ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಲಕ್ಷ ದೀಪೋತ್ಸವ

0

ಭಜನಾ ಸತ್ಸಂಗ,ರಂಗೋಲಿ, ಹಣತೆ ಬೆಳಕಿನಿಂದ ಕಂಗೊಳಿಸಿದ ರಥಬೀದಿ

ಪುತ್ತೂರು:ಮಹತೋಭಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಲಕ್ಷ ದೀಪೋತ್ಸವವು ಡಿ.12ರಂದು ದೇವಳದ ತಂತ್ರಿ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಯವರ ನೇತೃತ್ವದಲ್ಲಿ ಸಂಪ್ರದಾಯದಂತೆ ಶ್ರೀ ದೇವರ ಉತ್ಸವಗಳೊಂದಿಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಸಂಯೋಜನೆಯೊಂದಿಗೆ ವೈಭವದಿಂದ ನಡೆಯಿತು.

ಬೆಳಿಗ್ಗೆ ಲಕ್ಷ ಬಿಲ್ವಾರ್ಚನೆ, ರಾತ್ರಿ ದೇವಳದ ರಥ ಬೀದಿಯುದ್ದಕ್ಕೂ ಹಣತೆ ಬೆಳಕು ಕಂಗೊಳಿಸಿತು.ರಥ ಬೀದಿಯ ಉದ್ದಕ್ಕೂ ರಂಗೋಲಿ.ಅದರ ಮೇಲೆ ಹಣತೆಯ ಬೆಳಕು ಪ್ರಜ್ವಲಿಸುತ್ತಿತ್ತು.ಪಕ್ಕದಲ್ಲಿ ಭಜನಾ ಸತ್ಸಂಗ ಕಾರ್ಯಕ್ರಮ ನಡೆಯಿತು. ದೀಪ ಪ್ರಜ್ವಲನೆ ಬಳಿಕ ಶ್ರೀ ದೇವರ ಬಲಿ ಉತ್ಸವ, ಬಂಡಿ ಉತ್ಸವ, ತೆಪ್ಪೋತ್ಸವ ನಡೆಯಿತು.


ಬೆಳಿಗ್ಗೆ ಲಕ್ಷ ಬಿಲ್ವಾರ್ಚನೆ ನಡೆದ ಬಳಿಕ ಸಂಜೆ ಪ್ರಮುಖವಾಗಿ ಧಾರ್ಮಿಕ ಶಿಕ್ಷಣ ಯೋಜನೆಯ ವಿದ್ಯಾರ್ಥಿಗಳಿಂದ ಶ್ರೀ ಮಹಾಲಿಂಗೇಶ್ವರ ದೇವರಿಗೆ ದೀಪ ನಮನ ಹಾಗೂ ಧಾರ್ಮಿಕ ಸತ್ಸಂಗ ಶ್ಲೋಕ, ಭಜನೆ ನಡೆಯಿತು.ಆ ಬಳಿಕ ದೇವಳದ ಗೋಪುರದಲ್ಲಿ ಮಂಗಳೂರು ಕದ್ರಿ ಮಂಜುನಾಥ ದೇವಸ್ಥಾನದ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ನಡೆಯಿತು.

