ಕಸ್ತೂರಿರಂಗನ್ ವರದಿ ಅನುಷ್ಠಾನದ ಭೀತಿಯಲ್ಲಿ ಜನತೆ : ವರದಿ ಕೈ ಬಿಡಲು ಹೋರಾಟಕ್ಕೆ ಸಜ್ಜಾದ ಪಶ್ಚಿಮ ಘಟ್ಟದ ತಪ್ಪಲಿನ ಗ್ರಾಮಸ್ಥರು

0

ಹೋರಾಟದ ನೇತೃತ್ವ ವಹಿಸಿದ ಮಲೆನಾಡು ಜನ ಹಿತರಕ್ಷಣಾ ವೇದಿಕೆ

ಸುಬ್ರಹ್ಮಣ್ಯ : ಕಸ್ತೂರಿರಂಗನ್ ವರದಿ ಅನುಷ್ಠಾನಕ್ಕೆ ಯಾವುದೇ ಕ್ಷಣದಲ್ಲಿ ಅನುಮೋದನೆ ಸಿಗಬಹುದು ಎನ್ನುವ ಆತಂಕದಲ್ಲಿರುವ ರಾಜ್ಯದ ಪಶ್ಚಿಮ ಘಟ್ಟದ ತಪ್ಪಲಿನ ಗ್ರಾಮಗಳ ಜನರು ಮತ್ತೆ ಹೋರಾಟಕ್ಕೆ ಸಜ್ಜಾಗಿದ್ದಾರೆ. ಮಲೆನಾಡು ಜನ ಹಿತರಕ್ಷಣ ವೇದಿಕೆ ಕಸ್ತೂರಿ ರಂಗನ್ ವರದಿ ಕೈ ಬಿಡಲು ಹೋರಾಟ ಪ್ರಾರಂಭಿಸಿದೆ.


ಕಸ್ತೂರಿ ರಂಗನ್ ವರದಿಯನ್ನು ಅನುಷ್ಠಾನ ಮಾಡಬಾರದು, ಪ್ರಸ್ತಾವಿತ ಸ್ಥಳದ ರೈತರನ್ನು ಒಕ್ಕಲೆಬ್ಬಿಸದೆ ಹಕ್ಕುಪತ್ರ ನೀಡಬೇಕು, ಜಂಟಿ ಸರ್ವೆ ನಡೆಸಬೇಕು, ಜನವಸತಿಯಿಲ್ಲದ ಪ್ರದೇಶಗಳಿಗೆ ಆನೆಗಳ ಸ್ಥಳಾಂತರ, ಅಡಿಕೆ ಹಳದಿ ರೋಗ ಹಾಗೂ ಎಲೆಚುಕ್ಕಿ ರೋಗದಿಂದ ಸಂತ್ರಸ್ತರಾದ ಬೆಳೆಗಾರರು ಅಸೌಖ್ಯಕ್ಕೀಡಾದಾಗ ಅವರು ಬಯಸಿದ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ, ವಿವಿಧ ಸಹಕಾರಿ ಸಂಘ, ಬ್ಯಾಂಕ್‌ಗಳಲ್ಲಿನ ಸಾಲ ಮನ್ನಾ, ಕಾಡು ಪ್ರಾಣಿಗಳಿಂದ ರಕ್ಷಣೆಗಾಗಿ ಕೋವಿ ಪರವಾನಿಗೆ ಇತ್ಯಾದಿ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಈಗಾಗಲೇ ಪ್ರತಿಭಟನೆ ಆರಂಭಿಸಲಾಗಿದೆ.


