‘ಐವನ್ ಡಿಸೋಜರ ಭಾಷಣದಲ್ಲಿ ತಪ್ಪೇನಿದೆ…?’ – ಬಿಜೆಪಿಗೆ ಕ್ರಿಶ್ಚಿಯನ್ ಯೂನಿಯನ್ ಪ್ರಶ್ನೆ

0

ಪುತ್ತೂರು: ಆ.19ಕ್ಕೆ ಮಂಗಳೂರಿನಲ್ಲಿ ಕೆಪಿಸಿಸಿಯ ನಿರ್ದೇಶನದಂತೆ ರಾಜ್ಯಪಾಲರ ಸಂವಿಧಾನ ವಿರೋಧಿ ನಡೆ ಪ್ರತಿಭಟನೆಯಲ್ಲಿ, ʼಸಂವಿಧಾನ ವಿರೋಧಿಯಾಗಿ ನಡೆದುಕೊಂಡ ಕರ್ನಾಟಕದ ರಾಜ್ಯಪಾಲರನ್ನು ರಾಷ್ಟ್ರಪತಿಗಳು ಹಿಂದಕ್ಕೆ ಕರೆಸಿಕೊಳ್ಳದಿದ್ದರೆ ಬಾಂಗ್ಲದೇಶದ ಅಧ್ಯಕ್ಷರು ರಾತ್ರೋರಾತ್ರಿ ಓಡಿ ಹೋದ ಪರಿಸ್ಥಿತಿ ಗವರ್ನರ್ ಆಫಿಸಿಗೆ ಬರುತ್ತದೆ…ʼ ಎಂದು ಅವರು ಭಾಷಣದಲ್ಲಿ ಹೇಳಿರುವುದರಲ್ಲಿ ತಪ್ಪೇನಿದೆ? ಎಂದು ಪುತ್ತೂರು ಕ್ರಿಶ್ಚಿಯನ್ ಯೂನಿಯನ್ ಅಧ್ಯಕ್ಷ ಮೌರಿಸ್ ಮಸ್ಕರೇನಸ್ ಅವರು ಪತ್ರಿಕಾಗೋಷ್ಟಿಯಲ್ಲಿ ಬಿಜೆಪಿಯನ್ನು ಪ್ರಶ್ನಿಸಿದ್ದಾರೆ.


ಕರ್ನಾಟಕ ವಿಧಾನಪರಿಷತ್ ಸದಸ್ಯ ಐವನ್ ಡಿಸೋಜ ಅವರ ಹೇಳಿಕೆಯನ್ನು ತಿರುಚಿ ಅವರ ಮಾನಹಾನಿಗೆ ಪ್ರಯತ್ನಿಸಿದ ಅವರ ಅನುಪಸ್ಥಿತಿಯಲ್ಲಿ ಅವರ ಮನೆಗೆ ರಾತ್ರಿ ಕಲ್ಲುತೂರಾಟ ಮಾಡಿ ರಾಜಕೀಯ ಹಿಂಸಾರಕ್ಕೆ ಯತ್ನಿಸಿದ ದ.ಕ.ಜಿಲ್ಲಾ ಬಿಜೆಪಿಯ ಗೂಂಡಾ ಸಂಸ್ಕೃತಿಯನ್ನು ಕ್ರಿಶ್ಚಿಯನ್ ಯೂನಿಯನ್ ಪುತ್ತೂರು ತೀವ್ರವಾಗಿ ಖಂಡಿಸುತ್ತದೆ ಎಂದ ಅವರು, ಐವನ್ ಡಿಸೋಜ ಅವರು ಕರ್ನಾಟಕದ ಅಲ್ಪಸಂಖ್ಯಾತ ಸಮುದಾಯದ ಏಕೈಕ ವಿಧಾನಪರಿಷತ್ ಸದಸ್ಯರಾಗಿ ಜ್ಯಾತೀತತೆಯೊಂದಿಗೆ ಸಮುದಾಯದ ಧ್ವನಿಯನ್ನು ವಿಧಾನಪರಿಷತ್‌ನಲ್ಲಿ ಎತ್ತುತ್ತಿದ್ದಾರೆ. ಇಂತಹ ಜನಪ್ರತಿನಿಧಿಯನ್ನು ವಿನಾ ಕಾರಣ ನಿಂಧಿಸಿ ರಾತ್ರಿ ಹೊತ್ತು ಕಲ್ಲುತೂರಾಟ ನಡೆಸಿರುವುದು ಭಯೋತ್ಪಾದನೆಗೆ ಸಮಾನವಾದ ಕೃತ್ಯವಾಗಿದೆ ಎಂದರು.

