ಬಡವರಿಗೆ ಕೈಗೆಟಕುವ ದರದಲ್ಲಿ ದೇಶದೆಲ್ಲೆಡೆ ಜನೌಷಧಿ ಕೇಂದ್ರ ತೆರೆಯಲಾಗಿದೆ-ಬನ್ನೂರಿನ ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಕೇಂದ್ರ ಲೋಕಾರ್ಪಣೆಯಲ್ಲಿ ಸಂಸದ ನಳಿನ್

0

ಪುತ್ತೂರು: ಬಡವರಿಗೆ ಕಡಿಮೆ ದರದಲ್ಲಿ ಆರೋಗ್ಯ ವ್ಯವಸ್ಥೆ ಕಲ್ಪಿಸಲು ಕೇಂದ್ರದ ಮೋದಿ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಜೊತೆಗೆ ಬಡವರಿಗೆ ಕೈಗೆಟಕುವ ದರದಲ್ಲಿ ದೇಶದೆಲ್ಲೆಡೆ ಜನೌಷಧಿ ಕೇಂದ್ರ ತೆರೆಯಲಾಗಿದೆ ಎಂದು ಮಂಗಳೂರು ಲೋಕಸಭಾ ಸಂಸದ ನಳಿನ್ ಕುಮಾರ್ ಕಟೀಲುರವರು ಹೇಳಿದರು.


ಬನ್ನೂರಿನ ಆರ್.ಟಿ.ಓ ಆಫೀಸ್ ಬಳಿ ಇತ್ತೀಚೆಗೆ ಪುತ್ತೂರಿನಲ್ಲಿ ಹೊಸದಾಗಿ ತೆರೆದಿರುವ ಎಂಟನೇ ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಕೇಂದ್ರವನ್ನು ಅವರು ದೀಪ ಬೆಳಗಿಸಿ, ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ರಾಜ್ಯ ಸರ್ಕಾರದ ಖಾತರಿಗಳು ಎಷ್ಟು ಸಮಯ ಎಂದು ಯಾರಿಗೂ ತಿಳಿದಿಲ್ಲ. ಆದರೆ ಪ್ರಧಾನಿ ಮೋದಿಯವರು ಕರೋನಾ ಸಮಯದಲ್ಲಿ ಎಲ್ಲಾ ನಾಗರಿಕರಿಗೆ ಉಚಿತ ಲಸಿಕೆಗಳನ್ನು ನೀಡಿದ್ದಾರೆ. ಜನೌಷಧಿ ಕೇಂದ್ರದಲ್ಲಿ 1800 ಗುಣಮಟ್ಟದ ಔಷಧಗಳು, 285 ಶಸ್ತ್ರಚಿಕಿತ್ಸಾ ಉಪಕರಣಗಳನ್ನು ಈ ಕೇಂದ್ರಗಳಿಂದ ಶೇ.70ರಿಂದ 90ರಷ್ಟು ಕಡಿಮೆಗೆ ವಿತರಿಸಲಾಗುತ್ತಿದೆ ಎಂದರು.


21 ಸಾವಿರ ಸ್ಯಾನಿಟರಿ ನ್ಯಾಪ್ಕಿನ್ಸ್‌ಗಳ ಉಚಿತ ವಿತರಣೆ:
ಬನ್ನೂರಿನ ಜನೌಷಧಿ ಕೇಂದ್ರವನ್ನು ಪ್ರಾರಂಭಿಸುವ ಒಂದು ತಿಂಗಳಿನ ಮುಂಚಿತವಾಗಿ ಈ ಯೋಜನೆಯನ್ನು ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ತಲುಪಿಸುವಲ್ಲಿ ಸಹಕಾರ ನೀಡಿದ ಸುತ್ತಮುತ್ತಲಿನ ಶಾಲಾ ಕಾಲೇಜು ಯುವಕ ಹಾಗೂ ಯುವತಿ ಮಂಡಲ, ಸ್ವ-ಸಹಾಯ ಗುಂಪುಗಳಿಗೆ ಈ ಯೋಜನೆಯ ಬಗೆಗೆ ಸಂಪೂರ್ಣ ಮಾಹಿತಿಯನ್ನು ನೀಡಿ 21,000 ಸ್ಯಾನಿಟರಿ ನ್ಯಾಪ್ಕಿನ್ಸ್‌ಗಳನ್ನು ಉಚಿತವಾಗಿ ವಿತರಿಸಲಾಗಿತ್ತು.