ಕಾರವಾರದಿಂದ ಚಾಮರಾಜನಗರ ತನಕ ರಾಜ್ಯದ 7 ಜಿಲ್ಲೆಗಳ ಪಶ್ಚಿಮ ಘಟ್ಟ ಭಾಗದ ಸಾವಿರಾರು ಗ್ರಾಮಗಳ ಲಕ್ಷಾಂತರ ಕುಟುಂಬದವರಿಗೆ ಈ ಕಸ್ತೂರಿ ರಂಗನ್ ವರದಿ ಕಂಟಕಪ್ರಾಯವಾಗಿದೆ. ಇದನ್ನು ತಿರಸ್ಕರಿಸಬೇಕೆಂದು ಆಗ್ರಹಿಸಿ 17 ವರ್ಷಗಳಿಂದ ಪ್ರತಿಭಟನೆಗಳು ನಡೆಯುತ್ತಿವೆ. ಆದರೆ ಹಸಿರು ಪೀಠವು ಹಿಂದಿನ ಆದೇಶವನ್ನೇ ಜಾರಿಗೊಳಿಸುವಂತೆ ಆದೇಶಿಸಿದ್ದು, ಸಂಬಂಧಪಟ್ಟ ಗ್ರಾಮಸ್ಥರು ಮತ್ತೆ ಭಯಕ್ಕೀಡಾಗುವಂತಾಗಿದೆ.


ವರದಿ ಅನುಷ್ಠಾನ ಭೀತಿ :
ವರದಿ ಅನುಷ್ಠಾನಗೊಂಡರೆ ಜನರ ಸಂಪೂರ್ಣ ಕೃಷಿ ಭೂಮಿಯನ್ನು ಅರಣ್ಯ ಇಲಾಖೆ ವಶಪಡಿಸಿಕೊಳ್ಳುತ್ತದೆ. ಅಂತಹ ಭೂಮಿಗೆ ಯಾವುದೇ ಪರಿಹಾರ ಅಥವಾ ಸಂತ್ರಸ್ತ ಕುಟುಂಬಗಳಿಗೆ ಪುನರ್ವಸತಿಯ ಉಲ್ಲೇಖವಾಗಲಿ ವರದಿಯಲ್ಲಿ ಇಲ್ಲ. ವಸತಿ ಇತರ ಕಟ್ಟಡಗಳಿಗೂ ಪರಿಹಾರ ಘೋಷಿಸಿಲ್ಲ. ಈಗಾಗಲೇ ಅರಣ್ಯ ಹಾಗೂ ಸರಕಾರಿ ಜಮೀನಿನಲ್ಲಿ ಮನೆಕಟ್ಟಿ ವಾಸಿಸುತ್ತಿರುವವರನ್ನೂ ಒಕ್ಕಲೆಬ್ಬಿಸಲಾಗುತ್ತದೆ. ಈಗಾಗಲೇ ಪಡೆದ ಭೂಮಿಯ ಹಕ್ಕುಪತ್ರಗಳು, ರೈತರ ಕೋವಿ ಪರವಾನಿಗೆ ರದ್ದುಗೊಳ್ಳಲಿದೆ. ರಾಷ್ಟ್ರೀಯ ಹೆದ್ದಾರಿ ೭೫, ರಾಜ್ಯ ಹೆದ್ದಾರಿಗಳಾದ ಬಿಸಿಲೆ ಹಾಗೂ ಚಾರ್ಮಾಡಿ ಘಾಟಿ ರಸ್ತೆಗಳು ಹಾಗೂ ಮಂಗಳೂರು- ಬೆಂಗಳೂರು ರೈಲು ಮಾರ್ಗಗಳು ಯೋಜನೆಯ ನೀಲ ನಕಾಶೆಯಲ್ಲಿ ಒಳಪಡುವುದರಿಂದ ಭವಿಷ್ಯದಲ್ಲಿ ಇವೆಲ್ಲ ಮಾರ್ಗಗಳು ಮುಚ್ಚಲಿವೆ. ಲಕ್ಷಾಂತರ ಮಂದಿ ನಿರ್ಗತಿಕರಾಗಲಿದ್ದಾರೆ ಎನ್ನಲಾಗುತ್ತಿದೆ.


