ಮಹಾತೋಭಾರ ಶ್ರೀ ಮಹಾಲಿಂಗೇಶ್ವರ ದೇವಳದ ಶ್ರೀ ಅನ್ನಪೂರ್ಣಾ ಅನ್ನಛತ್ರದ ಲೋಕಾರ್ಪಣಾ ಕಾರ್ಯಕ್ರಮ

0

ಪುತ್ತೂರು: ಮಹಾತೋಭಾರ ಶ್ರೀ ಮಹಾಲಿಂಗೇಶ್ವರ ದೇವಳದ ಶ್ರೀ ಅನ್ನಪೂರ್ಣಾ ಅನ್ನಛತ್ರದ ಲೋಕಾರ್ಪಣೆ ಫೆ.3ರಂದು ನಡೆಯಿತು.
ಶ್ರೀ ಅನ್ನಪೂರ್ಣಾ ಅನ್ನಛತ್ರದ ಸಮೃದ್ಧಿಗೋಸ್ಕರ ಬೆಳಿಗ್ಗೆ ಉಗ್ರಾಣ ತುಂಬಿಸುವ ಕಾರ್ಯಕ್ರಮದಲ್ಲಿ ಸುವಸ್ತುಗಳನ್ನು ಶ್ರೀ ಮಹಾಲಿಂಗೇಶ್ವರ ದೇವರ ನಡೆಯಲ್ಲಿ ಇರಿಸಿ ಪ್ರಾರ್ಥಿಸಿ, ಬಳಿಕ ಮೆರವಣಿಗೆ ಮೂಲಕ ಎಲ್ಲಾ ಸುವಸ್ತುಗಳನ್ನು ಅನ್ನಪೂರ್ಣ ಅನ್ನಛತ್ರಕ್ಕೆ ತಂದು ಅಲ್ಲಿ ಸಮರ್ಪಣೆ ಮಾಡಲಾಯಿತು. ಇದೇ ಸಂದರ್ಭ ಮಹಿಳೆಯರಿಂದ ವಿಶೇಷ ಕುಂಕುಮಾರ್ಚನೆಕಾರ್ಯಕ್ರಮ ನಡೆಯಿತು.


ಅನ್ನಪೂರ್ಣಾ ಛತ್ರದಲ್ಲಿ ಸ್ವಾಮಿ ಪ್ರಸಾದವು ಅನ್ನಪ್ರಸಾದ ರೂಪದಲ್ಲಿ ನಿಂತರವಾಗಿಲಿ:
ಅನ್ನಪೂರ್ಣಾ ಛತ್ರವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಮಾಣಿಲ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ಆಶೀರ್ವಚನ ನೀಡಿದರು. ಅನ್ನಪೂರ್ಣಾ ಅನ್ನಛತ್ರದಲ್ಲಿ ಭೋಜನದ ರೀತಿಯಾಗಿ ಅಲ್ಲ ಸ್ವಾಮಿ ಪ್ರಸಾದ ಭೋಜನದ ರೂಪದಲ್ಲಿ ಅನ್ನಪ್ರಸಾದ ನಿರಂತರವಾಗಿ ನಡೆಯಲಿ ಎಂದರು.


ಹಸಿದು ಬಂದವನಿಗೆ ದೇವಸ್ಥಾನ, ಮಂದಿರದಲ್ಲಿ ಅನ್ನನೀಡಿದಾಗ ಧರ್ಮ ಉಳಿಯುತ್ತದೆ:
ಅನ್ನಪೂರ್ಣಾ ಅನ್ನಛತ್ರದ ಲೋಕಾರ್ಪಣೆ ಮಾಡಿದ ಶಾಸಕ ಅಶೋಕ್ ಕುಮಾರ್ ರೈ ಅವರು ಮಾತನಾಡಿ ದೇವಸ್ಥಾನದ ಸಮಿತಿಯ ಪರಿಕಲ್ಪನೆಯಂತೆ ಮಾಸ್ಟರ್ ಪ್ಲಾನ್ ಆಗಿದೆ. ರೂ. 2 ಕೋಟಿ ಅನುದಾನ ಈಗಾಗಲೇ ಬಿಡುಗಡೆಯಾಗಿದೆ. ಇನ್ನು ರೂ. 5 ಕೋಟಿ ಅನುದಾನದಲ್ಲಿ ವಸತಿಗೃಹಕ್ಕೆ ಮಂಜೂರಿಗೆ ಮನವಿ ಸಲ್ಲಿಸಿದೆ. ಒಟ್ಟಿನಲ್ಲಿ ರೂ. 50 ಕೋಟಿ ಅನುದಾನದಲ್ಲಿ ಮಾಸ್ಟರ್ ಪ್ಲಾನ್ ಆಗಿದೆ. ಇನ್ನು ಯಾವುದೇ ಸಮಿತಿ ಬರಲಿ ಅದರ ಮೂಲಕ ಕೆಲಸ ಮಾಡಬಹುದು. ಭಕ್ತರ ಹಣ ದೇವರಿಗೆ ಸಂದಾಯ ಆಗುತ್ತದೆ. ಪುತ್ತೂರು ಮಹಾಲಿಂಗೇಶ್ವರ, ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿ ಕೆಲಸ ಆಗಬೇಕು. ಧರ್ಮಸ್ಥಳ ಮತ್ತು ಸುಬ್ರಹ್ಮಣ್ಯ ಯಾತ್ರಾರ್ಥಿಗಳ ಶೇಕಡ ಅರ್ಧದಷ್ಟು ಜನರು ಇಲ್ಲಿಗೆ ಬಂದುಹೋಗಬೇಕು ಎಂದ ಅವರು ಹಸಿದು ಬಂದವನಿಗೆ ದೇವಸ್ಥಾನ ಮಂದಿರದಲ್ಲಿ ಊಟ ಇಲ್ಲದಂತಾಗಬಾರದು. ಹಸಿದು ಬಂದವನಿಗೆ ಊಟ ಕೊಡುವ ಕೆಲಸ ದೇವಸ್ಥಾನದಲ್ಲಿ ಆದಾಗ ಮಾತ್ರ ಧರ್ಮ ಉಳಿಯುತ್ತದೆ ಎಂದರು.


