ತುಳು-ರಾಜ್ಯದ ಎರಡನೇ ಅಧಿಕೃತ ಭಾಷೆಯಾಗಿ ಘೋಷಣೆಗೆ ಒತ್ತಾಯ – ಆಂಧ್ರಪ್ರದೇಶಕ್ಕೆ ಅಧ್ಯಯನ ತಂಡ – ಶಾಸಕ ಅಶೋಕ್ ಕುಮಾರ್ ರೈ ಬೇಡಿಕೆಗೆ ಸ್ಪಂದಿಸಿದ ರಾಜ್ಯ ಸರಕಾರ

0

ಪುತ್ತೂರು:ತುಳು ಭಾಷೆಯನ್ನು ಕರ್ನಾಟಕದ ಎರಡನೇ ಅಧಿಕೃತ ಭಾಷೆಯನ್ನಾಗಿ ಘೋಷಣೆ ಮಾಡಬೇಕು ಎನ್ನುವ ಬೇಡಿಕೆಗೆ ಸ್ಪಂದಿಸಿರುವ ಸರಕಾರ, ಈ ಕುರಿತು ಅಧ್ಯಯನಕ್ಕಾಗಿ ಅಧಿಕಾರಿಗಳ ತಂಡವೊಂದನ್ನು ಆಂಧ್ರಪ್ರದೇಶಕ್ಕೆ ಕಳುಹಿಸಲು ನಿಯೋಜಿಸಿದೆ. ಈ ಮೂಲಕ ಶಾಸಕ ಅಶೋಕ್ ಕುಮಾರ್ ರೈ ಅವರ ಶಕ್ತಿ ತುಂಬಿದಂತಾಗಿದೆ.
ತುಳು ಭಾಷೆಯನ್ನು ಕರ್ನಾಟಕ ರಾಜ್ಯದ 2ನೇ ಅಧಿಕೃತ ಭಾಷೆಯನ್ನಾಗಿ ಘೋಷಣೆ ಮಾಡುವ ಕುರಿತು ಅಧ್ಯಯನ ನಡೆಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ(ನಿರ್ದೇಶಕರು,ಕನ್ನಡ ಮತ್ತು ಸಂಸ್ಕೃತಿ ಇಲಾಖೆ),ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಮತ್ತು ಕಾನೂನು ಇಲಾಖೆಯ ಅಧಿಕಾರಿಗಳ ತಂಡವನ್ನು ನಿಯೋಜಿಸಲಾಗಿದೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯಿಂದ ಜಂಟಿ ನಿರ್ದೇಶಕ(ಸಿಬ್ಬಂದಿ)ಚಂದ್ರಶೇಖರ್ ಬಿ.ಎಂ.ಅವರನ್ನು ತಂಡದ ಸದಸ್ಯರಾಗಿ ನೇಮಿಸಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ(ರಾಜಕೀಯ)ಯ ಅಧೀನ ಕಾರ್ಯದರ್ಶಿ ಸಂದೀಪ್ ಬಿ.ಕೆ. ಆದೇಶಿಸಿದ್ದಾರೆ.

