ಮಾಣಿ ಬಾಲವಿಕಾಸದಲ್ಲಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಡಿಲು 23-24 – ವಿಕಾಸದ ಕಡಲು ಬೀಳ್ಕೊಡುಗೆ ಸಮಾರಂಭ

0

ನಮ್ಮಲ್ಲಿ ಪ್ರೇರಣೆ ತುಂಬಿಕೊಂಡಾಗ ಸಾಧನೆಯ ಹಾದಿ ಸುಲಭವಾಗುತ್ತದೆ: ಪ್ರದೀಪ್ ಬಡೆಕ್ಕಿಲ
ವಿದ್ಯಾರ್ಥಿಗಳುಕಲಿತ ಸಂಸ್ಥೆಯನ್ನು ನೆನಪಿಟ್ಟುಕೊಳ್ಳುವಂತವರಾಗಬೇಕು: ಪ್ರಹಲ್ಲಾದ ಶೆಟ್ಟಿ ಜೆ

ವಿಟ್ಲ : ಮಾಣಿ ಪೆರಾಜೆಯ ವಿದ್ಯಾನಗರ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯ 2023-24ನೇ ಶೈಕ್ಷಣಿಕ ವರ್ಷದ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಮಡಿಲು 23-24- ವಿಕಾಸದ ಕಡಲು ಎಂಬ ಹೆಸರಿನಲ್ಲಿ ಬೀಳ್ಕೊಡುಗೆ ಸಮಾರಂಭವು ಬಾಲವಿಕಾಸ ಆಡಿಟೋರಿಯಂನಲ್ಲಿ ನಡೆಯಿತು.\

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಬಿಗ್ ಬಾಸ್ ಖ್ಯಾತಿಯ ಧ್ವನಿ ಮಾಂತ್ರಿಕ ಬಡೆಕ್ಕಿಲ ಪ್ರದೀಪ್, ಹತ್ತನೇ ತರಗತಿಯ ವಿದ್ಯಾರ್ಥಿಗಳು ಸಂಸ್ಥೆಗೆ ಕೊಡುಗೆಯಾಗಿ ನೀಡಿದ ಡಿಜಿಟಲ್ ಪೋಡಿಯಮ್ ನ್ನು ತನ್ನ ಅದ್ಭುತ ಧ್ವನಿಯಿಂದ ಉದ್ಘಾಟಿಸಿ, ಜೀವನದಲ್ಲಿ ಮುಂದಕ್ಕೆ ಹೋದ ಹಾಗೆ ಹೊಸ-ಹೊಸ ಸವಾಲುಗಳು ಎದುರಾಗಬಹುದು. ನಮ್ಮಲ್ಲಿ ನಾವು ಪ್ರತಿದಿನ ಪ್ರೇರಣೆ ತುಂಬಿಕೊಂಡಾಗ ಸಾಧನೆಯ ಹಾದಿ ಸುಲಭವಾಗುತ್ತದೆ. ಮಾಣಿಯಂತಹ ಹಳ್ಳಿ ಪ್ರದೇಶದಲ್ಲಿ ಅಂತರಾಷ್ಟ್ರೀಯ ಗುಣಮಟ್ಟದ ಶಾಲಾ ಪರಿಸರವನ್ನು ನಿರ್ಮಾಣ ಮಾಡಿರುವ ಬಗ್ಗೆ ಅಭಿಮಾನ ವ್ಯಕ್ತಪಡಿಸಿ, ಇಲ್ಲಿ ಕಲಿತು ಹೊರಹೋಗುವ ವಿದ್ಯಾರ್ಥಿಗಳು ಸಂಸ್ಥೆಯ ಹೆಸರನ್ನು ಉಳಿಸುವಲ್ಲಿ ಮಹತ್ತರ ಪಾತ್ರವನ್ನು ವಹಿಸಬೇಕು, ಸಂಸ್ಥೆಯನ್ನು ಪ್ರಜ್ವಲಿಸುವ ಹಾಗೆ ಮಾಡಬೇಕು ಎಂದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಬಾಲವಿಕಾಸ ಟ್ರಸ್ಟಿನ ಅಧ್ಯಕ್ಷರು ಪ್ರಹಲ್ಲಾದ ಶೆಟ್ಟಿ ಜೆ ಮಾತನಾಡಿ, ಕಲಿತ ಸಂಸ್ಥೆಯನ್ನು ನೆನಪಿಟ್ಟುಕೊಳ್ಳುವಂತಹ ಮಕ್ಕಳು ಖಂಡಿತವಾಗಿಯೂ ಅವರ ತಂದೆ-ತಾಯಿಯ ತ್ಯಾಗವನ್ನು ನೆನಪಿಟ್ಟುಕೊಂಡು ಅವರನ್ನು ಚೆನ್ನಾಗಿ ನೋಡಿಕೊಳ್ಳುವವರಾಗಿರುತ್ತಾರೆ. ಭಾವೀ ಬದುಕಿಗೆ ಬೇಕಾದ ಜೀವನ ಮೌಲ್ಯಗಳನ್ನು ಬೆಳೆಸುವಂತಹ ಉತ್ತಮ ಶಿಕ್ಷಣ ಸಂಸ್ಥೆಗಳನ್ನು ಕಾಲೇಜು ಶಿಕ್ಷಣಕ್ಕಾಗಿ ಆಯ್ಕೆ ಮಾಡಿಕೊಳ್ಳಬೇಕು. ಕಲಿತಂತಹ ಸಂಸ್ಥೆಯೊಂದಿಗೆ ಉತ್ತಮ ಸಂಬಂಧವನ್ನು ಬೆಳೆಸಿಕೊಂಡು ಹೆಸರು ತರುವಂತಹ ವಿದ್ಯಾರ್ಥಿಗಳಾಗಬೇಕು ಎಂದು ಶುಭ ಹಾರೈಸಿದರು.

