ನೆಲ್ಯಾಡಿ ಜೇಸಿಐ ‘ಜೇಸಿ ಸಪ್ತಾಹ-2023’ ಸಮಾರೋಪ

0

  • ಜಯಾನಂದ ಬಂಟ್ರಿಯಾಲ್‌ರವರಿಗೆ ಕಮಲಪತ್ರ ಪ್ರಶಸ್ತಿ ಪುರಸ್ಕಾರ
  • ಸಾಧಕರಿಗೆ ಸನ್ಮಾನ

ನೆಲ್ಯಾಡಿ: ನೆಲ್ಯಾಡಿ ಜೇಸಿಐ ‘ಜೇಸಿ ಸಪ್ತಾಹ-2023’ ಸಮಾರೋಪ ಸಮಾರಂಭ ಸೆ.15ರಂದು ನೆಲ್ಯಾಡಿ ಸಂತಜಾರ್ಜ್ ವಿದ್ಯಾ ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು.
ನೆಲ್ಯಾಡಿ ಜೆಸಿಐ ಅಧ್ಯಕ್ಷ ದಯಾಕರ ರೈ ಕೆ.ಯಂ.ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು. ಜೇಸಿಐ ವಲಯ ಉಪಾಧ್ಯಕ್ಷ ದೇವರಾಜ್ ಕುದ್ಪಾಜೆರವರು ಉದ್ಘಾಟಿಸಿ ಮಾತನಾಡಿ, ಜೇಸಿ ಸಂಸ್ಥೆಯು ಒಂದು ವ್ಯಕ್ತಿತ್ವ ವಿಕಸನ ಸಂಸ್ಥೆಯಾಗಿದ್ದು, ಹಲವಾರು ಯುವಕರಿಗೆ ದಾರಿದೀಪವಾಗಿದೆ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿದ್ದ ಪುತ್ತೂರು ವಿದ್ಯಾಮಾತಾ ಅಕಾಡೆಮಿ ಸ್ಥಾಪಕ ಭಾಗ್ಯೇಶ್ ರೈಯವರನ್ನು ಜಿಲ್ಲಾ ಮತ್ತು ರಾಜ್ಯಮಟ್ಟದಲ್ಲಿ ಪಡೆದಿರುವ ಹಲವಾರು ಪ್ರಶಸ್ತಿಗಳಿಗೆ ಘಟಕದ ವತಿಯಿಂದ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಈ ಸನ್ಮಾನವನ್ನು ನಮ್ಮಲ್ಲಿ ತರಬೇತಿ ಪಡೆದು ಭಾರತೀಯ ಸೇನೆಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಅರ್ಪಿಸುತ್ತೇನೆ ಎಂದರು. ಪರೀಕ್ಷೆಗಳಲ್ಲಿ ಫಲಿತಾಂಶ ಬರುವ ಸಂದರ್ಭದಲ್ಲಿ ನಮ್ಮ ಜಿಲ್ಲೆ ಪ್ರಥಮ ಸ್ಥಾನದಲ್ಲಿರುತ್ತದೆ. ಆದರೆ ಉದ್ಯೋಗಕ್ಕೆ ಸಂಬಂಧಿಸಿದ ಪರೀಕ್ಷೆಗಳಲ್ಲಿ ನಮ್ಮ ಜಿಲ್ಲೆಯು ಕೊನೆಯ ಸ್ಥಾನದಲ್ಲಿರುತ್ತದೆ. ಇದಕ್ಕೆ ಮುಖ್ಯ ಕಾರಣ ಇಂತಹ ಪರೀಕ್ಷೆಗಳಿಗೆ ಬರೆಯಲು ತರಬೇತಿಯ ಕೊರತೆ. ಇದಕ್ಕೆ ಸಂಬಂಧಿಸಿದ ತರಬೇತಿಗಳನ್ನು ನಮ್ಮ ಸಂಸ್ಥೆ ನೀಡುತ್ತದೆ ಎಂದರು.

ಇನ್ನೋರ್ವ ಅತಿಥಿ ಜೇಸಿ ವಲಯದ ಕಾರ್ಯಕ್ರಮ ನಿರ್ದೇಶಕಿ ಅಕ್ಷತಾ ಗಿರೀಶ್‌ರವರು ಮಾತನಾಡಿ, ನೆಲ್ಯಾಡಿ ಘಟಕವು ಹಲವಾರು ರೀತಿಯ ತರಬೇತಿ ಕಾರ್ಯಕ್ರಮ ಮತ್ತು ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ವಲಯದಲ್ಲಿ ಗುರುತಿಸಿ ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಏಳು ದಿನಗಳ ಕಾರ್ಯಕ್ರಮಗಳು ಹಲವು ವೈಶಿಷ್ಟತೆಗಳಿಂದ ಮೂಡಿಬಂದು ವಲಯದಲ್ಲಿಯೇ ಈ ಘಟಕ ಗುರುತಿಸಿ ಕೊಂಡಿದೆ ಎಂದರು.

