ಪುತ್ತೂರು: ಬೊಳ್ವಾರು ಶ್ರೀದುರ್ಗಾ ಉಳ್ಳಾಳ್ತಿ ಮಲರಾಯ ಯಕ್ಷ ಕಲಾ ಪ್ರತಿಷ್ಠಾನ ಬೊಳುವಾರು ಇದರ ವತಿಯಿಂದ ನಡೆಸಲ್ಪಡುವ ಯಕ್ಷಗಾನ ಅರ್ಥಗಾರಿಕೆಗೆ ತರಗತಿಯನ್ನು ಮಾ.30 ರಂದು ಪ್ರಾರಂಭಿಸಲಾಯಿತು.
ಹಿರಿಯ ಯಕ್ಷಗಾನ ಕಲಾವಿದರು ಹಾಗೂ ಸಂಘದ ಉಪಾಧ್ಯಕ್ಷರಾದ ಗುಂಡ್ಯಡ್ಕ ಈಶ್ವರ ಭಟ್ ಕಾರ್ಯಕ್ರಮ ಉದ್ಘಾಟಿಸಿ ಸಂಪನ್ಮೂಲ ವ್ಯಕ್ತಿಯಾಗಿ ತರಗತಿಯನ್ನು ನಡೆಸಿಕೊಟ್ಟರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸಂಘದ ಗೌರವಾಧ್ಯಕ್ಷರಾದ ಗೋವಿಂದ ನಾಯಕ್ ಪಾಲೆಚ್ಚಾರುರವರು ಪ್ರತಿಷ್ಠಾನದಿಂದ ನಡೆಸಲ್ಪಡುವ ಯಕ್ಷಗಾನದ ವಿವಿಧ ಚಟುವಟಿಕೆಗಳ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಿದರು.
ಸಂಘದ ಸದಸ್ಯರಾದ ರಾಮ ಕೆ ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದರು. ದೇವಸ್ಥಾನದ ವಿಶ್ವಸ್ಥ ಮಂಡಳಿಯ ಕೋಶಾಧಿಕಾರಿ ಹಾಗೂ ಸಂಘದ ಸದಸ್ಯರಾದ ಪ್ರಸನ್ನ ಬಳ್ಳಾಲ್ ಧನ್ಯವಾದ ಸಮರ್ಪಿಸಿದರು. ಸಂಘದ ಕಾರ್ಯದರ್ಶಿ ಶಂಕರ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

ಪ್ರತಿಷ್ಠಾನದ ವತಿಯಿಂದ ತಿಂಗಳ ಮೊದಲನೆಯ ಆದಿತ್ಯವಾರ ಅಪರಾಹ್ನ 2ರಿಂದ ತಾಳಮದ್ದಳೆ ಕೂಟ, ಪ್ರತಿ ಆದಿತ್ಯವಾರ ಅಪರಾಹ್ನ 2ರಿಂದ ಯಕ್ಷಗಾನ ನಾಟ್ಯ ತರಗತಿ ಹಾಗೂ ತಿಂಗಳ ಮೂರನೇ ಆದಿತ್ಯವಾರದಂದು ಆಸಕ್ತರಿಗೆ ಅರ್ಥಗಾರಿಕೆ ತರಗತಿಗಳನ್ನು ನಡೆಸುವುದೆಂದು ತೀರ್ಮಾನಿಸಲಾಯಿತು.