ಉಪ್ಪಿನಂಗಡಿಯಲ್ಲಿ ಉಚಿತ ವೈದ್ಯಕೀಯ ಶಿಬಿರ

0

ಉಪ್ಪಿನಂಗಡಿ: ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ ಮಂಗಳೂರು ಇದರ ಉಪ್ಪಿನಂಗಡಿ ಶಾಖೆಯ ಆರನೇ ವಾರ್ಷಿಕೋತ್ಸವದ ಪ್ರಯುಕ್ತ ಜೇಸಿಐ ಉಪ್ಪಿನಂಗಡಿ ಚಾರಿಟೇಬಲ್ ಟ್ರಸ್ಟ್ ಮತ್ತು ಜೇಸಿಐ ಉಪ್ಪಿನಂಗಡಿ ಇವರ ಜಂಟಿ ಸಹಯೋಗದೊಂದಿಗೆ ದೇರಳಕಟ್ಟೆಯ ಕಣಚೂರು ಆಯುರ್ವೇದ ಆಸ್ಪತ್ರೆಯ ವೈದರ ತಂಡದವರಿಂದ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಇಲ್ಲಿನ ಎಚ್.ಎಂ. ಆಡಿಟೋರಿಯಂನಲ್ಲಿ ನಡೆಯಿತು.