33 ಸರಣಿ ಮಾಹಿತಿ ಕಾರ್ಯಾಗಾರಗಳು:
ಈ ಜನ ಔಷಧಿ ಕೇಂದ್ರದ ವತಿಯಿಂದ ಈ ಯೋಜನೆಯ ಬಗೆಗೆ ಜನಸಾಮಾನ್ಯರಿಗೆ ಸಂಪೂರ್ಣ ಮಾಹಿತಿಯನ್ನು ನೀಡುವ ಉದ್ದೇಶದಿಂದ ಸಮುದಾಯ ಆರೋಗ್ಯ ಸಹಾಯಕಿಯರಿಗೆ, ಆಶಾ ಕಾರ್ಯಕರ್ತೆಯರಿಗೆ, ಅಂಗನವಾಡಿ ಕಾರ್ಯಕರ್ತೆಯರಿಗೆ, ಶಾಲಾ ಕಾಲೇಜುಗಳಿಗೆ, ಯುವಕ -ಯುವತಿ ಹಾಗೂ ಮಹಿಳಾಮಂಡಲಗಳಿಗೆ 33 ಸರಣಿ ಮಾಹಿತಿ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲಾಗಿತ್ತು.


ಸಂಸದರಿಂದ ಅಭಿನಂದನಾ ಪತ್ರದ ವಿತರಣೆ:
ಈ ಮಹತ್ಕಾರ್ಯದಲ್ಲಿ ಅತ್ಯಂತ ಪ್ರಮುಖ ಭೂಮಿಕೆಯನ್ನು ನಿಭಾಯಿಸಿದ ಆಶಾ ಕಾರ್ಯಕರ್ತೆಯರಾದ ಶ್ರೀಮತಿ ಶಶಿಕಲಾ ಬನ್ನೂರು ಕಟ್ಟೆ, ಪುತ್ತೂರು, ಶ್ರೀಮತಿ ಸುಜಾತಾ ಡಿ.ಎಸ್. ಹಾರಾಡಿ ಪಡಿಲ್, ಶ್ರೀಮತಿ ತುಳಸಿ ಕೃಷ್ಣನಗರ, ಶ್ರೀಮತಿ ಸುಮಿತ್ರ ಪಡ್ಡಾಯೂರು, ಕಿರಿಯ ಆರೋಗ್ಯ ಸಹಾಯಕಿ ಶ್ರೀಮತಿ ಮೀನಾಕ್ಷಿ ಎಸ್ ಬನ್ನೂರು, ಅಂಗನವಾಡಿನ ಕಾರ್ಯಕರ್ತೆಯರಾದ ಶ್ರೀಮತಿ ವನಿತಾ ಬನ್ನೂರು ಕಟ್ಟೆ, ಶ್ರೀಮತಿ ರೋಹಿಣಿ ಬನ್ನೂರು ಶಾಲೆ, ಶ್ರೀಮತಿ ರತ್ನಾವತಿ ಬನ್ನೂರು ಪಂಚಾಯತ್, ಶ್ರೀಮತಿ ವಸಂತಿ ಕರ್ಮಲ, ಶ್ರೀಮತಿ ಜಯಂತಿ ಚೆಲುವಮ್ಮನ ಕಟ್ಟೆ ಇವರುಗಳಿಗೆ ಸಂಸದರಾದ ನಳಿನ್ ಕುಮಾರ್ ಕಟೀಲುರವರು ಅಭಿನಂದನಾ ಪತ್ರವನ್ನು ವಿತರಿಸಿ ಗೌರವಿಸಿದರು.