ಆಂಧ್ರಪ್ರದೇಶದಲ್ಲಿ ಸ್ಥಳೀಯ ಭಾಷೆಯನ್ನು ಅಲ್ಲಿನ ಎರಡನೇ ಅಧಿಕೃತ ಭಾಷೆಯನ್ನಾಗಿ ಅಲ್ಲಿನ ಸರಕಾರ ಘೋಷಣೆ ಮಾಡಿದೆ. ಅಲ್ಲಿ ಸ್ಥಳೀಯ ಭಾಷೆಯನ್ನು ಯಾವ ಮಾನದಂಡದ ಆಧಾರದಲ್ಲಿ ಎರಡನೇ ಅಽಕೃತ ಭಾಷೆಯನ್ನಾಗಿ ಮಾಡಿದೆ ಎಂಬುದರ ಬಗ್ಗೆ ಅಧ್ಯಯನ ನಡೆಸಲು ಸರಕಾರ ಅಧಿಕಾರಿಗಳ ಅಧ್ಯಯನ ತಂಡವನ್ನು ಕಳುಹಿಸಿದೆ. ತುಳುವನ್ನು ರಾಜ್ಯದ ಎರಡನೇ ಅಧಿಕೃತ ಭಾಷೆಯಾಗಿ ಘೋಷಿಸಬೇಕು ಎಂದು ಹೋರಾಟ ನಡೆಸುತ್ತಿರುವ ಶಾಸಕ ಅಶೋಕ್ ಕುಮಾರ್ ರೈ ಅವರು ಈ ಹಿಂದೆ ತನ್ನ ಸ್ವಂತ ಖರ್ಚಿನಿಂದ ಆಂಧ್ರ್ರಪ್ರದೇಶಕ್ಕೆ ತಂಡವೊಂದನ್ನು ಅಧ್ಯಯನಕ್ಕಾಗಿ ಕಳುಹಿಸಿ ಅಧ್ಯಯನ ವರದಿಯನ್ನು ಸರಕಾರದ ಮುಂದೆ ಮಂಡನೆ ಮಾಡಿದ್ದರು. ಈ ವಿಚಾರವನ್ನು ಶಾಸಕರು ವಿಧಾನಸಭಾ ಅಧಿವೇಶನದಲ್ಲೂ ಪ್ರಸ್ತಾಪ ಮಾಡಿದ್ದರು.

ತಂಡದಿಂದ ಪೂರ್ಣ ಅಧ್ಯಯನ: ಆಂಧ್ರ್ರಪ್ರದೇಶಕ್ಕೆ ತೆರಳಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ತಂಡ ಈ ಬಗ್ಗೆ ಪೂರ್ಣಪ್ರಮಾಣದಲ್ಲಿ ಅಧ್ಯಯನ ನಡೆಸಲಿದೆ. ಅಲ್ಲಿನ ಸ್ಥಳೀಯ ಭಾಷೆಯನ್ನು ಅಲ್ಲಿನ ಎರಡನೇ ಅಧಿಕೃತ ಭಾಷೆಯನ್ನಾಗಿ ಹೇಗೆ ಘೋಷಣೆ ಮಾಡಿದೆ ಮತ್ತು ಇದನ್ನು ಯಾವ ಮಾನದಂಡದಲ್ಲಿ ಮಾಡಿದೆ ಎಂಬುದನ್ನು ಅಧ್ಯಯನ ನಡೆಸಿ,ಅಧ್ಯಯನ ವರದಿಯನ್ನು ಸರಕಾರಕ್ಕೆ ಸಲ್ಲಿಸಲಿದೆ.ಈ ಮೂಲಕ, ಕರಾವಳಿಯ ಜನರ ನಾಡಿಮಿಡಿತವಾದ ತುಳುವನ್ನು ಕರ್ನಾಟಕದ ಎರಡನೇ ಅಧಿಕೃತ ಭಾಷೆಯನ್ನಾಗಿ ಘೋಷಿಸುವ ದಾರಿಯನ್ನು ಸುಗಮಗೊಳಿಸಲಿದೆ.

