ಕ.ಸಾ.ಪ ಪುತ್ತೂರು ಗ್ರಾಮ ಸಾಹಿತ್ಯ ಸಂಭ್ರಮ -7

0

ಗ್ರಾಮೀಣ ಪ್ರತಿಭೆಗಳಿಗೆ ವೇದಿಕೆ ನೀಡುವ ದೃಢಸಂಕಲ್ಪ ಪುತ್ತೂರು ಕ.ಸಾ.ಪ ದಿಂದ ಶ್ರೀ. ಪ್ರಶಾಂತ್. ಎನ್.

ಪುತ್ತೂರು: ತಾಲೂಕಿನ ಗ್ರಾಮೀಣ ಪ್ರದೇಶದ ಶಾಲಾ ಕಾಲೇಜುಗಳಲ್ಲಿರುವ ಅನೇಕ ಉದಯೋನ್ಮುಖ ಸಾಹಿತಿಗಳಿಗೆ ಮತ್ತು ಗ್ರಾಮದ ಸಾಹಿತ್ಯ ಕ್ಷೇತ್ರದ ಸಾಧಕರನ್ನು ಗುರುತಿಸಿ ಸಾಹಿತ್ಯ ವೇದಿಕೆ ನೀಡುವ ನಿಟ್ಟಿನಲ್ಲಿ ಗ್ರಾಮ ಗ್ರಾಮದಲ್ಲೂ ಸಾಹಿತ್ಯ ಸಂಭ್ರಮ ಸರಣಿ ಕಾರ್ಯಕ್ರಮವನ್ನು ಕ ಸಾ ಪ ಪುತ್ತೂರು ಹಮ್ಮಿಕೊಂಡಿರುವುದು ಸಂತೋಷದ ಸಂಗತಿ . ಈ ಮೂಲಕ ವಿದ್ಯಾರ್ಥಿಗಳಿಗೆ ಹಾಗೂ ಸಾಹಿತಿಗಳಿಗೆ ಮತ್ತು ಕಲಾವಿದರಿಗೆ ಪ್ರೋತ್ಸಾಹಿಸಿ ವೇದಿಕೆ ನೀಡಿ ಯುವ ಜನತೆಯನ್ನು ಸಾಹಿತ್ಯ ಕ್ಷೇತ್ರಕ್ಕೆ ತೊಡಗಿಸಿಕೊಳ್ಳುವ ಸಮಾಜ ಮುಖಿ ಕಾರ್ಯಕ್ಕೆ ಗ್ರಾಮ ಪಂಚಾಯತ್ ಸದಾ ಬೆಂಬಲವಾಗಿ ನಿಲ್ಲುತ್ತದೆ ಎಂದು ನೆಕ್ಕಿಲಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರಶಾಂತ್ ಎನ್ ನೆಕ್ಕಿಲಾಡಿ ಗ್ರಾಮ ಸಾಹಿತ್ಯ ಸಂಭ್ರಮ -7 ನೇ ಸರಣಿ ಕಾರ್ಯಕ್ರಮವನ್ನು ದೀಪ ಪ್ರಜ್ವಲನೆ ಮೂಲಕ ಉದ್ಘಾಟಿಸಿ ನುಡಿದರು.

ನೆಕ್ಕಿಲಾಡಿ ಗ್ರಾಮದ ಸ. ಹಿ. ಪ್ರಾ ಶಾಲೆ ನೆಕ್ಕಿಲಾಡಿಯಲ್ಲಿ ಕ. ಸಾ. ಪ ಪುತ್ತೂರು, ಶಿಕ್ಷಣ ಇಲಾಖೆ ಪುತ್ತೂರು, ಗ್ರಾಮ ಪಂಚಾಯತ್ ನೆಕ್ಕಿಲಾಡಿ, ಸತ್ಯ ಶಾಂತಾ ಪ್ರತಿಷ್ಠಾನ ಸಹಕಾರದಲ್ಲಿ ಚಿಗುರೆಲೆ ಸಾಹಿತ್ಯ ಬಳಗ ಪುತ್ತೂರು ಇದರ ಸಂಯೋಜನೆಯಲ್ಲಿ ಮಿತ್ರಂಪಾಡಿ ಜಯರಾಮ ರೈ ಅವರ ಮಹಾಪೋಷಕತ್ವದಲ್ಲಿ ಸಾಹಿತ್ಯದ ನಡಿಗೆ ಗ್ರಾಮದ ಕಡೆಗೆ ಎಂಬ ಘೋಷವಾಕ್ಯದಲ್ಲಿ ಕಾರ್ಯಕ್ರಮ ಜುಲೈ 22ರಂದು ನಡೆಯಿತು.

