ಮಹಾಲಿಂಗೇಶ್ವರ ದೇವಸ್ಥಾನದ ಶಾಸನಗಳನ್ನು ಸಂರಕ್ಷಣೆ, ಶಾಸನ ಮಂಟಪ ರಚನೆ ಮಾಡುವ ಕುರಿತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ ಮನವಿ

0

ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಹೊರಪ್ರಾಂಗಣದಲ್ಲಿ ನಿರ್ಲಕ್ಷಕ್ಕೆ ಒಳಗಾಗಿರುವ ಪುರಾತನ ಶಾಸನಗಳನ್ನು ಸಂರಕ್ಷಣೆ ಮಾಡಿ, ಅದಕ್ಕೆ ಶಾಸನ ಮಂಟಪವನ್ನು ನಿರ್ಮಿಸಿ ಸಂರಕ್ಷಣೆ ಮಾಡುವಂತೆ ಒತ್ತಾಯಿಸಿ, ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ದೇವಳದ ಆಡಳಿತ ಅಧಿಕಾರಿ ನವೀನ್ ಭಂಡಾರಿಯವರಿಗೆ ಮನವಿ ಮಾಡಿದರು.


ಈ ಶಾಸನಗಳು ಸುಮಾರು 12ನೇ ಶತಮಾನಕ್ಕೆ ಸೇರಿದ ಪ್ರಾಚೀನ ಕನ್ನಡ ಶಾಸನಗಳಾಗಿವೆ. ಸದರಿ ಶಾಸನಗಳಿಂದಾಗಿ 12ನೇ ಶತಮಾನದಲ್ಲಿ ಪ್ರಚಲಿತದಲ್ಲಿದ್ದ ಕನ್ನಡ ಭಾಷೆ, ಲಿಪಿ, ರಾಜಾಡಳಿತ, ಆಚಾರ-ವಿಚಾರ, ಸಂಪ್ರದಾಯ, ಸಂಸ್ಕೃತಿ, ಧಾರ್ಮಿಕ ಆಚರಣೆಗಳು ಹಾಗೂ ಇನ್ನಿತರ ವಿಚಾರಗಳ ಮೇಲೆ ಬೆಳಕನ್ನು ಚೆಲ್ಲುವ ಈ ಶಾಸನಗಳಿಗೆ ಶಾಸನ ಮಂಟಪ ನಿರ್ಮಿಸಿ, ಅದನ್ನು ಸಂರಕ್ಷಣೆ ಮಾಡಿದರೆ ರಾಜ್ಯದ ಮಾತ್ರವಲ್ಲದೆ ದೇಶ ವಿದೇಶಗಳ ನಾನಾ ಭಾಗಗಳಿಂದ ಇತಿಹಾಸ ಅಧ್ಯಯನಕಾರರು ಇಲ್ಲಿಗೆ ಆಗಮಿಸಲಿದ್ದಾರೆ. ಜೊತೆಗೆ ಸುತ್ತಮುತ್ತಲಿನ ಊರುಗಳಿಂದ ವಿದ್ಯಾರ್ಥಿಗಳು ಈ ಶಾಸನ ಮಂಟಪವನ್ನು ನೋಡಲು ತಂಡೋಪ ತಂಡವಾಗಿ ಬರಲಿದ್ದಾರೆ. ಅಲ್ಲದೆ ಪುರಾತನ ಶಾಸನಗಳನ್ನು ಸಂರಕ್ಷಣೆ ಮಾಡಿದ ಸಾರ್ಥಕತೆ ಒಂದೆಡೆಯಾದರೆ ಪ್ರವಾಸೋದ್ಯಮವಾಗಿಯೂ ಬೆಳೆಯಲಿದೆ.

ಭವ್ಯ ಭಾರತದ ಜ್ಞಾನ ನಿಧಿ ಈ ಪುರಾತನ ಶಾಸನ ಸಂರಕ್ಷಣೆಗಾಗಿ ಶಾಸನ ಮಂಟಪವನ್ನು ರಚಿಸಲು ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿಗೆ ಅವಕಾಶ ನೀಡಬೇಕು. ಇಲ್ಲವಾದಲ್ಲಿ ಸದ್ರಿ ಯೋಜನೆಯನ್ನು ದೇವಳದ ಕ್ರಿಯಾಯೋಜನೆಯಲ್ಲಿ ಅಳವಡಿಸುವಂತೆ ಮನವಿಯಲ್ಲಿ ವಿನಂತಿಸಿದ್ದಾರೆ.

LEAVE A REPLY

Please enter your comment!
Please enter your name here