ʼಬಸ್ ಇಲ್ಲದೆ ವಿದ್ಯಾರ್ಥಿಗಳಿಗೆ ತೊಂದರೆಯಾದರೆ ಸುಮ್ಮನಿರಲ್ಲʼ-ಕೆಎಸ್‌ಆರ್‌ಟಿಸಿ ಅಧಿಕಾರಿಗೆ ಶಾಸಕ ಅಶೋಕ್ ರೈ ಎಚ್ಚರಿಕೆ

0

ಪುತ್ತೂರು: “ ರೂಟ್‌ಗಳಲ್ಲಿ ಸರಿಯಾಗಿ ಬಸ್ ಬರುತ್ತಿಲ್ಲ, ಒಂದು ದಿನ ಬಂದರೆ ಮಾರನೇ ದಿನ ಬರುವುದಿಲ್ಲ, ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಬಸ್‌ಗಳ ಓಡಾಟ ಇಲ್ಲದೇ ಇರುವ ಕಾರಣ ತೊಂದರೆಯಲ್ಲಿದ್ದಾರೆ, ನಾನು ಪದೇ ಪದೇ ನಿಮಗೆ ಎಚ್ಚರಿಕೆ ಕೊಟ್ಟರೂ ಮತ್ತೆ ಅದೇ ಸಮಸ್ಯೆ ಮರುಕಳಿಸುತ್ತಿದೆ ಇದಕ್ಕೆ ಏನು ಕಾರಣ? ಬಸ್ ಇಲ್ಲವೇ? ಚಾಲಕರಿಲ್ಲವೇ? ಕಂಡಕ್ಟರ್ ಇಲ್ಲವೇ? ಅಥವಾ ನಿಮಗೆ ಖುಷಿ ಬಂದ ಹಾಗೆ ಬಸ್ ಓಡಾಟ ಮಾಡುತ್ತಿದ್ದೀರಾ ಹೀಗೇ ಅಧಿಕಾರಿಯನ್ನು ಶಾಸಕ ಅಶೋಕ್ ರೈ ತರಾಟೆಗೆತ್ತಿಕೊಂಡರು.


ಸೋಮವಾರ ತನ್ನ ಕಚೇರಿಗೆ ಪುತ್ತೂರು ಕೆಎಸ್‌ಆರ್‌ಟಿಸಿ ಅಧಿಕಾರಿಗಳನ್ನು ಕರೆಸಿಕೊಂಡ ಶಾಸಕರು, ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಸರಕಾರಿ ಬಸ್ ಓಡಾಟದಲ್ಲಿ ಆಗುತ್ತಿರುವ ವ್ಯತ್ಯಯದ ಬಗ್ಗೆ ಚರ್ಚೆ ನಡೆಸಿದರು.


ಒಂದೆರಡು ತಿಂಗಳಿಂದ ಈ ಸಮಸ್ಯೆ ಸೃಷ್ಟಿಯಾಗಿದೆ. ಇದು ನಿಮ್ಮ ಗಮನಕ್ಕೆ ಬಂದಿದೆಯಾ ಎಂದು ಪುತ್ತೂರಿನ ಡಿಟಿಒ ಅವರನ್ನು ಪ್ರಶ್ನಿಸಿದರು. ಬಸ್ ಸಂಚಾರದಲ್ಲಿ ತೊಂದರೆಯಾಗಿರುವ ಬಗ್ಗೆ ನಮ್ಮ ಗಮನದಲ್ಲಿದೆ. ಬಸ್ಸು ಕೊರತೆಯಿಲ್ಲ, ಬಸ್ಸುಗಳ ಚಾಲಕರ ಮತ್ತು ನಿರ್ವಾಹಕರ ಕೊರತೆ ಇದೆ. ಖಾಸಗಿಯಾಗಿ ಬಸ್ ಚಾಲಕರನ್ನು ನೇಮಿಸುವ ಗುತ್ತಿಗೆದಾರರು ಸಮರ್ಪಕವಾಗಿ ಚಾಲಕರನ್ನು ನೇಮಿಸಿಕೊಳ್ಳದೇ ಇರುವುದು ಸಮಸ್ಯೆಗೆ ಕಾರಣವಾಗಿದೆ. ಈ ಬಗ್ಗೆ ನಾವು ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದೇವೆ, ಮಾರ್ಚ್ ಕೊನೇ ವಾರದಲ್ಲಿ ಚಾಲಕ ಮತ್ತು ನಿರ್ವಾಹಕರ ನೇಮಕಾತಿ ನಡೆಯಲಿದ್ದು, ಆ ಬಳಿಕ ಸಮಸ್ಯೆ ಇತ್ಯರ್ಥವಾಗುತ್ತದೆ ಎಂದು ತಿಳಿಸಿದ್ದಾರೆ ಎಂದು ಡಿಟಿಒ ಜೈಶಾಂತ್‌ಕುಮಾರ್ ಶಾಸಕರಲ್ಲಿ ಹೇಳಿದರು.

