ರಾಷ್ಟ್ರೀಯ ಸಂಸ್ಥೆಗಳ ಶೈಕ್ಷಣಿಕ ಸಮಿತಿ ಸದಸ್ಯರಾಗಿ ಹೀರೆಬಂಡಾಡಿಯ ಪ್ರೊ.ರಮೇಶ್ ಸಾಲಿಯಾನ್ ಆಯ್ಕೆ

0

ಪುತ್ತೂರು: ಭಾರತದ ಪ್ರತಿಷ್ಠಿತ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ (JNU), ನವದೆಹಲಿಯಲ್ಲಿ ಅರ್ಥಶಾಸ್ತ್ರ ಅಧ್ಯಯನ ಹಾಗೂ ಯೋಜನಾ ವಿಭಾಗದಲ್ಲಿ ಪ್ರೊಫೆಸರ್ ಆಗಿರುವ ಡಾ| ರಮೇಶ್ ಸಾಲ್ಯಾನ್ ರವರು ರಿದಾಬಾದ್ ನಲ್ಲಿರುವ ಅರುಣ್ ಜೇಟ್ಲಿ ಹಣಕಾಸಿನ ನಿರ್ವಹಣೆಯ ರಾಷ್ಟ್ರೀಯ ಸಂಸ್ಥೆ (AJNIFM) ಮತ್ತು ಸಿಮ್ಲದಲ್ಲಿರುವ ನ್ಯಾಷನಲ್ ಅಕಾಡೆಮಿ ಆಫ್ ಆಡಿಟ್ ಮತ್ತು ಅಕೌಂಟ್ಸ್ (NAA) ಶೈಕ್ಷಣಿಕ ಸಮಿತಿಗೆ ಸದಸ್ಯರಾಗಿ 2 ವರ್ಷಗಳ ಅವಧಿಗೆ ಜವಹರ್‌ಲಾಲ್ ನೆಹರೂ ವಿವಿ ಕುಲಪತಿಗಳಿಂದ ನಾಮನಿರ್ದೇಶನಗೊಂಡಿದ್ದಾರೆ.
ಇವರು ದೇಶದ ಪ್ರಖ್ಯಾತ ವಿಶ್ವವಿದ್ಯಾಲಯದ ಶಿಕ್ಷಣ ಸಂಸ್ಥೆಗಳಲ್ಲಿ ಆರ್ಥಿಕ ವಿಚಾರ ಹಾಗೂ ದೇಶದ ಪ್ರಚಲಿತ ವಿದ್ಯಮಾನಗಳ ಬಗ್ಗೆ ಪ್ರಬಂಧ ಮಂಡಿಸಿದ್ದಾರೆ. ಅನೇಕ ಪತ್ರಿಕೆಗಳಲ್ಲಿ ವಿವಿಧ ವಿಷಯಗಳ ಬಗ್ಗೆ ಉನ್ನತ ಲೇಖನಗಳನ್ನು ಬರೆದಿರುತ್ತಾರೆ.

ಡಾ| ರಮೇಶ್ ಸಾಲ್ಯಾನ್ ಅವರು ವಿವಿಯ ಪರೀಕ್ಷಾಂಗ ಉಪ ಕುಲಸಚಿವರಾಗಿ, ವಿಶೇಷಾಧಿಕಾರಿಯಾಗಿಯೂ ಕಾರ್ಯ ನಿರ್ವಹಿಸುವ ಮೂಲಕ ಪರೀಕ್ಷಾಂಗ ವಿಭಾಗದಲ್ಲಿ ಹಲವಾರು ಸುಧಾರಣೆಗಳನ್ನು ಜಾರಿಗೆ ತರುವಲ್ಲಿ ಮಹತ್ವದ ಪಾತ್ರವಹಿಸಿದ್ದರು. ಕೋಟ್ಯಂತರ ರೂಪಾಯಿ ವೆಚ್ಚ ಮಾಡಬೇಕಾದ ಸಾಫ್ಟ್ ವೇರ್ ‌ನ್ನು ವಿವಿಗೆ ಉಚಿತವಾಗಿ ದೊರೆಯುವಂತೆ ಅಭಿವೃದ್ಧಿ ಪಡಿಸುವಲ್ಲಿ ಪ್ರಮುಖ ಪಾತ್ರವಹಿಸಿ ಪರೀಕ್ಷಾಂಗ ವಿಭಾಗದಲ್ಲಿ ಪಾರದರ್ಶಕ ಶೀಘ್ರ ಫಲಿತಾಂಶ ದೊರಕಿಸಿ ವಿದ್ಯಾರ್ಥಿಗಳಿಗೆ ಕೊಡುಗೆ ನೀಡಿರುವುದು ಅವರ ಕಾರ್ಯ ಶೈಲಿಯ ಹೆಗ್ಗಳಿಕೆ.
ಪುತ್ತೂರು ತಾಲೂಕು ಹಿರೇಬಂಡಾಡಿ ಗ್ರಾಮದ ಶೆಟ್ಲಪಾಲು ಚಂದ್ರರತ್ನ ನಿವಾಸದ ದಿ. ರತ್ನಾವತಿ ಮತ್ತು ಚಂದ್ರಶೇಖರ ಪೂಜಾರಿ ಅವರ ಪುತ್ರ ಡಾ| ರಮೇಶ್ ಸಾಲ್ಯಾನ್ ಅವರು ತನ್ನ ಪ್ರಾಥಮಿಕ ವಿದ್ಯಾಭ್ಯಾಸವನ್ನು ಹಿರೇಬಂಡಾಡಿ ಹಿರಿಯ ಪ್ರಾಥಮಿಕ ಶಾಲೆ, ಹೈಸ್ಕೂಲ್ ಶಿಕ್ಷಣವನ್ನು ಉಪ್ಪಿನಂಗಡಿ ಸರಕಾರಿ ಜೂನಿಯರ್ ಕಾಲೇಜಿನಲ್ಲಿ ಪೂರೈಸಿರುತ್ತಾರೆ. ಆನಂತರ ಅವರು ಮಂಗಳೂರಿನ ಶ್ರೀ ಗೋಕರ್ಣನಾಥೇಶ್ವರ ಪದವಿ ಕಾಲೇಜಿನಲ್ಲಿ ಉದ್ಯೋಗಿಯಾಗಿ ಸೇರಿದರು. ಅದೇ ಸಂದರ್ಭದಲ್ಲಿ ಬೆಸೆಂಟ್ ಸಂಧ್ಯಾ ಕಾಲೇಜಿನಲ್ಲಿ ಪಿಯುಸಿ ಹಾಗೂ ಪದವಿ ಶಿಕ್ಷಣ ಪಡೆದರು. ಮುಂದೆ ಉದ್ಯೋಗ ಬಿಟ್ಟು ಮಂಗಳೂರು ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದು, ಪ್ರಶಸ್ತಿ ಸಹಿತ ಪ್ರಥಮ ಸ್ಥಾನದಲ್ಲಿ ಮಾಸ್ಟರ್ ಆ ಫಿಲಾಸಫಿ ಪದವಿಯನ್ನು ಹಾಗೂ ಮಂಗಳೂರು ವಿಶ್ವವಿದ್ಯಾಲಯದಲ್ಲಿಯೇ ಡಾಕ್ಟರೇಟ್ ಪದವಿ ಪಡೆದರು. ಮಂಗಳೂರು ವಿವಿಯಲ್ಲಿ ಸಂಶೋಧನಾ ಸಹಾಯಕರಾಗಿ, ಸಂಶೋಧನಾ ಫೆಲೋ ಆಗಿ ಕಾರ್ಯನಿರ್ವಹಿಸಿ, ಮುಂದೆ ಅವರು ಉಜಿರೆಯ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ 2003ರಲ್ಲಿ ಮಂಗಳೂರಿನಲ್ಲಿ ಸ್ಥಾಪನೆಗೊಂಡ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಪ್ರಕಾಶನ ಮತ್ತು ಚಾರಿಟೇಬಲ್
ಟ್ರಸ್ಟ್‌ನ ಸ್ಥಾಪಕ ಟ್ರಸ್ಟಿಯಾಗಿ, ಅದರ ಕೋಶಾಧಿಕಾರಿಯಾಗಿ ಟ್ರಸ್ಟ್‌ನ ಸಾಮಾಜಿಕ ಸೇವೆಯಲ್ಲಿ ಅಪೂರ್ವವಾದ ಕಾರ್ಯಕ್ಕೆ ಸಾಕ್ಷಿಯಾದರು. 2004ರಲ್ಲಿ ಟ್ರಸ್ಟಿನಿಂದ ಪ್ರಾರಂಭಿಸಲಾದ ಆತ್ಮಶಕ್ತಿ ತ್ರೈಮಾಸಿಕ ಪತ್ರಿಕೆಯ ಪ್ರಧಾನ ಸಂಪಾದಕರಾಗಿ ಇದೇ ಅವಧಿಯಲ್ಲಿ ತುಮಕೂರು ವಿಶ್ವವಿದ್ಯಾಲಯದ ಸಂಶೋಧನಾ ವಿಭಾಗದ ನಿರ್ದೇಶಕ, ಉಪಹಣಕಾಸು ಅಧಿಕಾರಿ, ಸಹಾಯಕ ಪ್ರಾಧ್ಯಾಪಕ, ಕಾನೂನು ಕೋಶದ ಉಪಕುಲ ಸಚಿವರಾದರು. ಬಳಿಕ ದೆಹಲಿಯ ಜೆಎನ್‌ಯು ನಲ್ಲಿ ಪೋಸರ್ ಹುದ್ದೆ ಒಲಿದು ಬಂತು.
ಡಾ| ರಮೇಶ್ ಸಾಲ್ಯಾನ್‌ರವರು ಪತ್ನಿ ಸಹನಾ ರಮೇಶ್, ಹಾಗೂ ಮಕ್ಕಳಾದ ಕೇಶ್ನಿ ಆರ್. ಸಾಲಿಯಾನ್ ಮತ್ತು ಕನಿಷ್ಕ್ ಆರ್. ಸಾಲಿಯಾನ್‌ರೊಂದಿಗೆ ಸಂತೃಪ್ತ ಜೀವನ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here