ಸಭಾಧ್ಯಕ್ಷತೆಯನ್ನು ಕ. ಸಾ. ಪ. ಪುತ್ತೂರು ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ನೆಕ್ಕಿಲಾಡಿ ಗ್ರಾಮದ ಉಪಾಧ್ಯಕ್ಷ ಸ್ವಪ್ನ, ಕ. ಸಾ. ಪ ಪುತ್ತೂರು ಇದರ ಕಾರ್ಯಕಾರಿ ಸಮಿತಿ ಸದಸ್ಯರಾದ ಉದಯಕುಮಾರ್ ಯು. ಎಲ್, ನೆಕ್ಕಿಲಾಡಿ ಗ್ರಾಮದ ಸಿ. ಆರ್. ಪಿ. ಮಹಮ್ಮದ್ ಅಶ್ರಫ್, ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ರಾಜೀವ ನಾಯ್ಕ್ ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು.

ವಿದ್ಯೆಯನ್ನು ನೀಡುವ ಶಾಲೆಯು ಸರ್ವಧರ್ಮದವರಿಗೂ ದೇಗುಲ ವಾಗಿದೆ. ಜನ್ಮ ನೀಡಿದ ತಂದೆ ತಾಯಿ ವಿದ್ಯೆ ನೀಡಿದ ಶಾಲೆ, ವಿದ್ಯೆ ಕಲಿಸಿದ ಶಿಕ್ಷಕರನ್ನು ಸದಾ ನಾವು ಗೌರವಿಸಬೇಕು ಎಂದು ಗ್ರಾಮ ಸಾಹಿತ್ಯ ಸಂಭ್ರಮದ ಮಹಾಪೋಷಕ ಮಿತ್ರಂಪಾಡಿ ಜಯರಾಮ ರೈ ಅವರು ಶುಭ ಹಾರೈಸಿದರು

