ಸೌಜನ್ಯ ಪ್ರಕರಣ:ತನಿಖಾಧಿಕಾರಿಗಳನ್ನು ಮಂಪರು ಪರೀಕ್ಷೆಗೊಳಪಡಿಸಿ ನೈಜ ಆರೋಪಿಯನ್ನು ಬಂಧಿಸಿ – ಗೌಡ ಸಂಘದಿಂದ ಸರಕಾರಕ್ಕೆ ಮನವಿ

0

ಪುತ್ತೂರು: ದ.ಕ ಜಿಲ್ಲೆ, ಬೆಳ್ತಂಗಡಿ ತಾಲೂಕು, ಉಜಿರೆಯಲ್ಲಿ 2011ರಲ್ಲಿ ಕಾಲೇಜು ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ ಮತ್ತು ನಂತರ ನಡೆದ ಕೊಲೆ ಪ್ರಕರಣದಲ್ಲಿ ಬಂಧಿತವಾದ ಆರೋಪಿಯನ್ನು ನಿರಪರಾಧಿಯೆಂದು ನ್ಯಾಯಾಲಯವು ಘೋಷಿಸಿದ್ದು, ನೈಜ ಅಪರಾಧಿಗಳು ಯಾರೆಂದು ಇಲ್ಲಿಯವರೆಗೂ ಗೊತ್ತಾಗಿರುವುದಿಲ್ಲ. ಅದುದರಿಂದ ಈ ಪ್ರಕರಣವನ್ನು ಮರು ತನಿಖೆ ನಡೆಸಿ ನೈಜ ಅಪರಾಧಿಯನ್ನು ಪತ್ತೆ ಮಾಡಲು ಪ್ರಕರಣದ ತನಿಖಾಧಿಕಾರಿಯನ್ನು ಮಂಪರು ಪರೀಕ್ಷೆಗೊಳಪಡಿಸಬೇಕೆಂದು ಒತ್ತಾಯಿಸಿ ಒಕ್ಕಲಿಗ ಗೌಡ ಸೇವಾ ಸಂಘದಿಂದ ಆ.14ರಂದು ಪುತ್ತೂರು ಸಹಾಯ ಕಮೀಷನರ್ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿ ಒತ್ತಾಯಿಸಿದೆ.


ಘಟನೆಯ ಕುರಿತು ವಾಸ್ತವಿಕವಾಗಿ ತನಿಖೆಯ ಹಂತದಲ್ಲಿ ಯಾವುದೋ ಒತ್ತಡದಲ್ಲಿ ತನಿಖಾಧಿಕಾರಿಗಳು ಸಾಕ್ಷಿ ಮತ್ತು ದಾಖಲೆಗಳನ್ನು ಒದಗಿಸುವುದರಲ್ಲಿ ಬೇಕಂತಲೇ ಉದ್ದೇಶ ಪೂರ್ವಕವಾಗಿ ತಪ್ಪು ಮಾಡಿರುವುದು ಕಂಡು ಬರುತ್ತದೆ. ಅಲ್ಲದೆ ಒಬ್ಬ ನಿರಪರಾಧಿಯ ಮೇಲೆ ಪ್ರಥಮ ವರ್ತಮಾನ ವರದಿ ಮತ್ತು ದೋಷಾರೋಪಣ ಪಟ್ಟಿ ಸಲ್ಲಿಸಿರುತ್ತಾರೆ. ನಿಜವಾದ ಆರೋಪಿಗಳು ರಾಜಾರೋಷವಾಗಿ ತಿರುಗಾಡುತ್ತಿದ್ದಾರೆ. ಈ ಬಗ್ಗೆ ಮೃತರ ಸಂಬಂಧಿಗಳು ಆರೋಪಿಗಳ ಹೆಸರುಗಳನ್ನು ನೇರವಾಗಿ ಉಲ್ಲೇಖ ಮಾಡಿದರೂ ಅದನ್ನು ಪರಿಗಣನೆಗೆ ತೆಗೆದುಕೊಳ್ಳದೆ ಓರ್ವ ನಿರಪರಾಧಿಯ ಹೆಸರನ್ನು ಸೇರಿಸಿ ಆರೋಪ ಪಟ್ಟಿ ಸಲ್ಲಿಸಿರುತ್ತಾರೆ. ಇದು ಇದೇ ರೀತಿಯಲ್ಲಿ ಮುಂದುವರಿದಲ್ಲಿ ಇಂತಹ ಅಮಾನವೀಯ ಕೃತ್ಯಗಳು ಇನ್ನಷ್ಟು ಆಗುವುದರಲ್ಲಿ ಸಂಶಯವಿಲ್ಲ. ಈ ಪ್ರಕರಣವನ್ನು ಮರು ತನಿಖೆಯನ್ನು ನ್ಯಾಯಾಂಗ ತನಿಖೆಯ ಮೂಲಕ ತನಿಖಾಧಿಕಾರಿಗಳನ್ನು ಮಂಪರು ಪರೀಕ್ಷೆಗೊಳಪಡಿಸಿ ನೈಜ ಆರೋಪಿಗಳನ್ನು ಪತ್ತೆ ಹಚ್ಚಿ ಸೂಕ್ತ ಶಿಕ್ಷೆ ಆಗುವವಂತೆ ಮಾಡಿ ಸಮಾಜದಲ್ಲಿ ಹೆಣ್ಣು ಮಕ್ಕಳು ಗೌರವದಿಂದ ಬದುಕುವ ಹಾಗೆ ಮಾಡಬೇಕಾಗಿ ಮನವಿಯಲ್ಲಿ ಒತ್ತಾಯಿಸಲಾಗಿದೆ. ಒಕ್ಕಲಿಗ ಗೌಡ ಸೇವಾ ಸಂಘದ ಸಲಹಾ ಸಮಿತಿ ಉಪಾಧ್ಯಕ್ಷ ಚಿದಾನಂದ ಬೈಲಾಡಿ, ಲಿಂಗಪ್ಪ ಗೌಡ ತೆಂಕಿಲ, ಸುರೇಶ್ ಗೌಡ ಕಲ್ಲಾರೆ, ಒಕ್ಕಲಿಗ ಸಮುದಾಯ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ಪ್ರವೀಣ್ ಕುಂಟ್ಯಾನ, ಸತೀಶ್ ಪಾಂಬಾರ್, ಒಕ್ಕಲಿಗ ಗೌಡ ಸಮುದಾಯ ಭವನದ ಉಸ್ತವಾರಿ ದಯಾನಂದ ಕೆ ಎಸ್ , ವಸಂತ ವೀರಮಂಗಲ, ಶ್ರೀಧರ್ ಗೌಡ ಕಣಜಾಲು, ರಾಮಕೃಷ್ಣ ಗೌಡ, ತೀರ್ಥರಾಮ ಕೆಡೆಂಜಿ, ಉಮೇಶ್, ಸೂರಪ್ಪ ಗೌಡ, ಮೋಹನ್ ಗೌಡ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here