ಅಧಿವೇಶನದಲ್ಲಿ ತುಳುವಿನಲ್ಲೇ ಮಾತನಾಡಿದ್ದ ಶಾಸಕರು: ಶಾಸಕರಾಗಿ ಆಯ್ಕೆಯಾದ ಬಳಿಕ ನಡೆದ ವಿಧಾನಸಭೆಯ ಮೊದಲ ಅಧಿವೇಶನದಲ್ಲಿಯೇ ಶಾಸಕ ಅಶೋಕ್ ಕುಮಾರ್ ರೈ ಅವರು ತುಳುವಿನಲ್ಲೇ ಮಾತನಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಸಾಮಾಜಿಕ ತಾಣದಲ್ಲಿ ಇದನ್ನು ಲಕ್ಷಾಂತರ ಮಂದಿ ಲೈಕ್ ಮಾಡಿದ್ದರು. ಶಾಸಕರು ತುಳುವಿನಲ್ಲಿ ಮಾತನಾಡಿದ್ದ ಕುರಿತು ವ್ಯಾಪಕ ಪ್ರಶಂಸೆಗಳೂ ವ್ಯಕ್ತವಾಗಿದ್ದವು. ಆ ಬಳಿಕ ನಡೆದ ಅಧಿವೇಶನಗಳಲ್ಲಿಯೂ ಶಾಸಕರು ತುಳುವಿನಲ್ಲಿಯೂ ಮಾತನಾಡಿದ್ದರಲ್ಲದೆ, ತುಳುವನ್ನು ರಾಜ್ಯದ ಎರಡನೇ ಅಧಿಕೃತ ಭಾಷೆಯನ್ನಾಗಿ ಘೋಷಿಸುವ ಕುರಿತು ಸರಕಾರದ ಮೇಲೆ ನಿರಂತರ ಒತ್ತಡ ಹಾಕುತ್ತಿದ್ದಾರೆ. ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಅವರೂ ಇದಕ್ಕೆ ಪೂರಕವಾಗಿ ಸ್ಪಂದಿಸಿದ್ದರು.

ನಿರಂತರ ಹೋರಾಟದ ಫಲ
ಇದು ನಿರಂತರ ಹೋರಾಟದ ಫಲವಾಗಿದೆ.ಕರ್ನಾಟಕ ಸರಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಆಂಧ್ರಪ್ರದೇಶಕ್ಕೆ ಕಳುಹಿಸಿ ಅಲ್ಲಿನ ಸ್ಥಳೀಯ ಭಾಷೆಯನ್ನು ಯಾವ ಮಾನದಂಡದಲ್ಲಿ ಎರಡನೇ ಅಧಿಕೃತ ಭಾಷೆಯನ್ನಾಗಿ ಘೋಷಿಸಿದೆ ಎಂಬುದರ ಬಗ್ಗೆ ಅಧ್ಯಯನ ನಡೆಸಿ ಸರಕಾರಕ್ಕೆ ವರದಿ ಮಂಡಿಸಲಿದೆ. ಆ ಬಳಿಕ ಕರ್ನಾಟಕದಲ್ಲಿ ತುಳುವನ್ನು ಎರಡನೇ ಅಧಿಕೃತ ಭಾಷೆಯನ್ನಾಗಿ ಘೋಷಣೆ ಮಾಡುವಲ್ಲಿ ಇದು ಸಹಕಾರಿಯಾಗಲಿದೆ. ತುಳುವನ್ನು ರಾಜ್ಯದ ಎರಡನೇ ಅಧಿಕೃತ ಭಾಷೆಯನ್ನಾಗಿ ಮಾಡಬೇಕು ಎಂದು ನಾನು ಮಾಡುತ್ತಿರುವ ಹೋರಾಟಕ್ಕೆ ರಾಜ್ಯ ಸರಕಾರದಿಂದ ಉತ್ತಮ ಬೆಂಬಲ ದೊರಕಿದಂತಾಗಿದೆ.ಇದಕ್ಕಾಗಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಸಂಬಂಧಪಟ್ಟ ಎಲ್ಲಾ ಇಲಾಖೆಯ ಅಧಿಕಾರಿಗಳಿಗೆ ಅಭಿನಂದನೆಯನ್ನು ಸಲ್ಲಿಸುತ್ತೇನೆ
-ಅಶೋಕ್ ಕುಮಾರ್ ರೈ, ಶಾಸಕರು ಪುತ್ತೂರು

LEAVE A REPLY

Please enter your comment!
Please enter your name here