ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜು ನಿವೃತ್ತ ಪ್ರಾಂಶುಪಾಲ ಗೋಪಿನಾಥ ಶೆಟ್ಟಿಯವರಿಗೆ ಭಾವಪೂರ್ಣ ಶ್ರದ್ಧಾಂಜಲಿ

0

ಪುತ್ತೂರು: ವಿವೇಕಾನಂದ ಪಾಲಿಟೆಕ್ನಿಕ್‌ನಲ್ಲಿ 1987 ರಿಂದ 1990 ರವರೆಗೆ 3 ವರ್ಷಗಳ ಕಾಲ ಉಪನ್ಯಾಸಕರಾಗಿ ಹಾಗೂ 1990 ರಿಂದ 2022 ರವರೆಗೆ 32 ವರ್ಷ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದ ಗೋಪಿನಾಥ ಶೆಟ್ಟಿಯವರು ಮಾ.13 ರಂದು ದೈವಾಧಿನರಾಗಿದ್ದು ಅವರಿಗೆ ವಿವೇಕಾನಂದ ವಿದ್ಯಾವರ್ಧಕ ಸಂಘ, ಫಾರ್ಮಸಿ ಕಾಲೇಜು ಹಾಗೂ ಪಾಲಿಟೆಕ್ನಿಕ್ ಸಂಸ್ಥೆಯ ವತಿಯಿಂದ ಭಾವಪೂರ್ಣ ಶ್ರದ್ಧಾಂಜಲಿಯನ್ನು ಸಮರ್ಪಿಸಲಾಯಿತು.

ವಿವೇಕಾನಂದ ವಿದ್ಯಾವರ್ಧಕ ಸಂಘದ ಆಡಳಿತ ಮಂಡಳಿಯ ಅಧ್ಯಕ್ಷರು, ಕಾರ‍್ಯದರ್ಶಿಗಳು, ಸದಸ್ಯರು, ಹಿತೈಷಿಗಳು, ಒಡನಾಡಿಗಳು ಹಾಗೂ ಅಧ್ಯಾಪಕ, ಅಧ್ಯಾಪಕೇತರ ಬಂಧುಗಳು ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈಯುವುದರ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು. ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ಮಾತನಾಡಿ, ಸಂಘದ ಒಳಗಿರುವ ವ್ಯಕ್ತಿಗಳಲ್ಲಿರುವಂತಹ ಶಿಸ್ತು, ಶ್ರದ್ಧೆ, ಸೇವೆ ಸಮರ್ಪಣಾ ಗುಣಗಳನ್ನು ಹೊಂದಿದ್ದ ಗೋಪಿನಾಥ ಶೆಟ್ಟಿಯವರು ಹಿರಿಯರಾದ ರಾಮಭಟ್ಟರ ಆಶಯದಂತೆ ಈ ಸಂಸ್ಥೆಯನ್ನು ಬೆಳೆಸುವ ನಿಟ್ಟಿನಲ್ಲಿ ತನ್ನನ್ನು ತಾನು ತಯಾರಿ ಮಾಡಿಕೊಂಡು ನಡೆದು ವಿವೇಕಾನಂದ ಪಾಲಿಟೆಕ್ನಿಕ್ ಜಿಲ್ಲೆಯ ಅತ್ಯುತ್ತಮ ಕಾಲೇಜು ಎಂಬುದಾಗಿ ರೂಪಿಸುವಲ್ಲಿ ಸಫಲರಾಗಿದ್ದರು ಎಂದರು. ವಿವೇಕಾನಂದ ಕ್ಯಾಂಪಸ್‌ನಲ್ಲಿರುವ ಪ್ರತಿಯೊಂದು