ಶಿಕ್ಷಕರ ಶ್ರಮ ಫಲಿತಾಂಶದಲ್ಲಿ ಪ್ರಕಟಗೊಂಡಿದೆ – ಸವಣೂರು ಸೀತಾರಾಮ ರೈ
ಪುತ್ತೂರು: 2025ನೇ ಸಾಲಿನ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಉತ್ತಮ ಸಾಧನೆಯನ್ನು ಮಾಡಿದ್ದಾರೆ. ಎಸ್.ಎಸ್.ಎಲ್.ಸಿ.ಯಲ್ಲಿ ರಾಜ್ಯಮಟ್ಟದಲ್ಲಿ 8, 9 ಮತ್ತು1ನೇ ಸ್ಥಾನ ಪಡೆದಿರುವುದು ಮತ್ತು ಎರಡೂ ಸಂಸ್ಥೆಗಳು ಶೇ. 100 ಫಲಿತಾಂಶ ದಾಖಲಿಸುವಲ್ಲಿ ಶಿಕ್ಷಕರ ಶ್ರಮ ಮಹತ್ತರವಾದದ್ದು ಎಂದು ಸಹಕಾರಿ ರತ್ನ, ವಿದ್ಯಾರಶ್ಮಿ ವಿದ್ಯಾಸಂಸ್ಥೆಗಳ ಸಂಚಾಲಕ, ಆದರ್ಶ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರೂ ಆಗಿರುವ ಸಂಚಾಲಕ ಕೆ.ಸೀತಾರಾಮ ರೈ ಸವಣೂರು ಅವರು ಹೇಳಿದರು.
ದರ್ಬೆಯಲ್ಲಿರುವ ಪ್ರಶಾಂತ್ ಮಹಲ್ನಲ್ಲಿ ಮೇ.23ರಂದು ನಡೆದ ಸಂಸ್ಥೆಯ ಶಿಕ್ಷಕರಿಗೆ ಅಭಿನಂದನಾ ಕಾರ್ಯಕ್ರಮ ಭೋಜನ ಕೂಟದಲ್ಲಿ ಅಭಿನಂದನಾ ಮಾತುಗಳನ್ನಾಡಿದರು. ಇದೇ ಸಂದರ್ಭ ಸೀತಾರಾಮ ರೈ ಅವರ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಲಾಯಿತು. ಈ ಬಾರಿ ಸಂಸ್ಥೆಯ ಶಿಕ್ಷಕರನ್ನು ಅಭಿನಂದಿಸುವ ಉದ್ದೇಶದಿಂದ ಭೋಜನ ಕೂಟವನ್ನು ಏರ್ಪಡಿಸಲಾಗಿದೆ. ಮುಂದಿನ ವರ್ಷ ತನ್ನ ವಿವಾಹ ವಾರ್ಷಿಕೋತ್ಸವದ 50ನೇ ಸಂಭ್ರಮವಾಗಿರುವುದರಿಂದ ಅಂದು ಸಾಧಕರಿಗೆ ಸನ್ಮಾನ ಸಹಿತ ಹಲವು ಕಾರ್ಯಕ್ರಮ ಆಯೋಜಿಸಲಾಗುವುದು ಎಂದರು.
ಸೀತಾರಾಮ ರೈಯವರ 49 ನೇ ವಿವಾಹ ವಾರ್ಷಿಕೋತ್ಸವದ ಅಂಗವಾಗಿ ಬೆಳಿಗ್ಗೆ ಸವಣೂರಿನ ವಿದ್ಯಾರಶ್ಮಿ ವಿದ್ಯಾಲಯದಲ್ಲಿ ಸರಸ್ವತಿ ಪೂಜೆ, ಗಣಹೋಮ ನಡೆದು ಮಧ್ಯಾಹ್ನ ಪ್ರಶಾಂತ್ ಮಹಲ್ ನಲ್ಲಿ ಭೋಜನಕೂಟ ನಡೆಯಿತು. ಸೀತಾರಾಮ ರೈಯವರ ಪತ್ನಿ ಕಸ್ತೂರಿಕಲಾ ರೈ ವೇದಿಕೆಯಲ್ಲಿದ್ದು ಪರಸ್ಪರ ಹಾರ ಬದಲಾಯಿಸಿ ಕೇಕ್ ಕತ್ತರಿಸಿ ಸಂಭ್ರಮಿಸಿದರು.
ವಿದ್ಯಾರಶ್ಮಿ ಸಮೂಹ ಸಂಸ್ಥೆಗಳ ಆಡಳಿತಾಧಿಕಾರಿ ಅಶ್ವಿನ್ ಎಲ್. ಶೆಟ್ಟಿ, ಆದರ್ಶ ವಿವಿಧೋದ್ದೇಶ ಸಹಕಾರಿ ಸಂಘದ ಉಪಾಧ್ಯಕ್ಷ ಸುಂದರ ರೈ, ವಿದ್ಯಾರಶ್ಮಿ ಪದವಿ ಕಾಲೇಜಿನ ಪ್ರಾಂಶುಪಾಲೆ ಡಾ. ರಾಜಲಕ್ಷ್ಮಿ, ವಿದ್ಯಾರಶ್ಮಿ ಪಿಯು ಕಾಲೇಜಿನ ಪ್ರಾಂಶುಪಾಲೆ ಶಶಿಕಲಾ ಆಳ್ವ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆ, ಆದರ್ಶ ವಿವಿಧೋದ್ದೇಶ ಸಹಕಾರಿ ಸಂಘ ಮತ್ತು ಪ್ರಶಾಂತ್ ಮಹಲ್ ವತಿಯಿಂದ ಸೀತಾರಾಮ ರೈ ದಂಪತಿಯನ್ನು ಹೂಗುಚ್ಚ ನೀಡಿ ಗೌರವಿಸಲಾಯಿತು. ಆದರ್ಶ ವಿವಿಧೋದ್ದೇಶ ಸಹಕಾರಿ ಸಂಘದ ಪ್ರಧಾನ ಕಚೇರಿ ವ್ಯವಸ್ಥಾಪಕ ಸುನಾದ್ ರಾಜ್ ಶೆಟ್ಟಿ ವಂದಿಸಿದರು. ಬಳಿಕ ಸಹಭೋಜನ ನಡೆಯಿತು.