ಯ ಸರ್ಕಾರ ನಡೆಯುತ್ತಿದೆ. ಸರ್ಕಾರ ಎಲ್ಲಾ ಸಮುದಾಯಗಳ ಪರವಾಗಿ ಕಾರ್ಯನಿರ್ವಹಣೆ ಮಾಡುತ್ತಿದೆ. ಕುವೆಂಪು ಅವರ ಸರ್ವಜನಾಂಗದ ಶಾಂತಿ ತೋಟ ತತ್ವದಡಿ ಕೆಲಸ ಮಾಡುತ್ತಿದ್ದೇವೆ. ಬಸವಣ್ಣ, ಸರ್ವಜ್ಞ ಸೇರಿ ಅನೇಕ ಸಂತರ ಶಾಂತಿ ತತ್ವ ಪಾಲನೆ ಮಾಡಲಾಗುತ್ತಿದೆ ಎಂದು ರಾಜ್ಯಪಾಲರು ಹೇಳಿದರು.
ಅನ್ನಭಾಗ್ಯ ಅಕ್ಕಿ ಬದಲು ಹಣ ವರ್ಗಾವಣೆ:
ಅನ್ನ ಭಾಗ್ಯ 'ಯೋಜನೆಯಡಿ ರಾಜ್ಯ ಸರ್ಕಾರ ಹೆಚ್ಚುವರಿಯಾಗಿ ಪ್ರತಿತಿಂಗಳು ನೀಡಲುದ್ದೇಶಿಸಿದ್ದ ಐದು ಕೆಜಿ ಅಕ್ಕಿ ಹಂಚಿಕೆಯನ್ನು ನೇರ ಲಾಭದ ರೂಪದಲ್ಲಿ ಪ್ರತಿ ವ್ಯಕ್ತಿಗೆ ಕೆಜಿಗೆ 34 ರೂಪಾಯಿಗಳಂತೆ ನೇರವಾಗಿ ಬಿಪಿಎಲ್ ಕುಟುಂಬಗಳ ಬ್ಯಾಂಕ್ ಖಾತೆಗಳಿಗೆ ಪ್ರತಿ ತಿಂಗಳು ಹಣ ವರ್ಗಾವಣೆ ಮಾಡಲಾಗುವುದು. ಎಲ್ಲಾ ಬಡ ಕುಟುಂಬಗಳಿಗೆ ಹೆಚ್ಚುವರಿಯಾಗಿ ಐದು ಕೆಜಿ ಅಕ್ಕಿ ನೀಡುವವರೆಗೆ ಪರ್ಯಾಯವಾಗಿ ಹಣವನ್ನು ಖಾತೆಗೆ ಹಾಕುವ ವ್ಯವಸ್ಥೆ ಮುಂದುವರಿಯುತ್ತದೆ,ಅನ್ನ ಭಾಗ್ಯ’ ಯೋಜನೆ ಮತ್ತು`ಇಂದಿರಾ ಕ್ಯಾಂಟೀನ್’ ಮೂಲಕ ರಾಜ್ಯದ ಜನರನ್ನು ಸರ್ಕಾರ ಹಸಿವು ಮುಕ್ತಗೊಳಿಸಲಿದೆ ಎಂದು ರಾಜ್ಯಪಾಲರು ಹೇಳಿದರು.
