ಕೋಡಿಂಬಾಡಿ ಗ್ರಾ.ಪಂ.ನಲ್ಲಿ ವರ್ತಕರ ಸಭೆ – ಸ್ವಚ್ಛತೆ, ಪರವಾನಿಗೆ ನವೀಕರಣದ ಚರ್ಚೆ

0

ಉಪ್ಪಿನಂಗಡಿ: ಕೋಡಿಂಬಾಡಿ ಗ್ರಾ.ಪಂ.ನಲ್ಲಿ ವರ್ತಕರ ಸಭೆ ನಡೆದು, ಸ್ವಚ್ಛತಾ ಅಭಿಯಾನ, ಪರವಾನಿಗೆ ನವೀಕರಣಕ್ಕೆ ಸಹಕಾರ ನೀಡುವಂತೆ ಮನವಿ ಮಾಡಲಾಯಿತು.
ಗ್ರಾ.ಪಂ. ಅಧ್ಯಕ್ಷೆ ಮಲ್ಲಿಕಾ ಅವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ. ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಗ್ರಾ.ಪಂ.ನ ಪ್ರಭಾರ ಅಭಿವೃದ್ಧಿ ಅಧಿಕಾರಿ ವಿಲ್ಫ್ರೆಡ್ ಲಾರೆನ್ಸ್ ರೊಡ್ರಿಗಸ್ ಮಾತನಾಡಿ, ಕೋಡಿಂಬಾಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಪೇಟೆಯ ವ್ಯಾಪ್ತಿಯಲ್ಲಿ ವಾರಕ್ಕೊಮ್ಮೆ ತ್ಯಾಜ್ಯ ಸಂಗ್ರಹದ ವಾಹನವನ್ನು ಕಳುಹಿಸಲಾಗುವುದು. ಒಣ ಕಸವನ್ನು ವರ್ತಕರು ಇದಕ್ಕೆ ನೀಡಿ ಸಹಕಾರ ನೀಡಬೇಕು. ಒಣ ಕಸವನ್ನು ಸಂಗ್ರಹಿಸಿಡಲು ಗ್ರಾ.ಪಂ. ವತಿಯಿಂದಲೇ ಗೋಣಿ ಚೀಲ ನೀಡಲಾಗುವುದು. ಇದಕ್ಕಾಗಿ ಪ್ರತಿ ತಿಂಗಳು 1೦೦ ರೂಪಾಯಿ ಶುಲ್ಕ ಪಾವತಿಸಬೇಕು ಎಂದರು. ಇದಕ್ಕೆ ಕೆಲವು ವರ್ತಕರು ಆಕ್ಷೇಪ ವ್ಯಕ್ತಪಡಿಸಿ ನಮ್ಮದು ಗ್ರಾಮಾಂತರ ಪ್ರದೇಶ. ಇಲ್ಲಿ ಹೆಚ್ಚಿನ ವ್ಯಾಪಾರವಿಲ್ಲ. ಕೆಲವರು ಸಣ್ಣ ಗೂಡಂಗಡಿಗಳನ್ನು ಇಟ್ಟು ವ್ಯಾಪಾರ ನಡೆಸುತ್ತಿದ್ದಾರೆ. ಆದ್ದರಿಂದ ತಿಂಗಳಿಗೆ 1೦೦ ರೂಪಾಯಿ ಶುಲ್ಕ ಪಾವತಿಸಲು ಸಾಧ್ಯವಿಲ್ಲ. ಇದನ್ನು ಕಡಿತ ಮಾಡಿ ಎಂಬ ಮಾತುಗಳು ವರ್ತಕರಿಂದ ಕೇಳಿಬಂತು. ಈ ಬಗ್ಗೆ ಚರ್ಚೆ ನಡೆದು ಈ ಬಗ್ಗೆ ಸಾಮಾನ್ಯ ಸಭೆಯಲ್ಲಿ ಚರ್ಚೆ ಮಾಡಿ ನಿರ್ಣಯ ತೆಗೆದುಕೊಳ್ಳಲು ತೀರ್ಮಾನಿಸಲಾಯಿತು. ಈ ಸಂದರ್ಭ ಗ್ರಾಮಸ್ಥ ನಿರಂಜನ ರೈ ಮಠಂತಬೆಟ್ಟು ಮಾತನಾಡಿ, ನಮ್ಮ ಪರಿಸರ ಸ್ವಚ್ಛವಿದ್ದಾಗ ಮಾತ್ರ ಊರು ಸ್ವಚ್ಛವಿರಲು ಸಾಧ್ಯ. ಆದ್ದರಿಂದ ಸ್ವಚ್ಛತೆಯ ಬಗ್ಗೆ ಎಲ್ಲರೂ ಜಾಗೃತರಾಗಬೇಕು. ತ್ಯಾಜ್ಯ ಸಂಗ್ರಹಕ್ಕೆ ಈಗ ಗ್ರಾ.ಪಂ. ಮುಂದಾಗಿರುವುದು ಶ್ಲಾಘನೀಯ ಎಂದರು.