ಕಟ್ಟಡದಲ್ಲೂ ಅವರ ಹೆಜ್ಜೆ ಗುರುತುಗಳಿವೆ. ಸಂಸ್ಥೆಯ ಎಲ್ಲಾ ನಿರ್ಧಾರಗಳಿಗೂ ಸಹಕರಿಸುತ್ತಾ ದೇವರ ಕೆಲಸಗಳಿಗೂ ಕೈಜೋಡಿಸುತ್ತಾ ತಪಸ್ವಿಯಂತೆ ನಿಷ್ಠೆಯಿಂದ ಸಂಸ್ಥೆಗೆ ದುಡಿದಿದ್ದು ಬಹಳ ಅಪರೂಪದ ವ್ಯಕ್ತಿತ್ವದವರಾಗಿದ್ದರು. ಸೇವಾ ನಿವೃತ್ತಿಯ ನಂತರ ಸಂಸ್ಥೆಯ ಹಿರಿಯರ ಕೇಳಿಕೆಯಂತೆ ಫಾರ್ಮಸಿ ಕಾಲೇಜಿನ ಅಧ್ಯಕ್ಷರಾಗಿ ಅ ಜವಾಬ್ದಾರಿಯನ್ನೂ ಹೊಂದಿದ್ದರು. ಯಾವುದೇ ಸಂದರ್ಭದಲ್ಲಿಯೂ ಭಯ ಎಂಬುದು ಅವರಿಗಿರಲಿಲ್ಲ. ಸಮರ್ಪಣೆ, ಸೇವಾ ಮನೋಭಾವ ಪಕ್ಷಕ್ಕೆ ನಿಷ್ಟನಾಗಿರುವ ಗುಣ ಮುಂತಾದವುಗಳನ್ನು ಗುರುತಿಸಿ ಅವರನ್ನು ಪುತ್ತೂರು ನಗರದ ಸಹಸಂಘಚಾಲಕರಾಗಿ ಕೂಡಾ ನೇಮಕ ಮಾಡಿದ್ದರು. ಅಗಲಿದ ಅವರ ಆತ್ಮಕ್ಕೆ ಭಗವಂತನು ಸದ್ಗತಿಯನ್ನು ಕರುಣಿಸಲಿ ಹಾಗೂ ಅವರ ಪತ್ನಿ ಪುತ್ರರಿಗೆ ಆ ನೋವನ್ನು ಭರಿಸುವ ಶಕ್ತಿಯನ್ನು ಕೊಟ್ಟು ಸಮಾಜಕ್ಕೋಸ್ಕರ ಬದುಕುವ ಶಕ್ತಿಯನ್ನು ಕರುಣಿಸಲಿ ಎಂದು ಡಾ. ಪ್ರಭಾಕರ ಭಟ್ ನುಡಿಗಳ ಮೂಲಕ ನಮನ ಸಲ್ಲಿಸಿದರು.


ವಿವೇಕಾನಂದ ಪಾಲಿಟೆಕ್ನಿಕ್‌ನ ಅಧ್ಯಕ್ಷ ವಿಶ್ವೇಶ್ವರ ಭಟ್ ಬಂಗಾರಡ್ಕ ಮಾತನಾಡಿ, ವಿವೇಕಾನಂದ ಪಾಲಿಟೆಕ್ನಿಕ್‌ನ ರೂವಾರಿಯಾಗಿ ಇದರ ಹೆಸರನ್ನು ಜಿಲ್ಲೆಯಾದ್ಯಂತ ವಿಸ್ತಾರ ಮಾಡಿದ ಕೀರ್ತಿಯನ್ನು ಪಡೆದ ಗೋಪಿನಾಥ ಶೆಟ್ಟಿಯವರು ಈ ಸಂಸ್ಥೆಯಲ್ಲಿ 35 ವರ್ಷಗಳ ಕಾಲ ದುಡಿದಿದ್ದಾರೆ. ಆನಿರೀಕ್ಷಿತವಾಗಿ ಶಿವನ ಪಾದ ಸೇರಿದ ಇವರಿಗೆ ಸದ್ಗತಿ ಲಭಿಸಲಿ ಹಾಗೂ ಅವರ ಮನೆಯವರಿಗೆ ಶೋಕವನ್ನು ಭರಿಸುವ ಶಕ್ತಿಯನ್ನು ಭಗವಂತನು ಕರುಣಿಸಲಿ ಎಂದು ನಮನ ಸಲ್ಲಿಸಿದರು. ವಿವೇಕಾನಂದ ಪಾಲಿಟೆಕ್ನಿಕ್‌ನ ಪ್ರಾಂಶುಪಾಲ ಚಂದ್ರಕುಮಾರ್ ಮಾತನಾಡಿ, ಆತ್ಮೀಯ ಗೆಳೆಯ ಗೋಪಿನಾಥ ಶೆಟ್ಟಿಯವರು ಕಾಲೇಜಿನ ಅಭಿವೃದ್ಧಿಗಾಗಿ ಶ್ರಮಿಸಿದ್ದಾರೆ ಹಾಗೂ ಉನ್ನತಿಯನ್ನು ಹೊಂದುವಲ್ಲಿ ಸಫಲರಾಗಿದ್ದಾರೆ ಎಂದರು. ಸಿವಿಲ್ ವಿಭಾಗ ಮುಖ್ಯಸ್ಥರಾದ ರವಿರಾಂ ಮಾತನಾಡಿ, ಗೋಪಿನಾಥ ಶೆಟ್ಟಿಯವರು ಜೊತೆಯಾಗಿ ಕೆಲಸ ಮಾಡಿಕೊಂಡಿದ್ದರು ಹಾಗೂ ಉತ್ತಮ ಒಡನಾಡಿಯಾಗಿದ್ದರು. ಶಿಸ್ತಿನ ಸಿಪಾಯಿಯಾಗಿದ್ದರೂ ಆಂತರ‍್ಯದಲ್ಲಿ ಶ್ರೀಮಂತರಾಗಿದ್ದರು. ಸಂಸ್ಥೆಯ ಏಳಿಗೆಯನ್ನೇ ಬಯಸುತ್ತಿದ್ದರು ಎಂದರು. ಇಲೆಕ್ಟ್ರಾನಿಕ್ಸ್ ಕಮ್ಯೂನಿಕೇಶನ್ ವಿಭಾಗ ಮುಖ್ಯಸ್ಥ ಮುರಳೀಧರ್ ಯಸ್. ಮಾತನಾಡಿ, ಸಂಸ್ಥೆಯಲ್ಲಿ ನಿಸ್ವಾರ್ಥ ಸೇವೆಯನ್ನು ಮಾಡಿ ಸಾರ್ಥಕ ಜೀವನವನ್ನು ನಡೆಸಿದ್ದ ಗೋಪಿನಾಥ ಶೆಟ್ಟಿಯವರು ಹೆಚ್ಚಿನ ಸಮಯವನ್ನು ಕಾಲೇಜಿಗೆ ಸಮರ್ಪಣೆ ಮಾಡಿದ್ದಾರೆ. ಅವರ ಶಿಸ್ತು, ಸಮಯ ಪರಿಪಾಲನೆ ಗಂಭೀರತೆ ಎಲ್ಲವೂ ಆದರ್ಶಪ್ರಾಯ ಎಂದರು. ಪುತ್ತೂರು ನಗರಸಭಾ ಸದಸ್ಯ ಜೀವಂಧರ ಜೈನ್ ಮಾತನಾಡಿ, ಅನೇಕ ಸಂದರ್ಭಗಳಲ್ಲಿ ಉತ್ತಮ ಮಾರ್ಗದರ್ಶನ ನೀಡಿ ಕಷ್ಟಕಾಲದಲ್ಲಿ ಪರಿಹಾರ ನೀಡುತ್ತಿದ್ದರು. ಹಾಗೂ ಸಂಸ್ಥೆಯ ಪರವಾಗಿ ಮಾತನಾಡುತ್ತಿದ್ದ ಗೋಪಿನಾಥ ಶೆಟ್ಟಿಯವರು ಇನ್ನೊಬ್ಬರ ಕಷ್ಟಕ್ಕೆ ಸ್ಪಂದಿಸುವ ವ್ಯಕ್ತಿತ್ವ ಹೊಂದಿದ್ದರು ಎಂದು ತಮ್ಮ ನೆನಪನ್ನು ಹಂಚಿಕೊಂಡರು.

ಪಾಲಿಟೆಕ್ನಿಕ್‌ನ ನಿಕಟಪೂರ್ವ ಸಂಚಾಲಕ ಮುರಳೀಧರ ಭಟ್ ಬಂಗಾರಡ್ಕ ಮಾತನಾಡಿ, ಒಬ್ಬ ಉತ್ತಮ ಶಿಕ್ಷಕನಾಗಿ ವಿದ್ಯಾರ್ಥಿಯನ್ನು ಉನ್ನತ ಮಟ್ಟಕ್ಕೆ ಏರಿಸಬಹುದು ಎಂಬುದಕ್ಕೆ ಉದಾಹರಣೆಯಾಗಿ ಶಿಸ್ತುಬದ್ಧವಾಗಿ ಕೆಲಸಮಾಡುತ್ತಿದ್ದರು. ಬೆಳ್ಳಿಹಬ್ಬದ ಸಂದರ್ಭದಲ್ಲಿ ಎಲ್ಲಾ ಕಾರ‍್ಯಗಳು ವಿಜ್ರಂಭಣೆಯಿಂದ ನಡೆಯಲು ಗೋಪಿನಾಥ ಶೆಟ್ಟಿಯವರು ಸಹಕಾರಿಯಾಗಿದ್ದರು ಎಂದರು.
