ಪಡುಬೆಟ್ಟು: ಉಚಿತ ನೇತ್ರ ಚಿಕಿತ್ಸಾ ಶಿಬಿರ, ಉಚಿತ ಕನ್ನಡ ವಿತರಣೆ

0

ನೆಲ್ಯಾಡಿ: ಆನಂದಾಶ್ರಮ ಸೇವಾ ಟ್ರಸ್ಟ್ ಪುತ್ತೂರು, ಲಯನ್ಸ್ ಕ್ಲಬ್ ದುರ್ಗಾಂಬಾ ಆಲಂಕಾರು ಮತ್ತು ಜೆಸಿಐ ನೆಲ್ಯಾಡಿ ಇದರ ಆಶ್ರಯದಲ್ಲಿ ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ ಮಂಗಳೂರು, ಜಿಲ್ಲಾ ವೆನ್‌ಲಾಕ್ ಆಸ್ಪತ್ರೆ ಮಂಗಳೂರು, ಸಂಚಾರಿ ನೇತ್ರ ಚಿಕಿತ್ಸಾ ಘಟಕ ಮಂಗಳೂರು, ಪ್ರಾಥಮಿಕ ಆರೋಗ್ಯ ಕೇಂದ್ರ ನೆಲ್ಯಾಡಿ ಇವುಗಳ ಸಹಯೋಗದೊಂದಿಗೆ ತಜ್ಞ ವೈದ್ಯರಿಂದ ಉಚಿತ ನೇತ್ರ ಚಿಕಿತ್ಸಾ ಶಿಬಿರರ ನ.28ರಂದು ನೆಲ್ಯಾಡಿ ಗ್ರಾಮದ ಪಡುಬೆಟ್ಟು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು. ಶಿಬಿರದಲ್ಲಿ ಆನಂದಾಶ್ರಮ ಸೇವಾ ಟ್ರಸ್ಟ್ ಪುತ್ತೂರು ಇವರ ವತಿಯಿಂದ ಉಚಿತ ಕನ್ನಡಕ ವಿತರಣೆ ಹಾಗೂ ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಬಿಪಿ, ಶುಗರ್ ಪರೀಕ್ಷೆ ನಡೆಯಿತು.

