9/11 ದಾಖಲೆ ಪುಡಾದಲ್ಲೇ ನೀಡುವಂತೆ ಶೀಘ್ರದಲ್ಲೇ ಆದೇಶ ಜಾರಿ- ಶಾಸಕ ಅಶೋಕ್ ರೈ

0

ಪುತ್ತೂರು: ಮನೆ ಕಟ್ಟುವಲ್ಲಿ ಅಗತ್ಯವಾಗಿ ಬೇಕಾದ 9/11 ಕಂದಾಯ ದಾಖಲೆಯನ್ನು ಪುಡಾದಲ್ಲೇ ನೀಡುವಂತೆ ಸರಕಾರಕ್ಕೆ ಮನವಿ ಮಾಡಿದ್ದು ಮನವಿಗೆ ಸರಕಾರ ತಕ್ಷಣ ಸ್ಪಂದಿಸಿದ್ದು ಶೀಘ್ರದಲ್ಲೇ ಸರಕಾರದಿಂದ ಆದೇಶವಾಗಲಿದೆ ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ತಿಳಿಸಿದ್ದಾರೆ.ಇಂದು ಬೆಂಗಳೂರಿನಲ್ಲಿ ನಗರಾಭಿವೃದ್ದಿ ಇಲಾಖೆಯ ಕಾರ್ಯದರ್ಶಿ ದೀಪಾ ಚೋಳನ್‌ರವರನ್ನು ಭೇಟಿಯಾಗಿ 9/11 ದಾಖಲೆ ವಿಚಾರದಲ್ಲಿ ಚರ್ಚೆ ನಡೆಸಿದರು.

ಪ್ರಸ್ತುತ ಗ್ರಾಮೀಣ ಭಾಗದ ಜನರು 9/11 ದಾಖಲೆಗಾಗಿ ಮಂಗಳೂರು ನಗರಪಾಲಿಕಾ ವ್ಯಾಪ್ತಿಯ ಮುಡಾ ಕಚೇರಿಗೆ ತೆರಳಬೇಕಿದೆ. ಗ್ರಾಮೀಣ ಭಾಗದಲ್ಲಿರುವ ಜನತೆಗೆ ಇದು ಸಂಕಷ್ಟವಾಗಿ ಪರಿಣಮಿಸಿದೆ. ಗ್ರಾಪಂ ಕಚೇರಿಯಲ್ಲೇ ನೀಡುತ್ತಿದ್ದ 9/11 ದಾಖಲೆ ಪತ್ರವನ್ನು ಹೈಕೋರ್ಟು ಆದೇಶದಂತೆ ಮುಡಾ ಕಚೇರಿಯಿಂದ ಕಳೆದ ಕೆಲವು ತಿಂಗಳಿಂದ ನೀಡಲಾಗುತ್ತಿದೆ. ಗ್ರಾಮೀಣ ಭಾಗದ ಜನರು ಈ ದಾಖಲೆಗಾಗಿ ದೂರದ ಮಂಗಳೂರಿಗೆ ತೆರಳಬೇಕಾದ ಅನಿವಾರ್ಯತೆ ಇದೆ. ಇದು ಜನರಿಗೆ ತೊಂದರೆಯಾಗಿ ಪರಿಣಮಿಸಿದ್ದು ಅನೇಕ ಮಂದಿ ಈ ಬಗ್ಗೆ ನನ್ನಲ್ಲಿ ಅಳಲನ್ನು ತೋಡಿಕೊಂಡಿದ್ದಾರೆ. ಜನರ ಹಿತದೃಷ್ಟಿಯಿಂದ ತಕ್ಷಣವೇ ಈ ನಿಯಮವನ್ನು ರದ್ದು ಮಾಡಿ ಆಯಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪುಡಾ ಕಚೇರಿಯಲ್ಲೇ 9/11 ದಾಖಲೆ ಪತ್ರವನ್ನು ನೀಡುವ ವ್ಯವಸ್ಥೆಯನ್ನು ಮಾಡುವಂತೆ ಕಂದಾಯ ಸಚಿವರನ್ನು ಆಗ್ರಹಿಸಿದ್ದರು. ನಗರಾಭಿವೃದ್ದಿ ಇಲಾಖೆಯ ಕಾರ್ಯದರ್ಶಿಯವರ ಜೊತೆ ಚರ್ಚೆ ನಡೆಸಿದ ಶಾಸಕರು 9/11 ಪತ್ರವನ್ನು ಪುಡಾ ಕಚೇರಿಯಲ್ಲಿ ಲಭ್ಯವಾಗುವಂತೆ ವ್ಯವಸ್ಥೆ ಮಾಡುವಂತೆ ಮನವಿ ಮಾಡಿದ್ದು ಶೀಘ್ರದಲ್ಲೇ ಆದೇಶ ಹೊರಬರಲಿದೆ.

9/11 ಗಾಗಿ ಜನರು ಮುಡಾ ಕಚೇರಿಗೆ ಅಲೆದಾಡಬೇಕಾದ ಅನಿವಾರ್ಯತೆ ಇತ್ತು. ಈ ಹಿಂದೆ ಗ್ರಾಪಂ ಕಚೇರಿಯಲ್ಲೇ ಈ ದಾಖಲೆಯನ್ನು ನೀಡಲಾಗುತ್ತಿತ್ತು ಆದರೆ ಕೆಲ ತಿಂಗಳ ಹಿಂದೆ ಹೈಕೋರ್ಟು ಆದೇಶವನ್ನು ನೀಡಿ 9/11 ದಾಖಲೆಯನ್ನು ಮುಡಾ ಕಚೇರಿಯಿಂದ ಪಡೆದುಕೊಳ್ಳುವಂತೆ ತೀರ್ಪು ನೀಡಿತ್ತು. ಇದು ಜನರಿಗೆ ತುಂಬಾ ಕಷ್ಟದ ಕೆಲಸವಾಗಿದೆ ಅದರಲ್ಲೂ ಗ್ರಾಮೀಣ ಭಾಗದ ಬಡವರು ಮನೆ ಕಟ್ಟಬೇಕಾದರೆ 9/11 ದಾಖಲೆಗಾಗಿ ಮಂಗಳೂರಿಗೆ ಅಲೆದಾಡಬೇಕಾದ ಸ್ಥಿತಿ ಇತ್ತು. ಇದನ್ನು ರದ್ದು ಮಾಡುವಂತೆ ಸರಕಾರಕ್ಕೆ ಮನವಿ ಮಾಡಿದ್ದೆ, ನಗರಾಬಿವೃದ್ದಿ ಇಲಾಖೆಯ ಕಾರ್ಯದರ್ಶಿ ಜೊತೆಯೂ ಮಾತನಾಡಿದ್ದೇನೆ ಮುಂದಿನ ಕೆಲವೆ ದಿನಗಳಲ್ಲಿ ಪುತ್ತೂರು ಕ್ಷೇತ್ರ ವ್ಯಾಪ್ತಿಯ ಜನರಿಗೆ ಪುತ್ತೂರಿನ ಪುಡಾ ಕಚೇರಿಯಲ್ಲೇ 9/11 ದಾಖಲೆ ಸಿಗಲಿದೆ.

LEAVE A REPLY

Please enter your comment!
Please enter your name here