ತೆಗ್ಗು ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆ

0


ನಿವ್ವಳ ಲಾಭ ರೂ.55,616, ಶೇ.10 ಡಿವಿಡೆಂಡ್, ಬೋನಸ್ 34 ಪೈಸೆ ಘೋಷಣೆ

ಪುತ್ತೂರು: ಕೆಯ್ಯೂರು ಗ್ರಾಮದ ತೆಗ್ಗು ಹಾಲು ಉತ್ಪಾದಕರ ಸಹಕಾರ ಸಂಘದ 2023-24 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯು ಸಂಘದ ಅಧ್ಯಕ್ಷ ಶುಭಪ್ರಕಾಶ ಎರಬೈಲು ಅವರ ಅಧ್ಯಕ್ಷತೆಯಲ್ಲಿ ಸೆ.12 ರಂದು ತೆಗ್ಗು ಶಾಲಾ ಸಭಾಂಗಣದಲ್ಲಿ ನಡೆಯಿತು. ಸಂಘದ ಕಾರ್ಯದರ್ಶಿ ಅರ್ಪಣಾ ಎ. 2023-24 ನೇ ಸಾಲಿನ ವರದಿ ವಾಚನ ಮಾಡುತ್ತಾ, ಸಂಘವು ಕೆಯ್ಯೂರು ಗ್ರಾಮದ ತೆಗ್ಗು, ಕೋಡಂಬು, ಬಲ್ಕಾಡ್, ಎರಕ್ಕಳ, ಕಲ್ಲಗುಡ್ಡೆ ಹಾಗೂ ಸರ್ವೆ ಗ್ರಾಮದ ಕೆಳಗಿನ ಸೊರಕೆ ವ್ಯಾಪ್ತಿಯನ್ನು ಒಳಗೊಂಡಿದ್ದು ಒಟ್ಟು 109 ಮಂದಿ ಸದಸ್ಯರಿದ್ದು ಇದರಲ್ಲಿ 43 ಮಂದಿ ಸದಸ್ಯರು ಸಂಘಕ್ಕೆ ಹಾಲು ಪೂರೈಕೆ ಮಾಡುತ್ತಿದ್ದಾರೆ. ಸಂಘವು ವರದಿ ಸಾಲಿನಲ್ಲಿ ರೂ.2,61,678 ವ್ಯಾಪಾರ ಲಾಭ ಗಳಿಸಿದ್ದು ರೂ.55,616.15 ನಿವ್ವಳ ಲಾಭ ಗಳಿಸಿದೆ ಎಂದು ತಿಳಿಸಿದರು.

ಸಂಘದ ಅಧ್ಯಕ್ಷ ಶುಭಪ್ರಕಾಶ್ ಎರಬೈಲು ಮಾತನಾಡಿ, ಸಂಘವು ಗಳಿಸಿದ ಲಾಭಾಂಶದಲ್ಲಿ ಸದಸ್ಯರಿಗೆ ಶೇ.10 ಡಿವಿಡೆಂಡ್ ನೀಡುವುದು ಹಾಗೇ ಲೀಟರ್‌ಗೆ 34 ಪೈಸೆ ಬೋನಸ್ ನೀಡುವುದಾಗಿ ಘೋಷಣೆ ಮಾಡಿದರು.


ಶಿಕ್ಷಣ ಕ್ಷೇತ್ರದ ಸಾಧಕರಿಗೆ ಸನ್ಮಾನ
ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಂಘದ ಸದಸ್ಯರ ಮಕ್ಕಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಇದರಲ್ಲಿ ಹಿತಾ ರೈ ಸಾಗು, ಮಿಥುನ್ ಎನ್ ನೆಲ್ಲಿಗುರಿ, ಹವೀಶ್ ಎ ಎರಕ್ಕಳ, ಧನುಷ್ ಎ ಎರಬೈಲು, ನಿಖಿತಾ ಎ.ಎಂ ಎರಕ್ಕಳರವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.


ಬಹುಮಾನ ವಿತರಣೆ
ಸಂಘಕ್ಕೆ ವರದಿ ವರ್ಷದಲ್ಲಿ ಅತೀ ಹೆಚ್ಚು ಹಾಲು ಪೂರೈಕೆ ಮಾಡಿದ ಸದಸ್ಯರುಗಳನ್ನು ಈ ಸಂದರ್ಭದಲ್ಲಿ ಗುರುತಿಸಿ ಬಹುಮಾನ ನೀಡುವ ಮೂಲಕ ಪ್ರೋತ್ಸಾಹಿಸಲಾಯಿತು. ಪ್ರಥಮ ಬಹುಮಾನವನ್ನು ಡೊಂಬಯ್ಯ ಗೌಡ ಕೋಡಂಬು, ದ್ವಿತೀಯ ಬಹುಮಾನವನ್ನು ಬೆಳಿಯಪ್ಪ ಗೌಡ ಕಲ್ಲಗುಡ್ಡೆ ಹಾಗೂ ತೃತೀಯ ಬಹುಮಾನವನ್ನು ಜಯರಾಮ ರೈ ಸಾಗು ಪಡೆದುಕೊಂಡರು. ಉಳಿದಂತೆ ಸದಸ್ಯರಿಗೆ ಪ್ರೋತ್ಸಾಹಕ ಬಹುಮಾನ ನೀಡಲಾಯಿತು.


