
ಪುತ್ತೂರು:ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕಾವು ಸಮೀಪದ ಮುಳಿಯ ದ್ವಾರದ ಬಳಿ ಕೆಎಸ್ಆರ್ಟಿಸಿ ಬಸ್ ಮತ್ತು ಕೇರಳ ರಾಜ್ಯದ ನೋಂದಾಯಿತ ಬುಲೆಟ್ ಬೈಕ್ ನಡುವೆ ಡಿಕ್ಕಿ ಸಂಭವಿಸಿ ಬುಲೆಟ್ ಬೈಕ್ ಸವಾರ ಮೃತಪಟ್ಟ ಘಟನೆ ಏ.29ರಂದು ನಡೆದಿದೆ.

ಶಶಿಕಿರಣ್ ಎಂಬವರು ಕೊಟ್ಯಾಡಿಯಿಂದ ಪುತ್ತೂರಿಗೆ ಚಲಾಯಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ ಕಾವು ಮುಳಿಯ ಬಡಾವಣೆಯ ಗೇಟ್ನ ಬಳಿ ತಲುಪಿದಾಗ ಪಿಕಪ್ ವಾಹನವನ್ನು ಹಿಂದಿಕ್ಕುವ ಭರದಲ್ಲಿ ವಿರುದ್ಧ ದಿಕ್ಕಿನಿಂದ ಅಶ್ರಫ್ ಎಂಬವರು ಚಲಾಯಿಸುತ್ತಿದ್ದ ಕೇರಳ ನೋಂದಾವಣೆಯ ಬುಲೆಟ್ ಬೈಕ್ಗೆ ಡಿಕ್ಕಿಯಾಗಿದೆ.ಡಿಕ್ಕಿಯ ರಭಸಕ್ಕೆ ರಸ್ತೆಗೆ ಎಸೆಯಲ್ಪಟ್ಟ ಬುಲೆಟ್ ಸವಾರ ಅಶ್ರಫ್ ಅವರು ಮೃತಪಟ್ಟಿದ್ದಾರೆ.

ಮೃತ ಅಶ್ರಫ್ ಅವರು ಕಾಸರಗೋಡು ಜಿಲ್ಲೆಯ ವರ್ಕಾಡಿ ಗ್ರಾಮದ ಪಾತೂರು ಬದಿಮೂಲೆ ನಿವಾಸಿಯಾಗಿದ್ದು,ಮಡಿಕೇರಿ ನಾಪೊಕ್ಲುವಿನಲ್ಲಿರುವ ತನ್ನ ಅಂಗಡಿಗೆ ಬುಲೆಟ್ ಬೈಕ್ನಲ್ಲಿ ತೆರಳುತ್ತಿದ್ದರು ಎಂದು ತಿಳಿದು ಬಂದಿದೆ.ಘಟನೆ ಕುರಿತು ಸಂಪ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