ಶಿಬಿರವನ್ನು ಉದ್ಘಾಟಿಸಿದ ಜಿ.ಪಂ.ಮಾಜಿ ಸದಸ್ಯ ಕೃಷ್ಣ ಶೆಟ್ಟಿ ಕಡಬ ಅವರು ಮಾತನಾಡಿ, ಗ್ರಾಮೀಣ ಭಾಗದಲ್ಲಿ ಕಣ್ಣಿನ ಸಮಸ್ಯೆಯಿಂದ ಬಳಲುತ್ತಿರುವ ಜನರಿಗೆ ಇಂತಹ ಶಿಬಿರ ವರದಾನವಾಗಿದೆ. ಕಣ್ಣಿನ ಪೊರೆಯಿಂದ ಬಳಲುತ್ತಿರುವವರಿಗೆ ಈ ಶಿಬಿರಗಳು ಬೆಳಕು ನೀಡುತ್ತಿವೆ. ಇದೊಂದು ಅರ್ಥಪೂರ್ಣವಾದ ಸಮಾಜ ಸೇವೆಯಾಗಿದೆ. ಈ ನಿಟ್ಟಿನಲ್ಲಿ ಸಂಘ ಸಂಸ್ಥೆಗಳನ್ನು ಜೋಡಿಸಿಕೊಂಡು ಸಮಾಜ ಸೇವಕ ಗಂಗಾಧರ ಶೆಟ್ಟಿಯವರು ತನ್ನ ನೇತೃತ್ವದ 50ನೇ ಉಚಿತ ನೇತ್ರ ಚಿಕಿತ್ಸಾ ಶಿಬಿರವನ್ನು ತಾನು ಕಲಿತ ಪಡುಬೆಟ್ಟು ಶಾಲೆಯಲ್ಲಿ ಸಂಘಟಿಸಿದ್ದು ಅತ್ಯಂತ ಯೋಗ್ಯ ಕೆಲಸವಾಗಿದೆ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿದ್ದ ಕ್ಯಾನ್ಸರ್ ತಜ್ಞ ಡಾ.ರಘು ಬೆಳ್ಳಿಪ್ಪಾಡಿಯವರು ಮಾತನಾಡಿ, ಗಂಗಾಧರ ಶೆಟ್ಟಿಯವರ ನೇತೃತ್ವದಲ್ಲಿ ಪಡುಬೆಟ್ಟು ಶಾಲೆಯಲ್ಲಿ ನಡೆದ ಪ್ರಥಮ ನೇತ್ರ ಚಿಕಿತ್ಸಾ ಶಿಬಿರವನ್ನು ನಾನು ಉದ್ಘಾಟಿಸಿದ್ದೆ. ಈಗ 50ನೇ ಶಿಬಿರದಲ್ಲಿ ಪಾಲ್ಗೊಂಡಿರುವುದು ಸಂತಸ ತಂದಿದೆ. ಗಂಗಾಧರ ಶೆಟ್ಟಿಯವರು 100 ಶಿಬಿರಗಳನ್ನು ಮಾಡಿ ರಾಜ್ಯ ಪ್ರಶಸ್ತಿಯನ್ನು ಪಡೆಯುವಂತಾಗಲಿ ಎಂದು ಹಾರೈಸಿದರು. ಇನ್ನೋರ್ವ ಮುಖ್ಯಅತಿಥಿ ಉದ್ಯಮಿ, ಸಮಾಜ ಸೇವಕ ಕೃಷ್ಣಪ್ಪ ಜಿ.ಅವರು ಮಾತನಾಡಿ, ಸೇವೆಯನ್ನು ಮಾಡಬೇಕು ಎಂದು ನಾವು ನಿಶ್ಚಯಿಸಿದಾಗ ಯಾವುದೇ ಕ್ಷೇತ್ರದಲ್ಲಿಯೂ ಅವಕಾಶವಿದೆ. ಗಂಗಾಧರ ಶೆಟ್ಟಿಯವರು ಸಾಮಾಜಿಕ ಮತ್ತು ರಾಜಕೀಯ ಕ್ಷೇತ್ರದ ಮೂಲಕ ಜನಸೇವೆ ಮಾಡುತ್ತಿದ್ದಾರೆ. ಇವರ ಸೇವೆ ದೇವರು ಮೆಚ್ಚುವ ಕೆಲಸವಾಗಿದೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಆಲಂಕಾರು ದುರ್ಗಾಂಬಾ ಲಯನ್ಸ್ ಕ್ಲಬ್ ಅಧ್ಯಕ್ಷ ಪ್ರಶಾಂತ ರೈ ಮನವಳಿಕೆಗುತ್ತು ಅವರು ಮಾತನಾಡಿ, ಲಯನ್ಸ್ ಕ್ಲಬ್ ಸೇವೆಯಲ್ಲಿ ಉನ್ನತ ಸ್ಥಾನ ಪಡೆದಿದೆ. ಈ ವರ್ಷದಲ್ಲಿ ಕಣ್ಣಿನ ಶಿಬಿರಗಳು, ಆರೋಗ್ಯ ಶಿಬಿರಗಳು ಸೇರಿದಂತೆ ಬೇರೆ ಬೇರೆ ರೀತಿಯ ಸಾಮಾಜಿಕ ಸೇವಾ ಕಾರ್ಯಗಳು ನಮ್ಮ ಕ್ಲಬ್ ಮೂಲಕ ನಡೆದಿದೆ. ಗಂಗಾಧರ ಶೆಟ್ಟಿಯವರು ನಮ್ಮ ಸಂಸ್ಥೆಯ ಜೊತೆಗೂಡಿ ಅನೇಕ ಶಿಬಿರಗಳನ್ನು ಸಂಘಟಿಸಿದ್ದಾರೆ. ಅವರ ಪ್ರಾಮಾಣಿಕವಾದ ಜನ ಸೇವೆ ಶ್ಲಾಘನೀಯವಾಗಿದೆ. ಈ ಶಿಬಿರದಲ್ಲಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳನ್ನು ಅರ್ಪಿಸುತ್ತಿದ್ದೇನೆ ಎಂದರು.
ನೇತ್ರಾಧಿಕಾರಿ ಡಾ. ಶಾಂತರಾಜ್, ಮುಖ್ಯ ಅತಿಥಿಯಾಗಿದ್ದ ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಶಿಶಿರ ಅವರು ಕಣ್ಣಿನ ಆರೋಗ್ಯದ ಬಗ್ಗೆ ಮಾಹಿತಿ ನೀಡಿದರು.