ಅತಿಥಿಯಾಗಿದ್ದ ದ.ಕ ಹಾಲು ಒಕ್ಕೂಟದ ವೈದ್ಯಾಧಿಕಾರಿ ಡಾ| ಅನುದೀಪ್‌ರವರು ಮಾತನಾಡಿ, ಸರಿಯಾದ ರೀತಿಯಲ್ಲಿ ಸೂಕ್ತ ಮಾಹಿತಿಯನ್ನು ಪಡೆದುಕೊಂಡು ಹೈನುಗಾರಿಕೆ ಮಾಡಿದರೆ ಅದರಂತೆ ಖಂಡಿತ ಲಾಭವನ್ನು ಪಡೆಯಬಹುದಾಗಿದೆ ಎಂದರು. ಹೆಣ್ಣು ಕರು ಸಾಕಾಣಿಕಾ ಯೋಜನೆಯ ಬಗ್ಗೆ ಮಾಹಿತಿ ನೀಡಿದರು ಅದೇ ರೀತಿ ಜಾನುವಾರುಗಳಿಗೆ ವಿಮೆ ಮಾಡಿಸುವ ಬಗ್ಗೆ ಮಾಹಿತಿ ನೀಡಿದರು. ವಿಮೆ ಮಾಡಿಸಿದ ಜಾನುವಾರುಗಳ ಕಿವಿಯಲ್ಲಿ ಟ್ಯಾಗ್ ಇರುವುದು ಕಡ್ಡಾಯವಾಗಿದೆ. ಟ್ಯಾಗ್ ಬಿದ್ದು ಹೋದರೆ ಅಥವಾ ಟ್ಯಾಗ್ ಅನ್ನು ತೆಗೆದು ಮನೆಯಲ್ಲಿಟ್ಟುಕೊಂಡರೆ ವಿಮೆಗೆ ಅದು ಅನ್ವಯವಾಗುವುದಿಲ್ಲ ಎಂಬ ವಿಷಯವನ್ನು ತಿಳಿಸಿದರು. ಸಂಘದ ಅಧ್ಯಕ್ಷ ಶುಭಪ್ರಕಾಶ ಎರಬೈಲು ಮಾತನಾಡಿ, ಸಂಘದ ಬೆಳವಣಿಗೆಗೆ ಸದಸ್ಯರ ಸಹಕಾರ ಬಹಳ ಅಗತ್ಯವಿದೆ. ಗುಣಮಟ್ಟದ ಹಾಲನ್ನು ಅತೀ ಹೆಚ್ಚು ಪೂರೈಕೆ ಮಾಡುವಂತೆ ಕೇಳಿಕೊಂಡು ಸಂಘದ ಅಭಿವೃದ್ದಿಗೆ ಶ್ರಮಿಸುತ್ತಿರುವ ರೈತ ಬಂಧುಗಳಿಗೆ ಕೃತಜ್ಞತೆ ಸಲ್ಲಿಸಿದರು.


ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ರಮಾನಾಥ ರೈ ಕೋಡಂಬು, ನಿರ್ದೇಶಕರುಗಳಾದ ಹರಿಕೃಷ್ಣ ಜೆ.ಜೋಡುಕಾವಲು, ಬಾಳಪ್ಪ ಗೌಡ ಬಾಕುಡ, ಸಂಜೀವ ಆಳ್ವ ಬರಮೇಲು, ತಾರಾನಾಥ ಎ ಎರಕ್ಕಳ, ಗಂಗಾಧರ ಗೌಡ ಎರಕ್ಕಳ, ಲೀಲಾವತಿ ರೈ ಕೋಡಂಬು, ಜಲಜಾಕ್ಷಿ ಎ ರೈ ಸಾಗು ಉಪಸ್ಥಿತರಿದ್ದರು. ಹಾಲು ಪರೀಕ್ಷಕಿ ಸುಹಾಸಿನಿ ಪ್ರಾರ್ಥಿಸಿದರು. ಅಧ್ಯಕ್ಷ ಶುಭಪ್ರಕಾಶ ಎರಬೈಲು ಸ್ವಾಗತಿಸಿ, ನಿರ್ದೇಶಕ ಪ್ರಸಾದ್ ರೈ ಸೊರಕೆ ವಂದಿಸಿದರು.

LEAVE A REPLY

Please enter your comment!
Please enter your name here