ಮೆಸ್ಕಾಂನಿಂದ ಕಂದಾಯ ವಸೂಲಾತಿ ವಿಶೇಷ ಅಭಿಯಾನ – ಶುಲ್ಕ ಪಾವತಿಗೆ ರಜಾ ದಿನಗಳಲ್ಲಿಯೂ ಮೆಸ್ಕಾಂನ ಸೇವೆ

0

ಪುತ್ತೂರು: ಮೆಸ್ಕಾಂ ಪುತ್ತೂರು ಗ್ರಾಮಾಂತರ ಉಪವಿಭಾಗದ ಕುಂಬ್ರ ವ್ಯಾಪ್ತಿಯಲ್ಲಿ ಸರಕಾರಿ ಸ್ಥಾವರಗಳು ಸೇರಿದಂತೆ ಸಂಪರ್ಕ ಪಡೆದಿರುವ ಎಲ್ಲಾ ಸ್ಥಾವರಗಳಿಂದ ಬೃಹತ್ ಮೊತ್ತದ ಕಂದಾಯ ಪಾವತಿಗೆ ಬಾಕಿ ಇದ್ದು, ಮೆಸ್ಕಾಂ ಸೆ.2ರಿಂದ ಸೆ.30 ರವರೆಗೆ ಕಂದಾಯ ವಸೂಲಾತಿಗೆ ವಿಶೇಷ ಅಭಿಯಾನವನ್ನು ಪ್ರಾರಂಭಿಸಿದೆ. ಈ ಅವಧಿಯಲ್ಲಿ ವಿದ್ಯುತ್ ಬಿಲ್ಲು ಪಾವತಿಸಲು ಬಾಕಿ ಇರುವ ಎಲ್ಲಾ ಗ್ರಾಹಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ರಜಾ ದಿನಗಳಲ್ಲಿಯೂ ಬಿಲ್ ಪಾವತಿಗೆ ಕಚೇರಿ ಕಾರ್ಯನಿರ್ವಹಿಸಲಿದೆ.


ಗೃಹ ಬಳಕೆ, ವಾಣಿಜ್ಯ, ಕೈಗಾರಿಕಾ ಹಾಗೂ ಸರಕಾರಿ ಸ್ಥಾವರಗಳು ಸೇರಿದಂತೆ ಮೆಸ್ಕಾಂನಿಂದ ಸಂಪರ್ಕ ಪಡೆದಿರುವ ಎಲ್ಲಾ ಸ್ಥಾವರಗಳು ನಿಗದಿ ಪಡಿಸಿದ ವಾಯಿದೆಯೊಳಗಾಗಿ ಶುಲ್ಕ ಪಾವತಿಸಬೇಕು. ವಾಯಿದೆಯೊಳಗಾಗಿ ಬಿಲ್ಲು ಪಾವತಿಸದ ಸ್ಥಾವರಗಳ ವಿದ್ಯುತ್ ಸಂಪರ್ಕವನ್ನು ಅಭಿಯಾನದ ಸಂದರ್ಭದಲ್ಲಿ ಯಾವುದೇ ಮುನ್ಸೂಚನೆ ನೀಡದೆ ಕಡಿತಗೊಳಿಸಲಾಗುವುದು. ಗ್ರಾಹಕರ ಅನುಕೂಲಕ್ಕಾಗಿ ಈ ತಿಂಗಳ ರಜಾದಿನಗಳಾದ 14.09.2024 ರ ಎರಡನೇ ಶನಿವಾರ,15.09.2024 ರ ಆದಿತ್ಯವಾರ,16.09.2024 ರ ಸೋಮವಾರ,23.09.2024 ರ ಆದಿತ್ಯವಾರ,28.09.2024 ರ ನಾಲ್ಕನೇ ಶನಿವಾರ ಹಾಗೂ 29.04.2024 ರ ಆದಿತ್ಯವಾರ ಗಳಂದು ಸಹ ಕುಂಬ್ರ ಉಪವಿಭಾಗ ಕಚೇರಿಯಲ್ಲಿ ಬೆಳಿಗ್ಗೆ 10.00ರಿಂದ ಮದ್ಯಾಹ್ನ 3.30ಗಂಟೆಯವರೆಗೆ ನಗದು ಕೌಂಟರನ್ನು ತೆರೆದಿಡಲಾಗುವುದು. ಗ್ರಾಹಕರು ಈ ಸೌಲಭ್ಯವನ್ನು ಬಳಸಿಕೊಂಡು ವಿದ್ಯುತ್ ಕಡಿತದಂತಹ ಕಠಿಣ ಕ್ರಮಗಳಿಗೆ ಅವಕಾಶ ನೀಡದೆ ಬಿಲ್ಲುಗಳನ್ನು ಪಾವತಿಸುವಂತೆ ಮೆಸ್ಕಾಂ ಪ್ರಕಟಿಸಿದೆ.

ಕೂಡಲೇ ಬಿಲ್ಲು ಪಾವತಿಸಿ ಮೆಸ್ಕಾಂ ಇಲಾಖೆಯೊಡನೆ ಸಹಕರಿಸುವಂತೆ ಕೋರಲಾಗಿದೆ.

LEAVE A REPLY

Please enter your comment!
Please enter your name here