ರಾಮಕುಂಜ: ತಡೆ ಹಿಡಿಯಲಾಗಿದ್ದ ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ ಫಲಿತಾಂಶ ಪ್ರಕಟಣೆಗೆ ಸಂಬಂಧಿಸಿ ಹೈಕೋರ್ಟ್ ತೀರ್ಪು ಪ್ರಕಟಗೊಂಡಿದ್ದು ಬಿಜೆಪಿಗೆ ಸೆಡ್ಡು ಹೊಡೆದು ಸ್ಪರ್ಧೆ ಮಾಡಿದ್ದ ರಮೇಶ್ ಭಟ್ ಉಪ್ಪಂಗಳ ಬಣ ಆಡಳಿತದ ಚುಕ್ಕಾಣಿ ಹಿಡಿಯಲಿದೆ.
ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಂದಿನ 5 ವರ್ಷಗಳ ಅವಧಿಯ ಆಡಳಿತ ಮಂಡಳಿಗೆ ನಿರ್ದೇಶಕರ ಆಯ್ಕೆಗಾಗಿ ಮಾ.2ರಂದು ಸಂಘದ ಪ್ರಧಾನ ಕಚೇರಿಯಲ್ಲಿ ಚುನಾವಣೆ ನಡೆದಿತ್ತು. ಈ ಚುನಾವಣೆಯಲ್ಲಿ ಅನರ್ಹ ಮತದಾರರಿಗೂ ಮತದಾನಕ್ಕೆ ಹೈಕೋರ್ಟ್ ಅವಕಾಶ ನೀಡಿತ್ತು. ಆದರೆ ಮತ ಎಣಿಕೆ ನಡೆಸಿ ಫಲಿತಾಂಶ ಘೋಷಣೆಗೆ ತಡೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಮತದಾನದ ಬಳಿಕ ಮತ ಎಣಿಕೆ ನಡೆದರೂ ಚುನಾವಣಾಧಿಕಾರಿಯವರು ಫಲಿತಾಂಶ ಘೋಷಣೆ ಮಾಡಿರಲಿಲ್ಲ. ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್ ಎ. 24 ರಂದು ಆದೇಶ ನೀಡಿದೆ.
ಅನರ್ಹ ಮತದಾರರ ಪರ ವಕೀಲರು ರಿಟ್ ಪಿಟಿಷನ್ ಹಿಂತೆಗೆದುಕೊಂಡಿದ್ದು ಈ ಹಿನ್ನೆಲೆಯಲ್ಲಿ ಚುನಾವಣೆಯಲ್ಲಿ ಅರ್ಹ ಮತದಾರರು ಚಲಾಯಿಸಿದ ಮತಗಳನ್ನು ಮಾತ್ರ ಪರಿಗಣನೆಗೆ ತೆಗೆದುಕೊಂಡು ಫಲಿತಾಂಶ ಘೋಷಿಸುವಂತೆ ಚುನಾವಣಾಧಿಕಾರಿಯವರಿಗೆ ಹೈಕೋರ್ಟ್ ಆದೇಶಿಸಿದೆ ಎಂದು ತಿಳಿದುಬಂದಿದೆ. ಇದರಿಂದಾಗಿ ರಮೇಶ್ ಭಟ್ ಉಪ್ಪಂಗಳ ಬಣದ 10 ಹಾಗೂ ಸಹಕಾರ ಭಾರತಿಯ ಇಬ್ಬರು ನಿರ್ದೇಶಕರಾಗಿ ಆಯ್ಕೆಯಾಗಲಿದ್ದಾರೆ.
ರಮೇಶ್ ಭಟ್ ಉಪ್ಪಂಗಳ ಬಣದ ಕೇಶವ ಗೌಡ, ಎ.ದಯಾನಂದ ರೈ, ರಮೇಶ್ ಯು., ಉದಯ ಸಾಲಿಯಾನ್, ರತ್ನಾ ಬಿ ಕೆ, ವಿಜಯ ಎಸ್ ಅಂಬಾ, ಪದ್ಮಪ್ಪ ಗೌಡ ರಾಮಕುಂಜ, ಕುಂಞ ಮುಗೇರ, ಅಶೋಕ ಪೆರಾಬೆ, ಲೋಕೇಶ್ ಕಮ್ಮಿತ್ತಿಲು ಹಾಗೂ ಸಹಕಾರ ಭಾರತಿಯ ಅಶೋಕ ಗೋಕುಲನಗರ, ಗಾಯತ್ರಿ ಅವರು ನಿರ್ದೇಶಕರಾಗಿ ಆಯ್ಕೆಯಾಗಲಿದ್ದಾರೆ.
ಹೈಕೋರ್ಟ್ ಆದೇಶ ಪ್ರತಿ ಸಿಕ್ಕಿದ ಕೂಡಲೇ ಚುನಾವಣಾಧಿಕಾರಿಯವರು ಫಲಿತಾಂಶ ಪ್ರಕಟ ಮಾಡಲಿದ್ದಾರೆ.