ಪುತ್ತೂರು: ಕರ್ನಾಟಕ ಗಮಕ ಕಲಾ ಪರಿಷತ್ತು ಬೆಂಗಳೂರು, ದ.ಕ.ಜಿಲ್ಲೆ, ಪುತ್ತೂರು ತಾಲೂಕು ಘಟಕದ ವತಿಯಿಂದ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕರದೊಂದಿಗೆ, ಎ.14ರಂದು ಗಮಕ ವಾಚನ- ವ್ಯಾಖ್ಯಾನ ಕಾರ್ಯಕ್ರಮವನ್ನು ಉಪ್ಪಿನಂಗಡಿ ಸಮೀಪವಿರುವ, ಹಿರಿಯ ಯಕ್ಷಗಾನ ಕಲಾವಿದ ಪಾತಾಳ ವೆಂಕಟ್ರಮಣ ಭಟ್ಟ ಅವರ ಸ್ವಗೃಹ ಅಂಬಾವನದಲ್ಲಿ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ಕುಮಾರವ್ಯಾಸ ಕವಿಯ ಕರ್ನಾಟಕ ಭಾರತದಿಂದ ಆಯ್ದ “ಕೃಷ್ಣ ದರ್ಶನ” ಎಂಬ ಕಥಾಭಾಗವನ್ನು ಪ್ರಸ್ತುತಪಡಿಸಲಾಯಿತು. ಗಮಕಿ ಗಣಪತಿ ಭಟ್ಟ ಪದ್ಯಾಣ ಇವರು ಗಮಕ ವಾಚನಗೈದರು. ಮಹಾಲಿಂಗ ಭಟ್, ಬಿಲ್ಲಂಪದವು, ನಿವೃತ್ತ ಪ್ರಾಂಶುಪಾಲರು ವ್ಯಾಖ್ಯಾನವನ್ನು ನಡೆಸಿಕೊಟ್ಟರು.
ಘಟಕದ ಕಾರ್ಯದರ್ಶಿ ಶಂಕರಿಶರ್ಮ ಸ್ವಾಗತಿಸಿದರು. ಬಳಿಕ ಹಿರಿಯ ಯಕ್ಷಗಾನ ಕಲಾವಿದರಾದ ಪಾತಾಳ ವೆಂಕಟ್ರಮಣ ಭಟ್ಟ ಅವರನ್ನು ಶಾಲು ಹೊದಿಸಿ ಸನ್ಮಾನಿಸಿದರು. ಘಟಕದ ಅಧ್ಯಕ್ಷ ಪ್ರೊ. ವೇದವ್ಯಾಸ ರಾಮಕುಂಜ ಇವರು ಕಲಾವಿದರನ್ನು ಶಾಲು ಹೊದಿಸಿ ಸನ್ಮಾನಿಸಿ ಗೌರವಿಸಿದರು ಹಾಗೂ ಸರ್ವರನ್ನೂ ವಂದಿಸಿದರು. ಅತಿಥೇಯರು, ಕಲಾವಿದರನ್ನು ಹಾಗೂ ಕಾರ್ಯಕ್ರಮವನ್ನು ಆಯೋಜಿಸಿದ ಘಟಕದ ಅಧ್ಯಕ್ಷರನ್ನು ಶಾಲು ಹೊದಿಸಿ, ಹಣ್ಣು ಹಂಪಲುಗಳನ್ನಿತ್ತು ಗೌರವಿಸಿದರು. ಅತಿಥೇಯರ ಬಂಧುಗಳು ಹಾಗೂ ಊರ ಮಹನೀಯರು ಉಪಸ್ಥಿತರಿದ್ದರು.