ಕುಕ್ಕೆಶ್ರೀ ಸುಬ್ರಹ್ಮಣ್ಯದಲ್ಲಿ ವಾರ್ಷಿಕ ಚಂಪಾ ಷಷ್ಟಿ ಮಹೋತ್ಸವ – ಸಿದ್ದತೆಯ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ 

0

ಸುಬ್ರಹ್ಮಣ್ಯ:  ಕುಕ್ಕೆಶ್ರೀ ಸುಬ್ರಹ್ಮಣ್ಯದಲ್ಲಿ ವಾರ್ಷಿಕ ಚಂಪಾ ಷಷ್ಟಿ ಮಹೋತ್ಸವ ಡಿ.5ರಂದು ಮೂಲಮೃತಿಕ ಪ್ರಸಾದ ತೆಗೆದು ವಿತರಣೆ ಆಗುವುದರೊಂದಿಗೆ ಆರಂಭವಾಗಿ ಡಿ.24ರಂದು ಕೊಪ್ಪರಿಗೆ ಇಳಿಯುವ ಮೂಲಕ ರಾತ್ರಿ ನೀರು ಬಂಡಿ ಉತ್ಸವ ಹಾಗೂ ದೈವಗಳ ನಡಾವಳಿ ನಡೆದು ಜಾತ್ರೆ ಸಂಪನ್ನಗೊಳ್ಳಲಿದೆ ಎಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಮೋಹನ್‌ ರಾಮ್ ಸುಳ್ಳಿ ತಿಳಿಸಿದ್ದಾರೆ.
ಅವರು ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ  ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಈ ಬಾರಿ ಜಾತ್ರೋತ್ಸವಕ್ಕೆ ಹೊರೆ ಕಾಣಿಕೆ ಸಲ್ಲಿಸುವ ಬಗ್ಗೆ ಸುಳ್ಯ ಪುತ್ತೂರು ಹಾಗೂ ಕಡಬ ತಾಲೂಕಿನ ಹೆಚ್ಚಿನ  ದೇವಸ್ಥಾನಗಳಿಗೆ ಸುತ್ತೋಲೆ ಕಳಿಸಿದ್ದೇವೆ ಹಾಗೂ ಹೊರೆ ಕಾಣಿಕೆ ತರುವ ದಿನ ಕೂಡ ನಿಗದಿಪಡಿಸಲಾಗಿದೆ ಅಲ್ಲದೆ ಸ್ಥಳೀಯ ಸಾರ್ವಜನಿಕರಿಗೆ ಕೂಡ ಹೊರೆ ಕಾಣಿಕೆ ಸಮರ್ಪಿಸಲು ಕಾಣಿಕೆಗೆ ಅವಕಾಶ ನೀಡಲಾಗುವುದು ಎಂದು ತಿಳಿಸಿದರು.  ಈ ಬಾರಿ ಜಾತ್ರೋತ್ಸವದಲ್ಲಿ ಸೇವೆ ಸಲ್ಲಿಸಲು ಸ್ಥಳೀಯ ಶಾಲಾ ಕಾಲೇಜುಗಳಲ್ಲದೆ 1035 ಸ್ವಯಂಸೇವಕರ ಅರ್ಜಿ ಕೂಡ ಬಂದಿರುತ್ತದೆ. ಎಲ್ಲೆಲ್ಲಿ ಸ್ವಯಂಸೇವಕರನ್ನು ನಿಯೋಜನೆ ಮಾಡಬೇಕೆಂದು ಪರಿಶೀಲಿಸಿ ಅವಕಾಶವನ್ನು ನೀಡಲಾಗುವುದು. 

