![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ರೂ.8.53 ಲಕ್ಷ ನಿವ್ವಳ ಲಾಭ | 15% ಡಿವಿಡೆಂಡ್ | ಓರ್ವರಿಗೆ ಸನ್ಮಾನ
![](https://puttur.suddinews.com/wp-content/uploads/2023/09/474826b0-ef32-4267-8b43-893af4c676ed.jpg)
![](https://puttur.suddinews.com/wp-content/uploads/2023/09/57d94e1e-e283-4766-918d-48dc47f209c3.jpg)
ಪುತ್ತೂರು: ಪುರುಷರಕಟ್ಟೆ ಶಿವಕೃಪ ಕಟ್ಟಡದಲ್ಲಿ ವ್ಯವಹರಿಸುತ್ತಿರುವ ಮೂರ್ತೆದಾರರ ಸೇವಾ ಸಹಕಾರಿ ಸಂಘ ನರಿಮೊಗರು ಇದರ 2022-23ನೇ ಸಾಲಿನ ವಾರ್ಷಿಕ ಮಹಾಸಭೆಯು ಸೆ.23 ರಂದು ಅಪರಾಹ್ನ ನರಿಮೊಗರು ಸೇವಾ ಸಹಕಾರಿ ಬ್ಯಾಂಕಿನ ರೈತ ಭವನ ಸಭಾಂಗಣದಲ್ಲಿ ಅಧ್ಯಕ್ಷ ವಿಜಯಕುಮಾರ್ ಸೊರಕೆಯವರ ಅಧ್ಯಕ್ಷತೆಯಲ್ಲಿ ನಡೆಯಿತು.
ಅಧ್ಯಕ್ಷತೆ ವಹಿಸಿದ ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ವಿಜಯಕುಮಾರ್ ಸೊರಕೆಯವರು ಮಾತನಾಡಿ, ಅವಿಭಜಿತ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ನಡೆದಂತಹ ಹೋರಾಟದ ಫಲವಾಗಿ ಇಂದು ಮೂರ್ತೆದಾರರ ಸೇವಾ ಸಹಕಾರಿ ಸಂಘ ಉಳಿದು ನಿಂತಿದೆ. ಪುತ್ತೂರು ತಾಲೂಕಿನಲ್ಲಿ ಕಾರ್ಯಾಚರಿಸುತ್ತಿರುವ ಐದು ಸೊಸೈಟಿಗಳು ಬ್ಯಾಂಕಿಂಗ್ ವ್ಯವಹಾರದೊಂದಿಗೆ ಗುಣಮಟ್ಟದ ಸೇವೆಯನ್ನು ಸರಿಯಾದ ರೀತಿಯಲ್ಲಿ ಒದಗಿಸುತ್ತಿದೆ. ನಮ್ಮಲ್ಲಿ ಠೇವಣಿಯ ಮೇಲೆ ಬಡ್ಡಿದರ ಜಾಸ್ತಿ ನೀಡೋದ್ರಿಂದ ಪ್ರತೀ ಬಿಲ್ಲವರು ನಮ್ಮ ಬ್ಯಾಂಕಿನಲ್ಲಿ ಸದಸ್ಯರಾಗುವ ಮೂಲಕ ಬ್ಯಾಂಕಿನ ಪ್ರಗತಿಗೆ ಸಾಕ್ಷಿದಾರರಾಗಬೇಕು. ಮೂರ್ತೆದಾರಿಕೆ ಕಡಿಮೆಯಾದರೂ ಮೂರ್ತೆದಾರಿಕೆ ವೃತ್ತಿ ಮಾಡುತ್ತಿದ್ದ ಕುಟುಂಬಕ್ಕೆ ಸಾಲ ಸೌಲಭ್ಯಗಳನ್ನು ನೀಡುವ ಸಲುವಾಗಿ ಸಾಲದಲ್ಲಿ ಹೆಚ್ಚಳ ಮಾಡಿದ್ದೇವೆ ಎಂದು ಹೇಳಿ ಸರ್ವರ ಸಹಕಾರ ಕೋರಿದರು.
