ಪರ್ಪುಂಜ ಸ.ಹಿ.ಪ್ರಾ.ಶಾಲೆಯಲ್ಲಿ ವಿವೇಕ ಕೊಠಡಿ ಉದ್ಘಾಟನೆ, ಸನ್ಮಾನ

0

ಶಾಲೆಗಳನ್ನು ವಿಲೀನಗೊಳಿಸುವುದರಿಂದ ಗುಣಮಟ್ಟದ ಶಿಕ್ಷಣ ಸಾಧ್ಯ: ಅಶೋಕ್ ರೈ

ಪುತ್ತೂರು: ತಮ್ಮ ಪ್ರತಿಷ್ಠೆಗೋಸ್ಕರ ಅಲ್ಲೊಂದು ಶಾಲೆ, ಇಲ್ಲೊಂದು ಶಾಲೆ ಕಟ್ಟುವುದರಿಂದ ಯಾವುದೇ ಪ್ರಯೋಜನವಿಲ್ಲ ಇದರಿಂದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಕೊಡಲು ಸಾಧ್ಯವಿಲ್ಲ, ಇರುವ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡುವ ಕೆಲಸ ಆಗಬೇಕಾಗಿದೆ. ಆದಕ್ಕಾಗಿ ಈಗ ಇರುವ ಶಾಲೆಗಳನ್ನು ವಿಲೀನ ಮಾಡುವ ಮೂಲಕ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ನಿಟ್ಟಿನಲ್ಲಿ ಸರಕಾರ ಕೂಡ ಚಿಂತನೆ ಮಾಡುತ್ತಿದೆ. ಇದಲ್ಲದೆ ವಿದ್ಯಾರ್ಥಿಗಳನ್ನು ಸರಕಾರಿ ಶಾಲೆಗಳಿಗೆ ಕರೆದುಕೊಂಡು ಹೋಗಲು ಬಸ್ಸಿನ ವ್ಯವಸ್ಥೆಯನ್ನು ಮಾಡುವ ಬಗ್ಗೆಯೂ ಸರಕಾರ ಚಿಂತನೆ ನಡೆಸಿದೆ ಎಂದು ಶಾಸಕ ಅಶೋಕ್ ಕುಮಾರ್ ರೈಯವರು ಹೇಳಿದರು.

ಅವರು ಅ.3 ರಂದು ಶಾಲಾ ಶಿಕ್ಷಣ ಮತ್ತು ಸಾಕ್ಷಾರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿ ಪುತ್ತೂರು ಇದರ ವತಿಯಿಂದ ಪರ್ಪುಂಜ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿವೇಕ ತರಗತಿ ಕೊಠಡಿ ಉದ್ಘಾಟಿಸಿ ಮಾತನಾಡಿದರು. ಪೋಷಕರಿಗೆ ತಮ್ಮ ಮಗು ಖಾಸಗಿ ಶಾಲೆ ಅದರಲ್ಲೂ ಆಂಗ್ಲ ಮಾಧ್ಯಮ ಶಾಲೆಯಲ್ಲೇ ಓದಬೇಕು ಎಂಬ ಆಸೆ ಇರುತ್ತದೆ. ಆದರೆ ಸರಕಾರಿ ಶಾಲೆಗಳು ಯಾವತ್ತೂ ಹಿಂದೆ ಬಿದ್ದಿಲ್ಲ, ನಾನು ಕೂಡ ಸರಕಾರಿ ಶಾಲೆಯಿಂದಲೇ ಕಲಿತು ಬಂದವನಾಗಿದ್ದೇನೆ ಎಂದ ಅಶೋಕ್ ರೈಯವರು, ಮುಂದಿನ ದಿನಗಳಲ್ಲಿ ಪ್ರತಿ ಸರಕಾರಿ ಶಾಲೆಯಲ್ಲೂ ಹಂತ ಹಂತವಾಗಿ ಆಂಗ್ಲ ಮಾಧ್ಯಮ ಆರಂಭಿಸುವ ಬಗ್ಗೆ ಸರಕಾರ ಚಿಂತನೆ ನಡೆಸಿದೆ ಎಂದು ತಿಳಿಸಿದರು.