ಆನಂದಾಶ್ರಮ ಸೇವಾ ಟ್ರಸ್ಟ್‌ನ ಅಧ್ಯಕ್ಷೆ ಡಾ.ಗೌರಿ ಪೈ, ನೆಲ್ಯಾಡಿ ಗ್ರಾ.ಪಂ.ಅಧ್ಯಕ್ಷ ಸಲಾಂ ಬಿಲಾಲ್, ನೆಲ್ಯಾಡಿ ಜೆಸಿಐ ಅಧ್ಯಕ್ಷ, ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಯಾಕರ ರೈ ಮುಂಡಾಲಗುತ್ತು, ಪಡುಬೆಟ್ಟು ಶಾಲಾ ಮುಖ್ಯಗುರು ಜೆಸ್ಸಿ, ಎಸ್‌ಡಿಎಂಸಿ ಅಧ್ಯಕ್ಷ ಶಿವಪ್ರಸಾದ್, ನೋಟರಿ ವಕೀಲ ಸುಂದರ ಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದರು. 50ನೇ ಶಿಬಿರದ ಸಂಘಟಕ, ನೆಲ್ಯಾಡಿ ಗ್ರಾ.ಪಂ.ಮಾಜಿ ಅಧ್ಯಕ್ಷ ಗಂಗಾಧರ ಶೆಟ್ಟಿ ಹೊಸಮನೆ ಅವರು ಸ್ವಾಗತಿಸಿ, ನಿರೂಪಿಸಿದರು. ಜೆಸಿಐ ಅಧ್ಯಕ್ಷ ದಯಾಕರ ರೈ ಮುಂಡಾಲಗುತ್ತು ವಂದಿಸಿದರು.
ಶಿಬಿರದಲ್ಲಿ 150ಕ್ಕೂ ಮಿಕ್ಕಿ ಸಾರ್ವಜನಿಕರು ತಪಾಸಣೆಯನ್ನು ಮಾಡಿಸಿಕೊಂಡರು. 120ಕ್ಕೂ ಮಿಕ್ಕಿ ಉಚಿತ ಕನ್ನಡಕಗಳನ್ನು ಆನಂದಾಶ್ರಮ ಸೇವಾ ಟ್ರಸ್ಟ್‌ನ ಮೂಲಕ ವಿತರಿಸಲಾಯಿತು. ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗಾಗಿ 8 ಜನರನ್ನು ವೆನ್‌ಲಾಕ್ ಆಸ್ಪತ್ರೆಗೆ ಶಿಫಾರಸು ಮಾಡಲಾಯಿತು. ಶಿಬಿರದಲ್ಲಿ ಶಾಲಾ ಮಕ್ಕಳನ್ನು ನೇತ್ರ ತಪಾಸಣೆಗೆ ಒಳಪಡಿಸಲಾಯಿತು.

ಸನ್ಮಾನ:
ಗಂಗಾಧರ ಶೆಟ್ಟಿಯವರ ನೇತೃತ್ವದಲ್ಲಿ ಈ ತನಕ ನಡೆದ 50 ಶಿಬಿರಗಳಲ್ಲಿ ಭಾಗವಹಿಸಿ ಉಚಿತ ಕನ್ನಡಕ ವಿತರಣೆ ಮಾಡಿ ಪ್ರೋತ್ಸಾಹ ನೀಡಿದ ಪುತ್ತೂರು ಆನಂದಾಶ್ರಮ ಸೇವಾ ಟ್ರಸ್ಟ್‌ನ ಅಧ್ಯಕ್ಷೆ ಡಾ. ಗೌರಿ ಪೈ, ನೇತ್ರ ಪರಿವೀಕ್ಷಕರಾದ ಡಾ. ಶಾಂತರಾಜ್, ಡಾ. ಅನಿಲ್ ರಾಮಾನುಜಂ, ಖ್ಯಾತ ಕ್ಯಾನ್ಸರ್ ತಜ್ಞ ಡಾ. ರಘು ಬೆಳ್ಳಿಪ್ಪಾಡಿ, ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರಗಳಲ್ಲಿ ವಿಶೇಷ ಸೇವೆ ಸಲ್ಲಿಸಿದ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಕೃಷ್ಣಶೆಟ್ಟಿ ಕಡಬ, ಕ್ಷೇತ್ರದ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡ ಜಿ.ಕೃಷ್ಣಪ್ಪ ಅವರು ಸನ್ಮಾನಿಸಲಾಯಿತು.

LEAVE A REPLY

Please enter your comment!
Please enter your name here