ಪುತ್ತೂರು: ವೆಟರನ್ಸ್ ಅಥ್ಲೆಟಿಕ್ಸ್ ಫೆಡರೇಷನ್ ಆಫ್ ಇಂಡಿಯಾ ವತಿಯಿಂದ ಎ. 21ರಿಂದ 23ರವರೆಗೆ ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಜರಗಿದ 44ನೇ ರಾಷ್ಟ್ರೀಯ ಮಾಸ್ಟರ್ಸ್ ಅಥ್ಲೆಟಿಕ್ಸ್ ನಲ್ಲಿ ಶೆಟ್ಟಿಮಜಲು ದಿನೇಶ್ ಆಚಾರ್ಯ (ದಿ. ನಾರಾಯಣ ಆಚಾರ್ಯ ಮತ್ತು ವಸಂತಿ ನಾರಾಯಣ ಆಚಾರ್ಯ ದಂಪತಿಗಳ ಪುತ್ರ) ಇವರು 40ರ ವಯೋಮಾನದ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಿ, 5 ಕಿ.ಮೀ ವೇಗದ ನಡಿಗೆ ಸ್ಪರ್ಧೆಯಲ್ಲಿ ಕಂಚಿನ ಪದಕ ವಿಜೇತರಾಗಿದ್ದಾರೆ. ಮಾತ್ರವಲ್ಲದೆ 400 ಮೀ ಓಟ, 400 ಮೀ ಹರ್ಡಲ್ಸ್ ಹಾಗೂ 4×100ಮೀ ಓಟಗಳಲ್ಲಿ ಭಾಗವಹಿಸಿ ಉತ್ತಮ ಪ್ರದರ್ಶನ ನೀಡಿದ್ದು, 2025, ಜುಲೈ 12 ಮತ್ತು 13ರಂದು ಸಿಂಗಾಪುರದಲ್ಲಿ ನಡೆಯುವ ಅಂತಾರಾಷ್ಟ್ರೀಯ ಮಟ್ಟದ ಹಿರಿಯರ ಕ್ರೀಡಾಕೂಟದಲ್ಲಿ ಭಾಗವಹಿಸುವ ಅರ್ಹತೆ ಗಳಿಸಿರುತ್ತಾರೆ.
ಇವರು ನರಿಮೊಗರು ಗ್ರಾಮದ ಶೆಟ್ಟಿಮಜಲು ನಿವಾಸಿಯಾಗಿದ್ದು, ಪ್ರಸ್ತುತ ಬೊಳ್ವಾರು ಪ್ರಗತಿ ಆಸ್ಪತ್ರೆಯಲ್ಲಿ ಅಕೌಂಟೆಂಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಕ್ರೀಡಾಕೂಟದಲ್ಲಿ ಭಾರತದ 13 ರಾಜ್ಯಗಳ ವಿವಿಧ ವಯೋಮಾನಗಳ ಸುಮಾರು 1600ಕ್ಕೂ ಅಧಿಕ ಕ್ರೀಡಾಪಟುಗಳು ಭಾಗವಹಿದ್ದರು. ದಿನೇಶ ಆಚಾರ್ಯ ಇವರು ಮುಂಡೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಲ್ಪಣೆ ಸರಕಾರಿ ಪ್ರೌಢಶಾಲೆ, ಕೊಂಬೆಟ್ಟು ಸರಕಾರಿ ಪದವಿಪೂರ್ವ ಕಾಲೇಜು ಮತ್ತು ವಿವೇಕಾನಂದ ಮಹಾವಿದ್ಯಾಲಯಗಳ ಹಿರಿಯ ವಿದ್ಯಾರ್ಥಿಯಾಗಿದ್ದು, ಕೊಂಬೆಟ್ಟು ಮೇಜರ್ ವೆಂಕಟರಾಮಯ್ಯ ಅಥ್ಲೆಟಿಕ್ ಕ್ಲಬ್ ಹಾಗೂ ಶ್ರೀನಿಧಿ ಆರ್ಯಾಪು ಇವರಿಂದ ತರಬೇತಿ ಪಡೆಯುತ್ತಿದ್ದಾರೆ.