ಶಾಲೆಯ ಆಡಳಿತಾಧಿಕಾರಿ ರವೀಂದ್ರ ದರ್ಬೆ, ಉಪ ಮುಖ್ಯೋಪಾಧ್ಯಾಯಿನಿ ಮೋಹಿನಿ ಎ ರೈ ಹಾಗೂ ಸಹಶಿಕ್ಷಕಿ ರಶ್ಮಿ ಫೆರ್ನಾಂಡಿಸ್ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಬಾಲವಿಕಾಸ ಟ್ರಸ್ಟಿನ ಕಾರ್ಯದರ್ಶಿ ಮಹೇಶ್ ಶೆಟ್ಟಿ ಜೆ ಹಾಗೂ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷೆ ಕಸ್ತೂರಿ ಪಿ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಹತ್ತನೇ ತರಗತಿಯ 68 ವಿದ್ಯಾರ್ಥಿಗಳಿಗೆ ಅವರ ಬ್ಯಾಚ್ ನ ಭಾವಚಿತ್ರವನ್ನು ಸ್ಮರಣಿಕೆಯಾಗಿ ಕೊಡುವ ಮೂಲಕ ಅವರ ಹೆತ್ತವರೊಂದಿಗೆ ಅವರನ್ನು ವೇದಿಕೆಯಲ್ಲಿ ಗೌರವಿಸಲಾಯಿತು. ವಿದ್ಯಾರ್ಥಿಗಳಾದ ನಿವ್ಯಾ ರೈ, ವೃದ್ದಿ ಕೊಂಡೆ, ಸುಜನ್ ಡಿ ಕಾಮತ್, ಮುಹಮ್ಮದ್ ಅಜ್ಮಲ್ ತಮ್ಮ ಅನುಭವಗಳನ್ನು ಹಂಚಿಕೊಂಡರು.

ಹತ್ತನೇ ತರಗತಿಯ ವಿದ್ಯಾರ್ಥಿಗಳು ಬಾಲವಿಕಾಸದಲ್ಲಿ ಕಳೆದ ನೆನಪುಗಳನ್ನು ಹಾಡು, ಕವನ, ವಿಡಿಯೋ ಚಿತ್ರೀಕರಣ, ಕೊಳಲು ವಾದನದ ಮೂಲಕ ಮೆಲುಕು ಹಾಕಿದರು. ಶಾಲೆಯ 8 ಮತ್ತು 9ನೇ ತರಗತಿಯ ವಿದ್ಯಾರ್ಥಿಗಳು ಈ ಬೀಳ್ಕೊಡುಗೆ ಕಾರ್ಯಕ್ರಮವನ್ನು ಆಯೋಜಿಸಿದ್ದರು. 8 ನೇ ತರಗತಿಯ ವಿದ್ಯಾರ್ಥಿನಿಯರಾದ ಸಾನ್ವಿ ರೈ ಸ್ವಾಗತಿಸಿ, ನಿಧಿಶ ವಂದಿಸಿದರು. 9ನೇ ತರಗತಿಯ ವೈಷ್ಣವಿ ಮತ್ತು ಸಾಕ್ಷಿ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದ ಕೊನೆಯಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಶಾಲಾ ಕಚೇರಿಯಲ್ಲಿ ವಿನೂತನವಾಗಿ ವಿನ್ಯಾಸಗೊಳಿಸಲಾದ ಹಳೆಯ ಬಾಲವಿಕಾಸ ಶಾಲೆಯಲ್ಲಿ ಕಲಿತು ಹೊರಹೋದ ಈ ಹಿಂದಿನ 23 ಎಸ್ ಎಸ್ ಎಲ್ ಸಿ ಬ್ಯಾಚ್ ನ ಭಾವಚಿತ್ರವನ್ನು ಜೋಡಿಸಿದ್ದ ವಾಲ್ ಆಫ್ ಫೇಮ್ ನೊಂದಿಗೆ 24 ನೇ ಭಾವಚಿತ್ರವಾಗಿ ನೂತನ ಬಾಲವಿಕಾಸ ಶಾಲೆಯಿಂದ ಪಯಣಿಸುತ್ತಿರುವ ಪ್ರಥಮ ಎಸ್ ಎಸ್ ಎಲ್ ಸಿ ಬ್ಯಾಚ್ ನ ಭಾವಚಿತ್ರವನ್ನು ಶಾಲೆಯ ಆಡಳಿತ ಮಂಡಳಿ, ಶಿಕ್ಷಕ- ಶಿಕ್ಷಕೇತರ ವೃಂದ, ಪೋಷಕರು ಹಾಗೂ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಜೋಡಿಸಿದ ಕ್ಷಣ ಭಾವನಾತ್ಮಕವಾಗಿತ್ತು.

LEAVE A REPLY

Please enter your comment!
Please enter your name here