ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ರೂ.7 ಲಕ್ಷ ಮೌಲ್ಯದ ಪುಂಗನೂರು ತಳಿಯ ಗೋದಾನ ಮಾಡಿದ ಉದ್ಯಮಿ ಮಹೇಶ್‌ ರೆಡ್ಡಿ

0

ಸುಬ್ರಹ್ಮಣ್ಯ : ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ 7 ಲಕ್ಷ ರೂ ಮೌಲ್ಯದ ಪುಂಗನೂರು ತಳಿಯ 4 ಗೋವುಗಳನ್ನು ಕ್ಷೇತ್ರದ ಭಕ್ತ ಹೈದರಾಬಾದ್‌ನ ಎ.ಎಂ.ಆರ್ ಗ್ರೂಪ್‌ನ ಆಡಳಿತ ನಿರ್ದೇಶಕ ಎ.ಮಹೇಶ್ ರೆಡ್ಡಿ ದಾನ ಮಾಡಿದರು.

ದೇವಸ್ಥಾನದ ನಾಗಪ್ರತಿಷ್ಠಾ ಮಂಟಪದ ಬಳಿ ಗೋವುಗಳಿಗೆ ವಿಶೇಷ ಅಲಂಕಾರ ಮಾಡಿ ಪೂಜೆ ನೆರವೇರಿಸಲಾಯಿತು.ಬಳಿಕ ವಿವಿಧ ವೈದಿಕ ವಿಧಿ ವಿಧಾನಗಳ ಮೂಲಕ ಗೋವುಗಳನ್ನು ಶ್ರೀ ದೇವಳಕ್ಕೆ ಹಸ್ತಾಂತರಿಸಲಾಯಿತು.

ಹೈದರಾಬಾದ್ ಮೂಲದ ಉದ್ಯಮಿ ಎ.ಮಹೇಶ್ ರೆಡ್ಡಿಯವರು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಈ ಹಿಂದೆ ಸುಮಾರು ರೂ 27 ಲಕ್ಷದಲ್ಲಿ ಭೋಜನ ಪ್ರಸಾದ ತಯಾರಿಕಾ ಮತ್ತು ಲಾಡು ಪ್ರಸಾದ ತಯಾರಿಕಾ ಯಂತ್ರೋಪಕರಣಗಳನ್ನು, ಷಣ್ಮುಖ ಪ್ರಸಾದ ಭೋಜನ ಶಾಲೆಗೆ ಭೋಜನ ಪ್ರಸಾದ ವಿತರಣೆಯ ಗಾಡಿಗಳನ್ನು ಸೇವಾ ರೂಪದಲ್ಲಿ ಸಮರ್ಪಿಸಿದ್ದರು.

ಶ್ರೀ ದೇವರ ದರುಶನ ಪಡೆದ ದಾನಿಗಳಿಗೆ ದೇವಸ್ಥಾನದ ಅರ್ಚಕರು ಶಾಲು ಹೊದಿಸಿ ಮಹಾ ಪ್ರಸಾದ ನೀಡಿದರು.ದೇವಸ್ಥಾನದ ಆಡಳಿತ ಕಚೇರಿಯಲ್ಲಿ ಉದ್ಯಮಿಗಳನ್ನು ಗೌರವಿಸಿ ಸನ್ಮಾನಿಸಲಾಯಿತು.

ಈ ಸಂದರ್ಭ ಶ್ರೀ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ, ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ, ಸದಸ್ಯರಾದ ಪ್ರಸನ್ನ ದರ್ಬೆ, ಶ್ರೀವತ್ಸ ಬೆಂಗಳೂರು, ಪಿಜಿಎಸ್‌ಎನ್ ಪ್ರಸಾದ್, ಮನೋಹರ ರೈ, ಲೋಕೇಶ್ ಮುಂಡುಕಜೆ, ವನಜಾ.ವಿ.ಭಟ್, ಶೋಭಾ ಗಿರಿಧರ್, ದೇವಳದ ಅಧೀಕ್ಷಕ ಪದ್ಮನಾಭ ಶೆಟ್ಟಿಗಾರ್ ಮೊದಲಾದವರಿದ್ದರು.

LEAVE A REPLY

Please enter your comment!
Please enter your name here