ಶಿರಾಡಿ: ಮೀಸಲು ಅರಣ್ಯದಲ್ಲಿ ಮರಗಳ ಲೂಟಿ-ಹಿರಿಯ ಅಧಿಕಾರಿಗಳು ಸಮಗ್ರ ತನಿಖೆ ನಡೆಸಲಿ-ಆಗ್ರಹ

0

ಉಪ್ಪಿನಂಗಡಿ: ಪಶ್ಚಿಮ ಘಟ್ಟದ ತಪ್ಪಲಿನಲ್ಲಿರುವ ಉಪ್ಪಿನಂಗಡಿ ವಲಯ ವ್ಯಾಪ್ತಿಯಲ್ಲಿ ಬರುವ ಶಿರಾಡಿ, ಶಿಬಾಜೆ ಮೊದಲಾದ ಪ್ರದೇಶದಲ್ಲಿರುವ ಮೀಸಲು ಅರಣ್ಯದಲ್ಲಿ ರಾಜಾರೋಷವಾಗಿ ಮರಗಳ ಮಾರಣಹೋಮವಾಗುತ್ತಿದ್ದು, ಉತ್ತಮ ಜಾತಿಯ ಬೃಹತ್ ಮರಗಳು ಕಳ್ಳರ ಪಾಲಾಗುತ್ತಿರುವ ಬಗ್ಗೆ ಸಾರ್ವಜನಿಕರಿಂದ ವ್ಯಾಪಕ ದೂರುಗಳು ಕೇಳಿ ಬರುತ್ತಿವೆ.
ಶಿರಾಡಿ ರಕ್ಷಿತಾರಣ್ಯದ ಶಿಬಾಜೆ ಸೆಕ್ಷನ್ ವ್ಯಾಪ್ತಿಯಲ್ಲಿರುವ ನೀರಾನದಿಂದ ಕುರುಂಬು, ಅರಂಪಾದೆ ಭೂತಮಜಲುನಿಂದ ಮೇಲಿನ ಕುರುಂಜ ತನಕ, ಪೆರ್ಲದ ಕಲ್ಲಾಜೆಯಿಂದ ಕೊಳಕೆ ಬೈಲು ತನಕ ಸರಕಾರಿ ಮೀಸಲು ಅರಣ್ಯವಿದ್ದು, ಇಲ್ಲಿಂದ ನಿರಂತರವಾಗಿ ಬನ್ಪು, ಬೇಂಗ, ಹೆಬ್ಬಲಸು ಮೊದಲಾದ ಉತ್ತಮ ಜಾತಿಯ ಬೃಹತ್ ಗಾತ್ರದ ಮರಗಳನ್ನು ರಾತ್ರಿ ಬೆಳಗಾಗುವುದರ ಒಳಗಾಗಿ ನೆಲಕ್ಕೆ ಉರುಳಿಸಿ ಸಾಗಾಟ ಮಾಡುತ್ತಿರುವ ಬಗ್ಗೆ ದೂರುಗಳು ಕೇಳಿ ಬರುತ್ತಿವೆ.


ಶಿಬಾಜೆ ಸೆಕ್ಷನ್ ವ್ಯಾಪ್ತಿಯಲ್ಲಿ ಇರುವ ನೀರಾನ ಮತ್ತು ಕುರುಂಬು ಮಧ್ಯೆ ಕೇವಲ 10 ಮೀಟರ್ ಅಂತರದಲ್ಲಿ, ಮುಖ್ಯ ರಸ್ತೆಗೆ ಕಾಣುವಂತಿದ್ದ ಮತ್ತು ಅರಣ್ಯ ಇಲಾಖಾ ಸಿಬ್ಬಂದಿಯೋರ್ವರ ಮನೆಯಿಂದ ಕೂಗಳತೆ ದೂರದಲ್ಲಿ ಬೃಹತ್ ಗಾತ್ರದ 2 ಬೇಂಗದ ಮರಗಳನ್ನು ಕಡಿದು ಹಾಕಿ 7ರಿಂದ 8 ಅಡಿ ಉದ್ದದ ದಿಮ್ಮಿಗಳನ್ನಾಗಿ ಮಾಡಿ ಸಾಗಾಟ ಮಾಡಿರುವ ಕೃತ್ಯದ ಕುರುಹು ಕಂಡು ಬರುತ್ತಿದ್ದು, ಕಾಡಿನೊಳಗೆ ಮರ ಇರುವ ಜಾಗಕ್ಕೆ ರಾತ್ರಿ ಹೊತ್ತಿನಲ್ಲಿ ಟೆಂಪೋ ಮತ್ತು ಮರ ಕೊಯ್ಯುವ ಯಂತ್ರದೊಂದಿಗೆ 4ರಿಂದ 5 ಜನ ಹೋಗಿ ಮರವನ್ನು ಬುಡದಿಂದಲೇ ಉರುಳಿಸಿ ಹಾಕಿ ಬಳಿಕ ಅಲ್ಲೇ ಮರವನ್ನು ತುಂಡು ಮಾಡಿ ದಿಮ್ಮಿಗಳನ್ನಾಗಿ ಮಾಡಿ ಟೆಂಪೋಗೆ ಹಾಕಲಾಗುತ್ತದೆ. ಬೆಳಗಾಗುವುದರ ಒಳಗಾಗಿ ಕಾಡಿನೊಳಗಿದ್ದ ಮರ ಅಲ್ಲಿಂದ ಮಾಯವಾಗಿ ಮಿಲ್ ಸೇರಿಯಾಗಿರುತ್ತದೆ. ಅದರ ರೆಂಬೆ ಕೊಂಬೆಗಳನ್ನು ಅಲ್ಲೇ ಬಿಟ್ಟು ಹೋಗಿ 4 ದಿನಗಳ ಬಳಿಕ ಅದನ್ನು ಕಟ್ಟಿಗೆಯಾಗಿ ಮಾಡಿ ಪಿಕ್‌ಅಪ್ ವಾಹನದಲ್ಲಿ ಸಾಗಾಟ ಮಾಡಲಾಗುತ್ತದೆ. ಆ ಬಳಿಕ ಬುಡಕ್ಕೆ ಪೆಟ್ರೋಲ್ ಸುರಿದು ಅಲ್ಲೇ ಅದನ್ನು ಸುಟ್ಟು ಹಾಕಿ ಕುರುಹು ನಾಶ ಮಾಡಲಾಗುತ್ತದೆ ಎಂದು ಸಾರ್ವಜನಿಕರು ಆರೋಪಿಸುತ್ತಾರೆ.