ಮುಖ್ಯ ಅತಿಥಿ, ಪುತ್ತೂರು ಬಿಲ್ಲವ ಸಂಘದ ಅಧ್ಯಕ್ಷ ಹಾಗೂ ನರಿಮೊಗರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ನಿರ್ದೇಶಕರೂ ಆಗಿರುವ ಸತೀಶ್ ಕುಮಾರ್ ಕೆಡೆಂಜಿರವರು ಮಾತನಾಡಿ, ಮೂರ್ತೆದಾರರ ಸೇವಾ ಸಹಕಾರಿ ಸಂಘ ನರಿಮೊಗರು ವರ್ಷದಿಂದ ವರ್ಷಕ್ಕೆ ಅಭಿವೃದ್ಧಿಯಾಗುತ್ತಲಿದೆ. ಸಂಘವು ಇಂದು ಈ ಹಂತಕ್ಕೆ ಬರಬೇಕಾದರೆ ಸಾಕಷ್ಟು ಎಡರು-ತೊಡರುಗಳನ್ನು ದಾಟಿ ಬಂದಿರುತ್ತದೆ. ಹಿಂದೆ ಮೂರ್ತೆದಾರಿಕೆ ವ್ಯವಸ್ಥೆ ಬಗ್ಗೆ ಸಾಕಷ್ಟು ಪ್ರತಿಭಟನೆ ನಡೆದಿದ್ದ ಸಂಸರ್ಭದಲ್ಲಿ ಅಂದಿನ ಮುಖ್ಯಮಂತ್ರಿ ಎಸ್.ಬಂಗಾರಪ್ಪರವರು ನಮ್ಮ ಸಮುದಾಯದ ಪರ ನಿಂತು ಕೆಲಸ ಮಾಡಿರುತ್ತಾರೆ. ಅಂದು ಬಿಲ್ಲವ ಸಂಘದ ಅಧ್ಯಕ್ಷರಾಗಿದ್ದ ವಿಜಯಕುಮಾರ್ ಸೊರಕೆಯವರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾಗಿ ಸಂಘವನ್ನು ಅಭಿವೃದ್ಧಿಪಥದಲ್ಲಿ ಮುನ್ನೆಡಿಸಿದ್ದಾರೆ. ಬಿಲ್ಲವ ಬಾಂಧವರು ತಮ್ಮ ಠೇವಣಿಗಳನ್ನು ರಾಷ್ಟ್ರೀಕೃತ ಬ್ಯಾಂಕ್ಗಳಿಗಿಂತ ನಮ್ಮ ಸೊಸೈಟಿಗಳಲ್ಲಿ ತೊಡಗಿಸಿಕೊಳ್ಳುವಂತಾಗಲಿ ಎಂದು ಹೇಳಿ ಶುಭ ಹಾರೈಸಿದರು.
ರೂ.8.53 ಲಕ್ಷ ನಿವ್ವಳ ಲಾಭ, 15% ಡಿವಿಡೆಂಡ್:
ವರದಿ ಸಾಲಿನಲ್ಲಿ ‘ಎ’ ತರಗತಿಯ 106 ಮಂದಿ ಸದಸ್ಯರು ಸೇರ್ಪಡೆಗೊಂಡು ವರ್ಷಾಂತ್ಯಕ್ಕೆ ಒಟ್ಟು 538 ಮಂದಿ ಸದಸ್ಯರಿದ್ದು ರೂ,7,63,954 ಪಾವತಿಯಾದ ಪಾಲುಧನ, ‘ಬಿ’ ತರಗತಿಯ ರೂ,10000, ‘ಸಿ’ ತರಗತಿಯ ರೂ.6,09,150 ಪಾಲುಧನ ಇರುತ್ತದೆ. ಸದಸ್ಯರಿಂದ ಉಳಿತಾಯ ಖಾತೆ, ನಿರಖು ಠೇವಣಿ, ದೈನಿಕ ಠೇವಣಿ ಮತ್ತು ನಗದು ಪತ್ರಗಳ ಮೂಲಕ ವರದಿ ವರ್ಷದಲ್ಲಿ ರೂ,9,83,23,008ನ್ನು ಸಂಗ್ರಹಿಸಲಾಗಿದೆ. ವರದಿ ಸಾಲಿನಲ್ಲಿ ರೂ,8,53,563.81 ನಿವ್ವಳ ಲಾಭ ಗಳಿಸಿದ್ದು, ಶೇ.15 ಡಿವಿಡೆಂಡ್ನ್ನು ನೀಡಲಾಗುತ್ತದೆ ಎಂದು ಅಧ್ಯಕ್ಷ ವಿಜಯಕುಮಾರ್ ಸೊರಕೆಯವರು ಘೋಷಣೆ ಮಾಡಿದರು.
