ಪುತ್ತೂರು: ಭಾರತೀಯ ಸೇನೆಯಲ್ಲಿ 18 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಲಕ್ಷ್ಮೀಶ ಕಡಮಜಲುರವರನ್ನು ಮಾ.9ರಂದು ತ್ಯಾಗರಾಜೆ ಮಸೀದಿಯಲ್ಲಿ ಎಸ್ಕೆಎಸ್ಸೆಸ್ಸೆಫ್ ತ್ಯಾಗರಾಜೆ ಶಾಖೆ ಹಾಗೂ ಎನ್ಎಚ್ವೈಎ ತ್ಯಾಗರಾಜೆ ವತಿಯಿಂದ ನಡೆದ ಇಫ್ತಾರ್ ಕೂಟದಲ್ಲಿ ಸನ್ಮಾನಿಸಿ, ಗೌರವಿಸಲಾಯಿತು.
ತ್ಯಾಗರಾಜೆ ಮಸೀದಿಯ ಖತೀಬ್ ಸಿ.ಕೆ ಮುಹಮ್ಮದ್ ದಾರಿಮಿ ಮಾತನಾಡಿ, ಭಾರತೀಯ ಸೇನೆಯಲ್ಲಿ ಹಲವು ವರ್ಷಗಳ ಸೇವೆ ಸಲ್ಲಿಸಿ ನಿವೃತ್ತರಾದ ಲಕ್ಷ್ಮೀಶ ಕಡಮಜಲು ಅವರನ್ನು ಸನ್ಮಾನಿಸುವುದು ಊರವರ ಬಾಧ್ಯತೆಯಾಗಿದೆ, ಇವರು ನಮ್ಮ ನಾಡಿಗೆ ಕೀರ್ತಿ ತಂದಿದ್ದಾರೆ ಎಂದು ಹೇಳಿದರು.
ಸನ್ಮಾನ ಸ್ವೀಕರಿಸಿದ ಯೋಧ ಲಕ್ಷ್ಮೀಶ ಕಡಮಜಲು ಮಾತನಾಡಿ, ದೇಶಕ್ಕಾಗಿ ಸೇವೆ ಮಾಡಿದ ನನ್ನನ್ನು ಗುರುತಿಸಿ ಸನ್ಮಾನಿಸಿರುವ ನಿಮ್ಮ ಕಾರ್ಯ ಕೂಡಾ ದೇಶ ಸೇವೆಯ ಭಾಗವಾಗಿದೆ, ನೀವು ನೀಡಿರುವ ಸನ್ಮಾನ ನನಗೆ ಸಂತಸ ತಂದಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ತ್ಯಾಗರಾಜೆ ಜಮಾಅತ್ ಅಧ್ಯಕ್ಷ ಇಬ್ರಾಹಿಂ ಹಾಜಿ ದರ್ಬೆ ಹಾಗೂ ಪದಾಧಿಕಾರಿಗಳು, ಎಸ್ಕೆಎಸ್ಸೆಸ್ಸೆಫ್ ಅಧ್ಯಕ್ಷ ಶರೀಫ್ ತ್ಯಾಗರಾಜೆ ಹಾಗೂ ಪದಾಧಿಕಾರಿಗಳು, ಎನ್ಎಚ್ವೈಎ ಅಧ್ಯಕ್ಷ ಶಾಫಿ ಬೇರಿಕೆ ಹಾಗೂ ಪದಾಧಿಕಾರಿಗಳು ಮತ್ತು ಜಮಾಅತರು, ಮದ್ರಸ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಎಸ್ಕೆಎಸ್ಸೆಸ್ಸೆಫ್ ಕುಂಬ್ರ ವಲಯ ಪ್ರ.ಕಾರ್ಯದರ್ಶಿ ಸಿದ್ದೀಕ್ ಸುಲ್ತಾನ್ ಸ್ವಾಗತಿಸಿ ವಂದಿಸಿದರು.