ಮೇಲಾಧಿಕಾರಿಗೆ ಕರೆ ಮಾಡಿದ ಶಾಸಕರು
ಕೆಎಸ್‌ಆರ್‌ಟಿಸಿ ಸಿಟಿಎಂ ಆಂಟನಿ ಜಾರ್ಜ್ ಅವರಿಗೆ ಕರೆ ಮಾಡಿದ ಶಾಸಕರು ಅವರನ್ನು ತರಾಟೆಗೆ ಎತ್ತಿಕೊಂಡರು. ಮುಂದಿನ ತಿಂಗಳು ಸರಿಯಾಗುತ್ತದೆ ಎಂಬ ಮಾತು ನನ್ನಲ್ಲಿ ಹೇಳುವುದು ಬೇಡ, ಚಾಲಕರ ನೇಮಕಾತಿಯಲ್ಲಿ ಖಾಸಗಿ ಸಂಸ್ಥೆಯೊಂದಿಗೆ ನಿಮ್ಮ ಒಡಂಬಡಿಕೆ ಏನಿದೆಯೋ ನನಗೆ ಗೊತ್ತಿಲ್ಲ. ಚಾಲಕರನ್ನು ನೇಮಿಸುವಲ್ಲಿ ಗುತ್ತಿಗೆದಾರ ವಿಫಲವಾದರೆ ಅವರ ವಿರುದ್ದ ನೀವು ಕ್ರಮಕೈಗೊಳ್ಳಿ ಅಥವಾ ಟೆಂಡರ್ ಬೇರೆಯವರಿಗೆ ಕೊಡಿ. ನನ್ನ ಕ್ಷೇತ್ರದ ಜನರಿಗೆ ತೊಂದರೆಯಾಗಬಾರದು ಇದಕ್ಕೆ ನೀವು ಏನು ಕ್ರಮಕೈಗೊಳ್ಳುತ್ತೀರೋ ಅದನ್ನು ಕೈಗೊಳ್ಳಿ ಇಲ್ಲವಾದರೆ ನಾನು ಏನು ಮಾಡಬೇಕೋ ಅದನ್ನು ಮಾಡುತ್ತೇನೆ. ನಾನು ರೂಲಿಂಗ್ ಪಾರ್ಟಿ ಶಾಸಕ. ನಾನೇ ಸರಕಾರದ ವಿರುದ್ದ ಕೂರಬೇಕಾಗುತ್ತದೆ ಹಾಗೇನಾದರು ಅನಿವಾರ್ಯತೆ ಬಂದರೆ ಅದಕ್ಕೆ ಅಧಿಕಾರಿಗಳೇ ಹೊಣೆಗಾರರನ್ನಾಗಿ ಮಾಡುತ್ತೇನೆ ಎಂದು ಎಚ್ಚರಿಸಿದರು.

