ನೇಜಾರಿನ ಒಂದೇ ಮನೆಯ ನಾಲ್ವರ ಬರ್ಬರ ಕೊಲೆ ಪ್ರಕರಣದ ತನಿಖೆಗೆ ಎಸ್‌ಪಿಪಿಯಾಗಿ ಶಿವಪ್ರಸಾದ್ ಆಳ್ವ ನಿಯೋಜನೆ

0

ಪುತ್ತೂರು:ಉಡುಪಿ ಜಿಲ್ಲೆಯ ಮಲ್ಪೆ ಸಮೀಪದ ನೇಜಾರಿನ ತೃಪ್ತಿನಗರದಲ್ಲಿ ಇತ್ತೀಚೆಗೆ ನಡೆದಿರುವ ಒಂದೇ ಮನೆಯ ನಾಲ್ವರ ಬರ್ಬರ ಕೊಲೆ ಪ್ರಕರಣದಲ್ಲಿ ಪ್ರಾಸಿಕ್ಯೂಶನ್ ಪರ ವಾದಿಸಲು ಮಂಗಳೂರು ವಲಯದ ಹಿರಿಯ ಕಾನೂನು ಅಧಿಕಾರಿ ಕೆ.ಶಿವಪ್ರಸಾದ್ ಆಳ್ವರವರನ್ನು ವಿಶೇಷ ಸರಕಾರಿ ಅಭಿಯೋಜಕರಾಗಿ ನಿಯೋಜನೆ ಮಾಡಲಾಗಿದೆ.
ನೇಜಾರಿನ ಮನೆಯಲ್ಲಿ ಹಸೀನಾ(51ವ), ಅವರ ಮಕ್ಕಳಾದ ಅಫ್ನಾನ್(23ವ), ಗಗನಸಖಿಯಾಗಿದ್ದ ಐನಾಜ್(21ವ) ಮತ್ತು ಆಸೀಮ್(13ವ)ರವರನ್ನು ಕೆಲ ದಿನಗಳ ಹಿಂದೆ ಕೊಲೆ ಮಾಡಲಾಗಿದೆ.ಪ್ರವೀಣ್ ಅರುಣ್ ಚೌಗುಲೆ ಎಂಬಾತ ಚೂರಿಯಿಂದ ಇರಿದು ಕೊಲೆ ಮಾಡಿರುವ ಆರೋಪಿಯಾಗಿದ್ದು ಆತನನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ.ಏರ್‌ಇAಡಿಯಾ ಎಕ್ಸ್ಪ್ರೆಸ್‌ನಲ್ಲಿ ಗಗನಸಖಿಯಾಗಿದ್ದ ಐನಾಜ್(21ವ)ರವರನ್ನು ಅದೇ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದ ಪ್ರವೀಣ್ ಅರುಣ್ ಚೌಗಲೆ(39ವ) ಎಂಬಾತ ಕೊಲೆ ಮಾಡಲೆಂದು ಅವರ ಮನೆಗೆ ರಿಕ್ಷಾದಲ್ಲಿ ಬಂದಿದ್ದ.ಅವರ ಮನೆಗೆ ನುಗ್ಗಿದವನೇ ಐನಾಜ್‌ಗೆ ಚೂರಿಯಿಂದ ಇರಿದಿದ್ದ.ಇದನ್ನು ತಡೆಯಲು ಬಂದಿದ್ದ ಹಸೀನಾ, ಅಫ್ನಾನ್ ಮತ್ತು ಆಸೀಮ್‌ರವರನ್ನೂ ಚೂರಿಯಿಂದ ಇರಿದು ಕೊಲೆ ಮಾಡಿದ್ದ ಎಂದು ಆರೋಪಿಸಲಾಗಿದೆ.ಕೇವಲ 20 ನಿಮಿಷಗಳ ಅಂತರದಲ್ಲಿ ಒಂದೇ ಚೂರಿಯಿಂದ ಇರಿದು ನಾಲ್ವರನ್ನು ಕೊಲೆ ಮಾಡಿ ಬಳಿಕ ಪ್ರವೀಣ್ ಅರುಣ್ ಚೌಗಲೆ ಪರಾರಿಯಾಗಿದ್ದ.ನಂತರ ಆತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.ಹೆಚ್ಚಿನ ವಿಚಾರಣೆಗಾಗಿ ನ್ಯಾಯಾಲಯ ಆತನನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಿತ್ತು. ಇದೀಗ ಆರೋಪಿ ನ್ಯಾಯಾಂಗ ಬಂಧನದಲ್ಲಿದ್ದಾನೆ.