ವ್ಯಾಪಾರ ಪರವಾನಿಗೆ ಬಗ್ಗೆ ಚರ್ಚೆ ನಡೆದಾಗ ಮಾತನಾಡಿ ವರ್ತಕ ಶೈಫುದ್ದೀನ್, ನಮ್ಮ ಅಡಿಕೆ ಗೋದಾಮಿಗೆ ಕೆಲದಿನಗಳ ಹಿಂದೆ ಏಕಾಏಕಿ ಬಂದ ಗ್ರಾ.ಪಂ. ಪಿಡಿಒ ಅವರು ವ್ಯಾಪಾರ ಪರವಾನಿಗೆ ನವೀಕರಸಿಲ್ಲ ಎಂದು ಗೋದಾಮಿನಲ್ಲಿದ್ದ ಕಾರ್ಮಿಕರನ್ನು ಹೊರಗೆ ಕಳುಹಿಸಿ, ಬಾಗಿಲು ಹಾಕಿದ್ದಾರೆ. ನಾವು ಈಗ ಊರಲಿಲ್ಲ. ಸಂಜೆ ಬಂದು ಕಟ್ಟುತ್ತೇವೆ ಎಂದರೂ ಪಿಡಿಒ ಅವರು ಕೇಳದೇ ಗೋದಾಮಿಗೆ ಬಾಗಿಲು ಹಾಕಿದ್ದಾರೆ. ಇದು ಸರಿಯಾದ ಕ್ರಮವಲ್ಲ. ಇದು ತಪ್ಪು ಎಂದರಲ್ಲದೆ, ಪರವಾನಿಗೆ ನವೀಕರಿಸದವರಿಗೆ ದಂಡ ಹಾಕವುದಾದರೆ ನೊಟೀಸ್ ನೀಡಿ ದಂಡ ಹಾಕಿ. ಆದರೆ ಅಂಗಡಿಯ ಬಾಗಿಲು ಹಾಕುವುದು ಯಾಕೆ ಎಂದು ಪ್ರಶ್ನಿಸಿದರು. ಇದನ್ನು ಬೆಂಬಿಲಿಸಿ ಮಾತನಾಡಿದ ವರ್ತಕ ವಿಷ್ಣು ಪ್ರಭು ಅವರು ಕೂಡಾ ದಂಡ ಹಾಕಿದ ಬಳಿಕ ಪರವಾನಿಗೆ ನವೀಕರಿಸಿ ಎಂದು ನೋಟೀಸ್ ನೀಡುವುದು ಯಾಕೆ? ನೊಟೀಸನ್ನು ಮೊದಲೇ ನೀಡಿ ಅದರಲ್ಲಿ ಕೊಟ್ಟಿರುವ ಏಳು ದಿನಗಳ ವಾಯಿದೆಯೊಳಗೆ ಕಟ್ಟದಿದ್ದಲ್ಲಿ ಕ್ರಮ ಕೈಗೊಳ್ಳಿ. ಎಲ್ಲದಕ್ಕೂ ಕಾನೂನು ಕಾನೂನು ಅಂತ ಹೇಳ್ಬೇಡಿ. ಕಾನೂನಿನಲ್ಲೂ ಮಾನವೀಯತೆ ತೋರಿಸಿ ಎಂದರು. ವರ್ತಕ ಚಂದ್ರಶೇಖರ್ ಮಾತನಾಡಿ, ವ್ಯಾಪಾರ ಪರವಾನಿಗೆ ಅವಧಿ ಮುಗಿಯುವಾಗ ನವೀಕರಿಸಲು ಗ್ರಾ.ಪಂ.ನಿಂದ ನೆನಪಿಸುವ ಕೆಲಸವಾಗಬೇಕು ಎಂದರು. ಈ ಸಂದರ್ಭ ಗ್ರಾ.ಪಂ. ಪಿಡಿಒ ಮಾತನಾಡಿ, ಅಡಿಕೆ ಗೋದಾಮಿನವರು ಮೊದಲು ಕಟ್ಟುತ್ತೇನೆ ಅಂದಿಲ್ಲ. ಅದಕ್ಕೆ ಬಾಗಿಲು ಹಾಕಿದ್ದು, ಮತ್ತೆ ಕೆಲಸಗಾರರನ್ನು ನಾನು ಹೊರಗೆ ಕಳಿಸಿಲ್ಲ. ಅವರೇ ಹೊರಗೆ ಬಂದದ್ದು ಎಂದರು. ಈ ಸಂದರ್ಭ ಶೈಫುದ್ದೀನ್ ಹಾಗೂ ಪಿಡಿಒ ಅವರಲ್ಲಿ ಪರಸ್ಪರ ಚರ್ಚೆಗಳಾಯಿತು. ಆಗ ಪಿಡಿಒ ಅವರು ಬಾಗಿಲು ಹಾಕಿದ್ದು ತಪ್ಪು ಅಂತ ಆದ್ರೆ ನನ್ನ ಮೇಲೆ ಕೇಸ್ ಮಾಡಿ ಎಂದರು. ಆಗ ಗ್ರಾ.