ಕಾಲೇಜಿನ ಮಾಜಿ ಅಧ್ಯಕ್ಷ ಬಲರಾಮ್ ಆಚಾರ‍್ಯ ಮಾತನಾಡಿ, ಅವರು ಬಿಟ್ಟು ಹೋದ ಸ್ಥಳವನ್ನು ತುಂಬಿಸಲಿಕ್ಕಾಗುವುದಿಲ್ಲ. ಆಡಳಿತ ಮಂಡಳಿಯವರು ಹೇಳಿದ ಯಾವುದೇ ಕೆಲಸವನ್ನಾದರೂ ಮಾಡುತ್ತಿದ್ದರು. ಕಷ್ಟ ಸಾಧ್ಯವಾದದ್ದನ್ನು ವಿವರಿಸಿ ತಿಳಿಸುತ್ತಿದ್ದರು. ಇದು ತುಂಬಾ ಅಪರೂಪದ ಗುಣ. ಅವರ ಬದ್ಧತೆ ಸ್ಮರಣೀಯ. ಭಗವಂತ ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ ಎಂದರು. ಫಾರ್ಮಸಿ ಕಾಲೇಜಿನ ಸಂಚಾಲಕ ಗೋವಿಂದ ಪ್ರಕಾಶ್ ಸಾಯ ಮಾತನಾಡಿ, ಶ್ರೀರಾಮನ ದರ್ಶನಕ್ಕೆ ಹೊರಟವರು ಶ್ರೀರಾಮನ ಪಾದವನ್ನೇ ಸೇರಿದರು. ಓರ್ವ ಉಪನ್ಯಾಸಕರಾಗಿ ಪ್ರಾಂಶುಪಾಲರಾಗಿ ತಮ್ಮ ಅಪಾರ ಅನುಭವವನ್ನು ಕಾಲೇಜಿಗೆ ಕೊಡುವ ಉದ್ದೇಶದಿಂದ ಅವರ ಮಾರ್ಗದರ್ಶನದಲ್ಲಿ ಸಂಸ್ಥೆಯನ್ನು ಬೆಳೆಸುವ ಆಶಯವನ್ನು ಹೊಂದಿದ್ದ ನಮಗೆ ಇದು ತುಂಬಲಾರದ ನಷ್ಟ. ಫಾರ್ಮಸಿ ಕಾಲೇಜಿನ ಪ್ರತಿಯೊಂದು ಕಂಬ ಗೋಡೆಗಳಲ್ಲೂ ಅವರ ಪರಿಶ್ರಮವನ್ನು ನಾವು ಕಾಣುತ್ತಿದ್ದೇವೆ ಎಂದರು. ನಿಕಟಪೂರ್ವ ಅಧ್ಯಕ್ಷ ಶ್ರೀಪ್ರಸನ್ನ ಭಟ್ ಮಾತನಾಡಿ, ಕೊರೋನಾ ಸಂದರ್ಭದಲ್ಲಿ ಗೋಪಿನಾಥ ಶೆಟ್ಟಿಯವರು ಮುಖ್ಯ ರೂವಾರಿಯಾಗಿ ಕೆಲಸಮಾಡಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಲಭಿಸಲಿ ಎಂದರು. ಪುತ್ತೂರು ಘಟಕದ ಅಧ್ಯಕ್ಷ ಪ್ರಮೋದ್ ಮಾತನಾಡಿ, ಸಿವಿಲ್ ಇಂಜಿನಿಯರಿಂಗ್ ಕ್ಷೇತ್ರಕ್ಕೆ ಅವರ ದೃಷ್ಟಿ ಹಾಗೂ ಕೊಡುಗೆ ತುಂಬಾ ಇದೆ. ನಮ್ಮ ಕ್ಷೇತ್ರಕ್ಕೆ ಅವರ ಅಗಲುವಿಕೆ ತುಂಬಾ ನಷ್ಟ ತಂದಿದೆ. ಅವರ ದೂರದೃಷ್ಟಿಯಂತೆ ನಾವು ನಡೆದರೆ ಅವರ ಆತ್ಮಕ್ಕೆ ಶಾಂತಿ ಲಭಿಸಿದಂತಾಗುತ್ತದೆ ಎಂದರು.