ಗ್ರಾಮದ 5 ಸಾಧಕರಿಗೆ ಸನ್ಮಾನ
ಪತ್ರಿಕೋದ್ಯಮ ಕ್ಷೇತ್ರದ ಸಾಧಕ ದಿನಕರ್ ಇಂದಾಜೆ, ಸಮಾಜ ಸೇವಕ ಜತೀಂದ್ರ ಶೆಟ್ಟಿ , ಹಿರಿಯ ಯಕ್ಷಗಾನ ಕಲಾವಿದ ಕುಂಬ್ಳೆ ಶ್ರೀಧರ್ ರಾವ್, ಯುವ ಸಾಹಿತಿ ಶಾಂತ ಕುಂಟಿನಿ , ಕ್ಯಾನ್ಸರ್ ತಜ್ಞ ರಘು ಬೆಳ್ಳಿಪ್ಪಾಡಿ ರವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ನಾಲ್ಕು ವಿವಿಧ ಗೋಷ್ಠಿಗಳು
ನಮ್ಮೂರು ನಮ್ಮವರು ವೇದಿಕೆ ಅಧ್ಯಕ್ಷ ಜತೀಂದ್ರ ಶೆಟ್ಟಿ ಉಪಸ್ಥಿತಿಯಲ್ಲಿ ಸತ್ಯ ಶಾಂತ ಪ್ರತಿಷ್ಠಾನದ ಅಧ್ಯಕ್ಷ ಶಾಂತ ಕುಂಟಿನಿಯವರಿಂದ ಸಾಹಿತ್ಯ ಮತ್ತು ಶಿಕ್ಷಣಕ್ಕೆ ನೆಕ್ಕಿಲಾಡಿ ಗ್ರಾಮದ ಕೊಡುಗೆ ಕುರಿತು ಉಪನ್ಯಾಸ ನೆರವೇರಿತು. .ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸ್ವಪ್ನ ಅಧ್ಯಕ್ಷತೆಯಲ್ಲಿ ಬಾಲಕಥಾಗೋಷ್ಠಿ, ಗುಣಶ್ರೀ ವಿದ್ಯಾಲಯ ಕುಳ ಕುಂಡಡ್ಕ ಇದರ ಮುಖ್ಯ ಗುರು ರಾಜಾರಾಮ್ ವರ್ಮ ವಿಟ್ಲ ಅಧ್ಯಕ್ಷತೆಯಲ್ಲಿ ಸಾರ್ವಜನಿಕ ವಿಭಾಗದ ಯುವ ಕವಿಗೋಷ್ಠಿ ನಡೆಯಿತು. ಕವಿಗೋಷ್ಠಿಯಲ್ಲಿ ಸುನೀತಾ ಶ್ರೀರಾಮ್, ದೇವಕಿ, ರಶ್ಮಿತಾ ಸುರೇಶ್, ಶಶಿಧರ್ ಏಮಾಜೆ, ಆನಂದ ರೈ ಅಡ್ಕಸ್ಥಳ, ಜಯಪ್ರಕಾಶ್, ಮುಸ್ತಫಾ ಬೆಳ್ಳಾರೆ, ನವ್ಯಶ್ರೀ ಸ್ವರ್ಗ, ಪದ್ಮಾ, ಭಾಗವಹಿಸಿದ್ದರು.

ವಿವಿಧ ಗೋಷ್ಠಿಗಳಲ್ಲಿ ನೆಕ್ಕಿಲಾಡಿ ಗ್ರಾಮದ ವಿವಿಧ ಶಾಲೆಯ 80ವಿದ್ಯಾರ್ಥಿಗಳು ಮತ್ತು ಅಧ್ಯಾಪಕ ವೃಂದದವರು ಭಾಗವಹಿಸಿದ್ದರು.ನೆಕ್ಕಿಲಾಡಿ ಮತ್ತು ಶಾಂತಿನಗರ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಸುಪ್ರೀತಾ ಚರಣ್ ಪಾಲಪ್ಪೆ , ಶ್ರೇಯ ಮಿಂಚಿನಡ್ಕ , ನವ್ಯ ಪುತ್ತೂರು,ರಶ್ಮಿತಾ ಸುರೇಶ್ ಮಾಣಿ ವಿವಿಧ ಗೋಷ್ಠಿ ಗಳನ್ನು ನಿರ್ವಹಿಸಿದರು.

ಸ. ಹಿ. ಪ್ರಾ. ಶಾಲೆ ನೆಕ್ಕಿಲಾಡಿ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು,ಶಾಲಾ ಮುಖ್ಯಗುರು ಕಾವೇರಿ ಸ್ವಾಗತಿಸಿ,ಗ್ರಾಮ ಸಾಹಿತ್ಯ ಸಂಭ್ರಮದ ಸಂಚಾಲಕ ನಾರಾಯಣ ಕುಂಬ್ರ ಪ್ರಾಸ್ತಾವಿಕ ನುಡಿಗಳನ್ನಾಡಿದರು, ರಾಧಾಕೃಷ್ಣ ಎರುಂಬು ನಿರೂಪಿಸಿ, ನೆಕ್ಕಿಲಾಡಿ ಶಾಲಾ ಶಿಕ್ಷಕಿ ಪದ್ಮಾ ವಂದಿಸಿದರು.

LEAVE A REPLY

Please enter your comment!
Please enter your name here