ಭಕ್ತಕೋಡಿಯಲ್ಲಿ ಬೈಕ್-ಶಾಲಾ ವಾಹನ ಮಧ್ಯೆ ಅಪಘಾತ – ಬೈಕ್ ಸವಾರನಿಗೆ ಗಂಭೀರ ಗಾಯ – ಮಾನವೀಯತೆ ಮೆರೆದ ಸೌಹಾರ್ದ ವೇದಿಕೆಯ ಅಧ್ಯಕ್ಷ

0

ಪುತ್ತೂರು: ಬೈಕ್ ಮತ್ತು ಶಾಲಾ ಬಸ್ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಗಂಭಿರ ಗಾಯಗೊಂಡಿರುವ ಘಟನೆ ಸರ್ವೆ ಗ್ರಾಮದ ಭಕ್ತಕೋಡಿಯಲ್ಲಿ ಸೆ.19ರಂದು ನಡೆದಿದೆ.
ಪುತ್ತೂರು ಕಡೆಯಿಂದ ಕಾಣಿಯೂರು ಕಡೆಗೆ ನವಾಝ್ ಎಣ್ಮೂರು ಎಂಬವರು ಚಲಾಯಿಸುತ್ತಿದ್ದ ಯಮಹಾ ಎಫ್‌ಝಡ್ ಬೈಕ್ ಮತ್ತು ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಕಾಣಿಯೂರಿನ ಖಾಸಗಿ ವಿದ್ಯಾಸಂಸ್ಥೆಯ ಬಸ್ ಮಧ್ಯೆ ಅಪಘಾತ ಸಂಭವಿಸಿದೆ. ಡಿಕ್ಕಿ ಸಂಭವಿಸಿದ ವೇಳೆ ಬೈಕ್ ಸವಾರ ನವಾಝ್ ರಸ್ತೆಗೆಸೆಯಲ್ಪಟ್ಟಿದ್ದು ನವಾಝ್ ಅವರ ಕಾಲಿಗೆ ಗಂಭೀರ ಗಾಯವಾಗಿದೆ.


ಗಾಯಾಳು ನವಾಝ್ ಅವರನ್ನು ಕೂಡಲೇ ಸರ್ವೆ ಸೌಹಾರ್ದ ವೇದಿಕೆಯ ಅಧ್ಯಕ್ಷ ಕೆ.ಎಂ ಹನೀಫ್ ರೆಂಜಲಾಡಿಯವರು ರಿಕ್ಷಾವೊಂದರಲ್ಲಿ ಪುತ್ತೂರು ಸಿಟಿ ಆಸ್ಪತ್ರೆಗೆ ದಾಖಲು ಮಾಡಿ ಮಾನವೀಯತೆ ಮೆರೆದಿದ್ದಾರೆ.

ಭಕ್ತಕೋಡಿ ಜಂಕ್ಷನ್ ಬಳಿ ಅಪಾಯಕಾರಿ ತಿರುವೊಂದಿದ್ದು ಇಲ್ಲಿ ಅಪಘಾತ ಸಂಭವಿಸಿರುವುದಕ್ಕೆ ಲೆಕ್ಕವೇ ಇಲ್ಲ. ಕೆಲವು ವರ್ಷಗಳಿಂದ ಇಲ್ಲಿ ಹತ್ತಾರು ಅಪಘಾತಗಳು ಸಂಭವಿಸಿದ್ದು, ಅವೈಜ್ಞಾನಿಕ ತಿರುವು ಹೊಂದಿರುವುದು ಮತ್ತು ತಿರುವಿನಲ್ಲಿ ವಿರುದ್ಧ ದಿಕ್ಕಿನಿಂದ ಬರುವ ವಾಹನಗಳು ತಕ್ಷಣಕ್ಕೆ ಕಾಣದೇ ಇರುವುದರಿಂದ ಇಲ್ಲಿ ಅಪಘಾತ ಹೆಚ್ಚಿದ್ದು ಸಂಬಂಧಪಟ್ಟವರು ಇತ್ತ ಗಮನ ಹರಿಸಬೇಕೆನ್ನುವ ಆಗ್ರಹ ಕೇಳಿ ಬಂದಿದೆ.

LEAVE A REPLY

Please enter your comment!
Please enter your name here