![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಫೆ.15: ಅನುರಾಗ ವಠಾರದಲ್ಲಿ ಸಮಾಲೋಚನಾ ಸಭೆ
ಪುತ್ತೂರು: ಹಿರಿಯ ವಿದ್ವಾಂಸರು ವಿಮರ್ಶಕರೂ ಆಗಿರುವ ಲಕ್ಷ್ಮೀಶ ತೋಳ್ಪಾಡಿ ಇವರ ‘ಮಹಾಭಾರತ ಅನುಸಂಧಾನ ಭಾರತ ಯಾತ್ರೆ’ ಕೃತಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಪುರಸ್ಕಾರಕ್ಕೆ ಆಯ್ಕೆಯಾದ ಹಿನ್ನೆಲೆಯಲ್ಲಿ ಸಾರ್ವಜನಿಕ ಅಭಿನಂದನಾ ಕಾರ್ಯಕ್ರಮನ್ನು ಆಯೋಜಿಸುವ ನಿಟ್ಟಿನಲ್ಲಿ ಹಿರಿಯ ಸಾಹಿತಿಗಳಾದ ಪುರಂದರ ಭಟ್ ಅವರ ನೇತೃತ್ವದಲ್ಲಿ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಈ ಕುರಿತು ಪೂರ್ವಭಾವಿ ಸಮಾಲೋಚನಾ ಸಭೆ ಫೆ.15ರಂದು ಸಂಜೆ 4:00 ಗಂಟೆಗೆ ಶ್ರೀ ರಾಧಾಕೃಷ್ಣ ಮಂದಿರ ರಸ್ತೆಯಲ್ಲಿರುವ ಅನುರಾಗ ವಠಾರದಲ್ಲಿ ಕರೆಯಲಾಗಿದೆ. ಈ ಪ್ರಶಸ್ತಿಯು ಕೇವಲ ಪುತ್ತೂರಿಗೆ ಮಾತ್ರವಲ್ಲದೆ ಸಮಸ್ತ ಕನ್ನಡಿಗರಿಗೆ ಹಾಗೂ ಕರ್ನಾಟಕ ರಾಜ್ಯಕ್ಕೆ ಸಂದ ಗೌರವವಾಗಿದೆ. ಆದ್ದರಿಂದ ಈ ಅಭಿನಂದನಾ ಕಾರ್ಯಕ್ರಮವನ್ನು ಯಶಸ್ವಿಯಾಗಿರಿಸುವ ನಿಟ್ಟಿನಲ್ಲಿ ಕನ್ನಡ ಅಭಿಮಾನಿಗಳು, ಸಂಘ-ಸಂಸ್ಥೆಗಳು ಹಾಗೂ ಲಕ್ಷ್ಮೀಶ ತೋಳ್ಪಾಡಿ ಅವರ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರಬೇಕಾಗಿ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಪುತ್ತೂರು ನಾಯಕ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
![](https://puttur.suddinews.com/wp-content/uploads/2024/02/IMG-20240211-WA0012.jpg)
ಭಾರತ ಸರ್ಕಾರ ನೀಡುವ ಅತ್ಯುನ್ನತ ಸಾಹಿತ್ಯ ಪ್ರಶಸ್ತಿ ಎಂದರೆ ಅದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
1954ರಲ್ಲಿ ಸ್ಥಾಪನೆಯಾದ ಈ ಪ್ರಶಸ್ತಿಯನ್ನು ಪ್ರತಿವರ್ಷವೂ ಸಾಹಿತ್ಯ ಅಕಾಡೆಮಿ ಅಂಗೀಕರಿಸಿದ 24 ಭಾಷೆಗಳ ಒಂದೊಂದು ಪುಸ್ತಕಕ್ಕೆ ನೀಡಿ ಗೌರವಿಸಲಾಗುತ್ತದೆ. ಪ್ರಸ್ತುತ ಬಹುಮಾನದ ಮೊತ್ತ ₹1,00,000/-. ಪ್ರಶಸ್ತಿಯ ಮೊತ್ತದ ಜೊತೆಯಲ್ಲಿ ಒಂದು ತಾಮ್ರಪತ್ರ, ಪ್ರಶಸ್ತಿ ಫಲಕ ಮತ್ತು ಶಾಲನ್ನು ನವದೆಹಲಿಯಲ್ಲಿ ಮಾರ್ಚ್ 12ರಂದು ನೀಡಿ ಗೌರವಿಸಲಾಗುತ್ತದೆ.
ಕೇಂದ್ರ ಸಾಹಿತ್ಯ ಅಕಾಡೆಮಿಯು ಒಂದು ಕೇಂದ್ರ ಸರಕಾರದ ಅನುದಾನದಲ್ಲಿ ನಡೆಯುವ ಸ್ವಾಯತ್ತ ಸಂಸ್ಥೆಯಾಗಿದೆ. ಭಾರತೀಯ ಭಾಷೆಗಳ ಅಭಿವೃದ್ಧಿ ಇದರ ಮುಖ್ಯ ಗುರಿ. ಇದನ್ನು 1954ರಲ್ಲಿ ಸ್ಥಾಪಿಸಲಾಯಿತು. ಸಂಶೋಧನೆ, ಪ್ರಕಾಶನ, ಗ್ರಂಥಾಲಯ, ವಿಚಾರ ಸಂಕಿರಣಗಳು ಮುಂತಾಗಿ ಹಲವಾರು ವಿಧಗಳಿಂದ ಭಾರತೀಯ ಭಾಷೆಗಳ ಅಬಿವೃದ್ದಿಗೆ ಶ್ರಮಿಸುತ್ತಿದೆ. ಇದರ ಅಂಗವಾಗಿ ೧೯೫೫ರಿಂದ ಪ್ರತಿವರ್ಷ ಸಾಹಿತ್ಯದಲ್ಲಿ ಉತ್ತಮ ಕೃಷಿ ಮಾಡಿದ ಸಾಹಿತಿಗಳಿಗೆ ಪ್ರಶಸ್ತಿ ನೀಡುತ್ತಿದೆ.
1955 ರಿಂದ ಈವರೆಗೆ ಕರ್ನಾಟಕದಿಂದ ಸುಮಾರು 77 ಕನ್ನಡ ಭಾಷಾ ಸಾಹಿತಿಗಳು ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇವರಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಶಿವರಾಮ ಕಾರಂತ,ಕೆದಂಬಾಡಿ ಜತ್ತಪ್ಪ ರೈ, ಅಮೃತ ಸೋಮೇಶ್ವರ , ಬೊಳುವಾರು ಮಹಮದ್ ಕುಂಞ್, ಲಕ್ಷ್ಮೀಶ ತೋಳ್ಪಾಡಿ ಇವರುಗಳು ಪುತ್ತೂರು ತಾಲೂಕಿಗೆ ಗೌರವ ತಂದ ಮಹನೀಯರು ಆಗಿದ್ದಾರೆ.