ಒಂದೇ ಮನೆಯ ನಾಲ್ವರನ್ನು ಬರ್ಬರವಾಗಿ ಕೊಲೆ ಮಾಡಿರುವ ಈ ಘಟನೆ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು.ಹಂತಕನಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ವ್ಯಾಪಕ ಆಗ್ರಹವೂ ವ್ಯಕ್ತವಾಗಿದೆ.ತನ್ನ ಪತ್ನಿ ಮತ್ತು ಮಕ್ಕಳನ್ನು ಕಳೆದುಕೊಂಡಿರುವ, ವಿದೇಶದಲ್ಲಿ ಉದ್ಯೋಗಿಯಾಗಿದ್ದ ನೂರ್ ಮಹಮ್ಮದ್ ಅವರು ಈ ಕೊಲೆ ಪ್ರಕರಣದ ತನಿಖೆಯನ್ನು ತ್ವರಿತಗತಿಯಲ್ಲಿ ನ್ಯಾಯಾಲಯ ಆರಂಭಿಸಬೇಕು ಮತ್ತು ನಮಗೆ ನ್ಯಾಯ ಒದಗಿಸಿಕೊಡಲು ವಿಶೇಷ ಸರಕಾರಿ ಅಭಿಯೋಜಕರನ್ನಾಗಿ ಕೆ.ಶಿವಪ್ರಸಾದ್ ಆಳ್ವರವರನ್ನು ನೇಮಕ ಮಾಡಬೇಕು ಎಂದು ತಮ್ಮ ಮನೆಗೆ ಭೇಟಿ ನೀಡಿದ್ದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಮನವಿ ಮಾಡಿದ್ದರು.ಸರಕಾರಕ್ಕೂ ಈ ಕುರಿತು ಅವರು ಮನವಿ ಸಲ್ಲಿಸಿದ್ದರು.ಇದೀಗ, ಈ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯಗಳಲ್ಲಿ ಸರಕಾರದ ಪರವಾಗಿ ಹಾಜರಾಗಲು ಮತ್ತು ಪ್ರಕರಣವನ್ನು ನಡೆಸಲು ವಿಶೇಷ ಸರಕಾರಿ ಅಭಿಯೋಜಕರಾಗಿ ಮಂಗಳೂರು ವಲಯದ ಹಿರಿಯ ಕಾನೂನು ಅಧಿಕಾರಿಯಾಗಿರುವ ಶಿವಪ್ರಸಾದ್ ಆಳ್ವ ಅವರನ್ನು ನಿಯೋಜಿಸಿ ಸರ್ಕಾರದ ಒಳಾಡಳಿತ ಇಲಾಖೆ(ಪೊಲೀಸ್ ಸೇವೆಗಳು-ಬಿ)ಯ ಅಧೀನ ಕಾರ್ಯದರ್ಶಿ ಜಿ.ಶ್ಯಾಮ ಹೊಳ್ಳ ಅವರು ಆದೇಶ ಮಾಡಿದ್ದಾರೆ.
ಪುತ್ತೂರು ದರ್ಬೆ ಕಾವೇರಿಕಟ್ಟೆ ನಿವಾಸಿಯಾಗಿದ್ದು ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಮತ್ತು ಕಾರವಾರ ಜಿಲ್ಲೆಯನ್ನು ಒಳಗೊಂಡ ಮಂಗಳೂರು ವಲಯದ ಹಿರಿಯ ಕಾನೂನು ಅಧಿಕಾರಿಯಾಗಿರುವ ಮತ್ತು ಹಲವು ಪ್ರಮುಖ ಪ್ರಕರಣಗಳಲ್ಲಿ ವಿಶೇಷ ಸರಕಾರಿ ಅಭಿಯೋಜಕರಾಗಿ ಕಾರ್ಯನಿರ್ವಹಿಸಿರುವ ಕೆ.ಶಿವಪ್ರಸಾದ್ ಆಳ್ವ ಅವರು ಹಲವು ಪ್ರಕರಣಗಳಲ್ಲಿ ಅಪರಾಧಿಗಳಿಗೆ ಶಿಕ್ಷೆ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

LEAVE A REPLY

Please enter your comment!
Please enter your name here