ಪಂ. ಉಪಾಧ್ಯಕ್ಷ ಜಯಪ್ರಕಾಶ್ ಬದಿನಾರು ಮಧ್ಯಪ್ರವೇಶಿಸಿ, ಈ ವಿಚಾರ ನಡೆದು ಹೋಗಿದೆ. ಅದನ್ನು ಇಲ್ಲಿಗೆ ಬಿಟ್ಟು ಬಿಡೋಣ. ಪಿಡಿಒ ಅವರನ್ನು ನಾವು ಕಳುಹಿಸಿದಲ್ಲ. ಮೂರು ವರ್ಷಗಳಿಂದ ಪರವಾನಿಗೆ ನವೀಕರಿಸದ ವರ್ತಕರೋರ್ವರು ಪಂಚಾಯತ್‌ಗೆ ಬಂದು ಪರವಾನಿಗೆ ವಿಷಯದಲ್ಲಿ ಮಾತನಾಡುವಾಗ ನನ್ನ ಮೇಲೆ ಮಾತ್ರ ಕ್ರಮ. ಇತರರ ಮೇಲೆನೂ ಕ್ರಮ ತೆಗೆದುಕೊಳ್ಳಿ ಎಂದಿದ್ದಕ್ಕೆ ಪಿಡಿಒ ಅವರು ಹೋಗಿದ್ದು. ಅಂದು ಎರಡೂ ಕಡೆಗಳಿಂದಲೂ ತಪ್ಪುಗಳಾಗಿದೆ. ಅದಕ್ಕೆ ವರ್ತಕರ ಸಭೆಯಲ್ಲೇ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಸಭೆ ಕರೆದದ್ದು. ದಂಡ ಹಾಕಿರುವುದನ್ನೂ ಕೂಡಾ ಕಡಿಮೆ ಮಾಡೋಣ ಎಂದರು. ಪಿಡಿಒ ಅವರು ಮಾತನಾಡಿ, ಎಲ್ಲರೂ ಪರವಾನಿಗೆ ನವೀಕರಿಸಿಕೊಳ್ಳಬೇಕು. ಒಬ್ಬರಿಗೆ ಒಂದು ವರ್ಷಕ್ಕೆ ವ್ಯಾಪಾರ ಪರವಾನಿಗೆ ನೀಡಲಾಗುತ್ತಿದ್ದು, 11 ತಿಂಗಳು ಇರುವಾಗಲೇ ನವೀಕರಣಕ್ಕೆ ಅರ್ಜಿ ಸಲ್ಲಿಸಿ ಎಂದರು.
ಆಗ ವರ್ತಕರು ಮಾತನಾಡಿ, ಕಾನೂನನ್ನು ಅನುಷ್ಠಾನ ಮಾಡಿ. ಅದಕ್ಕೆ ನಮ್ಮದು ಬೆಂಬಲವಿದೆ. ಆದರೆ ಒಬ್ಬರು ತಪ್ಪು ಮಾಡಿದರು ಅಂತ ಅವರ ಮೇಲಿನ ಕೋಪಕ್ಕೆ ಇನ್ನೊಬ್ಬರ ಕೆನ್ನೆಗೆ ಬಾರಿಸುವುದು ಬೇಡ. ಕಾನೂನಿನಲ್ಲಿಯೂ ಮಾನವೀಯತೆ ತೋರಿಸಿ ಎಂದರು.
ವೇದಿಕೆಯಲ್ಲಿ ಗ್ರಾ.ಪಂ. ಸದಸ್ಯರಾದ ಜಗನ್ನಾಥ ಶೆಟ್ಟಿ, ರಾಮಚಂದ್ರ ಪೂಜಾರಿ, ರಾಮಣ್ಣ ಗೌಡ ಉಪಸ್ಥಿತರಿದ್ದರು. ಸಭೆಯಲ್ಲಿ ಬಾಬು ಗೌಡ, ಪ್ರೇಮಚಂದ್ರ, ಲತಾ, ನಾಗಲತಾ, ಗೀತಾ, ವೆಂಕಪ್ಪ ಕೆ., ಅದ್ರಾಮ, ಇಬ್ರಾಹೀಂ, ಅಶೋಕ್, ಇಬ್ರಾಹೀಂ, ಪುರುಷೋತ್ತಮ ಮತ್ತಿತರರು ಉಪಸ್ಥಿತರಿದ್ದರು. ಗ್ರಾ.ಪಂ. ಪಿಡಿಒ ವಿಲ್ಫ್ರೆಡ್ ಲಾರೆನ್ಸ್ ರೊಡ್ರಿಗಸ್ ಸ್ವಾಗತಿಸಿ, ವಂದಿಸಿದರು.

LEAVE A REPLY

Please enter your comment!
Please enter your name here