ನೆಲ್ಯಾಡಿಯ ಉದ್ಯಮಿ ಸತೀಶ್ ಕೆ.ಎಸ್.ರವರು ಮಾತನಾಡಿ, ನೆಲ್ಯಾಡಿ ಪರಿಸರದಲ್ಲಿ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುವುದರ ಮೂಲಕ ನೆಲ್ಯಾಡಿ ಜೇಸಿಐ ಘಟಕ ಪ್ರಸಿದ್ಧಿಯನ್ನು ಹೊಂದಿದೆ. ಮುಂದೆ ಈ ಸಂಸ್ಥೆ ಉತ್ತಮವಾಗಿ ಬೆಳೆಯಲಿ ಎಂದು ಹಾರೈಸಿದರು. ನೆಲ್ಯಾಡಿ ಸಂತಜಾರ್ಜ್ ವಿದ್ಯಾಸಂಸ್ಥೆಯ ಸ್ಥಾಪಕ ಕಾರ್ಯದರ್ಶಿ, ನೆಲ್ಯಾಡಿ ಜೇಸಿಐನ ಪೂರ್ವಾಧ್ಯಕ್ಷರೂ ಆದ ಅಬ್ರಹಾಂ ವರ್ಗೀಸ್‌ರವರು ಮಾತನಾಡಿ, ಈ ಘಟಕ 39 ವರ್ಷ ಕಳೆದು ಇದೀಗ 40ನೇ ವರ್ಷದಲ್ಲಿದೆ. ಇದುವರೆಗೆ ಹಲವಾರು ಕಾರ್ಯಕ್ರಮಗಳನ್ನು ಮಾಡಿ ಜನರ ಪ್ರೀತಿಯನ್ನು ಗಳಿಸಿರುವುದು ಶ್ಲಾಘನೀಯ ಎಂದರು.

ಸಾಧಕರಿಗೆ ಸನ್ಮಾನ:
ವಲಯದ ಪಂಚಶ್ರೀ ಪ್ರಶಸ್ತಿಗಳಲ್ಲಿ ಒಂದಾದ ಉದ್ಯೋಗ ರತ್ನ ಪ್ರಶಸ್ತಿಯನ್ನು ಪಡೆದಿರುವ ಘಟಕದ ಪೂರ್ವ ಅಧ್ಯಕ್ಷ ಜಾನ್ ಪಿ.ಎಸ್., ಆರ್ಯಭಟ ಪ್ರಶಸ್ತಿ ಪಡೆದಿರುವ ಸಂತ ಜಾರ್ಜ್ ವಿದ್ಯಾ ಸಂಸ್ಥೆಯ ಉಪನ್ಯಾಸಕ ವಿಶ್ವನಾಥ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.

ಕಮಲಪತ್ರ ಪ್ರಶಸ್ತಿ ಪ್ರದಾನ:
ಘಟಕದ ಶ್ರೇಷ್ಠ ಪ್ರಶಸ್ತಿಗಳಲ್ಲಿ ಒಂದಾದ ಕಮಲ ಪತ್ರ ಪ್ರಶಸ್ತಿಯನ್ನು ಪೂರ್ವಾಧ್ಯಕ್ಷ ಜಯಾನಂದ ಬಂಟ್ರಿಯಾಲ್‌ರವರಿಗೆ ನೀಡಿ ಗೌರವಿಸಲಾಯಿತು. ಅತಿಥಿಗಳ ಪರಿಚಯವನ್ನು ಜೇಸಿ ಪೂರ್ವ ಅಧ್ಯಕ್ಷರಾದ ದಯಾನಂದ ಆದರ್ಶ, ರವಿಚಂದ್ರ ಹೊಸವಕ್ಲು, ಪುರಂದರ ಗೌಡ, ನಾರಾಯಣ ಎನ್ ಬಲ್ಯ, ಶಿವಪ್ರಸಾದ್, ಜಯಾನಂದ ಬಂಟ್ರಿಯಾಲ್, ರಶ್ಮಾ ದಯಾಕರ ರೈ ಮಾಡಿದರು. ನಿರ್ದೇಶಕ ವಿನ್ಯಾಸ್ ವರದಿ ವಾಚಿಸಿದರು ಸುಪ್ರೀತಾ ರವಿಚಂದ್ರರವರು ಜೇಸಿ ವಾಣಿ ವಾಚಿಸಿದರು. ಕಾರ್ಯದರ್ಶಿ ಸುಚಿತ್ರಾ ಬಂಟ್ರಿಯಾಲ್ ವಂದಿಸಿದರು.

LEAVE A REPLY

Please enter your comment!
Please enter your name here