ರಾಜಕೀಯ ಮಾಡದೆ ಅಭಿವೃದ್ಧಿ ಕೆಲಸ:
ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ಅವರು ಮಾತನಾಡಿ ದೇವಸ್ಥಾನದಲ್ಲಿ ರಾಜಕೀಯ ಮಾಡದೆ ದೇವಸ್ಥಾನದ ಅಭಿವೃದ್ಧಿ ಕೆಲಸ ಮುಂದುವರಿಯುತ್ತದೆ. ಈಗಾಗಲೇ 300 ಮಂದಿ ಟೇಬಲ್‌ನಲ್ಲಿ ಕೂತು ಊಟ ಮಾಡುವ ವ್ಯವಸ್ಥೆ ಸಂಪೂರ್ಣ ಕೆಲಸ ಸಿದ್ದಗೊಂಡಿದೆ. ಉದ್ಯಮಿ ನುಳಿಯಾಲು ಪುರುಷೋತ್ತಮ ಶೆಟ್ಟಿ ಮತ್ತು ವಿವಿಧ ಧಾನಿಗಳ ಮೂಲಕ ದೇವಳದ ಅನ್ನಛತ್ರದ ಕೆಲಸ ಪ್ರಾರಂಭ ಆಗಿದೆ. ಒಂದು ತಿಂಗಳ ಅವಧಿಯಲ್ಲಿ ಮುಖಮಂಟಪ ಪೂರ್ಣಗೊಳ್ಳಲಿದೆ. ಮಿತ್ತಛಾವಡಿಯ ಮಾಡಿನ ಕೆಲಸ ದ್ವಾರಕ ಕನ್‌ಸ್ಟ್ರಕ್ಷನ್ ಅವರಿಂದ ನಡೆಯಲಿದೆ. ಅಪ್ಪ ಕಜ್ಜಾಯ ಕೊಠಡಿಗೆ ಮುಳಿಯ ಗೋವಿಂದ ಭಟ್ ದೇಣಿಗೆ ನೀಡಿದ್ದು ಅದರ ಸ್ಲೇಬ್ ಕೆಲಸ ಆಗಿದೆ. ಹಾಗಾಗಿ ಇಲ್ಲಿ ಅಪೂರ್ಣ ಅನ್ನುವುದು ಎದುರಿಗೆ ಕಂಡರು ಕೂಡಾ ಅದರ ಒಳನೋಡಿದಾಗ ಅಪೂರ್ಣ ಅಲ್ಲ ಎಂದು ತಿಳಿಯುತ್ತದೆ ಎಂದರು.

ಈ ಸಂದರ್ಭ ಮಾಜಿ ಶಾಸಕ ಸಂಜೀವ ಮಠಂದೂರು, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ರಾಮಚಂದ್ರ ಕಾಮತ್, ರಾಮದಾಸ್ ಗೌಡ, ಡಾ.ಸುಧಾ ಎಸ್ ರಾವ್, ವೀಣಾ ಬಿ ಕೆ, ಬಿ ಐತ್ತಪ್ಪ ನಾಯ್ಕ್, ಶೇಖರ್ ನಾರಾವಿ, ರವೀಂದ್ರನಾಥ ರೈ ಬಳ್ಳಮಜಲು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here