ಬಂಟ್ವಾಳದಲ್ಲಿ ಸಂಸದ ನಳಿನ್ ಅಭಿನಂದನಾ ಕಾರ್ಯಕ್ರಮ

0

ವಿಟ್ಲ: ನರೇಂದ್ರ ಮೋದಿ ಅವರನ್ನು ಮತ್ತೆ ಪ್ರಧಾನಮಂತ್ರಿಯನ್ನಾಗಿಸಬೇಕು ಎಂಬ ಗುರಿ ನಮ್ಮದಾಗಿರಬೇಕು, ನಳಿನ್ ಮತ್ತು ನನ್ನ ಬಾಂಧವ್ಯ ಚುನಾವಣೆ ಹಾಗೂ ರಾಜಕೀಯಕ್ಕೂ ಮೀರಿದ್ದು, ಪಕ್ಷ ಸಂಘಟನೆಯಲ್ಲಿ ಎಲ್ಲವನ್ನೂ ಎದುರಿಸಿ ಮುನ್ನಡೆಸಿದವರು ನಳಿನ್ ಕುಮಾರ್ ಕಟೀಲ್ ರವರು ಎಂದು ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತುರವರು ಹೇಳಿದರು.


ಬಂಟ್ವಾಳ ಬಿಜೆಪಿ ಕ್ಷೇತ್ರ ಸಮಿತಿ ವತಿಯಿಂದ ಬಂಟ್ವಾಳದ ಸ್ಪರ್ಶ ಕಲಾ ಮಂದಿರದಲ್ಲಿ ನ.22ರಂದು ದ.ಕ. ಸಂಸದ, ಬಿಜೆಪಿಯ ನಿಕಟಪೂರ್ವ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್‌ರವರ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.


ಸಂಸದ ನಳಿನ್ ಕುಮಾರ್ ಕಟೀಲ್‌ರವರು ಮಾತನಾಡಿ ಸಂಘಟನಾ ಹಿರಿಯರ ಸೂಚನೆಯತೆ ನಾನು ಚುನಾವಣೆಗೆ ಮೂರು ಬಾರಿ ಸ್ಪರ್ಧಿಸಿದ್ದೇನೆ. ನನಗೆ ಎಲ್ಲ ಹಂತದಲ್ಲಿ ಬೆಳೆಯಲು ಕಾರಣವಾದ ಬಂಟ್ವಾಳವನ್ನು ಎಂದಿಗೂ ಮರೆಯುವುದಿಲ್ಲ. ನಿಮ್ಮೆಲ್ಲರ ಗೌರವಕ್ಕೆ ಚ್ಯುತಿ ಬಾರದಂತೆ ರಾಜಕಾರಣ ಮಾಡ್ತೇನೆ. ಕಾರ್ಯಕರ್ತರು ತಲೆತಗ್ಗಿಸುವಂತಹ ರಾಜಕೀಯ ನಾನು ಮಾಡಿಲ್ಲ, ನಾನು ಯಾವುದೇ ಭ್ರಷ್ಟಾಚಾರ ಮಾಡಿಲ್ಲ ಯಾರೇ ಚುನಾವಣೆಗೆ ನಿಂತರೂ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದ 28 ಸೀಟುಗಳಲ್ಲೂ ಬಿಜೆಪಿ ಗೆಲ್ಲುವಂತೆ ಮಾಡುವುದಷ್ಟೇ ನನ್ನ ಗುರಿ ಎಂದು ಹೇಳಿದರು.
ಬುಡಾ ಮಾಜಿ ಅಧ್ಯಕ್ಷ ದೇವದಾಸ ಶೆಟ್ಟಿ ನಳಿನ್ ಕುಮಾರ್ ಕಟೀಲ್ ಅವರನ್ನು ಅಭಿನಂದಿಸಿ ಮಾತನಾಡಿ ಈ ಅವಧಿಯಲ್ಲಿ 76 ಸಾವಿರ ಕೋಟಿ ರೂಪಾಯಿ ಅನುದಾನ ದಕ್ಷಿಣ ಕನ್ನಡ ಜಿಲ್ಲೆಗೆ ನಳಿನ್ ಅವರ ಮೂಲಕ ಲಭಿಸಿದೆ ಎಂಬ ಮಾಹಿತಿ ನೀಡಿದರು.
ಮಾಜಿ ಶಾಸಕ ಎ.ರುಕ್ಮಯ ಪೂಜಾರಿ ಮಾತನಾಡಿ, ನಳಿನ್ ಕುಮಾರ್ ಅವರು ತನ್ನ ವಿರುದ್ಧದ ಟೀಕೆಗಳಿಗೆ ಎದೆಗುಂದದೆ ಮುಂದೆ ಸಾಗಿದವರು. ಮುಂದಿನ ಲೋಕಸಭಾ ಚುನಾವಣೆಯಲ್ಲೂ ನಳಿನ್ ಕುಮಾರ್ ಕಟೀಲ್ ಅವರೇ ಅಭ್ಯರ್ಥಿ ಎಂಬ ಸ್ಪಷ್ಟತೆ ಇರಲಿ ಎಂದರು.


ಕಿಯೋನಿಕ್ಸ್ ಮಾಜಿ ಅಧ್ಯಕ್ಷ ಕೆ.ಹರಿಕೃಷ್ಣ ಬಂಟ್ವಾಳ್, ಮಾಜಿ ಶಾಸಕ ಕೆ. ಪದ್ಮನಾಭ ಕೊಟ್ಟಾರಿ, ಪಕ್ಷ ನಾಯಕಿ ಸುಲೋಚನಾ ಜಿ.ಕೆ.ಭಟ್, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್, ಪ್ರಧಾನ ಕಾರ್ಯದರ್ಶಿಗಳಾದ ರಾಮದಾಸ ಬಂಟ್ವಾಳ, ಕಸ್ತೂರಿ ಪಂಜ ಉಪಸ್ಥಿತರಿದ್ದರು.
ಪಕ್ಷದ ನಾನಾ ಘಟಕಗಳ ಪ್ರಮುಖರು ನಳಿನ್ ಅವರನ್ನು ಅಭಿನಂದಿಸಿ, ಗೌರವಿಸಿದರು.
ಬಿಜೆಪಿ ಕ್ಷೇತ್ರಾಧ್ಯಕ್ಷ ದೇವಪ್ಪ ಪೂಜಾರಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ರವೀಶ ಶೆಟ್ಟಿ ಕರ್ಕಳ ವಂದಿಸಿದರು. ಕ್ಷೇತ್ರ ಪ್ರಧಾನ ಕಾರ್ಯದರ್ಶಿ ಡೊಂಬಯ ಅರಳ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here