ಬೆಂಗಳೂರು ಫ್ರೀಡಂ ಪಾರ್ಕ್‌ನಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಪ್ರತಿಭಟನೆ-ಪುತ್ತೂರು, ಕಡಬ ತಾಲೂಕಿನ ನೂರಾರು ಶಿಕ್ಷಕರು ಭಾಗಿ

0

ನನ್ನ ಅವಧಿಯಲ್ಲಿ ಸರಿಮಾಡಿಕೊಡಬೇಕೆಂಬ ಮಹಾದಾಸೆ ಇದೆ -ಮಧು ಬಂಗಾರಪ್ಪ

ಪುತ್ತೂರು: ವೃಂದ ಮತ್ತು ನೇಮಕಾತಿ (ಸಿ ಆಂಡ್ ಆರ್)2017ರ ನಿಯಮದ ತಿದ್ದುಪಡಿ, ಶಿಕ್ಷಕರ ಬಡ್ತಿ ಹಾಗೂ ವರ್ಗಾವಣೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸದಸ್ಯರು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಆ.12ರಂದು ಬೃಹತ್ ಪ್ರತಿಭಟನೆ ನಡೆಸಿದರು. ಈ ಪ್ರತಿಭಟನೆಯಲ್ಲಿ ಪುತ್ತೂರು ಹಾಗೂ ಕಡಬ ತಾಲೂಕಿನ ನೂರಾರು ಪ್ರಾಥಮಿಕ ಶಾಲಾ ಶಿಕ್ಷಕರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದಿದ್ದ ಸಾವಿರಾರು ಶಿಕ್ಷಕರು ಭಾಗವಹಿಸಿದ್ದರು.


ಒಂದರಿಂದ ಐದನೇ ತರಗತಿವರೆಗೆ ಬೋಧಿಸುವ ಶಿಕ್ಷಕರು ಪದವೀಧರರಾಗಿದ್ದಲ್ಲಿ ಅವರನ್ನು ಆರು ಮತ್ತು ಎಂಟನೇ ತರಗತಿವರೆಗೆ ಪಾಠ ಮಾಡಲು ಜಿಪಿಟಿ ಶಿಕ್ಷಕರ ಹುದ್ದೆಗಳಿಗೆ ಬಡ್ತಿ ನೀಡಬೇಕು. ಇದಕ್ಕೆ ಅಡ್ಡಿಯಾಗಿರುವ ಸಿ ಆಂಡ್ ಆರ್ ನಿಯಮ-2017ಕ್ಕೆ ತಿದ್ದುಪಡಿ ಮಾಡಬೇಕು. ಸೇವಾ ಜ್ಯೇಷ್ಠತೆ, ಮುಂಬಡ್ತಿ, ವರ್ಗಾವಣೆ ಪ್ರಕ್ರಿಯೆಯಲ್ಲಿ ಆಗಿರುವ ಅನ್ಯಾಯ ಸರಿಪಡಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಪ್ರೌಢಶಾಲೆಗಳ ಬಡ್ತಿ ನಿಯಮದಂತೆ 2016ರ ಮೊದಲು ನೇಮಕಾತಿ ಹೊಂದಿದ ಹಾಗೂ ಬಿ.ಇಡಿ ಪದವಿ ಪಡೆದ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಪ್ರೌಢಶಾಲೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಭರ್ತಿ ಮಾಡಿಕೊಳ್ಳಲು ಆದ್ಯತೆ ನೀಡಬೇಕು. ನಂತರ ಹೊಸದಾಗಿ ನೇಮಕವಾದ ಜಿಪಿಟಿ ಶಿಕ್ಷಕರನ್ನು ಪರಿಗಣಿಸಬೇಕು. ಹಿಂದಿನ ನಿಯಮದಂತೆ ಮುಖ್ಯ ಶಿಕ್ಷಕರ ಹುದ್ದೆಗೆ ವಿದ್ಯಾರ್ಹತೆಯನ್ನು ಪರಿಗಣಿಸದೇ ಅಖಂಡ ಸೇವಾಹಿರಿತನದ ಆಧಾರದ ಮೇಲೆ ಬಡ್ತಿಗೆ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು.