ಸನ್ಮಾನ, ಗೌರವಾರ್ಪಣೆ:
ಮೊದಲಿಗೆ ಶಾಸಕ ಅಶೋಕ್ ಕುಮಾರ್ ರೈಯವರಿಗೆ ಶಾಲಾ ವತಿಯಿಂದ ಗೌರವಾರ್ಪಣೆ ಮಾಡಲಾಯಿತು. ಹಿರಿಯರಾದ ನಾರಾಯಣ ರೈ ಬಾರಿಕೆಯವರು ಅಶೋಕ್ ರೈಯವರಿಗೆ ಶಾಲು ಹಾಕಿ, ಫಲಪುಷ್ಪ, ಸ್ಮರಣಿಕೆ ನೀಡಿ ಸನ್ಮಾನಿಸಿ ಗೌರವಿಸಿದರು. ವಿವೇಕ ತರಗತಿ ಕೊಠಡಿ ನಿರ್ಮಾಣದ ಗುತ್ತಿಗೆದಾರರಾದ ಆಶೀಕುದ್ದೀನ್ ಅಖ್ತರ್ ಕುಂಬ್ರ, ಪರ್ಪುಂಜ ಶಾಲೆಯಲ್ಲಿ ಶಿಕ್ಷಕಿಯರಾಗಿದ್ದು ವರ್ಗಾವಣೆಗೊಂಡ ಶಿಕ್ಷಕಿಯರಾದ ಪ್ರೇಮಲತಾ ಕೆ, ಗ್ರೇಟಾ ಮಸ್ಕರೇನಸ್ ಹಾಗೂ ಕಳೆದ 20 ವರ್ಷಗಳಿಂದ ಅಡುಗೆ ಸಿಬ್ಬಂದಿಯಾಗಿದ್ದ ಶ್ರೀಮತಿ ಅಲ್ಲದೆ ಶಾಲಾ ಪೀಠೋಪಕರಣಗಳನ್ನು ಉಚಿತವಾಗಿ ದುರಸ್ತಿ ಮಾಡಿಕೊಟ್ಟ ಚಿನ್ನಯ್ಯ ಆಚಾರ್ಯರವರುಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಮುಖ್ಯ ಅತಿಥಿಯಾಗಿದ್ದ ಒಳಮೊಗ್ರು ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರುರವರು ಮಾತನಾಡಿ, ಉತ್ತಮ ಗುಣಮಟ್ಟದ ಶಿಕ್ಷಣ ಇಂದಿನ ಅಗತ್ಯತೆಯಾಗಿದೆ. ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ದೊರೆತಾಗ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಲು ಸಾಧ್ಯವಾಗುತ್ತದೆ ಈ ನಿಟ್ಟಿನಲ್ಲಿ ಹೆತ್ತವರು ಹಾಗೂ ಶಿಕ್ಷಕರು ಮಕ್ಕಳ ಬಗ್ಗೆ ಕಾಳಜಿ ವಹಿಸಿಕೊಳ್ಳಬೇಕು ಎಂದು ಹೇಳಿ ಶುಭ ಹಾರೈಸಿದರು.

ವೇದಿಕೆಯಲ್ಲಿ ಒಳಮೊಗ್ರು ಗ್ರಾಪಂ ಉಪಾಧ್ಯಕ್ಷ ಅಶ್ರಫ್ ಉಜಿರೋಡಿ, ಸದಸ್ಯರುಗಳಾದ ಸುಂದರಿ, ವಿನೋದ್ ಶೆಟ್ಟಿ ಮುಡಾಲ, ಎಸ್‌ಡಿಎಂಸಿ ಅಧ್ಯಕ್ಷ ಸುರೇಶ್ ನಾಯಕ್, ಮತ್ತಿತರರು ಉಪಸ್ಥಿತರಿದ್ದರು. ಸಭೆಯಲ್ಲಿ ಒಳಮೊಗ್ರು ಗ್ರಾಪಂ ಸದಸ್ಯ ಶೀನಪ್ಪ ನಾಯ್ಕ, ಒಳಮೊಗ್ರು ವಲಯ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಪೂಜಾರಿ ಬೊಳ್ಳಾಡಿ, ಕೆಪಿಎಸ್ ಕುಂಬ್ರ ಕಾರ್ಯಾಧ್ಯಕ್ಷ ರಕ್ಷಿತ್ ರೈ ಮುಗೇರು, ಮಹಮ್ಮದ್ ಕೆ.ಪಿ, ಜನಜಾಗೃತಿ ವೇದಿಕೆಯ ಒಳಮೊಗ್ರು ಗ್ರಾಮ ಅಧ್ಯಕ್ಷ ರಾಜೇಶ್ ರೈ ಪರ್ಪುಂಜ, ಪ್ರಗತಿಪರ ಕೃಷಿಕ ಮಿತ್ರದಾಸ ರೈ ಡೆಕ್ಕಳ ಸೇರಿದಂತೆ ಎಸ್‌ಡಿಎಂಸಿ ಸದಸ್ಯರುಗಳು, ಪೋಷಕರು ಭಾಗವಹಿಸಿದ್ದರು. ಮುಖ್ಯ ಶಿಕ್ಷಕಿ ಚಂದ್ರಾವತಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಿಕ್ಷಕ ಶಾಂತಿ ಮೋರಾಸ್ ಸ್ವಾಗತಿಸಿ, ಅತಿಥಿ ಶಿಕ್ಷಕಿ ಸುಪ್ರೀತಾ ವಂದಿಸಿದರು. ಅತಿಥಿ ಶಿಕ್ಷಕಿ ಜಯಮಾಲ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here