ಸಂಘದ ಕಾರ್ಯಕ್ಷೇತ್ರ:
ಸಂಘದ ಕಾರ್ಯಕ್ಷೇತ್ರವು ಪುತ್ತೂರು ತಾಲೂಕಿನ ನರಿಮೊಗರು, ಶಾಂತಿಗೋಡು, ಮುಂಡೂರು, ಕೆಮ್ಮಿಂಜೆ, ಸರ್ವೆ ಹಾಗೂ ಕಡಬ ತಾಲೂಕಿನ ಸವಣೂರು, ಪುಂಚಪ್ಪಾಡಿ, ಕುದ್ಮಾರು, ಕಾಮಣ, ಬೆಳಂದೂರು, ಕಾಣಿಯೂರು, ಚಾರ್ವಾಕ ಮತ್ತು ದೋಲ್ಪಾಡಿ ಗ್ರಾಮಗಳನ್ನು ಒಳಗೊಂಡಿದೆ.
ಸನ್ಮಾನ/ಪ್ರೋತ್ಸಾಹಧನ ವಿತರಣೆ:
ಮೂರ್ತೆ ಕಸುಬುದಾರಿಕೆಯಲ್ಲಿ ಸೇವೆ ನೀಡಿ ನಿವೃತ್ತಿ ಹೊಂದಿರುವ ಹಿರಿಯರಾದ ಧರ್ಣಪ್ಪ ಪೂಜಾರಿ ಮುಂಡೋಡಿರವರನ್ನು ಈ ಸಂದರ್ಭದಲ್ಲಿ ಗುರುತಿಸಿ ಸನ್ಮಾನಿಸಲಾಯಿತು. ಅಲ್ಲದೆ ಸಂಘದ ಕಾರ್ಯವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಸಕ್ತ ಮೂರ್ತೆದಾರರಾದ ಸಂಘದ ನಿರ್ದೇಶಕ ಕಾಣಿಯೂರು ಕೇಂದ್ರದ ಆನಂದ ಪೂಜಾರಿ ಮತ್ತು ಗಂಗಾಧರ ಪೂಜಾರಿ, ಶಾಂತಿಗೋಡು ಕೇಂದ್ರದ ಶೀನಪ್ಪ ಪೂಜಾರಿ, ಪುಂಚಪ್ಪಾಡಿ ಕೇಂದ್ರದ ರಾಧಾಕೃಷ್ಣ ಪೂಜಾರಿರವರಿಗೆ ಪ್ರೋತ್ಸಾಹಧನವನ್ನು ವಿತರಿಸಲಾಯಿತು.
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅಭಿನಂದನೆ:
ಈ ಸಂದರ್ಭದಲ್ಲಿ ಎಸೆಸ್ಸೆಲ್ಸಿಯಲ್ಲಿ ಡಿಸ್ಟಿಂಕ್ಷನ್ ಗಳಿಸಿದ ವಿದ್ಯಾರ್ಥಿಗಳಾದ ಅಶ್ಮಿತಾ ಎ, ನಿಶಾ, ವರ್ಷಾ ಬಿ, ರಜತ ಕೆ, ಪಿಯುಸಿಯಲ್ಲಿ ಪಿ.ಪಿ ಸಪ್ತಮಿ, ಅಕ್ಷಿತಾ ಕೆರವರನ್ನು ಗುರುತಿಸಿ ಪ್ರೋತ್ಸಾಹಧನದೊಂದಿಗೆ ಅಭಿನಂದಿಸಲಾಯಿತು.