ದ.ಕ ಜಿಲ್ಲೆಯ ಪ್ರಸ್ತಾವಿತ ಗ್ರಾಮಗಳು:
ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕೌಕ್ರಾಡಿ, ಗೋಳಿತೊಟ್ಟು, ಶಿರಾಡಿ, ಆಲಂತಾಯ, ಸಿರಿಬಾಗಿಲು, ಕೊಂಬಾರು, ಇಚ್ಲಂಪಾಡಿ, ಬಲ್ಯ, ಬಿಳಿನೆಲೆ, ದೋಳ್ಪಾಡಿ, ಬಳ್ಪ, ಏನೆಕಲ್ಲು, ಸುಬ್ರಹ್ಮಣ್ಯ, ಸುಳ್ಯ ತಾಲೂಕಿನ ನಾಲ್ಕೂರು, ಕೂತ್ಕುಂಜ, ಐನೆಕಿದು, ದೇವಚಳ್ಳ, ಹರಿಹರಪಲ್ಲತಡ್ಕ, ಮಿತ್ತೂರು, ಬಾಳುಗೋಡು, ಮಡಪ್ಪಾಡಿ, ಉಬರಡ್ಕ, ಕಲ್ಮಕಾರು, ಅರಂತೋಡು, ಆಲೆಟ್ಟಿ, ಸಂಪಾಜೆ, ತೊಡಿಕಾನ ,ಬೆಳ್ತಂಗಡಿ ತಾಲೂಕಿನ ನಾರಾವಿ, ಮಲವಂತಿಗೆ, ಕುತ್ಲೂರು, ಸುಲ್ಕೇರಿ ಮೊಗ್ರು, ಶಿರ್ಲಾಲು, ನಾವರ, ಸವಣಾಲು, ನಡ, ಚಾರ್ಮಾಡಿ, ನಾವೂರು, ನೆರಿಯ, ಕಳಂಜ, ಪುದುವೆಟ್ಟು, ಶಿಶಿಲ, ಶಿಬಾಜೆ, ರೆಖ್ಯಾ ಗ್ರಾಮಗಳು ಈಗಾಗಲೇ ಕಸ್ತೂರಿ ರಂಗನ್ ವರದಿಯಲ್ಲಿ ಅತೀ ಸೂಕ್ಷ್ಮ ಪ್ರದೇಶಗಳೆಂದು ಗುರುತಿಸಲಾಗಿದೆ.

ಈ ಹಿಂದಿನ ಬಿಜೆಪಿ ಸರಕಾರವು ಸಮಿತಿ ರಚಿಸಿ ಕೇಂದ್ರ ಸರಕಾರಕ್ಕೆ ಕಸ್ತೂರಿ ರಂಗನ್ ವರದಿಯನ್ನು ಅನುಷ್ಠಾನ ಮಾಡಬಾರದು, ಮಾಡಿದರೂ ಜನಪರವಾದ ಹಲವು ಮಾರ್ಪಾಟುಗಳನ್ನು ಮಾಡಬೇಕು ಎಂದು ತಿಳಿಸಿತ್ತು. ಈಗ ನಾವು ಅದರ ಪ್ರತಿಯನ್ನು ಮಾಹಿತಿ ಹಕ್ಕಿನಲ್ಲಿ ಕೇಳಿದರೆ ಕೊಡುತ್ತಿಲ್ಲ.ಯಾವುದೇ ಕ್ಷಣದಲ್ಲಿ ರಾಜ್ಯ ಸರಕಾರ
ಕಸ್ತೂರಿರಂಗನ್ ವರದಿಯ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಬಹುದು ಎನ್ನುವ ಭೀತಿ ಎದುರಾಗಿದೆ. ಈ ವರದಿಯನ್ನು ಕೈಬಿಡುವ ತನಕ ಹೋರಾಟವನ್ನು ನಿಲ್ಲಿಸುವುದಿಲ್ಲ.

– ಕಿಶೋರ್ ಶಿರಾಡಿ, ಸಂಚಾಲಕರು, ಮಲೆನಾಡು ಜನಹಿತ ರಕ್ಷಣಾ ವೇದಿಕೆ, ದ.ಕ. ಜಿಲ್ಲೆ.

LEAVE A REPLY

Please enter your comment!
Please enter your name here