ತಾಲೂಕು ಮಹಿಳಾ ಬಂಟರ ಸಂಘದಿಂದ ಆಟಿ ಕೂಟ

0

ಮಹಿಳಾ ಬಂಟರು ಸಂಘಟಿತರಾಗಬೇಕು- ಸುಮ ಅಶೋಕ್ ಕುಮಾರ್ ರೈ


ಪುತ್ತೂರು: ತಾಲೂಕು ಮಹಿಳಾ ಬಂಟರ ಸಂಘದ ವತಿಯಿಂದ ಆಟಿ ಕೂಟ ಕಾರ್‍ಯಕ್ರಮ ಪುತ್ತೂರು ಎಂ.ಸುಂದರರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ಆ. 5 ರಂದು ಜರಗಿತು.
ಮುಖ್ಯ ಅತಿಥಿ ಉದ್ಯಮಿ ಸುಮ ಅಶೋಕ್ ಕುಮಾರ್ ರೈ ಮಾತನಾಡಿ ತಾಲೂಕು ಮಹಿಳಾ ಬಂಟರ ಸಂಘದವರು ಎಲ್ಲರೂ ಒಂದುಗೂಡಿ ಅತ್ಯುತ್ತಮವಾದ ರೀತಿಯಲ್ಲಿ ಆಟಿ ಆಚರಣೆಯನ್ನು ಹಮ್ಮಿಕೊಂಡಿರುವುದು ತುಂಬಾ ಸಂತೋಷ ತಂದಿದೆ. ಮಹಿಳಾ ಬಂಟರು ಸಂಘಟನೆಯ ಮೂಲಕ ಸಮಾಜದಲ್ಲಿ ಸಂಘಟಿತರಾಗುವ ಮೂಲಕ ಸಮಾಜಮುಖಿ ಕಾರ್‍ಯದಲ್ಲಿ ತೊಡಗಿಸಿಕೊಳ್ಳುವಂತೆ ವಿನಂತಿಸಿದರು.

ಅತ್ಯುತ್ತಮ ಕಾರ್‍ಯಕ್ರಮ- ಸೀತಾರಾಮ ರೈ
ತಾಲೂಕು ಬಂಟರ ಸಂಘದ ಮಾಜಿ ಅಧ್ಯಕ್ಷ ಸವಣೂರು ಕೆ.ಸೀತಾರಾಮ ರೈ ಮಾತನಾಡಿ ಮಹಿಳಾ ಬಂಟರ ಸಂಘ ಅತ್ಯುತ್ತಮವಾದ ಕಾರ್‍ಯಕ್ರಮವನ್ನು ಸಂಘಟಿಸಿ, ಹೆಸರನ್ನು ಪಡೆದಿದ್ದಾರೆ ಸಂಘದ ಅಧ್ಯಕ್ಷೆ ಸಬಿತಾ ಭಂಡಾರಿ ಮತ್ತು ತಂಡಕ್ಕೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.

ಬಂಟರ ಮಹಿಳಾ ಸಮಾವೇಶ ಆಯೋಜಿಸಿ- ಹೇಮನಾಥ ಶೆಟ್ಟಿ
ಬಂಟರ ಯಾನೆ ನಾಡವರ ಮಾತೃ ಸಂಘದ ಉಪಾಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಮಾತನಾಡಿ ಮಹಿಳಾ ಬಂಟರ ಸಂಘದಲ್ಲಿ ತುಂಬಾ ಪ್ರತಿಭಾವಂತರು, ಸಂಘಟಕರು ಇದ್ದಾರೆ, ಮುಂದಿನ ದಿನಗಳಲ್ಲಿ ತಾಲೂಕು ಮಟ್ಟದ ಬಹೃತ್ ಮಹಿಳಾ ಬಂಟರ ಸಮಾವೇಶವನ್ನು ಆಯೋಜನೆ ಮಾಡಿ ಎಂದು ಸಲಹೆಯನ್ನು ನೀಡಿ, ಮಾತೃ ಸಂಘದಿಂದ ಪೂರ್ಣ ಸಹಕಾರವನ್ನು ಕಾರ್‍ಯಕ್ರಮಕ್ಕೆ ನೀಡುತ್ತೇವೆ ಎಂದರು.