2.14 ಕೋಟಿ ಕುಟುಂಬಕ್ಕೆ ಗೃಹಜ್ಯೋತಿಯಿಂದ ಅನುಕೂಲ: ಗೃಹಜ್ಯೋತಿ ಯೋಜನೆಯಡಿ 200 ಯೂನಿಟ್‌ವರೆಗೆ ಉಚಿತ ವಿದ್ಯುತ್ ಕೊಡಲಾಗುತ್ತದೆ.ಈ ಯೋಜನೆಯಿಂದ ಸುಮಾರು 2.14 ಕೋಟಿ ಕುಟುಂಬಕ್ಕೆ ಅನುಕೂಲ ಆಗಲಿದೆ. ಮಹಿಳಾ ಸಬಲೀಕರಣಕ್ಕಾಗಿ ಗೃಹಲಕ್ಷ್ಮೀ ಯೋಜನೆ ಜಾರಿ ಮಾಡಲಾಗಿದೆ. ಗೃಹಲಕ್ಷ್ಮೀ ಯೋಜನೆಯಡಿ ಮನೆ ಯಜಮಾನಿ ಖಾತೆಗೆ ಮಾಸಿಕ 2 ಸಾವಿರ ರೂಪಾಯಿ ಹಾಕಲಾಗುತ್ತದೆ. ನನ್ನ ಸರ್ಕಾರ ಆಡಳಿತವನ್ನು ಪವಿತ್ರ ಕರ್ತವ್ಯ ಎಂದು ಪರಿಗಣಿಸುತ್ತದೆ. ಸರ್ಕಾರ ಬಡವರು, ಆರ್ಥಿಕ ಹಿಂದುಳಿದವರ ಪರವಾಗಿ ನಿಲ್ಲುತ್ತದೆ ಎಂದು ರಾಜ್ಯಪಾಲರು ತಮ್ಮ ಭಾಷಣದಲ್ಲಿ ಹೇಳಿದರು. 12 ಗಂಟೆಗೆ ಸರಿಯಾಗಿ ವಿಧಾನಸಭೆಯ ಸಭಾಂಗಣ ಪ್ರವೇಶಿಸಿದ ರಾಜ್ಯಪಾಲರು 30 ನಿಮಿಷಗಳ ಕಾಲ ಅಧಿವೇಶನ ಉದ್ದೇಶಿಸಿ ಮಾತನಾಡಿದರು. ವಿಧಾನಸಭೆಯ ಅಧ್ಯಕ್ಷ ಯು.ಟಿ.ಖಾದರ್ ಮತ್ತು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಸಭಾಧ್ಯಕ್ಷರ ಪೀಠದ ಇಕ್ಕೆಲಗಳಲ್ಲಿ ಆಸೀನರಾಗಿದ್ದರು.

ಆರ್ಥಿಕ ಸಂಕಷ್ಟದಿಂದ ಹೊರಬರುವುದು ಸರ್ಕಾರದ ಆದ್ಯತೆ
ದೇಶದ ಅಭಿವೃದ್ಧಿಯಲ್ಲಿ ಸಾಕಷ್ಟು ಕೊಡುಗೆ ನೀಡಿರುವ ಕರ್ನಾಟಕ ರಾಜ್ಯ ಇಂದು ಆರ್ಥಿಕ ಮುಗ್ಗಟ್ಟಿನ ಸ್ಥಿತಿಗೆ ತಲುಪಿದೆ. ಕರ್ನಾಟಕ ರಾಜ್ಯವನ್ನು ಆರ್ಥಿಕ ಸಂಕಷ್ಟದಿಂದ ಹೊರತರುವುದು ನೂತನ ಕಾಂಗ್ರೆಸ್ ಸರ್ಕಾರದ ಆದ್ಯತೆಯಾಗಿದೆ ಎಂದೂ ಗೆಹ್ಲೋಟ್ ಹೇಳಿದರು. ಸಂಕುಚಿತ ಮನಸ್ಸುಗಳು ವಿವಿಧ ಸಮುದಾಯಗಳ ನಡುವೆ ಒಡಕು ಮತ್ತು ಭಿನ್ನಾಭಿಪ್ರಾಯಗಳನ್ನು ಸೃಷ್ಟಿಸುತ್ತವೆ. ಅಂತಹ ಮನಃಸ್ಥಿತಿಯ ಜನರು ಸಮಾಜದ ವಿವಿಧ ಹಂತಗಳಲ್ಲಿ ಇನ್ನೂ ಉಳಿದಿದ್ದಾರೆ ಎಂದು ಹೇಳಿದ ರಾಜ್ಯಪಾಲರು, ಶಾಂತಿಯುತ ಮತ್ತು ಪರಸ್ಪರ ಪ್ರೀತಿಸುವ ಸಮಾಜವನ್ನು ನಿರ್ಮಿಸಲು ಸರ್ಕಾರ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ಹೇಳಿದರು.

