ಯಕ್ಷಗಾನದ ಹಿರಿಯ ಅರ್ಥದಾರಿ, ನಿವೃತ್ತ ಶಿಕ್ಷಕ ಕೆ.ವಿ. ಗಣಪಯ್ಯ ಅಸ್ತಂಗತ

0

ಪುತ್ತೂರು: ಹಿರಿಯ ತಲೆಮಾರಿನ ಯಕ್ಷಗಾನದ ಅರ್ಥದಾರಿಗಳಲ್ಲಿ ಅಗ್ರಮಾನ್ಯರೆನಿಸಿದ ಕಲಾವಿದ, ಅರ್ಥದಾರಿ, ನಿವೃತ್ತ ಶಿಕ್ಷಕ, ಮುರುಳ್ಯ ಗ್ರಾಮದ ಅಲೆಕ್ಕಾಡಿ ಸಮೀಪದ ಆಲಾಜೆ ನಿವಾಸಿ ಕೆ.ವಿ.ಗಣಪಯ್ಯ(92ವ.) ಅವರು ಅಲ್ಪಕಾಲದ ಅಸೌಖ್ಯದಿಂದ ಫೆ.4ರಂದು ಬೆಳಿಗ್ಗೆ ನಿಧನರಾದರು.


ಬೆಳ್ತಂಗಡಿ ತಾಲೂಕಿನ ಸರಕಾರಿ ಶಾಲೆಯೊಂದರಲ್ಲಿ ಶಿಕ್ಷಕ ವೃತ್ತಿ ಆರಂಭಿಸಿದ್ದ ಕೆ.ವಿ.ಗಣಪಯ್ಯ ಅವರು ಆ ಬಳಿಕ ಭಡ್ತಿಗೊಂಡು ಕಡಬ ಸರಕಾರಿ ಪ್ರೌಢಶಾಲೆಗೆ ಹಿಂದಿ ಪಂಡಿತರಾಗಿ ವರ್ಗಾವಣೆಗೊಂಡಿದ್ದರು. ಆ ಬಳಿಕ ಕಾಣಿಯೂರು ಸರಕಾರಿ ಜೂನಿಯರ್ ಕಾಲೇಜುಗೆ ವರ್ಗಾವಣೆಗೊಂಡಿದ್ದ ಅವರು ಕೆಲ ಕಾಲ ಪ್ರಭಾರ ಪ್ರಾಂಶುಪಾಲರಾಗಿಯೂ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರೆ.


ದೇರಾಜೆ, ಶೇಣಿ, ಪೆರ್ಲ, ಸಾಮಗ ಮುಂತಾದ ಹಿರಿಯ ಅರ್ಥದಾರಿಗಳ ಜೊತೆಗೆ ಸರಿಸಾಟಿ ಎನಿಸಿ ಅರ್ಥಗಾರಿಕೆಯಲ್ಲಿ ಮೆರೆದ ಕೆ.ವಿ.ಗಣಪಯ್ಯನವರು ತೀಕ್ಷ್ಣವಾದ, ಹರಿತವಾದ ಮಾತಿನ ವೈಖರಿಯಿಂದ ತಾಳಮದ್ದಳೆಗಳಿಗೆ ಪ್ರಸಿದ್ಧರಾಗಿದ್ದರು. ಭೀಷ್ಮ, ಕೌರವ, ವಾಲಿ, ತಾಮ್ರಧ್ವಜ ಇಂತಹ ನೂರಾರು ಪಾತ್ರಗಳನ್ನು ಅವರು ವಿಶಿಷ್ಟವಾಗಿ ಚಿತ್ರಿಸುತ್ತಿದ್ದರು. ಪುರಾಣ ಪ್ರವಚನಗಳಲ್ಲಿಯೂ ಪ್ರಸಿದ್ಧರಾಗಿದ್ದರಿಂದ ಅವರ ಮಾತಿನ ಮಾರುಮಾಲೆಯನ್ನು ಎಲ್ಲರೂ ಇಷ್ಟಪಡುತ್ತಿದ್ದರು. ಸ್ಥಳೀಯವಾದ ಅನೇಕ ಯಕ್ಷಗಾನ ಸಂಘ ಸಂಸ್ಥೆಗಳಿಗೆ ಹಿರಿಯ ಮಾರ್ಗದರ್ಶಕಾಗಿದ್ದರು. ಪುತ್ತೂರಿನ ಯಕ್ಷ ಆಂಜನೇಯ ಪ್ರಶಸ್ತಿ, ಉಡುಪಿಯ ಯಕ್ಷ ಕಲಾರಂಗ ಹಾಗೂ ದೇವಾನಂದ ಭಟ್ಟರ ಯಕ್ಷಕಲಾ ಪ್ರಶಸ್ತಿಗಳಿಗೆ ಅವರು ಭಾಜನರಾಗಿದ್ದರು.
ವಿವಿಧ ಶಾಲೆಗಳ ಅಭಿವೃದ್ಧಿ ಹಾಗೂ ಊರಿನ ಹಲವು ದೇವಸ್ಥಾನಗಳ ಜೀರ್ಣೋದ್ಧಾರ ಕಾರ್ಯಗಳಲ್ಲಿಯೂ ಅವರು ಪ್ರವೃತ್ತರಾಗಿ ಮುನ್ನಡೆಸಿದ್ದರು. ನಿವೃತ್ತಿಯ ಬಳಿಕ ಆಲಾಜೆಯಲ್ಲಿ ಕೃಷಿಕರಾಗಿ ಜೀವನ ನಡೆಸುತ್ತಿದ್ದರು. ಕೆ.ವಿ.ಗಣಪಯ್ಯನವರ ನಿಧನದೊಂದಿಗೆ ಯಕ್ಷಗಾನದ ಹಿರಿಯ ಪರಂಪರೆ ಕೊಂಡಿಯೊಂದು ಕಳಚಿದಂತಾಗಿದೆ. ಮೃತರು ಪತ್ನಿಯನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here