ಶಾಲಾ ಕಾಲೇಜಿನ ಮಕ್ಕಳಿಗೆ ಅಭಿನಂದನಾ ಪತ್ರದ ವಿತರಣೆ:
ಶಾಲಾ ಕಾಲೇಜಿನ ಮಕ್ಕಳಿಗೆ ಈ ಯೋಜನೆಯ ಬಗ್ಗೆ ಸಂಪೂರ್ಣ ಅರಿವನ್ನು ಮೂಡಿಸುವುದರ ಮೂಲಕ ಸಮಾಜದ ಪ್ರತಿಯೊಬ್ಬ ವ್ಯಕ್ತಿಗೂ ಈ ಯೋಜನೆಯ ಸಂಪೂರ್ಣ ಹಾಗೂ ಸರಿಯಾದ ಮಾಹಿತಿ ತಲುಪುವಂತೆ ಮಕ್ಕಳನ್ನು ಸನ್ನದ್ಧಗೊಳಿಸಲಾಯಿತು. ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ ಹಾರಾಡಿ, ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯ ಬನ್ನೂರು, ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯ ಪಡೀಲ್, ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯ ಪುತ್ತೂರು ಟೌನ್, ಸರಕಾರಿ ಪ್ರೌಢಶಾಲೆ ಕೊಂಬೆಟ್ಟು, ಪದವಿಪೂರ್ವ ಕಾಲೇಜು ಕೊಂಬೆಟ್ಟು, ಶ್ರೀ ರಾಮಕೃಷ್ಣ ಪ್ರೌಢಶಾಲೆ, ಫಾರ್ಮಸಿ ಕಾಲೇಜು ವಿವೇಕಾನಂದ ಇಲ್ಲಿನ ವಿದ್ಯಾರ್ಥಿಗಳಿಗೆ ಸಂಸದರು ಅಭಿನಂದನಾ ಪತ್ರವನ್ನು ವಿತರಿಸಿದರು.


ಯುವಕ-ಯುವತಿ ಮಂಡಲಗಳಿಗೆ ಅಭಿನಂದನಾ ಪತ್ರ ವಿತರಣೆ:
ಮಹಿಳಾ ಮಂಡಲ, ಯುವಕ ಮಂಡಲ, ಸ್ತ್ರೀಶಕ್ತಿ ಸಂಘಗಳು, ಸ್ವಸಹಾಯ ಗುಂಪುಗಳ ಮೂಲಕ ಯುವಕರಲ್ಲಿ ಸರಿಯಾದ ಮಾಹಿತಿಯನ್ನು ಹಂಚಲಾಯಿತು. ನವೋದಯ ಮಹಿಳಾ ಮಂಡಲ ಬನ್ನೂರು, ನವೋದಯ ಯುವಕ ಮಂಡಲ ಬನ್ನೂರು, ಶಿವ ಪಾರ್ವತಿ ಮಂದಿರ ಬನ್ನೂರು, ಸ್ಪೂರ್ತಿ ಯುವ ಸಂಸ್ಥೆ ಬನ್ನೂರು, ಪರಿಶ್ರಮ ಶ್ರೀ ಶಕ್ತಿ ಗುಂಪು ಬನ್ನೂರು ಕಟ್ಟೆ ಅಂಗನವಾಡಿ ಕೇಂದ್ರ, ಸನ್ನಿಧಿ ನಗರ ಸ್ತ್ರೀಶಕ್ತಿ ಗುಂಪು ಬನ್ನೂರು ಶಾಲೆ, ಶ್ರೀನಿಧಿ ಉಳಿತಾಯ ಮತ್ತು ಸಾಲ ಸಂಘ ಬನ್ನೂರು ಶಾಲೆ, ಲಕ್ಷ್ಮಿ ನಿರಂತರ ಉಳಿತಾಯ ಮತ್ತು ಸಾಲ ಸಂಘ ಬನ್ನೂರು ಶಾಲೆ, ಮೂಕಾಂಬಿಕಾ ಸ್ವಸಹಾಯ ಸಂಘ ನೆಕ್ಕಿಲ, ಬನ್ನೂರು, ಶ್ರೀ ಮಂಜುನಾಥೇಶ್ವರ ನವೋದಯ ಸ್ವಸಹಾಯ ಸಂಘ ಮೆಚ್ಚಿದ ಬನ್ನೂರು, ಶ್ರೀ ವಿಷ್ಣು ಯುವಕ ಮಂಡಲ ಕೆಮ್ಮಾಯಿ, ಒಡಿಯೂರು ಸ್ವಸಹಾಯ ಗುಂಪುಗಳು ಬನ್ನೂರು ಇವುಗಳಿಗೆ ಸಂಸದರು ಅಭಿನಂದನಾ ಪತ್ರವನ್ನು ನೀಡುವುದರ ಮೂಲಕ ಗುರುತಿಸಲಾಯಿತು.


