ನೆಟ್ಟಣಿಗೆ ಮುಡ್ನೂರು ಪ್ರೌಢ ಶಾಲೆಯಲ್ಲಿ ವಿವೇಕ ತರಗತಿ ಕೊಠಡಿ ಉದ್ಘಾಟನೆ

0

ಸರಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣಕ್ಕಾಗಿ ಮೂಲಭೂತ ಸೌಕರ್ಯ ವೃದ್ದಿ: ಅಶೋಕ್ ರೈ


ಪುತ್ತೂರು: ಸರಕಾರಿ ಶಾಲೆಗಳಲ್ಲಿನ ಕೊರತೆಗಳನ್ನು ನೀಗಿಸಿ ಗ್ರಾಮೀಣ ಹಾಗೂ ಬಡ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುವಲ್ಲಿ ಸರಕಾರ ಒತ್ತು ನೀಡಲಿದ್ದು ಇದಕ್ಕಾಗಿ ಕೊರತೆ ಇರುವಲ್ಲಿ ಮೂಲಭೂತ ಸೌಕರ್ಯವನ್ನು ವೃದ್ದಿಸಲಾಗುವುದು ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಹೇಳಿದರು.


ಅವರು ನೆಟ್ಟಣಿಗೆ ಮುಡ್ನೂರು ಸರಕಾರಿ ಪ್ರೌಢ ಶಾಲೆಯಲ್ಲಿ ವಿವೇಕ ತರಗತಿ ಕೊಠಡಿಯನ್ನು ಉದ್ಘಾಟಿಸಿ ಮಾತನಾಡಿದರು. ಶಾಲೆಗಳಲ್ಲಿ ಕೊಠಡಿಯ ಕೊರತೆಯನ್ನು ಬಹುತೇಕ ಪರಿಹರಿಸಲಾಗಿದೆ, ಶಾಲಾ ಪ್ರಾರಂಭದ ವೇಳೆಯೇ ಶಿಕ್ಷಕರ ಕೊರತೆ ಇರುವಲ್ಲಿ ಅತಿಥಿ ಶಿಕ್ಷಕರನ್ನು ನೇಮಿಸಲಾಗಿದೆ. 13500 ಶಿಕ್ಷಕರ ನೇಮಕಾತಿ ಶೀಘ್ರವೇ ಆಗಲಿದ್ದು ನ್ಯಾಯಾಲಯದಲ್ಲಿ ವಿಷಯ ಇತ್ಯರ್ಥವಾದ ಬಳಿಕ ಶಿಕ್ಷಕರ ನೇಮಕಾತಿಗೆ ಸರಕಾರ ಆದೇಶ ಹೊರಡಿಸಲಿದೆ ಎಂದು ಹೇಳಿದರು.

ಸರಕಾರಿ ಶಾಲೆಗಳಲ್ಲಿ ಖಾಸಗಿ ಶಾಲೆಗಳಿಗಿಂತ ಹೆಚ್ಚಿನ ತರಬೇತಿ ಪಡೆದ ಶಿಕ್ಷಕರಿದ್ದಾರೆ ಈ ವಿಚಾರ ಬಹುತೇಕರಿಗೆ ಗೊತ್ತಿಲ್ಲ. ಶಿಕ್ಷಕ ಪದವಿ ಮಾಡಿದ ಬಳಿಕ ಅವರಿಗೆ ಉನ್ನತ ತರಬೇತಿಯನ್ನು ನೀಡುವ ಮೂಲಕ ಅವರನ್ನು ಶಿಕ್ಷಕ ವೃತ್ತಿಗೆ ಕಳುಹಿಸಲಾಗುತ್ತಿದೆ ಇದು ಸರಕಾರಿ ವ್ಯವಸ್ಥೆಯಲ್ಲಿ ಮಾತ್ರ ಕಾಣಲು ಸಾಧ್ಯವಾಗಿದೆ ಎಂದು ಹೇಳಿದರು.

ವಾರದಲ್ಲಿ 20 ಗಂಟೆ ಪ್ರತೀಯೊಬ್ಬ ಶಿಕ್ಷಕನೂ ಕಡ್ಡಾಯವಾಗಿ ಪಾಠ ಮಾಡಬೇಕಿದೆ, ಶಿಕ್ಷಕರ ಕೊರತೆ ಇರುವ ಶಾಲೆಗಳಿಗೆ ತೆರಳಿ ಪ್ರತೀಯೊಬ್ಬ ಶಿಕ್ಷಕನೂ ಪಾಠ ಮಾಡಲು ತಯಾರಿರಬೇಕು ಎಂದು ಹೇಳಿದರು. ಗಡಿಗ್ರಾಮವಾದ ನೆಟ್ಟಣಿಗೆ ಮುಡ್ನೂರು ಪ್ರೌಢ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುತ್ತಿರುವುದು ಆಶಾದಾಯಕವಾಗಿದೆ ಎಂದು ಹೇಳಿದರು.