ವಿದ್ಯಾರ್ಥಿಗಳಿಗೆ ಸಮಸ್ಯೆಯಾದರೆ ಸುಮ್ಮನಿರಲ್ಲ
ಸಿಟಿಎಂ ಅಧಿಕಾರಿಗೆ ಕರೆ ಮಾಡಿದ ಶಾಸಕರು ಮುಂದಿನ ತಿಂಗಳು ಶಾಲಾ ಕಾಲೇಜುಗಳಲ್ಲಿ ವಾರ್ಷಿಕ ಪರೀಕ್ಷೆಗಳು ಆರಂಭವಾಗುತ್ತದೆ. ಬಸ್ಸಿನ ಸಮಸ್ಯೆಯಿಂದ ವಿದ್ಯಾರ್ಥಿಗಳಿಗೆ ಸರಿಯಾದ ಸಮಯಕ್ಕೆ ಪರಿಕ್ಷೆಗೆ ಹಾಜರಾಗಲು ಸಮಸ್ಯೆಯಾದರೆ ಅದಕ್ಕೆ ಅಧಿಕಾರಿಗಳೇ ನೇರ ಹೊಣೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳೇ ಹೆಚ್ಚಾಗಿ ಸರಕಾರಿ ಬಸ್ಸುಗಳಲ್ಲಿ ಓಡಾಟ ಮಾಡುತ್ತಾರೆ. ಎಲ್ಲೂ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ನಿಮ್ಮ ಮೇಲಿದೆ ಎಂದು ಶಾಸಕರು ಅಧಿಕರಿಗೆ ತಿಳಿಸಿದರು.

ಸಮಸ್ಯೆ ಇದ್ದಲ್ಲಿ ತಕ್ಷಣ ಗಮನಕ್ಕೆ ತನ್ನಿ
ಪುತ್ತೂರಿನ ಡಿಪೋ ಅಧಿಕಾರಿಗಳಿಗೆ ಸೂಚನೆ ನೀಡಿದ ಶಾಸಕರು, ಏನೇ ಸಮಸ್ಯೆ ಇದ್ದರೂ ತಕ್ಷಣ ನನ್ನ ಗಮನಕ್ಕೆ ತರಬೇಕು. ಬಸ್ಸು ಇದೆ ಚಾಲಕರಿಲ್ಲ ಎಂದು ಕೈ ಕಟ್ಟಿ ಕೂರಬೇಡಿ. ಬಸ್ಸು ಇರುವುದು ಸಾರ್ವಜನಿಕರ ಉಪಯೋಗಕ್ಕೆ ಅದನ್ನು ಸರಿಯಗಿ ಒದಗಿಸಬೇಕಾದ್ದು ನನ್ನ, ನಿಮ್ಮ ಕರ್ತವ್ಯ ಅದರಲ್ಲಿ ಒಂದಲ್ಪವೂ ಚ್ಯುತಿ ಬರಬಾರದು. ನಮ್ಮೂರಿಗೆ ಬಸ್ಸು ಬರುತ್ತಿಲ್ಲ ಎಂದು ನನಗೆ ಮುಂದೆ ದೂರು ಬರಬಾರದು ಆ ರೀತಿಯಲ್ಲಿ ನೀವು ವ್ಯವಸ್ಥೆ ಮಾಡಬೇಕು. ನನ್ನಿಂದ ಅಥವಾ ಸರಕಾರದಿಂದ ನಿಮಗೆ ಏನು ನೆರವು ಬೇಕೋ ಅದನ್ನು ಹೇಳಿ ನಾನು ಸಂಬಂಧಪಟ್ಟ ಅಧಿಕಾರಿಗೆ ತಿಳಿಸಿ ವ್ಯವಸ್ಥೆ ಮಾಡುತ್ತೆನೆ ಎಂದು ಶಾಸಕರು ತಿಳಿಸಿದರು. ಪುತ್ತೂರು ಡಿಪೋ ಮೆನಜರ್ ಶ್ರೀಕಾಂತ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here