ಕಾಣಿಯೂರು: ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಪ್ರಯುಕ್ತ ಕುದ್ಮಾರು ಶಾಲೆಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ವಿಜ್ಞಾನ ದಿನದ ಮಹತ್ವ ಹಾಗೂ ವಿಜ್ಞಾನ ದಿನಾಚರಣೆಯು ಆಚರಿಸಲ್ಪಡುವ ಹಿನ್ನೆಲೆಯ ಮಾಹಿತಿ ಕಾರ್ಯಕ್ರಮವನ್ನು ಬೆಳಗಿನ ಅವಧಿಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಶಾಲಾ ಮುಖ್ಯ ಗುರುಗಳು ರಾಸಾಯನಿಕಗಳನ್ನು ಬಳಸಿ ಜ್ವಾಲೆ ಉತ್ಪತ್ತಿ ಮಾಡುವ ಪ್ರಯೋಗದ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ವಿಜ್ಞಾನ ದಿನಾಚರಣೆಯ ಪ್ರತಿಜ್ಞಾವಿಧಿಯನ್ನು ಶಾಲೆಯ ಪ್ರೌಢಶಾಲಾ ಶಿಕ್ಷಕಿ ಶ್ರೀಲತಾರವರು ಭೋದಿಸಿದರು. ಈ ಅವಧಿಯ ಸಂಪನ್ಮೂಲ ವ್ಯಕ್ತಿಯಾಗಿ ಶಾಲೆಯ ಅತಿಥಿ ಶಿಕ್ಷಕಿ ಸುಕನ್ಯಾ ಇವರು ದಿನದ ಮಹತ್ವದ ಬಗೆಗೆ ಸವಿಸ್ತಾರ ಮಾಹಿತಿ ಒದಗಿಸಿದರು.
ಕಾರಣವಿದೆಯಣ್ಣ ಎನ್ನುವ ವಿಜ್ಞಾನ ಗೀತೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಶಿಕ್ಷಕಿ ವೀರಾ ಡಿಸೋಜ ಸ್ವಾಗತಿಸಿ, ಶಿಕ್ಷಕಿ ಪ್ರಿಯಾಂಕ ವಂದಿಸಿದರು.
ಶಿಕ್ಷಕಿ ವೀಣಾ. ಕೆ .ಕಾರ್ಯಕ್ರಮ ನಿರೂಪಿಸಿದರು.
ಆ ಬಳಿಕ ವಿದ್ಯಾರ್ಥಿಗಳಿಗೆ ವಿಜ್ಞಾನ ಚಿತ್ರ ಬಿಡಿಸುವ ಸ್ಪರ್ಧೆ, ಗ್ರಹಣ ,ಸ್ಪರ್ಶ ಹಾಗೂ ರುಚಿಯ ಅನ್ವಯ ವಸ್ತುಗಳ ಗುರುತು ಹಿಡಿಯುವ ಸ್ಪರ್ಧೆ, ವಿಜ್ಞಾನ ಪ್ರಯೋಗ ಶಾಲೆಯ ವಸ್ತುಗಳ ಪ್ರದರ್ಶನ ಹಾಗೂ ಪರಿಚಯ ಕಾರ್ಯಕ್ರಮ, ಸರಳ ಪ್ರಯೋಗಗಳು, ಸ್ಮರಣಶಕ್ತಿ ಪರೀಕ್ಷೆ, ಇತ್ಯಾದಿಗಳನ್ನು ನಡೆಸಿ ಬಹುಮಾನ ವಿತರಣೆ ಮಾಡಲಾಯಿತು.
ಅರ್ಥಪೂರ್ಣವಾದ ವಿಜ್ಞಾನ ದಿನಾಚರಣೆಯನ್ನು ಪ್ರೌಢಶಾಲಾ ಶಿಕ್ಷಕಿ ಶ್ರೀಲತಾ ಇವರ ಮಾರ್ಗದರ್ಶನದಲ್ಲಿ ಮಾಡಲಾಯಿತು. ಎಲ್ಲಾ ಶಿಕ್ಷಕ ವೃಂದದವರು ಸಹಕರಿಸಿದರು.