ಶಾಲೆಯ ಕಾರ್ಯಾಧ್ಯಕ್ಷರಾದ ಶ್ರೀರಾಂ ಪಕ್ಕಳ ಮಾತನಾಡಿ ನೆಟ್ಟಣಿಗೆ ಮುಡ್ನೂರು ಪ್ರೌಢ ಶಾಲೆಗೆ ತಾಲೂಕಿನಲ್ಲಿ ಅತ್ಯಂತ ಹೆಚ್ಚು ಜಮೀನು ಹೊಂದಿದೆ. ಇಲ್ಲಿ ಪ್ರೌಢ ಶಾಲೆಯಲ್ಲಿ ಹೆಚ್ಚಿನ ವಿದ್ಯಾರ್ಥಿಗಳಿದ್ದು ಗಡಿಗ್ರಾಮವಾದ ಈ ಪ್ರದೇಶದಲ್ಲಿ ಪಿಯು ಶಿಕ್ಷಣವನ್ನು ಪ್ರಾರಂಭಿಸುವ ಬಗ್ಗೆ ಮನವಿ ಮಾಡಿದರು.


ವೇದಿಕೆಯಲ್ಲಿ ಕೆಪಿಸಿಸಿ ಸಂಯೋಜಕರಾದ ಕಾವು ಹೇಮನಾಥ ಶೆಟ್ಟಿ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ ಬಿ ವಿಶ್ವನಾಥ ರೈ, ಕಾಂಗ್ರೆಸ್ ಜಿಲ್ಲಾ ವಕ್ತಾರ ಮಹಮ್ಮದ್ ಬಡಗನ್ನೂರು, ನೆಟ್ಟಣಿಗೆ ಮುಡ್ನೂರು ಗ್ರಾಪಂ ಅಧ್ಯಕ್ಷರಾದ ರಮೇಶ್ ರೈ ಸಾಂತ್ಯ, ಜಿಪಂ ಮಾಜಿ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್ ಆರ್, ಗ್ರಾಪಂ ಸದಸ್ಯರುಗಳಾದ ಲಲಿತ ಮೇನಾಲ, ಲಲಿತಾ ಸಾಂತ್ಯ, ಇಂದಿರಾ, ವೆಂಕಪ್ಪ ನಾಯ್ಕ, ಇಬ್ರಾಹಿಂ ,ರಾಮಮೇನಾಲ, ಸುಮಯ್ಯ ಅಝೀಝ್, ಪ್ರದೀಪ್ ರೈ ಕರ್ನೂರು,ಎಸ್‌ಡಿಎಂಸಿ ಸದಸ್ಯರುಗಳಾದ ಅಬ್ದುಲ್ ಖಾದರ್ ಸುರಳಿಮೂಲೆ, ವಿಕ್ರಂ ರೈ ಸಾಂತ್ಯಸೂಪಿ ವಾಟೆಡ್ಕ, ಮಹಮ್ಮದ್ ಪಳ್ಳತ್ತೂರು, ವಲಯ ಕಾಂಗ್ರೆಸ್ ಅಧ್ಯಕ್ಷ ಎನ್ ಮೂಸಾನ್ ,ಅಬೂ ಮೆನಾಲ, ಸುರೇಶ್ ಮೇನಾಲ, ಕೆ ಎಂ ಮೇನಾಲ, ವಿಜಯಾ ರೈ ಕರ್ನೂರು, ನಾರಾಯಣ ನಾಯ್ಕ ನಾಗನಡ್ಕ ಮತ್ತಿತರರು ಉಪಸ್ಥಿತರಿದ್ದರು.ಮುಖ್ಯ ಶಿಕ್ಷಕರಾದ ಪ್ರೇಮ್‌ಕುಮಾರ್ ವಂದಿಸಿದರು.ಶಿಕ್ಷಕರಾರ ಯಶೋಧ, ಪುರುಷೋತ್ತಮ, ಉದಯ, ದೇವಿಪ್ರಕಾಶ್, ಇಂದಿರಾ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here