ಪುತ್ತೂರು ಬ್ಲಾಕ್ ಕಾಂಗ್ರೆಸ್ ಮಾಸಿಕ ಸಭೆ – ನನ್ನ ಒಂದು ಕಣ್ಣು ಸದಾ ಬಡವರ ಮೇಲೆಯೇ ಇರುತ್ತದೆ: ಶಾಸಕ ಅಶೋಕ್ ರೈ

0

ಪುತ್ತೂರು: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ, ಪುತ್ತೂರಿನಲ್ಲಿ ಕಾಂಗ್ರೆಸ್ ಜಯಬೇರಿ ಭಾರಿಸಿದೆ ಇದಕ್ಕೆಲ್ಲಾ ಪಕ್ಷದ ಕಾರ್ಯಕರ್ತರು ಮತ್ತು ಹಿತೈಷಿಗಳೇ ಕಾರಣರಾಗಿದ್ದಾರೆ, ನಮಗೆ ಈಗ ಬಡವರ ಸೇವೆ ಮಾಡಲು ಉತ್ತಮ ಅವಕಾಶ ಸಿಕ್ಕಿದೆ, ಪ್ರತೀಯೊಂದು ಕಡೆಗಳಲ್ಲೂ ಬಡವರಿಗೆ ನಾವು ಸಹಾಯ ಮಾಡುವ ಮೂಲಕ ಪಕ್ಷವನ್ನು ಬೆಳಸಬೇಕು ನನ್ನ ಒಂದು ಕಣ್ಣು ಸದಾ ಬಡವರ ಮೇಲೆಯೇ ಇರುತ್ತದೆ ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಹೇಳಿದರು.
ಅವರು ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಮಾಸಿಕ ಸಭೆಯಲ್ಲಿ ಮಾತನಾಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ ಬಿ ವಿಶ್ವನಾಥ ರೈ ಅಧ್ಯಕ್ಷತೆ ವಹಿಸಿದ್ದರು.

ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಯಾವೊಬ್ಬ ಬಡವನೂ ಕಣ್ಣೀರು ಹಾಕಬಾರದು ಅವರ ಕಣ್ಣೀರನ್ನು ಒರೆಸುವ ಕೆಲಸವನ್ನು ಕಾರ್ಯಕರ್ತರು ಮಾಡಬೇಕು. ಎಲ್ಲೇ ಇರಲಿ ಯಾರಿಗಾದರೂ ತೊಂದರೆಯಾದಲ್ಲಿ ನಾವು ತಕ್ಷಣ ಅವರ ನೋವಿಗೆ ಸ್ಪಂದಿಸುವ ಮೂಲಕ ಅವರಿಗೆ ಸಾಂತ್ವನ ಹೇಳಬೇಕು. ಕೇವಲ ಚುನಾವಣಾ ಸಂದರ್ಭದಲ್ಲಿ ಮಾತ್ರ ನಾವು ಅವರ ಮನೆಗೆ ಹೋಗುವುದಲ್ಲ ಬೇರೆ ಸಂದರ್ಭದಲ್ಲೂ ನಾವು ಬಡವರ ಮನೆಗೆ, ಕಾರ್ಯಕರ್ತರ ಮನೆಗೆ ತೆರಳಿ ಕಷ್ಟ ಸುಖಗಳನ್ನು ವಿಚಾರಿಸಬೇಕು. ಸರಕಾರದಿಂದ ಸಿಗುವ ಸವಲತ್ತುಗಳು ಅವರಿಗೆ ಸಿಗುವ ಹಾಗೆ ನೋಡಿಕೊಳ್ಳಬೇಕು. ರೇಶನ್ ಕಾರ್ಡು, ಗೃಹಲಕ್ಷ್ಮಿ ಯೋಜನೆ ಸಿಗದವರಿಗೆ ನಾವು ಅವರಿಗೆ ನೆರವು ನೀಡಬೇಕು. ಸರಕಾರದ ಐದು ಗ್ಯಾರಂಟಿ ಯೋಜನೆ ಎಲ್ಲಾ ಮನೆಗಳಿಗೆ ಸಿಕ್ಕಿದೆಯೇ ಎಂಬುದನ್ನು ಖಾತ್ರಿಪಡಿಸಿ ಇದು ಕಾಂಗ್ರೆಸ್ ಯೋಜನೆ ಎಂದು ಮನವರಿಕೆ ಮಾಡಿಕೊಡುವ ಕೆಲಸವನ್ನು ಪಕ್ಷದ ಪ್ರತೀಯೊಬ್ಬರೂ ಮಾಡಬೇಕು ಹಾಗಿದ್ದಲ್ಲಿ ಮಾತ್ರ ಪಕ್ಷವನ್ನು ಗಟ್ಟಿಗೊಳಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ತಿಂಗಳ ಮೊದಲ ಶನಿವಾರ ಕಾಂಗ್ರೆಸ್ ಕಚೇರಿಯಲ್ಲಿರುತ್ತೇನೆ
ನಾನು ತಿಂಗಳ ಮೊದಲ ಶನಿವಾರ ಬೆಳಿಗ್ಗೆಯಿಂದ ಮಧ್ಯಾಹ್ನ ತನಕ ಕಾಂಗ್ರೆಸ್ ಕಚೇರಿಯಲ್ಲಿ ಪಕ್ಷದ ಬೆಳವಣಿಗೆಯ ಜೊತೆ ಕಾರ್ಯಕರ್ತರು, ವಲಯ ಅಧ್ಯಕ್ಷರು, ಬೂತ್ ಮಟ್ಟದ ಅಧ್ಯಕ್ಷರ ಜೊತೆ ಸಂವಾದ ನಡೆಸುತ್ತೇನೆ. ಪಕ್ಷವನ್ನು ಹೇಗೆ ಬೆಳೆಸಬೇಕು , ಶಾಸಕನಾಗಿ ನಾನು ಏನು ಮಾಡಬೇಕೆಂಬುದನ್ನು ಕಾರ್ಯಕರ್ತರೇ ತಿಳಿಸಬೇಕು ಆ ಮೂಲಕ ಪಕ್ಷದ ಬಲವರ್ಧನೆ ಮಾಡುವ ಕೆಲಸವನ್ನು ಮಾಡಲಿದ್ದು ಈ ಸಭೆಗೆ ಎಲ್ಲಾ ವಲಯ ಅಧ್ಯಕ್ಷರುಗಳು ಕಡ್ಡಾಯವಾಗಿ ಭಾಗವಹಿಸುವಂತಾಗಬೇಕು ಎಂದುಹೇಳಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಶಾಸಕರು ಕಾರ್ಯಕರ್ತರ ಸಾಲಿನಲ್ಲೇ ಕುಳಿತು ಬ್ಲಾಕ್ ಕಾಂಗ್ರೆಸ್ ಘಟಕದ ನಾಯಕರುಗಳ ಭಾಷಣವನ್ನು ಆಲಿಸಿದರು. ಸಭೆಯಲ್ಲಿ ಶಾಸಕರು ಕಾರ್ಯಕರ್ತರಿಂದ ಅಭಿಪ್ರಾಯ ಮತ್ತು ಕಾರ್ಯಕರ್ತರ ಸಮಸ್ಯೆಗಳನ್ನು ಆಲಿಸಿದರು.
ಪಕ್ಷದ ಕಾರ್ಯಕರ್ತರ ಸಮಾವೇಶ ವಲಯ ಮಟ್ಟದಲ್ಲಿ ಮಾಡಬೇಕಿದೆ. ಮಹಿಳಾ ಕಾರ್ಯಕರ್ತರು ಈ ಸಭೆಯಲ್ಲಿ ಭಾಗವಹಿಸುವಂತೆ ನೋಡಿಕೊಳ್ಳಬೇಕು. ಪಕ್ಷಕ್ಕೆ ಸೇರಿಸುವವರನ್ನು ವಲಯ ಮಟ್ಟದ ಸಭೆಯಲ್ಲಿ ಸೇರಿಸಿಕೊಳ್ಳುವ ಕೆಲಸವನ್ನು ಮಾಡಬೇಕು ಎಂದು ಕಾರ್ಯಕರ್ತರಿಗೆ ತಿಳಿಸಿದರು.