ಸಾಹಿತಿ ಬರಗೂರು ರಾಮಚಂದ್ರಪ್ಪ ಮಾತನಾಡಿ, ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಸೇವಾ ಹಿರಿತನದ ಆಧಾರದ ಮೇಲೆ ಮುಖ್ಯೋಪಾಧ್ಯಾಯ ಹುದ್ದೆ ನೀಡಬೇಕು. ಪದವೀಧರ ಶಿಕ್ಷಕರಿಗೆ ‘ಪದವೀಧರ ಶಿಕ್ಷಕ’ ಪದನಾಮ ನೀಡಬೇಕು. ಸಿ ಆಂಡ್ ಆರ್ ನಿಯಮಕ್ಕೆ ತಿದ್ದುಪಡಿಗೊಳಿಸಿ ಪೂರ್ವಾನ್ವಯ ಮಾಡಿರುವುದು ತಪ್ಪು. ಇದರಿಂದ ಪ್ರಾಥಮಿಕ ಶಿಕ್ಷಕರಿಗೆ ಅನ್ಯಾಯವಾಗಿದೆ. ಶಿಕ್ಷಕರ ಬೇಡಿಕೆಗಳನ್ನು ಈಡೇರಿಸಿದರೆ ಸರ್ಕಾರಕ್ಕೆ ಯಾವುದೇ ರೀತಿ ಹೊರೆಯಾಗುವುದಿಲ್ಲ ಎಂದು ಹೇಳಿದರು. ಶಿಕ್ಷಣ ತಜ್ಞ ವಿ.ಪಿ. ನಿರಂಜನಾರಾಧ್ಯ, ಸಂಘದ ಅಧ್ಯಕ್ಷ ಕೆ.ನಾಗೇಶ್, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ, ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ, ಮಾಜಿ ಅಧ್ಯಕ್ಷ ಬಸವರಾಜ್ ಗುರಿಕಾರ್, ಸಿಐಟಿಯು ಅಧ್ಯಕ್ಷೆ ಎಸ್. ವರಲಕ್ಷ್ಮಿ ಭಾಗವಹಿಸಿದ್ದರು.


ಇಲಾಖಾ ಸಭೆ ನಡೆಸಿ ತೀರ್ಮಾನ: ಶಿಕ್ಷಣ ಸಚಿವರ ಭರವಸೆ:
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಶಿಕ್ಷಣ ಸಚಿವ ಮಧುಬಂಗಾರಪ್ಪ ಅವರು ಪ್ರತಿಭಟನಾ ಶಿಕ್ಷಕರ ಜೊತೆ ಮಾತುಕತೆ ನಡೆಸಿದರು. ನಿಮ್ಮ ಸಮಸ್ಯೆಗಳನ್ನು ಆಲಿಸಿ ಮನಸಿಗೆ ನೋವಾಗಿದೆ. ನ್ಯಾಯಯುತ ಬೇಡಿಕೆಗಳಿಗಾಗಿ ನೀವು ಹೋರಾಡುತ್ತಿದ್ದೀರಿ. ಮುಖ್ಯಮಂತ್ರಿಗಳ ಸಲಹೆ ಸಹಕಾರವನ್ನು ತೆಗೆದುಕೊಂಡು 2-3ದಿನಗಳಲ್ಲಿ ಇಲಾಖಾ ಸಭೆ ನಡೆಸಿ ಕಾನೂನು ಸಲಹೆಗಳನ್ನು ಪಡೆದುಕೊಂಡು ಅಂತಿಮ ತೀರ್ಮಾನಕ್ಕೆ ಬರುತ್ತೇನೆ ಹಾಗೂ ನನ್ನ ಅವಧಿಯಲ್ಲಿಯೇ ಇದನ್ನು ಸರಿ ಮಾಡಿಕೊಡಬೇಕು ಎಂಬ ಮಹದಾಸೆ ನನ್ನದು ಎಂದು ಭರವಸೆ ನೀಡಿದರು.

LEAVE A REPLY

Please enter your comment!
Please enter your name here