ಶಿಬಾಜೆ ಸೆಕ್ಷನ್ ವ್ಯಾಪ್ತಿಯಲ್ಲಿರುವ ನೀರಾನದಿಂದ ಕುರುಂಬು, ಅರಂಪಾದೆ ಭೂತಮಜಲುನಿಂದ ಮೇಲಿನ ಕುರುಂಜ ತನಕ, ಪೆರ್ಲದ ಕಲ್ಲಾಜೆಯಿಂದ ಕೊಳಕೆ ಬೈಲು ತನಕ ಸುಮಾರು 5 ಕಿ.ಮೀ. ವ್ಯಾಪ್ತಿಯ ಮೀಸಲು ಅರಣ್ಯದ ಒಳಗಡೆ ಮರಗಳ ಲೂಟಿ ಆಗಿದ್ದು, ಈ ಪ್ರದೇಶ ಇದೀಗ ಬಯಲಿನಂತಾಗಿದೆ. ರಸ್ತೆ ಇರುವ ಭಾಗದಲ್ಲಿ ಅರಣ್ಯದ ಬದಿಯಲ್ಲಿ ಮಾತ್ರ ಮರಗಳು ಕಾಣುತ್ತಿದ್ದು, ಅವುಗಳು ಕೂಡಾ ಯಾವಾಗ ಕಳ್ಳರ ಪಾಲಾಗುತ್ತದೆ ಎಂದು ಹೇಳತೀರದು. ಇಲ್ಲಿ ವ್ಯಾಪಕ ಮರ ಕಳ್ಳತನವಾಗುವುದನ್ನು ಅರಣ್ಯ ಇಲಾಖೆಯ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ಆಗಿಲ್ಲ ಎಂದು ಗ್ರಾಮಸ್ಥರು ಅಸಹಾಯಕತೆಯನ್ನು ವ್ಯಕ್ತಪಡಿಸಿದ್ದಾರೆ.


ರಕ್ಷಣೆ ಮಾಡಬೇಕಾದವರೇ ಲೂಟಿ ಮಾಡುತ್ತಿದ್ದಾರೆಂಬ ಸಂಶಯ
ಅರಣ್ಯ ಸಿಬ್ಬಂದಿಯ ಮನೆಯ ಬಳಿಯಿಂದಲೇ ಮರಗಳನ್ನು ಕಡಿದು ಲೂಟಿ ಮಾಡಿದ್ದಾರೆ. ಹೀಗಿರುವಾಗ ವನಪಾಲಕರು, ಅರಣ್ಯ ಅಧಿಕಾರಿಗಳು ಮರಕಳ್ಳರ ಜೊತೆ ಕೈಜೋಡಿಸಿದ್ದಾರೋ?, ಕಾಡು ರಕ್ಷಣೆ ಮಾಡಬೇಕಾದವರೇ ಇಲ್ಲಿ ಕಾಡನ್ನು ಲೂಟಿ ಮಾಡುತ್ತಿದ್ದಾರೆಯೋ ಎಂಬ ಸಂಶಯ ಮೂಡುತ್ತಿದೆ. ಇನ್ನಾದರೂ ಹಿರಿಯ ಅಧಿಕಾರಿಗಳು ಸಮಗ್ರ ತನಿಖೆ ನಡೆಸಿ ಕಾಡಿನ ಮರ ಲೂಟಿಯನ್ನು ತಡೆಯಬೇಕಿದೆ.
-ಕುರಿಯಕೋಸ್, ಗ್ರಾಮಸ್ಥ

LEAVE A REPLY

Please enter your comment!
Please enter your name here