ತಿಂಗಳಾಡಿ: ಒಟಿಪಿ ಹೇಳಿ ಲಕ್ಷ ರೂಪಾಯಿ ಕಳೆದುಕೊಂಡ ಕೂಲಿ ಕಾರ್ಮಿಕ

0

ಪುತ್ತೂರು: ಮೊಬೈಲ್‌ಗೆ ಕರೆ ಮಾಡಿದ ವ್ಯಕ್ತಿಗೆ ಒಟಿಪಿ ಹೇಳಿದ ಕೂಲಿಕಾರ್ಮಿಕರೋರ್ವರು ತನ್ನ ಅಕೌಂಟ್‌ನಲ್ಲಿದ್ದ 1 ಲಕ್ಷ ರೂಪಾಯಿಯನ್ನು ಕಳೆದುಕೊಂಡ ಘಟನೆ ತಿಂಗಳಾಡಿಯಿಂದ ವರದಿಯಾಗಿದೆ. ತಿಂಗಳಾಡಿಯ ಕೂಲಿ ಕಾರ್ಮಿಕ ವ್ಯಕ್ತಿಯೊಬ್ಬರಿಗೆ ಸೆ.30ರಂದು ಬೆಳಿಗ್ಗೆ ತನ್ನ ಮೊಬೈಲ್‌ಗೆ ಮೆಸೇಜ್‌ವೊಂದು ಬಂದಿದ್ದು ಅದರಲ್ಲಿ ನೀವು ನಿಮ್ಮ ಅಕೌಂಟ್ ನಂಬರ್‌ಗೆ ತಕ್ಷಣವೇ ಕೆವೈಸಿ ಮಾಡಬೇಕು ಎಂದು ಬರೆದು ಅದರ ಕೆಳಗೆ ಕೆನರಾ ಬ್ಯಾಂಕ್ ಎಂದು ಬರೆಯಲಾಗಿತ್ತು. ಈ ಬಗ್ಗೆ ಅವರು ತನ್ನ ಮಗನಲ್ಲಿ ವಿಚಾರಿಸಿದಾಗ ಮಗ ನೀವು ಕೆವೈಸಿ ಮಾಡುವುದಾದರೆ ಬ್ಯಾಂಕ್‌ಗೆ ಹೋಗಿ ಅಲ್ಲಿ ಅವರು ಕೆವೈಸಿ ಮಾಡಿಕೊಡುತ್ತಾರೆ ಎಂದು ಹೇಳಿದ್ದರು. ಮಧ್ಯಾಹ್ನ ವೇಳೆಗೆ ಮೊಬೈಲ್‌ಗೆ ಕರೆಯೊಂದು ಬಂದಿದ್ದು ಕರೆ ಸ್ವೀಕರಿಸಿದಾಗ ಆ ಕಡೆಯಿಂದ ಕನ್ನಡದಲ್ಲಿ ಮಾತನಾಡಿದ ವ್ಯಕ್ತಿಯೊಬ್ಬ ನಿಮ್ಮ ಅಕೌಂಟ್ ನಂಬರ್ ಇದೆ ಅಲ್ವಾ ಎಂದು ಅಕೌಂಟ್ ನಂಬರ್ ಹೇಳಿದ ಆಗ ಕೂಲಿ ಕಾರ್ಮಿಕ ವ್ಯಕ್ತಿ ಹೌದು ಎಂದು ಹೇಳಿದ್ದರು. ಬಳಿಕ ನಿಮ್ಮ ಹೆಸರು ಹೀಗೆ ಅಲ್ವಾ ಎಂದು ಕೇಳಿದ್ದ ಎಲ್ಲದ್ದಕ್ಕೂ ಹೌದು ಎಂದ ಕೂಲಿಕಾರ್ಮಿಕರಿಗೆ ನಿಮ್ಮ ಮೊಬೈಲ್‌ಗೆ ಒಟಿಪಿಯೊಂದು ಬಂದಿದೆ , ಅದನ್ನು ಹೇಳಿ ಎಂದು ಹೇಳಿದ್ದ ಒಟಿಪಿ ಹೇಳಿದ ತಕ್ಷಣವೇ ಕರೆ ಕಡಿತ ಮಾಡಿದ್ದ ಬಳಿಕ ನೋಡಿದಾಗ ಕೆನರಾ ಬ್ಯಾಂಕ್‌ನ ಅವರ ಅಕೌಂಟ್‌ನಲ್ಲಿದ್ದ 1 ಲಕ್ಷ ರೂಪಾಯಿ ಡ್ರಾ ಆಗಿರುವ ವಿಚಾರ ಬೆಳಕಿಗೆ ಬಂದಿದೆ.
ಸಾಲ ಮಾಡಿಟ್ಟ ಹಣ ಕಳ್ಳರ ಪಾಲು
ಹಣ ಕಳೆದುಕೊಂಡು ವ್ಯಕ್ತಿಯು ಕೂಲಿ ಕಾರ್ಮಿಕನಾಗಿದ್ದು, ಅಲ್ಪಸ್ವಲ್ಪ ಕೂಡಿಟ್ಟ ಹಣ ಅಲ್ಲದೆ ಇತ್ತೀಚೆಗೆ ಸಾಲವಾಗಿ ಹಣ ಪಡೆದಿದ್ದರು ಎನ್ನಲಾಗಿದೆ. ಇದೆಲ್ಲವನ್ನು ಕೆನರಾ ಬ್ಯಾಂಕ್‌ನಲ್ಲಿ ಅಕೌಂಟ್‌ನಲ್ಲಿ ಇಟ್ಟಿದ್ದರು ಇದೀಗ ಅಕೌಂಟ್‌ನಲ್ಲಿದ್ದ 1 ಲಕ್ಷ ರೂಪಾಯಿ ಕೂಡ ಕಳ್ಳರ ಪಾಲಾಗಿದೆ.
1930 ಗೆ ದೂರು
ಸೈಬರ್ ಪ್ರಕರಣಗಳಿಗೆ ಸಂಬಂಧಿಸಿದಂತೆ1930 ಗೆ ಕರೆ ಮಾಡಿ ದೂರು ನೀಡಬಹುದಾಗಿದ್ದು ಅದರಂತೆ ಹಣ ಕಳೆದುಕೊಂಡ ವ್ಯಕ್ತಿಯು 1930 ಗೆ ಕರೆ ಮಾಡಿ ದಾಖಲೆಗಳನ್ನು ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.