ಸುದ್ದಿ ಜನಾಂದೋಲನಕ್ಕೆ ದೊರೆತ ಗೆಲುವು
ಲಂಚ, ಭ್ರಷ್ಟಾಚಾರದ ವಿರುದ್ಧ ಸುದ್ದಿ ಜನಾಂದೋಲನ ವೇದಿಕೆ ವತಿಯಿಂದ ಆಂದೋಲನದ ರೀತಿಯಲ್ಲಿ ನಿರಂತರ ಹೋರಾಟ ನಡೆಯುತ್ತಿದ್ದು ಸುಳ್ಯ,ಪುತ್ತೂರು, ಬೆಳ್ತಂಗಡಿ ಸೇರಿದಂತೆ ಜಿಲ್ಲೆಯಲ್ಲಿ ಜನಪ್ರತಿನಿಧಿಗಳು ಮತ್ತು ಸಾರ್ವಜನಿಕರಿಂದ ಉತ್ತಮ ಬೆಂಬಲ ದೊರೆತಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಗಳು ಲಂಚ, ಭ್ರಷ್ಟಾಚಾರದ ವಿರುದ್ದ ಪ್ರತಿಜ್ಞೆ ಸ್ವೀಕರಿಸಿದ್ದರು. ಲಂಚ,ಭ್ರಷ್ಟಾಚಾರ ವಿರುದ್ಧ ರಾಜ್ಯದಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸುದ್ದಿ ಜನಾಂದೋಲನ ವೇದಿಕೆ ಮುಖ್ಯಸ್ಥ ಡಾ.ಯು.ಪಿ.ಶಿವಾನಂದ ಅವರು, ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ವರುಣಾ ಕ್ಷೇತ್ರ ಮತ್ತು ನಿಕಟಪೂರ್ವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಶಿಗ್ಗಾಂವಿ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ದರು. ನಿಮ್ಮ ಮತ ನನಗೆ ಬೇಡ. ನೀವು ಬಯಸುವ ಅಭ್ಯರ್ಥಿಗಳಿಗೇ ನೀಡಿ. ಆದರೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಅಭ್ಯರ್ಥಿಗಳಿಂದ ಲಂಚ,ಭ್ರಷ್ಟಾಚಾರದ ವಿರುದ್ಧ ಪ್ರತಿಜ್ಞೆ ಮಾಡಿಸಿ ಎಂದು ವರುಣಾ ಮತ್ತು ಶಿಗ್ಗಾಂವಿ ಕ್ಷೇತ್ರದ ಮತದಾರರಲ್ಲಿ ಡಾ.ಶಿವಾನಂದರು ಮನವಿ ಮಾಡಿದ್ದು, ಈ ಕ್ಷೇತ್ರಗಳಲ್ಲೂ ಆಂದೋಲನಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗಿತ್ತು. ಇದೀಗ, ಭ್ರಷ್ಟಾಚಾರ ನಿರ್ಮೂಲನೆಯೇ ಸರಕಾರದ ಆದ್ಯತೆ ಎಂದು ರಾಜ್ಯ ಸರಕಾರದ ಆಶಯವನ್ನು ರಾಜ್ಯಪಾಲರು ತಮ್ಮ ಭಾಷಣದಲ್ಲಿ ಹೇಳಿರುವುದು ಸುದ್ದಿ ಜನಾಂದೋಲನಕ್ಕೆ ದೊರೆತ ಗೆಲುವು ಎಂದೇ ಹೇಳಬಹುದು.
ಈ ಹಿಂದೆ ಬಲಾತ್ಕಾರದ ಬಂದ್ ವಿರುದ್ಧ, ಸಾಮಾಜಿಕ ಜಾಲ ತಾಣಗಳ ದುರುಪಯೋಗದ ವಿರುದ್ಧವೂ ಸುದ್ದಿಯಿಂದ ಜನಾಂದೋಲನ ನಡೆದು ಜನರಿಂದ ಉತ್ತಮ ಬೆಂಬಲ ದೊರೆತಿತ್ತಾದರೂ ಕೆಲವರಿಂದಾಗಿ ಸುದ್ದಿ ಹಲವು ಸಮಸ್ಯೆಗಳನ್ನು ಎದುರಿಸುವಂತಾಗಿತ್ತು. ಆದರೆ ಬಲಾತ್ಕಾರದ ಬಂದ್ ವಿರುದ್ಧ ಮತ್ತು ಸಾಮಾಜಿಕ ಜಾಲತಾಣಗಳ ದುರುಪಯೋಗ ವಿಚಾರವನ್ನು ನ್ಯಾಯಾಲಯಗಳು ಮತ್ತು ಸರಕಾರ ಕೈಗೆತ್ತಿಕೊಳ್ಳುವ ಮೂಲಕ ಸುದ್ದಿಯ ಈ ಹೋರಾಟಕ್ಕೂ ಗೆಲುವು ದೊರೆತಿತ್ತು.

LEAVE A REPLY

Please enter your comment!
Please enter your name here