ಮಹಿಳಾ ಸಂಘಟನೆಯನ್ನು ಬಲಿಷ್ಠಗೊಳಿಸಿ- ಶಶಿಕುಮಾರ್ ರೈ
ತಾಲೂಕು ಬಂಟರ ಸಂಘದ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು ಮಾತನಾಡಿ ಮಹಿಳಾ ಬಂಟರ ಸಂಘಟನೆಯನ್ನು ಮತ್ತಷ್ಟು ಬಲಿಷ್ಠಗೊಳಿಸುವಂತೆ ಸಲಹೆಯನ್ನು ನೀಡಿ, ತಾಲೂಕು ಬಂಟರ ಸಂಘದ ವತಿಯಿಂದ ಆ. 13 ರಂದು ಬಂಟರ ಭವನದಲ್ಲಿ ನಡೆಯುವ ಆಟಿಡೊಂಜಿ ದಿನ ಹಾಗೂ ಸಾಧಕರಿಗೆ ಚಿನ್ನದ ಪದಕ ಪುರಸ್ಕಾರಕ್ಕೆ ಕಾರ್‍ಯಕ್ರಮಕ್ಕೆ ಮಹಿಳಾ ಬಂಟರ ಸಂಘದ ಎಲ್ಲರೂ ಪೂರ್ಣ ರೀತಿಯಲ್ಲಿ ಭಾಗವಹಿಸುವಂತೆ ವಿನಂತಿಸಿದರು.

ಮಾದರಿ ಸಂಘಟನೆ- ದಯಾನಂದ ರೈ
ಬಂಟರ ಯಾನೆ ನಾಡವರ ಮಾತೃ ಸಂಘದ ಪುತ್ತೂರು ತಾಲೂಕು ಸಮಿತಿ ಸಂಚಾಲಕ ದಯಾನಂದ ರೈ ಮನವಳಿಕೆಗುತ್ತು ಮಾತನಾಡಿ ತಾಲೂಕು ಮಹಿಳಾ ಬಂಟರ ಸಂಘದ ಕಾರ್‍ಯಚಟುವಟಿಕೆಗಳು ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು

ಮಹಿಳಾ ಬಂಟರ ಸಂಘದಿಂದ ಸಮಾಜಮುಖಿ ಕಾರ್‍ಯ- ಸಬಿತಾ ಭಂಡಾರಿ
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ತಾಲೂಕು ಮಹಿಳಾ ಬಂಟರ ಸಂಘದ ಅಧ್ಯಕ್ಷೆ ಸಬಿತಾ ಭಂಡಾರಿ ಮಾತನಾಡಿ ಸಂಘದಿಂದ ಸಮಾಜಮುಖಿ ಕಾರ್‍ಯವನ್ನು ನಿರಂತರವಾಗಿ ಮಾಡುತ್ತಿದ್ದೇವೆ ಎಂದು ಹೇಳಿದರು.

ಶಾಸಕ ಆಶೋಕ್ ಕುಮಾರ್ ರೈ ಭೇಟಿ
ಆಟಿಕೂಟ ಸಮಾರಂಭಕ್ಕೆ ಶಾಸಕ ಆಶೋಕ್ ಕುಮಾರ್ ರೈ ಭೇಟಿ ನೀಡಿ, ಮಹಿಳಾ ಬಂಟರ ಸಂಘದ ಎಲ್ಲಾ ಕಾರ್‍ಯಚಟುವಟಿಕೆಗಳಿಗೆ ಪೂರ್ಣ ಸಹಕಾರವನ್ನು ನೀಡುವುದಾಗಿ ತಿಳಿಸಿದರು
ವೇದಿಕೆಯಲ್ಲಿ ತಾಲೂಕು ಮಹಿಳಾ ಬಂಟರ ಸಂಘದ ಮಾಜಿ ಅಧ್ಯಕ್ಷರೂ ಆಗಿರುವ, ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್, ಬಂಟರ ಯಾನೆ ನಾಡವರ ಮಾತೃಸಂಘದ ಪುತ್ತೂರು ತಾಲೂಕು ಸಮಿತಿಯ ಸಹಸಂಚಾಲಕ ಜಯಪ್ರಕಾಶ್ ರೈ ನೂಜಿಬೈಲು, ತಾಲೂಕು ಯುವ ಬಂಟರ ಸಂಘದ ಅಧ್ಯಕ್ಷ ಮುಂಡಾಳಗುತ್ತು ಶಶಿರಾಜ್ ರೈ, ತಾಲೂಕು ವಿದ್ಯಾರ್ಥಿ ಬಂಟರ ಸಂಘದ ಅಧ್ಯಕ್ಷ ಪವನ್ ಶೆಟ್ಟಿ ಕಂಬಳತಡ್ಡ ಉಪಸ್ಥಿತರಿದ್ದರು.


