![](https://puttur.suddinews.com/wp-content/uploads/2023/10/pro.webp)
ಹಿರೆಬಂಡಾಡಿ: ಹಿರೆಬಂಡಾಡಿ ಗ್ರಾ.ಪಂ.ಅಧ್ಯಕ್ಷ, ಹಿರೆಬಂಡಾಡಿ ಗ್ರಾಮದ ಅಡೆಕ್ಕಲ್ ನಿವಾಸಿ ಸದಾನಂದ ಶೆಟ್ಟಿಯವರ ಮನೆಯಲ್ಲಿ ಕೆಲಸಕ್ಕಿದ್ದ ಬೆಳಗಾಂ ನಿವಾಸಿ ದ್ಯಾಮಣ್ಣ(28ವ.)ಎಂಬವರು ಕೆಲಸ ಮಾಡುತ್ತಿದ್ದ ವೇಳೆ ಕುಸಿದು ಬಿದ್ದು ಮೃತಪಟ್ಟ ಘಟನೆ ಅ.17ರಂದು ನಡೆದಿದೆ.
ಬೆಳಗಾಂ ಜಿಲ್ಲೆ ಬೈಲಹೊಂಗಲ ತಾಲೂಕಿನ ಸಂಗೊಳ್ಳಿ ನಿವಾಸಿ ಫಕಿರಪ್ಪ ಎಂಬವರ ಪುತ್ರ ದ್ಯಾಮಣ್ಣ(28ವ.)ಮೃತಪಟ್ಟವರಾಗಿದ್ದಾರೆ. ದ್ಯಾಮಣ್ಣ 6 ತಿಂಗಳಿನಿಂದ ಸದಾನಂದ ಶೆಟ್ಟಿಯವರ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದರು. ಅ.17ರಂದು ಬೆಳಿಗ್ಗೆ ಸದಾನಂದ ಶೆಟ್ಟಿಯವರ ಮಕ್ಕಳು ಕಾಲೇಜಿಗೆ ಹೋಗಿದ್ದು, ಸದಾನಂದ ಶೆಟ್ಟಿಯವರು ದ್ಯಾಮಣ್ಣನಿಗೆ ಅಂಗಳದ ಹುಲ್ಲನ್ನು ಕತ್ತಿಯಿಂದ ತೆಗೆಯುವ ಕೆಲಸ ಹೇಳಿ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಿ ಗ್ರಾಮ ಪಂಚಾಯತ್ನಲ್ಲಿ ಕೆಲಸ ಇದ್ದುದರಿಂದ ಬೆಳಿಗ್ಗೆ 9.30ಕ್ಕೆ ಮನೆಯಿಂದ ಹೋಗಿದ್ದರು. ಮಧ್ಯಾಹ್ನ 3.15 ಗಂಟೆಗೆ ಮನೆಗೆ ಬಂದಾಗ ಕೆಲಸದಾಳು ದ್ಯಾಮಣ್ಣ ಅಂಗಳದಲ್ಲಿ ಹುಲ್ಲು ತೆಗೆಯುವ ಸ್ಥಳದಲ್ಲಿ ಅಂಗಾತನೆ ಬಿದ್ದುಕೊಂಡಿದ್ದರು. ಸದಾನಂದ ಶೆಟ್ಟಿಯವರು ತಕ್ಷಣ ಅವರ ಅಣ್ಣ ವಿಠಲ ಶೆಟ್ಟಿಯವರ ಜೊತೆ ಸೇರಿ ದ್ಯಾಮಣ್ಣನನ್ನು ಚಿಕಿತ್ಸೆಗಾಗಿ ಉಪ್ಪಿನಂಗಡಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದರು. ಆದರೆ ಆ ವೇಳೆಗಾಗಲೇ ದ್ಯಾಮಣ್ಣ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ. ದ್ಯಾಮಣ್ಣ ಕೂಲಿ ಕೆಲಸ ಮಾಡುವ ಸಮಯ ಹೃದಯ ಸಂಬಂಧಿ ಖಾಯಿಲೆಯಿಂದಲೋ ಯಾ ಯಾವುದೋ ಖಾಯಿಲೆಯಿಂದಲೋ ಕುಸಿದು ಬಿದ್ದು ಮೃತಪಟ್ಟಿರಬಹು ಎಂದು ಸದಾನಂದ ಶೆಟ್ಟಿಯವರು ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.