ಇದೇ ಸಂದರ್ಭದಲ್ಲಿ ದೇವಳದ ರಥ ಬೀದಿಯಲ್ಲಿ ಕಂಗೊಳಿಸಿದ ವರ್ಣರಂಜಿತ ರಂಗೋಲಿಗಳ ಮೇಲೆ ಹಣತೆಯನ್ನು ಇಟ್ಟು ದೀಪ ಪ್ರಜ್ವಲನೆ ನಡೆಯಿತು.ಬ್ರಹ್ಮಶ್ರೀ ವೇ.ಮೂ.ಗುರು ತಂತ್ರಿಯವರು ರಥ ಬೀದಿಯಲ್ಲಿ ಬಾಳೆದಿಂಡಿನ ಧಳಿಯಲ್ಲಿರಿಸಿದ ಹಣತೆಗೆ ದೀಪ ಪ್ರಜ್ವಲನೆ ಮೂಲಕ ಲಕ್ಷ ದೀಪೋತ್ಸವಕ್ಕೆ ಚಾಲನೆ ನೀಡಿದರು. ಬಳಿಕ ದೇವಳದ ಪ್ರಧಾನ ಅರ್ಚಕ ವೇ.ಮೂ.ವಸಂತ ಕೆದಿಲಾಯ, ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ, ಸದಸ್ಯರಾದ ಶೇಖರ್ ನಾರಾವಿ, ಬಿ.ಐತ್ತಪ್ಪ ನಾಯ್ಕ್, ಡಾ.ಸುಧಾ ಎಸ್.ರಾವ್, ರವೀಂದ್ರನಾಥ ರೈ ಬಳ್ಳಮಜಲು, ರಾಮಚಂದ್ರ ಕಾಮತ್, ರಾಮದಾಸ್ ಗೌಡ, ಬಿ.ಕೆ.ವೀಣಾ, ಕಾರ್ಯನಿರ್ವಹಣಾಽಕಾರಿ ಕೆ.ವಿ.ಶ್ರೀನಿವಾಸ್, ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ ಅವರು ದೀಪ ಪ್ರಜ್ವಲಿಸಿದರು.ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರು ಮತ್ತು ಪ್ರಧಾನ ಅರ್ಚಕರೂ ಆಗಿರುವ ವೇ.ಮೂ.ವಿ.ಎಸ್ ಭಟ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಉದ್ಯಮಿ ಸೀತಾರಾಮ ರೈ ಕೆದಂಬಾಡಿಗುತ್ತು ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.ರಥ ಬೀದಿಯುದಕ್ಕೂ ಭಕ್ತರು ಹಣತೆ ಬೆಳಗಿಸಿದರು.ಎಣ್ಣೆ ಮತ್ತು ಬತ್ತಿಯನ್ನು ದೇವಳದ ವತಿಯಿಂದ ನೀಡಲಾಗಿತ್ತು.ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದಿಂದ ಕಡಿಮೆ ದರದಲ್ಲಿ ಹಣತೆ ವಿತರಣೆ ನಡೆಯಿತು.ದೇವಳದ ನಿತ್ಯ ಕರಸೇವಕರು ರಥ ಬೀದಿಯಲ್ಲಿ ಹಣತೆ ಬೆಳಗಿಸುವ ಕಾರ್ಯಕ್ಕೆ ಸಹಕಾರ ನೀಡಿದರು. ಪರಿಚಾರಕರು ಸಂಪ್ರದಾಯ ಉತ್ಸವದ ಕಾರ್ಯದಲ್ಲಿ ಭಾಗಿಯಾಗಿದ್ದರು.

ಶ್ರೀ ದೇವರ ಬಲಿ ಉತ್ಸವ,
ಚಂದ್ರಮಂಡಲ,ತೆಪ್ಪೋತ್ಸವ
ರಾತ್ರಿ ಗಂಟೆ 7.30ಕ್ಕೆ ದೇವರ ಪೂಜೆಯ ಬಳಿಕ ದೇವರ ಉತ್ಸವ ಬಲಿ ಹೊರಟು, ಒಳಾಂಗಣ ಹಾಗೂ ಹೊರಾಂಗಣದಲ್ಲಿ ತಂತ್ರ ಸುತ್ತು, ರಾಜಾಂಗಣದಲ್ಲಿ ಉಡಿಕೆ ಸುತ್ತು, ಚೆಂಡೆ ಸುತ್ತು ನಡೆಯಿತು.ಬಳಿಕ ಖಂಡನಾಯಕನ ಕಟ್ಟೆಯಲ್ಲಿ ಕಟ್ಟೆ ಪೂಜೆಯ ಬಳಿಕ ವಾದ್ಯ, ಭಜನೆ, ಬ್ಯಾಂಡ್, ಸರ್ವವಾದ್ಯ ಸುತ್ತುಗಳು ನಡೆದು ಚಂದ್ರಮಂಡಲ ಉತ್ಸವ ಮತ್ತು ತೆಪ್ಪೋತ್ಸವ ನಡೆಯಿತು.

LEAVE A REPLY

Please enter your comment!
Please enter your name here