ಹಸಿರು ಪಟಾಕಿ
ಈ ಬಾರಿ ಉತ್ಸವಕ್ಕೆ ಹಸಿರು ಪಟಾಕಿ ಸಿಡಿಮದ್ದನ್ನೇ ಬಳಸಲಾಗುವುದೆಂದು ಜಿಲ್ಲಾಧಿಕಾರಿಯವರು ಈ ಹಿಂದಿನ ಸಭೆಯಲ್ಲಿ ತಿಳಿಸಿದ್ದು, ಅದೇ ರೀತಿ ಈಗಾಗಲೇ ಟೆಂಡ‌ರ್ ಕೂಡ ಕರೆಯಲಾಗಿದೆ. ಈ ಸಲ ಲಕ್ಷ ದೀಪೋತ್ಸವದಂದು ಒಂದು ಲಕ್ಷ ಹಣತೆಗಳನ್ನು ಉರಿಸುವ ಬಗ್ಗೆ ಸಿದ್ಧತೆಗಳು ನಡೆಯುತ್ತಿದ್ದು, ಆ ದಿನ ಕುಣಿತ ಭಜನೆ ಕೂಡ ನಡೆಯುತ್ತದೆ. ಈಗಾಗಲೇ 139 ತಂಡಗಳು ಭಾಗವಹಿಸುವುದಾಗಿ ತಮ್ಮ ಹೆಸರನ್ನು ನೋಂದಾಯಿಸಿದೆ. ನಮ್ಮ ಯೋಜನೆ ಸುಮಾರು 200 ತಂಡಗಳು ಬರಬಹುದೆಂದು ಬಂದಎಲ್ಲಾ ತಂಡಗಳಿಗೂ ಅವಕಾಶ ಕಲ್ಪಿಸಲಾಗುವುದು ಎಂದು ಅವರು ತಿಳಿಸಿದರು. 

ವ್ಯವಸ್ಥಿತ ಪಾರ್ಕಿಂಗ್ 
ಈ ಬಾರಿ ವಾಹನ ಪಾರ್ಕಿಂಗ್ ಬಗ್ಗೆ ವ್ಯವಸ್ಥಿತವಾಗಿ ಮಾಡಬೇಕೆಂದು ನಮ್ಮ ಆಲೋಚನೆ ಇದೆ ಆ ಬಗ್ಗೆ ಈಗಾಗಲೇ ಸ್ಥಳೀಯ ಪೊಲೀಸ್‌ ಠಾಣೆಯ ಉಪನಿರೀಕ್ಷಕರನ್ನು ಕೂಡ ಮಾತನಾಡಿಸಿದ್ದೇವೆ. ಎಲ್ಲೆಲ್ಲಿ ಘನ ವಾಹನಗಳು ,ಲಘುವಾಹನಗಳು ,ದ್ವಿಚಕ್ರ ವಾಹನಗಳನ್ನು ಪಾರ್ಕಿಂಗ್ ಮಾಡಬೇಕೆಂದು ಅವರು ನಿರ್ಧರಿಸಿ ಕ್ರಮ ಕೈಗೊಳ್ಳಲಿರುವರು. ಅಲ್ಲದೆ ಅಲ್ಲಲ್ಲಿ ಪ್ಲೆಕ್ಸ್ ಗಳನ್ನ ಹಾಕಿ ಮಾಹಿತಿಗಳನ್ನ ನೀಡುವ ಬಗ್ಗೆ ಕೂಡ ಕ್ರಮ ವಹಿಸಲಾಗುವುದು. ಎಲ್ಲೆಲ್ಲಿ ಲಾಡ್ಜಿಂಗ್ ವ್ಯವಸ್ಥೆ ಇದೆ ಶೌಚಾಲಯ ವ್ಯವಸ್ಥೆ, ವಸತಿಗೃಹ ದ ಬಗ್ಗೆ ಅಲ್ಲಲ್ಲಿ ಪ್ಲೆಕ್ಸ್ ಮೂಲಕ ಮಾಹಿತಿ ನೀಡುವ  ವ್ಯವಸ್ಥೆ ಮಾಡಲಾಗಿದೆ ಎಂದರು.

ಪಂಚಮಿ ದಿನದಂದು ನಾಲ್ಕು ಚಕ್ರದ ವಾಹನಗಳು ಕುಮಾರದಾರ ದ್ವಾರದಿಂದ ಮುಂದೆ ಬರಬೇಕಾದರೆ ಪಾಸುಗಳನ್ನು ತೋರಿಸಬೇಕಾಗುತ್ತದೆ. ಭಕ್ತಾದಿಗಳಿಗೆ ಶೌಚಾಲಯ ವ್ಯವಸ್ಥೆ ಹಾಗೂ ಆರೋಗ್ಯ ಚಿಕಿತ್ಸಾ ವ್ಯವಸ್ಥೆಯನ್ನು 24 ಗಂಟೆಯೂ  ನೀಡುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ವ್ಯವಸ್ಥಾಪನ ಸಮಿತಿಯ ಸದಸ್ಯರಾದ ಪ್ರಸನ್ನ ದರ್ಬೆ, ವನಜ ವಿ ಭಟ್, ಶೋಭಾ ಗಿರಿಧರ್ ಹಾಗೂ ಲೋಕೇಶ್ ಮುಂಡೋಕಜೆ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here