ಸಮಾಜ ಸೇವಕಿ ಭವಾನಿ ಪುತ್ತೂರಾಯ ನಿಧನ

0

ರಾಮಕುಂಜ: ಗ್ರಾಮದ ನೀರಾಜೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವಠಾರದಲ್ಲಿ ವಾಸವಿದ್ದ ಸಮಾಜ ಸೇವಕಿ ಭವಾನಿ ಪುತ್ತೂರಾಯ(84ವ.)ಅವರು ಮಾ.13ರಂದು ಬೆಳಿಗ್ಗೆ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ವಾರದ ಹಿಂದೆ ನೀರಾಜೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ನಡೆದ ಬ್ರಹ್ಮಕಲಶೋತ್ಸವದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದ ಭವಾನಿ ಪುತ್ತೂರಾಯ ಅವರಿಗೆ ಎರಡು ದಿನದ ಹಿಂದೆ ಅನಾರೋಗ್ಯ ಕಾಣಿಸಿಕೊಂಡಿದ್ದು ಪುತ್ತೂರಿನ ಮಹಾವೀರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಅವರು ಮಾ.13ರಂದು ಬೆಳಿಗ್ಗೆ 6 ಗಂಟೆ ವೇಳೆಗೆ ನಿಧನರಾಗಿದ್ದಾರೆ.

ದಿವಂಗತ ರಾಮಚಂದ್ರ ಪುತ್ತೂರಾಯರ ಪತ್ನಿಯಾಗಿದ್ದ ಭವಾನಿ ಪುತ್ತೂರಾಯ ಇವರು ಪುತ್ತೂರು ಸಂಪ್ಯದಲ್ಲಿ ಅನೇಕ ವರ್ಷಗಳ ಕಾಲ ನೆಲೆಸಿ, ಕೆಲವು ವರ್ಷಗಳಿಂದ ತವರುಮನೆ ರಾಮಕುಂಜದ ಪಾದೆ ಎಂಬಲ್ಲಿದ್ದು ಪ್ರಸ್ತುತ ನೀರಾಜೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವಠಾರದಲ್ಲಿ ವಾಸಿಸುತ್ತಿದ್ದರು. ಇವರು ಪುತ್ತೂರು ರೋಟರಿ, ಲಯನೆಸ್, ಮಹಿಳಾ ಸಂಘಟನೆ, ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಸಂಘ ಸಂಸ್ಥೆಗಳಲ್ಲಿ ಅಪಾರ ಸೇವೆ ಸಲ್ಲಿಸಿ ಜನಪ್ರಿಯರಾಗಿದ್ದರು. ಪತಿಯ ಜೊತೆ ಉಪ್ಪಿನಂಗಡಿಯ ಪ್ರೀತಮ್ ಚಲನಚಿತ್ರ ಮಂದಿರ ಮುನ್ನಡೆಸಿ ಜನಮಾನಸದಲ್ಲಿ ಅಚ್ಚಳಿಯದ ಛಾಪು ಮೂಡಿಸಿದ್ದರು. ಇವರು ಪತಿ ರಾಮಚಂದ್ರ ಪುತ್ತೂರಾಯರ ನಿಧನದ ಬಳಿಕ ಸಹಾಯಕರೊಂದಿಗೆ ನೀರಾಜೆ ದೇವಸ್ಥಾನದ ವಠಾರದಲ್ಲಿ ವಾಸವಿದ್ದರು.

ದೇಹದಾನ:
ಭವಾನಿ ಪುತ್ತೂರಾಯ ಅವರ ಇಚ್ಚೆಯಂತೆ ಅವರ ಮೃತದೇಹವನ್ನು ಸುಳ್ಯ ಕೆವಿಜಿ ಮೆಡಿಕಲ್ ಕಾಲೇಜಿಗೆ ದಾನ ಮಾಡಲಾಗಿದೆ. 2 ವರ್ಷದ ಹಿಂದೆ ಮೃತಪಟ್ಟಿದ್ದ ಭವಾನಿ ಪುತ್ತೂರಾಯ ಅವರ ಪತಿ, ನೀರಾಜೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಅರ್ಚಕರಾಗಿದ್ದ ದಿ.ರಾಮಚಂದ್ರ ಪುತ್ತೂರಾಯರ ಮೃತದೇಹವನ್ನೂ ಸುಳ್ಯ ಕೆವಿಜಿ ಮೆಡಿಕಲ್ ಕಾಲೇಜಿಗೆ ದಾನ ಮಾಡಲಾಗಿತ್ತು.

LEAVE A REPLY

Please enter your comment!
Please enter your name here