ರೆಡ್‌ಕ್ರಾಸ್ ಕಾರ‍್ಯಕ್ರಮ ಸಂಯೋಜನಾ ಉಪಸಮಿತಿಯ ಮುಖ್ಯಸ್ಥ ಪ್ಯಾಟ್ರಿಕ್ ಮಸ್ಕರೇನಿಯಸ್ ಮಾತನಾಡಿ, ಈ ಸಂಸ್ಥೆಯಲ್ಲಿ ರೆಡ್‌ಕ್ರಾಸ್ ಸಂಸ್ಥೆಯ ಚಟುವಟಿಕೆಗಳನ್ನು ಆಯೋಜಿಸಲು ಸಂಪೂರ್ಣ ಬೆಂಬಲವನ್ನು ನೀಡಿದ್ದರು ಎಂದರು. ಅನಿಲ ದೀಪಕ್ ರೈ ಮಾತನಾಡಿ, ಈ ಸಂಸ್ಥೆಯು ರಾಷ್ಟ್ರೀಯ ಜನೌಷಧಿ ಪರಿಯೋಜನೆಯಡಿ 12 ಜನೌಷಧಿ ಕೇಂದ್ರಗಳನ್ನು ಗೋಪಿನಾಥ ಶೆಟ್ಟಿಯವರ ಮುಂದಾಳತ್ವದಲ್ಲಿ ಸ್ಥಾಪಿಸಿದೆ. ಅನೇಕ ಸಂದರ್ಭಗಳಲ್ಲಿ ಉತ್ತಮ ಮಾರ್ಗದರ್ಶನವನ್ನು ನೀಡಿ ಸಹಕರಿಸಿದ್ದಾರೆ ಎಂದರು. ವಿವೇಕಾನಂದ ಪಾಲಿಟೆಕ್ನಿಕ್‌ನ ನಿಕಟಪೂರ್ವ ಸದಸ್ಯರಾದ ಸೂರ‍್ಯನಾಥ ಆಳ್ವ ಮಾತನಾಡಿ, ಗೋಪಿನಾಥ ಶೆಟ್ಟಿಯವರು ಹೃದಯ ಶ್ರೀಮಂತರಾಗಿದ್ದರು. ಶಿಸ್ತು ಆತ್ಮೀಯತೆಗೂ ಹತ್ತಿರವಾಗಿದ್ದರು. ಪುತ್ತೂರಿನ ಅನೇಕ ಕಟ್ಟಡದ ರೂವಾರಿಯಾಗಿದ್ದರು. ಯಾವತ್ತೂ ದುಡ್ಡಿನ ಆಸೆಗೆ ಕೆಲಸ ಮಾಡಿದವರಲ್ಲ ಹಾಗೂ ಕೊಡುಗೈ ದಾನಿಯಾಗಿದ್ದರು ಎಂದರು. ಸಹವರ್ತಿಯಾಗಿದ್ದ ನಾರಾಯಣ ಬೈಪಡಿತ್ತಾಯರು ಮಾತನಾಡಿ, 21 ವರ್ಷ ನನ್ನ ಒಡನಾಡಿಯಾಗಿದ್ದು, ನನ್ನೊಳಗಿನ ಚರ್ಚೆ, ಸಿಟ್ಟು ಮೊದಲಾದವುಗಳಿಗೆ ಕಡಿವಾಣ ಹಾಕುತ್ತಿದ್ದ ಆತ್ಮೀಯ ವ್ಯಕ್ತಿ. ಅಗಲಿದ ಅವರ ಆತ್ಮಕ್ಕೆ ದೇವರು ಚಿರಶಾಂತಿ ಕೊಟ್ಟು ಅವರ ಅಗಲುವಿಕೆಯನ್ನು ಸಹಿಸುವ ಶಕ್ತಿಯನ್ನು ನಮಗೆಲ್ಲರಿಗೂ ಕೊಡಲಿ ಎಂದರು. ಶಾಂತಿ ಮಂತ್ರದೊಂದಿಗೆ ಕಾರ‍್ಯಕ್ರಮ ಮುಕ್ತಾಯಗೊಂಡಿತು.

LEAVE A REPLY

Please enter your comment!
Please enter your name here