ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ  ‘ಗ್ರೀಟಿಂಗ್ ಫೆಸ್ಟ್ ‘ಶಾಲಾ ಪ್ರಾರಂಭೋತ್ಸವ

0

ಪೋಷಕರು ಸ್ವಯಂ ಶಿಸ್ತನ್ನು ಪಾಲಿಸುತ್ತ, ಮಕ್ಕಳಲ್ಲೂ  ಸಂಸ್ಕಾರವಂತರನ್ನಾಗಿ ಬೆಳೆಸಬೇಕು: ಪ್ರಹ್ಲಾದ ಶೆಟ್ಟಿ ಜೆ.
ಒಬ್ಬ ಶಿಕ್ಷಕ  ಶಿಕ್ಷಣ ಮಂದಿರವನ್ನು ನಿರ್ಮಿಸಿದರೆ ಸರಸ್ವತಿಯೇ ಒಲಿದಂತೆ: ಸುಬ್ಬಪ್ಪ ಕೈಕಂಬ

ವಿಟ್ಲ: ಮಾಣಿ ಪೆರಾಜೆ ವಿದ್ಯಾನಗರದ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯ ಪ್ರಾರಂಭೋತ್ಸವವು ಮೇ. 29 ರಂದು  ನಡೆಯಿತು.ವಿದ್ಯಾರ್ಥಿಗಳಲ್ಲಿ ದೇಶಪ್ರೇಮವನ್ನು ಬೆಳೆಸುವ ನಿಟ್ಟಿನಲ್ಲಿ ಶಾಲೆಯಲ್ಲಿ  ಪ್ರತಿದಿನವು ರಾಷ್ಟ್ರಧ್ವಜ ಹಾರಿಸುವ ಪ್ರಕ್ರಿಯೆಗೆ ನಿವೃತ್ತ ಯೋಧ ಹಾಗೂ ಸಂಸ್ಥೆಯ ಹಿರಿಯ ಪೋಷಕರಾದ ಮಾಧವ ಕುಲಾಲ್ ಧ್ವಜಾರೋಹಣ ಮಾಡುವ ಮೂಲಕ ಪ್ರಾರಂಭೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ಸಂಸ್ಥೆಗೆ ನೂತನವಾಗಿ ದಾಖಲಾದ  ವಿದ್ಯಾರ್ಥಿಗಳನ್ನು ಅವರ ಪೋಷಕರೊಂದಿಗೆ ಆರತಿ ಎತ್ತಿ, ಪುಷ್ಪಾರ್ಚನೆಗೈದು ಸಾಂಪ್ರದಾಯಿಕವಾಗಿ ಸ್ವಾಗತಿಸಲಾಯಿತು.

ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ  ಬಾಲವಿಕಾಸ ಟ್ರಸ್ಟಿನ ಅಧ್ಯಕ್ಷರಾದ ಪ್ರಹ್ಲಾದ ಶೆಟ್ಟಿ ಜೆ.ರವರು ದೀಪ ಬೆಳಗಿಸಿ ಮಾತನಾಡಿ ಗ್ರಾಮೀಣ ಪರಿಸರದ ವಿದ್ಯಾರ್ಥಿಗಳು ನಗರ ಪ್ರದೇಶಗಳಲ್ಲಿ ಸಿಗುವ ಶಿಕ್ಷಣದಿಂದ ವಂಚಿತರಾಗಬಾರದು ಎಂಬ ದೂರದೃಷ್ಟಿಯಿಂದ ಸುಸಜ್ಜಿತವಾದ ವ್ಯವಸ್ಥೆಯನ್ನು ಹೊಂದಿರುವ ಈ  ಶಿಕ್ಷಣ ಸಂಸ್ಥೆಯನ್ನು ಹುಟ್ಟುಹಾಕಲಾಗಿದೆ. ಪೋಷಕರು ಸ್ವಯಂ ಶಿಸ್ತನ್ನು ಪಾಲಿಸುತ್ತ , ತಮ್ಮ ಮಕ್ಕಳಲ್ಲೂ ಒಳ್ಳೆಯ ಸಂಸ್ಕಾರವನ್ನು ಬೆಳೆಸಬೇಕು. ಮಕ್ಕಳಿಗೆ ಅತ್ಯುತ್ತಮವಾದ ಶಿಕ್ಷಣ ನೀಡುವಲ್ಲಿ ಪೋಷಕರ ಜವಾಬ್ದಾರಿ ಗಮನಾರ್ಹವಾದದ್ದು ಎಂದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಉಪ್ಪಿನಂಗಡಿ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲರಾದ  ಸುಬ್ಬಪ್ಪ ಕೈಕಂಬ ಮಾತನಾಡಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯು ಸುಸಜ್ಜಿತವಾದ ತಾಂತ್ರಿಕ ತರಗತಿ ಕೋಣೆಗಳನ್ನು ಹೊಂದಿದ್ದು , ಮಕ್ಕಳ ವಿಶಿಷ್ಟ ಕಲೆಗಳಿಗೆ ಪ್ರೋತ್ಸಾಹ ಕೊಡುವ ಮತ್ತು ಪ್ರತಿಭೆಗಳನ್ನು ಗುರುತಿಸುವ ಅತ್ಯುತ್ತಮ ಶಾಲೆ. ಒಬ್ಬ ಶಿಕ್ಷಕ  ಶಿಕ್ಷಣ ಮಂದಿರವನ್ನು ನಿರ್ಮಿಸಿದರೆ ಸರಸ್ವತಿಯೇ ಒಲಿದಂತೆ. ಅಂತಹ ಮಹತ್ಕಾರ್ಯವನ್ನು ಪ್ರಹ್ಲಾದ್ ಶೆಟ್ಟಿರವರು ಮಾಡಿರುವುದು ಶ್ಲಾಘನೀಯ. ಇಂತಹ ಶಾಲೆಯಲ್ಲಿ ಕಲಿಯುವ ಮಕ್ಕಳು ನಿಜವಾಗಿಯೂ ಭಾಗ್ಯಶಾಲಿಗಳು ಎಂದರು.

ಶಾಲಾ ಪ್ರಾರಂಭೋತ್ಸವದ ಪ್ರಯುಕ್ತ ವಿದ್ಯಾರ್ಥಿಗಳು ಪ್ರಸ್ತುತ ಪಡಿಸಿದ ನೃತ್ಯ ರೂಪಕ ಎಲ್ಲರ ಮೆಚ್ಚುಗೆ ಗಳಿಸಿತು. ಈ ಸಂದರ್ಭದಲ್ಲಿ  ಬಾಲವಿಕಾಸ ಟ್ರಸ್ಟಿನ ಕಾರ್ಯದರ್ಶಿ ಮಹೇಶ್ ಶೆಟ್ಟಿ ಜೆ, ಮುಖ್ಯೋಪಾಧ್ಯಾಯಿನಿ ವಿಜಯಲಕ್ಷ್ಮಿ ವಿ ಶೆಟ್ಟಿ, ಉಪಸ್ಥಿತರಿದ್ದರು.

 ಸಂಸ್ಥೆಯ ಆಡಳಿತಾಧಿಕಾರಿ  ರವೀಂದ್ರ ದರ್ಬೆ ಸ್ವಾಗತಿಸಿ,  ಸಹಶಿಕ್ಷಕಿ ಯಜ್ಞೇಶ್ವರಿ ಎನ್ ವಂದಿಸಿದರು. ಸಹಶಿಕ್ಷಕಿಯರಾದ ಸುಪ್ರಿಯಾ ಡಿ  ಮತ್ತು ಸುಧಾ ಎನ್ ರಾವ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here