ಯಾರಿಗೂ ಒಟಿಪಿ ಹೇಳಬೇಡಿ
ಮೋಸ ಹೋಗುವವರು ಇರುವ ತನಕ ಮೋಸ ಮಾಡುವವರು ಇದ್ದೇ ಇರುತ್ತಾರೆ ಆದ್ದರಿಂದ ನಾವು ಅತ್ಯಂತ ಜಾಗರೂಕತೆಯಿಂದ ಇರಬೇಕಾಗುತ್ತದೆ. ಈ ರೀತಿಯ ಮೋಸ, ವಂಚನೆಗಳು ಕಳೆದ ಹಲವು ವರ್ಷಗಳಿಂದ ನಡೆಯುತ್ತಲೇ ಬಂದಿದೆ. ಆದ್ದರಿಂದ ಅಪರಿಚಿತ ವ್ಯಕ್ತಿಗಳೊಂದಿಗೆ ನಮ್ಮ ವೈಯುಕ್ತಿಕ ವಿಚಾರಗಳನ್ನು ಹಂಚಿಕೊಳ್ಳುವುದು, ಬ್ಯಾಂಕ್ ವ್ಯವಹಾರಗಳ ಬಗ್ಗೆ ಮಾಹಿತಿ ನೀಡುವುದು ಸರಿಯಲ್ಲ. ಕರೆ ಮಾಡಿ ಒಟಿಪಿ ಕೇಳಿದರೆ ಹೇಳಬೇಡಿ ಎಂದು ಸೈಬರ್ ಪೊಲೀಸರು ಪದೇ ಪದೇ ಎಚ್ಚರಿಸುತ್ತಲೇ ಇದ್ದಾರೆ. ಹೀಗಿದ್ದರೂ ಮೋಸ ನಡೆಯುತ್ತಲೇ ಇದೆ ಎನ್ನುವುದೇ ದುರಂತ.

LEAVE A REPLY

Please enter your comment!
Please enter your name here