ಎಲ್ಲರೂ ಒಟ್ಟಾಗಿ ಕೆಲಸ ಮಾಡೋಣ: ಎಂ ಬಿ ವಿಶ್ವನಾಥ ರೈ
ಪಕ್ಷದ ಬಲವರ್ಧನೆಗೆ ಎಲ್ಲರೂ ಜೊತೆಯಾಗಿ ಕೆಲಸ ಮಾಡಬೇಕು. ಬ್ಲಾಕ್‌ನ ವಿವಿಧ ಘಟಕಗಳು, ಯುವ ಕಾಂಗ್ರೆಸ್, ಮಹಿಳಾ ಘಟಕ, ವಿದ್ಯಾರ್ಥಿ ಘಟಕ ಎಲ್ಲರೂ ಸೇರಿ ಗ್ರಾಮ ಮಟ್ಟದಲ್ಲಿ ಪಕ್ಷವನ್ನು ಬೆಳೆಸಬೇಕು. ಕಾರ್ಯಕರ್ತರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಮೂಲಕ ಪ್ರತೀ ವಲಯ ಮಟ್ಟದಲ್ಲೂ ಪಕ್ಷದ ಕಾರ್ಯಕರ್ತರ ಸಂಖ್ಯೆಯನ್ನು ಹೆಚ್ಚಿಸಬೇಕು. ನಮಗೆ ಈಗ ಶಾಸಕರ ಬಲವಿದೆ, ಅಭಿವೃದ್ದಿಯ ಜೊತೆಗೆ ಪಕ್ಷವನ್ನು ಬೆಳಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬ್ಲಾಕ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ಶಕೂರ್ ಹಾಜಿ, ಕಾಂಗ್ರೆಸ್ ಮುಖಂಡರಾದ ದುರ್ಗಾಪ್ರಸಾದ್ ರೈ, ಸಂತೋಷ್ ಭಂಡಾರಿ ಚಿಲ್ಮೆತ್ತಾರು, ಅಕ್ರಮ ಸಕ್ರಮ ಸಮಿತಿ ಸದಸ್ಯರಾದ ಮಹಮ್ಮದ್‌ಬಡಗನ್ನೂರು, ಬ್ಲಾಕ್ ಪ್ರಧಾನ ಕಾರ್ಯದರ್ಶಿ ಅಮಲರಾಮಚಂದ್ರ ಮೊದಲಾದವರು ಮಾತನಾಡಿ ಸಲಹೆ ಸೂಚನೆಗಳನ್ನು ನೀಡಿದರು. ಕಾರ್ಯಕ್ರಮದಲ್ಲಿ ಪಕ್ಷದ ಮುಖಂಡರುಗಳಾದ ಮಹಾಲಿಂಗ ನಾಯ್ಕ, ನ್ಯಾಯವಾದಿ ಭಾಸ್ಕರ ಕೋಡಿಂಬಾಳ, ಅಶೋಕ್ ಪೂಜಾರಿ ಬೊಳ್ಳಾಡಿ, ನಗರಸಭಾ ಸದಸ್ಯರಾದ ರಿಯಾಝ್ ಪರ್ಲಡ್ಕ, ರವೀಂದ್ರ ರೈ ನೆಕ್ಕಿಲು, ವೇದನಾಥ ಸುವರ್ಣ, ಪ್ರಹ್ಲಾದ್ ಬೆಳ್ಳಿಪ್ಪಾಡಿ, ರಾಮ ಮೇನಾಲ,ಉಮ್ಮರ್ ಜನಪ್ರಿಯ, ಬಾಬುಮರಿಕೆ, ಸಲಾಂ ಸಂಪ್ಯ,ಗ್ರಾಪಂ ಸದಸ್ಯ ರಹಿಮಾನ್ ಕಾವು, ಕಲಾವತಿ, ಜಯಂತಿ ಬಲ್ನಾಡು, ವಿಜಯಲಕ್ಷ್ಮೀ, ರಾಮಚಂದ್ರ ಸೊರಕೆ, ಆಲಿ ಪಾಣಾಜೆ, ಸಂಜೀವ ನಾಯ್ಕ ಸೊರಕೆ, ಶಾಹುಲ್ ಹಮೀದ್ ಪಾಣಾಜೆ, ಸುಪ್ರಿತ್ ಕಣ್ಣಾರಾಯ, ಎಡ್ವರ್ಡ್ ಹರೀಶ್ ಕುಮಾರ್ ನಿಡ್ಪಳ್ಳಿ ಮೊದಲಾದವರು ಉಪಸ್ಥಿತರಿದ್ದರು.
ಜಯಂತ ಕೆಂಗುಡೇಲು ವಂದಿಸಿದರು. ಹಬೀಬ್ ಕಣ್ಣೂರು ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here