ತಾಲೂಕು ಮಹಿಳಾ ಬಂಟರ ಸಂಘದ ಪ್ರಧಾನ ಕಾರ್‍ಯದರ್ಶಿ ಹರಿಣಾಕ್ಷಿ ಜೆ.ಶೆಟ್ಟಿ ಕಾರ್‍ಯಕ್ರಮ ನಿರೂಪಿಸಿ ಮಾತನಾಡಿ ತಾಲೂಕು ಮಹಿಳಾ ಬಂಟರ ಸಂಘದಿಂದ ಆರೋಗ್ಯ ಮತ್ತು ಶಿಕ್ಷಣ ಮಾಹಿತಿ, ವೈದ್ಯಕೀಯ ನೆರವು, ಮದುವೆ, ಮನೆ ನಿರ್ಮಾಣ ಮತ್ತು ಮನೆ ದುರಸ್ತಿ ಕಾರ್‍ಯಕ್ಕೆ ಧನ ಸಹಾಯವನ್ನು ನೀಡಲಾಗಿದೆ ಎಂದರು. ಕೋಶಾಧಿಕಾರಿ ವಾಣಿ ಶೆಟ್ಟಿ ನೆಲ್ಯಾಡಿ ವಂದಿಸಿದರು. ಸಮಾರಂಭದಲ್ಲಿ ಮಹಿಳಾ ಬಂಟರ ಸಂಘದ ಉಪಾಧ್ಯಕ್ಷರುಗಳು, ಪದಾಧಿಕಾರಿಗಳು, ಸದಸ್ಯರು, ಬಂಟರ, ಯುವ ಮತ್ತು ವಿದ್ಯಾರ್ಥಿ ಬಂಟರ ಸಂಘದವರು ಭಾಗವಹಿಸಿದರು.

ಆಟಿಕೂಟಕ್ಕೆ 50 ಬಗೆಯ ತಿನಿಸುಗಳು
ಆಟಿಕೂಟಕ್ಕೆ ರುಚಿಕರವಾದ 50 ಬಗೆಯ ವಿವಿಧ ಬಗೆಯ ತಿನಿಸುಗಳನ್ನು ಸಿದ್ಧಪಡಿಸಲಾಗಿತ್ತು. ಸಂಘದ ಸದಸ್ಯರುಗಳು ನಾನಾ ಬಗೆಯ ಬೇರೆ ಬೇರೆ ತಿನಿಸುಗಳನ್ನು ಮನೆಯಲ್ಲಿಯೇ ತಯಾರಿಸಿ, ತಂದಿದ್ದು, ಸಂಘದ ಸದಸ್ಯರುಗಳ ಏಕತೆಯ ಸಂಕೇತವಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಸಮಾಜಮುಖಿ ಕಾರ್‍ಯಕ್ರಮಗಳನ್ನು ರೂಪಿಸಲಾಗುವುದು.
ಸಬಿತಾ ಭಂಡಾರಿ ಅಧ್ಯಕ್ಷರು ಮಹಿಳಾ ಬಂಟರ ಸಂಘ ಪುತ್ತೂರು

LEAVE A REPLY

Please enter your comment!
Please enter your name here