ಡಿಸಿಸಿ ಬ್ಯಾಂಕ್‌ನ ಆಡಳಿತ ಮಂಡಳಿಯ ಎಲ್ಲಾ ಸ್ಥಾನಗಳಿಗೂ ಅವಿರೋಧ ಆಯ್ಕೆ

0

ಪುತ್ತೂರಿನಿಂದ ಶಶಿಕುಮಾರ್ ರೈ, ಎಸ್.ಬಿ ಜಯರಾಮ ರೈ ಪುನರಾಯ್ಕೆ

ಪುತ್ತೂರು:ಪ್ರತಿಷ್ಠಿತ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಮುಂದಿನ ಐದು ವರ್ಷಗಳ ಅವಧಿಯ ನೂತನ ಆಡಳಿತ ಮಂಡಳಿಯ ಎಲ್ಲಾ 16 ಸ್ಥಾನಗಳಿಗೂ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಪುತ್ತೂರಿನಿಂದ ಹಾಲಿ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಹಾಗೂ ಹಾಲಿ ನಿರ್ದೇಶಕರು, ದ.ಕ ಹಾಲು ಉತ್ಪಾದಕರ ಒಕ್ಕೂಟದ ಉಪಾಧ್ಯಕ್ಷರಾಗಿರುವ ಎಸ್.ಬಿ ಜಯರಾಮ ರೈ ಬಳೆಜ್ಜ ಸೇರಿದಂತೆ ಎಲ್ಲಾ 16ಮಂದಿಯೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.


ದಕ್ಷಿಣ ಕನ್ನಡ ಮತ್ತು ಉಡುಪಿ ಉಭಯ ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಆಡಳಿತ ಮಂಡಳಿಯ 16 ಸ್ಥಾನಗಳ ನಿರ್ದೇಶಕರ ಆಯ್ಕೆಗೆ ಮಾ.11 ಚುನಾವಣೆ ದಿನಾಂಕ ನಿಗದಿಯಾಗಿತ್ತು. ಚುನಾವಣೆಗೆ ಪುತ್ತೂರಿನಿಂದ ಹಾಲಿ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು, ಸುಳ್ಯದಿಂದ ಎಸ್.ಎನ್ ಮನ್ಮಥ, ಬೆಳ್ತಂಗಡಿಯಿಂದ ಕುಶಾಲಪ್ಪ ಗೌಡ ಪೂವಾಜೆ, ಬಂಟ್ವಾಳದಿಂದ ಟಿ.ಜಿ ರಾಜಾರಾಮ ಭಟ್, ಮಂಗಳೂರಿನಿಂದ ಹಾಲಿ ಅಧ್ಯಕ್ಷ ಡಾ.ಎಂ.ಎನ್ ರಾಜೇಂದ್ರ ಕುಮಾರ್, ಭಾಸ್ಕರ ಕೋಟ್ಯಾನ್, ವಾದಿರಾಜ ಶೆಟ್ಟಿ, ವಿನಯ ಕುಮಾರ್ ಸೂರಿಂಜೆ, ಉಡುಪಿಯಿಂದ ದೇವಿಪ್ರಸಾದ್ ಶೆಟ್ಟಿ, ಅಶೋಕ್ ರೈ, ಕುಂದಾಪುರದಿಂದ ರಾಜೀವ ಪೂಜಾರಿ, ಮಹೇಶ್ ಹೆಗ್ಡೆ, ಟಿಎಪಿಟಿಎಂಎಸ್‌ನಿಂದ ಮೋನಪ್ಪ ಶೆಟ್ಟಿ ಎಕ್ಕಾರು, ಕ್ರೆಡಿಟ್ ಸಹಕಾರಿಯಿಂದ ಜಯರಾಜ್ ರೈ ಮಾತ್ರವೇ ನಾಮಪತ್ರ ಸಲ್ಲಿಸಿದ್ದು ಅವರು ಅವಿರೋಧವಾಗಿ ಆಯ್ಕೆಯಾಗಿದ್ದರು.


ಇತರ ಕ್ಷೇತ್ರಗಳ ಸ್ಥಾನಕ್ಕೆ ಹಾಲಿ ನಿರ್ದೇಶಕ ಎಸ್.ಬಿ ಜಯರಾಮ ರೈ ಹಾಗೂ ಬಂಟ್ವಾಳ ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಸಂಜೀವ ಪೂಜಾರಿ ನಾಮಪತ್ರ ಸಲ್ಲಿಸಿದ್ದು ಒಂದು ಸ್ಥಾನಕ್ಕೆ ಇಬ್ಬರ ಅಭ್ಯರ್ಥಿಗಳು ಕಣದಲ್ಲಿದ್ದರು. ಉಳಿದಂತೆ 15 ಸ್ಥಾನಗಳಿಗೂ ತಲಾ ಒಂದು ನಾಮಪತ್ರ ಸಲ್ಲಿಕೆಯಾಗಿತ್ತು. ಚುನಾವಣೆಗೆ ಸಂಬಂಧಿಸಿದಂತೆ ನಾಮಪತ್ರ ಹಿಂಪಡೆಯಲು ಮಾ.4 ಅಂತಿಮ ದಿನವಾಗಿತ್ತು. ಇತರ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಿದ್ದ ಸಂಜೀವ ಪೂಜಾರಿ ತನ್ನ ನಾಮಪತ್ರವನ್ನು ಹಿಂತೆಗೆದುಕೊಂಡಿದ್ದು ಎಸ್.ಬಿ ಜಯರಾಮ ರೈಯವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿಯಾಗಿದ್ದ ಮಂಗಳೂರು ಉಪ ವಿಭಾಗದ ಸಹಾಯಕ ಆಯುಕ್ತ ಹರ್ಷವರ್ಧನ ಎಸ್.ಜೆ ಎಲ್ಲಾ ಸ್ಥಾನಗಳಿಗೆ ನಿರ್ದೇಶಕರು ಅವಿರೋಧವಾಗಿರುವುದಾಗಿ ಘೋಷಣೆ ಮಾಡಿದ್ದಾರೆ.

LEAVE A REPLY

Please enter your comment!
Please enter your name here