ಅವರು ಪ್ರತಿಭಟನೆಯಲ್ಲಿ ಸಂವಿಧಾನ ರಕ್ಷಣೆ ಮಾಡಬೇಕಾದ ರಾಜ್ಯಪಾಲರು ಸಂವಿಧಾನ ವಿರೋಧಿಯಾಗಿ ನಡೆದುಕೊಂಡರೆ ಜನರ ಆಕ್ರೋಶವನ್ನು ಎದುರಿಸಬೇಕಾದಿತು ಎಂಬ ಅರ್ಥದಲ್ಲಿ ಭಾಷಣ ಮಾಡಿದ್ದರು. ಆದರೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರು ಪೊಲೀಸ್ ಸ್ಟೇಷನ್‌ಗೆ ನುಗ್ಗಿ ಅಲ್ಲಿರುವ ಕರ್ತವ್ಯ ನಿರತ ಪೊಲೀಸ್ ಅಧಿಕಾರಿಗಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಗಲಾಟೆ ಮಾಡಿದ್ದಾರೆ. ಇನ್ನೊಂದು ಪ್ರಕರಣದಲ್ಲಿ ಅರಣ್ಯ ಒತ್ತುವಾರಿಯನ್ನು ತೆರವು ಮಾಡಲು ಹೋದಂತಹ ಪುತ್ತೂರಿನ ಅರಣ್ಯಾಧಿಕಾರಿಯ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದರು. ಅದೇ ರೀತಿ ಮೊನ್ನೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ಪಾರ್ಲಿಮೆಂಟ್‌ನಲ್ಲಿ ಕೆನ್ನೆಗೆ ಹೊಡೆಯಬೇಕೆಂದು ಭರತ್ ಶೆಟ್ಟಿಯವರು ಹೇಳಿದ್ದರು. ನಮ್ಮ ಮಾಜಿ ಸಂಸದರು ಜಿಲ್ಲೆಗೆ ಬೆಂಕಿ ಹಚ್ಚುತ್ತಾರೆ ಎಂದು ಹೇಳಿದ್ದರು. ಇವೆಲ್ಲ ಬಿಜೆಪಿಗೆ ಮರೆತು ಹೋಗಿದೆಯಾ ಎಂದು ಪ್ರಶ್ನಿಸಿದ ಅವರು ಇಂತಹ ಪಕ್ಷವನ್ನು ಪ್ರತಿನಿಧಿಸುವ ನಾಯಕರು ಐವನ್‌ರವರ ಬಗ್ಗೆ ಮಾತನಾಡಲು ಯಾವ ನೈತಿಕತೆ ಇದೆ ಎಂದು ಸವಾಲು ಹಾಕಿದರು.


ಅಭಿಪ್ರಾಯಗಳು ಮಾತುಗಳಿಗೆ ಸೀಮಿತವಾಗಿರಲಿ:
ಪ್ರಜಾಪ್ರಭುತ್ವದಲ್ಲಿ ಅಭಿಪ್ರಾಯಬೇಧಗಳು ಮಾತುಗಳಿಗೆ ಸೀಮಿತವಾಗಿರಬೇಕು ಹೊರತು ವ್ಯಕ್ತಿಗೆ ಮತ್ತು ಆಸ್ತಿಗೆ ಹಾನಿ ಮಾಡುವ ಮಟ್ಟಕ್ಕೆ ಹೋಗಬಾರದು, ಐವನ್ ಡಿಸೋಜ ಅವರ ಮನೆಗೆ ಕಲ್ಲುತೂರಾಟ ಮಾಡಿರುವುದು ಅಕ್ಷಮ್ಯ ಅಪರಾದ. ಯಾವುದೇ ರಾಜಕೀಯ ಟೀಕೆಗಳು ಮಾತಿನ ಮೂಲಕ ಪ್ರತಿಕ್ರಿಯೆ ಕೊಡಬೇಕು ಹೊರತು ಕಲ್ಲುತೂರಾಟ ಮಾಡುವುದಲ್ಲ. ಸಮಾಜದ ಶಾಂತಿ ನೆಮ್ಮದಿಗೆ ಅಪಾಯ ಆಗಬಾರದು. ಕಲ್ಲುತೂರಾಟ ಮಾಡಿದ ಆರೋಪಿಗಳನ್ನು ಪೊಲೀಸರು ಪತ್ತೆಹಚ್ಚಿ, ಇದರ ಹಿಂದೆ ಯಾವ ಶಕ್ತಿ ಕೆಲಸ ಮಾಡಿದೆ ಸಾರ್ವಜನಿಕವಾಗಿ ತಿಳಿಸುವ ಅವಶ್ಯಕತೆ ಇದೆ. ಆರೋಪಿಗಳಿಗೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದರು. ಕ್ರಿಶ್ಚಿಯನ್ ಯೂನಿಯನ್ ಪುತ್ತೂರು ಇದರ ಗೌರವಾಧ್ಯಕ್ಷ ವಲೇರಿಯನ್ ಡಯಾಸ್, ಉಪಾಧ್ಯಕ್ಷ ಕ್ಯಾನ್ಯೂಟ್ ಮಸ್ಕರೇನಸ್, ಜೊತೆ ಕಾರ್ಯದರ್ಶಿ ನಿವೃತ್ತ ಪೊಲೀಸ್ ಅಧಿಕಾರಿ ಜೋಕಿಂ ಲೂಯಿಸ್, ಕೋಶಾಧಿಕಾರಿ ವಾಲ್ಟರ್ ಸ್ವಿಕ್ವೇರಾ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here