ಸAಘದ ಉಪಾಧ್ಯಕ್ಷ ಕೆ.ಪದ್ಮನಾಭ ಪೂಜಾರಿ ಬೆದ್ರಾಳ, ನಿರ್ದೇಶಕರಾದ ನಾಗರಾಜ ಪೂಜಾರಿ ದೋಳ, ಅಣ್ಣಿ ಪೂಜಾರಿ ಎಚ್ ಹಿಂದಾರು, ಹೊನ್ನಪ್ಪ ಪೂಜಾರಿ ಕುರೆಮಜಲು, ಪದ್ಮಾವತಿ ಮುಂಡೋಡಿ, ಸುಜಾತ ಮರಕ್ಕೂರು, ಸಂಘದ ಗೌರವ ಸಲಹೆಗಾರ ಸಂತೋಷ್ ಕುಮಾರ್ ಮರಕ್ಕಡರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘದ ನಿರ್ದೇಶಕಿ ಪದ್ಮಾವತಿ ಮುಂಡೋಡಿ ಹಾಗೂ ವಿಮಲ ಕಲ್ಲರ್ಪೆರವರು ಪ್ರಾರ್ಥಿಸಿದರು. ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಶನ್ ಎಂ.ರವರು ಜಮಾ ಖರ್ಚಿನ ತಃಖ್ತೆ, ಲಾಭ ನಷ್ಟದ ತಃಖ್ತೆ, ಆಸ್ತಿ ಮತ್ತು ಜವಾಬ್ದಾರಿ ತಃಖ್ತೆ, ಅಂದಾಜು ಬಜೆಟ್(ಆಯ-ವ್ಯಯ) ತಃಖ್ತೆಯನ್ನು ಓದಿದರು. ಶಾಖಾ ವ್ಯವಸ್ಥಾಪಕಿ ಶ್ರೀಮತಿ ಶೃತಿ ವರದಿ ಮಂಡಿಸಿದರು. ಸಂಘದ ಮಾಜಿ ಉಪಾಧ್ಯಕ್ಷ ವೇದನಾಥ ಸುವರ್ಣ, ಆನಂದ ಪೂಜಾರಿ, ಬಿ.ಟಿ ಮಹೇಶ್ಚಂದ್ರ ಸಾಲಿಯಾನ್, ಮಾಧವ ಸಾಲಿಯಾನ್, ಹೊನ್ನಪ್ಪ ಪೂಜಾರಿ ಕೈಂದಾಡಿರವರು ಸಲಹೆ ಸೂಚನೆಯನ್ನು ನೀಡಿದರು. ಸಂಘದ ನಿರ್ದೇಶಕ ಉದಯಕುಮಾರ್ ಕೋಲಾಡಿ ಸ್ವಾಗತಿಸಿ, ಸಂತೋಷ್ ಕುಮಾರ್ ಮರಕ್ಕೂರು ವಂದಿಸಿದರು. ಸಿಬ್ಬಂದಿಗಳಾದ ರಮ್ಯಶ್ರೀ ಕೆ, ರೂಪಿಕಾ ಕೆ, ಚಂದ್ರಶೇಖರ ಕುರೆಮಜಲು, ಕಿರಣ್ ಕೋಡಿಬೈಲು, ಜನಾರ್ದನ ಆಚಾರ್ಯ, ದಾಮೋದರ ಆಚಾರ್ಯರವರು ಸಹಕರಿಸಿದರು.