ಮಾಜಿ ಶಾಸಕ ಸಂಜೀವ ಮಠಂದೂರು, ವಿವೇಕಾನಂದ ಫಾರ್ಮಸಿ ಕಾಲೇಜಿನ ಪ್ರಾಂಶುಪಾಲ ಡಾ.ಗುರುರಾಜ್ ಎಂ.ಪಿ, ಕೇಂದ್ರದ ಮಾಲಕಿಯವರಾದ ಶ್ರೀಮತಿ ಉಷಾ ಶ್ರೀಧರ ಭಂಡಾರಿ, ಕಟ್ಟಡದ ಮಾಲಕರಾದ ಮೀನಾಕ್ಷಿ ಪೂಜಾರಿ ಸಭಾ ವೇದಿಕೆಯನ್ನು ಅಲಂಕರಿಸಿದ್ದರು. ಆದರ್ಶ ಆಸ್ಪತ್ರೆಯ ಡಾ.ಎಂ.ಕೆ. ಪ್ರಸಾದ್ ಭಂಡಾರಿ, ವಿವೇಕಾನಂದ ಪಾಲಿಟೆಕ್ನಿಕ್‌ನ ನಿವೃತ್ತ ಪ್ರಾಂಶುಪಾಲರಾದ ಗೋಪಿನಾಥ ಶೆಟ್ಟಿ, ಬನ್ನೂರು ಭಾಗದ ನಗರಸಭಾ ಸದಸ್ಯರಾದ ಶ್ರೀಮತಿ ಮೋಹಿನಿ, ಶ್ರೀಮತಿ ಗೌರಿ ಬನ್ನೂರು, ಶ್ರೀಮತಿ ಪ್ರೇಮಲತಾರವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಜನೌಷಧಿ ಕೇಂದ್ರದ ಅನಿಲ ದೀಪಕ್ ಶೆಟ್ಟಿ, ಮೀನಾಕ್ಷಿ ಶ್ರೀಧರ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.


ನನಗೆ ಪರಿಪೂರ್ಣ ಜೀವನವನ್ನು ಒದಗಿಸಿದವರು ನನ್ನ ತಂದೆಯವರಾದ ಕೀರ್ತಿಶೇಷ ಡಾ.ಶ್ರೀಧರ್ ಭಂಡಾರಿಯವರು. ಯಕ್ಷಗಾನ ನಮ್ಮ ಜೀವನಾಡಿ. ನನ್ನ ತಂದೆಯವರ ನೆನಪಿಗಾಗಿ, ಯಕ್ಷಗಾನ ಕಲಾವಿದರಿಗೆ ವಿಶೇಷ ರಿಯಾಯಿತಿಯಲ್ಲಿ ಔಷಧಿಯನ್ನು ನೀಡಲಾಗುವುದು. ಪ್ರತಿಯೋರ್ವರೂ ಈ ಜನೌಷಧಿ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳುವಂತಾಗಬೇಕು.
-ಡಾ.ಅನಿಲ ದೀಪಕ್ ಶೆಟ್ಟಿ
ಮಾಜಿ ನೋಡಲ್ ಅಧಿಕಾರಿ, ಕರ್ನಾಟಕ ಪ್ರಧಾನ ಮಂತ್ರಿ ಭಾರತೀಯ ಜನ ಔಷಧಿ ಪರಿಯೋಜನೆ, ಭಾರತ ಸರಕಾರ

LEAVE A REPLY

Please enter your comment!
Please enter your name here