ಶಿಬಿರ ಉದ್ಘಾಟಿಸಿ ಮಾತನಾಡಿದ ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘ ಇದರ ಅಧ್ಯಕ್ಷ ಕೆ.ವಿ. ಪ್ರಸಾದ, ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಅದರ ಅಧ್ಯಕ್ಷರಾದ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ಇವರ ಮುಂದಾಳತ್ವದಲ್ಲಿ ಬ್ಯಾಂಕಿಂಗ್ ವ್ಯವಹಾರದ ಜೊತೆಗೆ ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದೆ. ಜನರ ಆರೋಗ್ಯದ ದೃಷ್ಟಿಯಿಂದ ಇಂತಹ ಶಿಬಿರಗಳನ್ನು ಆಯೋಜಿಸಿರುವುದು ಶ್ಲಾಘನೀಯ ಎಂದರು. ಮುಖ್ಯ ಅತಿಥಿ ಜೇಸಿಐ ಉಪ್ಪಿನಂಗಡಿ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಪ್ರಶಾಂತ್ ಕುಮಾರ್ ರೈ ಮಾತನಾಡಿ, ಹಲಸು ಹಬ್ಬದ ಕಾರ್ಯಕ್ರಮದ ಜೊತೆಗೆ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ ಇದರ ಸಹಭಾಗಿತ್ವದೊಂದಿಗೆ ನಡೆಯುತ್ತಿರುವ ಉಚಿತ ವೈದ್ಯಕೀಯ ಶಿಬಿರ ಜನರಿಗೆ ಅನುಕೂಲವಾಗಲಿ. ಇದು ಜೇಸಿಐ ಸಂಸ್ಥೆಗೂ ಕೂಡ ಹೆಮ್ಮೆ ಎಂದು ತಿಳಿಸಿದರು. ಜೇಸಿಐ ಉಪ್ಪಿನಂಗಡಿಯ ಅಧ್ಯಕ್ಷೆ ಲವೀನ ಪಿಂಟೋ ಮಾತನಾಡಿ, ಉಚಿತ ವೈದ್ಯಕೀಯ ತಪಾಸಣಾ ಶಿಬಿರವು ಗ್ರಾಮೀಣ ಭಾಗದ ಜನರಿಗೆ ತುಂಬಾ ಪ್ರಯೋಜನಕಾರಿಯಾಗಿದ್ದು, ಸಂಘವು ಇನ್ನು ಹೆಚ್ಚು ಹೆಚ್ಚು ಶಿಬಿರ ಗ್ರಾಮೀಣ ಪ್ರದೇಶ ಗಳಲ್ಲಿ ನಡೆಸಲಿ ಹಾಗೂ ಇನ್ನಷ್ಟು ಜನರು ಇದರ ಪ್ರಯೋಜನ ಪಡೆಯುವಂತಗಲಿ ಎಂದು ಶುಭ ಹಾರೈಸಿದರು. ದಂತ ವಿನ್ಯಾಸ ವೈದ್ಯ ಡಾ. ಆಶಿತ್ ಎಂ. ವಿ. ಮಾತನಾಡಿ, ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಬ್ಯಾಂಕಿಂಗ್ ವ್ಯವಹಾರ ವಲ್ಲದೆ ಉಚಿತ ವೈದ್ಯಕೀಯ ಶಿಬಿರದ ಜೊತೆಗೆ ಇಂತಹುದೇ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕಣಚೂರು ಆಯುರ್ವೇದ ಆಸ್ಪತ್ರೆಯ ವೈದ್ಯ ಡಾ. ಜೈನುದ್ದೀನ್ ಇವರು ಮಾತನಾಡಿ, ಕಣಚೂರು ಆಯುರ್ವೇದ ಆಸ್ಪತ್ರೆಯಲ್ಲಿ ಲಭ್ಯವಿರುವ ಸೌಲಭ್ಯಗಳ ಬಗ್ಗೆ ಶಿಬಿರಾರ್ಥಿಗಳಿಗೆ ಮಾಹಿತಿಯನ್ನು ನೀಡಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ಮಾತನಾಡಿ, ಸಂಘವು ಎಲ್ಲಾ ಶಾಖೆಗಳಲ್ಲಿ ವಾರ್ಷಿಕೋತ್ಸವದ ಸಂದರ್ಭದಲ್ಲಿ ಉಚಿತ ಆರೋಗ್ಯ ಶಿಬಿರವನ್ನು ಆಯೋಜಿಸಿದೆ. ಗ್ರಾಮೀಣ ಭಾಗದಲ್ಲಿ ಕೃಷಿ ಉತ್ಪನ್ನಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸಂಘವು ಕೃಷಿ ಮೇಳ ಹಾಗೂ ಹಲಸಿನ ಹಬ್ಬದಂತಹ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡುತ್ತಾ ಬಂದಿದೆ. ಉಪ್ಪಿನಂಗಡಿ ಪರಿಸರದ ಸದಸ್ಯರ ಸಹಕಾರದಿಂದಾಗಿ ಉಪ್ಪಿನಂಗಡಿ ಶಾಖೆಯು ಉತ್ತಮ ಪ್ರಗತಿಯನ್ನು ಸಾಧಿಸಿದ್ದು, ಇನ್ನು ಮುಂದಿನ ದಿನಗಳಲ್ಲಿಯೂ ಇದೇ ರೀತಿ ಸಹಕಾರವಿರಲಿ. ಹಾಗೆಯೇ ಇಂದಿನ ಈ ಶಿಬಿರವು ಸಾರ್ವಜನಿಕರಿಗೆ ಉಪಯುಕ್ತವಾಗಲಿ ಎಂದರಲ್ಲದೆ, ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಶಿಬಿರಾರ್ಥಿಗಳಿಗೆ ಉಚಿತ ಔಷಧಿ ವಿತರಣೆ, ಅಗತ್ಯವುಳ್ಳವರಿಗೆ ಉಚಿತ ಕಣ್ಣಿನ ಪೊರೆಯ ಚಿಕಿತ್ಸೆಯನ್ನು ಸಹಭಾಗಿ ಆಸ್ಪತ್ರೆಗಳಲ್ಲಿ ನಡೆಸುತ್ತಾ ಬಂದಿರುತ್ತದೆ. ನಮ್ಮ ಶಿಬಿರಗಳಲ್ಲಿ ಒಟ್ಟು 15000ಕ್ಕೂ ಮಿಕ್ಕಿ ಕನ್ನಡಕವನ್ನು ಉಚಿತವಾಗಿ ವಿತರಿಸಲಾಗಿದೆ. ಸಂಘದ ಸ್ವಂತ ಮಾಲಿಕತ್ವದ ನೂತನ 33 ನೇ ಶಾಖೆಯು ಜು.15ರಂದು ಕೃಷ್ಣಾಪುರದಲ್ಲಿ ಸಾರ್ವಜನಿಕ ಸೇವೆಗಾಗಿ ಶುಭಾರಂಭಗೊಳ್ಳಲಿದೆ.
ಕಾರ್ಯಕ್ರಮದಲ್ಲಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ನಿರ್ದೇಶಕ ರಮನಾಥ್ ಸನಿಲ್, ಗೋಪಾಲ್ ಎಂ., ಚಂದ್ರಾವತಿ, ಮೂರ್ತೆದಾರರ ಸೇವಾ ಸಹಕಾರಿ ಸಂಘ ಉಪ್ಪಿನಂಗಡಿ ಇದರ ಅಧ್ಯಕ್ಷ ಅಜಿತ್ ಕುಮಾರ್ ಪಾಲೇರಿ, ಜೇಸಿಐ ವಲಯ ನಿರ್ದೇಶಕ ಭರತ್ ಶೆಟ್ಟಿ, ಗುಣಕರ ಅಗ್ನಾಡಿ ಮತ್ತಿತರರು ಉಪಸ್ಧಿತರಿದ್ದರು. ಕಾರ್ಯಕ್ರಮದಲ್ಲಿ ಸುಮಾರು 160 ಕ್ಕೂ ಮಿಕ್ಕಿ ಶಿಬಿರಾರ್ಥಿಗಳು ಶಿಬಿರದ ಪ್ರಯೋಜನವನ್ನು ಪಡೆದುಕೊಂಡರು. ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಹಿರಿಯ ಶಾಖಾಧಿಕಾರಿ ರವಿಕಲಾ ಇವರು ಸ್ವಾಗತಿಸಿದರು. ಶಾಖಾಧಿಕಾರಿ ಭವ್ಯ ವಂದಿಸಿದರು. ಶಾಖಾಧಿಕಾರಿ ಧನಲಕ್ಷ್ಮೀ ಕಾರ್ಯಕ್ರಮ ನಿರೂಪಿಸಿದರು. ಉಚಿತ ವೈದ್ಯಕೀಯ ತಪಾಸಣಾ ಶಿಬಿರದ ಸಂಯೋಜನೆಯನ್ನು ಶಾಖಾಧಿಕಾರಿ ಕವಿತಾ. ಐ ನಡೆಸಿದರು.

LEAVE A REPLY

Please enter your comment!
Please enter your name here