ಕೆಮ್ಮಿಂಜೆ, ಮುಂಡೂರು, ಕಾಣಿಯೂರು ಶಾಖೆ ತೆರೆಯಲು ಚಿಂತನೆ…
ಗ್ರಾಹಕರ ವ್ಯವಹಾರಕ್ಕೆ ಅನುಕೂಲವಾಗುವಂತೆ ಸವಣೂರಿನ ಅಶ್ವಿನಿ ಕಾಂಪ್ಲೆಕ್ಸ್ನಲ್ಲಿ ಈಗಾಗಲೇ ಪೂರ್ಣಪ್ರಮಾಣದ ಶಾಖೆಯು ಲೋಕಾರ್ಪಣೆಗೊಂಡಿರುತ್ತದೆ. ಅಂದಿನಿಂದ 2022-23ನೇ ಸಾಲಿನಲ್ಲಿ ಒಟ್ಟು ರೂ.6,45,02,646 ವ್ಯವಹಾರ ನಡೆಸಿದ್ದು ಗ್ರಾಹಕರಿಗೆ ಎಲ್ಲಾ ರೀತಿಯ ಸಾಲ ಸೌಲಭ್ಯವನ್ನು ಒದಗಿಸಲಾಗಿದೆ. ಠಸ್ಸೆ ಪೇಪರ್ ವಿಸ್ತರಣಾ ಕೇಂದ್ರ, ಸಂದೇಶ ರವಾನೆ, ನೆಫ್ಟ್/ಆರ್ಟಿಜಿಎಸ್ ವ್ಯವಸ್ಥೆಗಳನ್ನು ಮಾಡಲಾಗಿದೆ. ಭದ್ರತೆಗಾಗಿ ಸಿ.ಸಿ ಟಿವಿ, ಸೈರನ್ ಅಳವಡಿಸಲಾಗಿದೆ. ಶೀಘ್ರವೇ ಕೆಮ್ಮಿಂಜೆ, ಮುಂಡೂರು, ಕಾಣಿಯೂರು ವ್ಯಾಪ್ತಿಯಲ್ಲಿ ಶಾಖೆಯನ್ನು ತೆರೆಯುವುದಾಗಿ ಆಡಳಿತ ಮಂಡಳಿ ಸಭೆಯಲ್ಲಿ ಸಮಾಲೋಚಿಸಲಾಗಿದೆ.
-ವಿಜಯಕುಮಾರ್ ಸೊರಕೆ,
ಅಧ್ಯಕ್ಷರು, ನರಿಮೊಗರು ಮೂರ್ತೆದಾರರ ಸೇವಾ ಸಹಕಾರಿ ಸಂಘ
ಸಾಲ ಸೌಲಭ್ಯಗಳು..
*ಆಭರಣ ಈಡಿನ ಸಾಲ(3/6 ತಿಂಗಳು, 1 ವರ್ಷದ ಅವಧಿಗೆ)
*ಠೇವಣಿ ಸಾಲ, ಪಿಗ್ಮಿ ಆಧಾರಿತ ಸಾಲ, ವಾಹನ ಸಾಲ,
*ಇತರ ಉದ್ಧೇಶದ ಸಾಲ, ಮೂರ್ತೆಗಾರಿಕೆ ಸಾಲ
*ಜಾಮೀನು ಸಾಲ, ಸ್ವ-ಸಹಾಯ ಸಂಘ ಗುಂಪು ಸಾಲ
*ವೇತನಾಧಾರಿತ ಸಾಲ
ಠೇವಣಿ ಸೌಲಭ್ಯಗಳು…
*ಉಳಿತಾಯ ಖಾತೆ, ನಿರಖು ಠೇವಣಿ, ದೈನಿಕ ಠೇವಣಿ,
*ಶುಭಲಾಭ ನಗದು ಪತ್ರ(7.50 ವರ್ಷದಲ್ಲಿ ದ್ವಿಗುಣ)
*ಆವರ್ತನ ಠೇವಣಿ(ಆರ್.ಡಿ)
–ಭಾರತದಾದ್ಯಂತ ಆರ್ಟಿಜಿಎಸ್/ನೆಫ್ಟ್ ಸೌಲಭ್ಯ
–ಠೇವಣಿಗಳಿಗೆ ಆಕರ್ಷಕ ಬಡ್ಡಿದರ
–ಹಿರಿಯ ನಾಗರಿಕರಿಗೆ/ಸಂಘ-ಸಂಸ್ಥೆಗಳಿಗೆ/ಸೈನಿಕರಿಗೆ/
–ನಿವೃತ್ತ ಸೈನಿಕರಿಗೆ ಶೇ.0.50 ಹೆಚ್ಚುವರಿ ಬಡ್ಡಿ